ಜಾರಕಿಹೊಳಿ ಪ್ರಕರಣ: ಎಚ್ಡಿಕೆ ಹೇಳಿದ 5 ಕೋಟಿ ಡೀಲ್ ಮತ್ತು 6 ಸಚಿವರ ಕೋರ್ಟ್ ಮೊರೆ
ರಾಸಲೀಲೆ ಪ್ರಕರಣ ಭಾರತದ ರಾಜಕೀಯದಲ್ಲಿ ಹೊಸದೇನಲ್ಲ. ಇಂತಹ ಪ್ರಕರಣಗಳು ಸಾರ್ವಜನಿಕವಾದಾಗ ಸಿಗುವ ವೇಗಕ್ಕೆ ನಂತರ ತಾರ್ಕಿಕ ಅಂತ್ಯ ಸಿಕ್ಕ ಉದಾಹರಣೆಗಳು ಕಮ್ಮಿ. ರಮೇಶ್ ಜಾರಕಿಹೊಳಿ ಪ್ರಕರಣ ಅದೇ ದಾರಿಯಲ್ಲಿ ಸಾಗುವ ಸಾಧ್ಯತೆಯೂ ಇದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ವಿಚಾರವನ್ನು ಎರಡು ದಿನಗಳ ಹಿಂದೆ ಮೈಸೂರಿನಲ್ಲಿ ಪ್ರಸ್ತಾವಿಸಿದ್ದರು. ತಮ್ಮ ಹಿಂದಿನ ಸಮ್ಮಿಶ್ರ ಸರಕಾರವನ್ನು ಉರುಳಿಸಲು ಜಾರಕಿಹೊಳಿ ಪ್ರಮುಖ ಕಾರಣವಾಗಿದ್ದರೂ, ತೂಕವಾಗಿ ಈ ವಿಚಾರದಲ್ಲಿ ಎಚ್ಡಿಕೆ ಹೇಳಿಕೆಯನ್ನು ನೀಡಿದ್ದಾರೆ.
ಜಾರಕಿಹೊಳಿ ಸಿಡಿ ಸ್ಪೋಟವಾಗುತ್ತಿದ್ದಂತೆ ಕೋರ್ಟ್ ಮೊರೆ ಹೋದ ಆರು ಸಚಿವರು!
ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಈ ವಿಚಾರದಲ್ಲಿ ನಡೆದುಕೊಂಡ ರೀತಿಯಂತೆ ಜೆಡಿಎಸ್ ಕೂಡಾ ರಾಜಕೀಯ ಮಾಡಬಹುದಾಗಿತ್ತು. ಆದರೆ, ಕುಮಾರಸ್ವಾಮಿಯವರು ದೂರು ನೀಡಿದ ವ್ಯಕ್ತಿಯನ್ನೇ ಮೊದಲು ಬಂಧಿಸಿ ಎನ್ನುವ ಹೇಳಿಕೆಯನ್ನು ನೀಡಿದ್ದರು.
ಕುಮಾರಸ್ವಾಮಿ ನೀಡಿದ ಹೇಳಿಕೆ ಮತ್ತು ಯಡಿಯೂರಪ್ಪನವರ ಸರಕಾರದ ಆರು ಸಚಿವರು ಕೋರ್ಟ್ ಮೊರೆ ಹೋಗಿರುವುದು ಒಂದಕ್ಕೊಂದು ತಾಳೆಯಾಗುತ್ತಿದೆ. "ಕುಂಬಳಕಾಯಿ ಕಳ್ಳ ಎಂದರೆ ಆರು ಸಚಿವರಿಗೇಕೆ ಭಯ"ಎನ್ನುವ ಹೇಳಿಕೆಯನ್ನು ಕಾಂಗ್ರೆಸ್ ನೀಡಿದೆ. ಆದರೆ, ವಿಚಾರ ಅದಲ್ಲ..
"ಕುಂಬಳಕಾಯಿ ಕಳ್ಳ ಎಂದರೆ 6 ಸಚಿವರಿಗೇಕೆ ಭಯ?": ಕಾಂಗ್ರೆಸ್ ಪ್ರಶ್ನೆ
ಪೊಲೀಸರಿಗೆ ದೂರು ನೀಡುವ ಮೊದಲೇ ಮಾಧ್ಯಮಗಳಿಗೆ ಬಿಡುಗಡೆ, ದಿನೇಶ್ ಕಲ್ಲಹಳ್ಳಿ
ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿಯನ್ನು ಪೊಲೀಸರಿಗೆ ದೂರು ನೀಡುವ ಮೊದಲೇ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ ಸಾಮಾಜಿಕ ಹೋರಾಟಗಾರ ಎಂದು ಹೇಳಲಾಗುತ್ತಿರುವ ದಿನೇಶ್ ಕಲ್ಲಹಳ್ಳಿ ಇನ್ನೂ ಹಲವರ ಸಿಡಿಯಿದೆ. ಅದನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇವರ ಪ್ರಕಾರ ಸೂಕ್ತ ಸಮಯದ ಅರ್ಥವೇನು?
ಐದು ಕೋಟಿ ಡೀಲ್ ಎನ್ನುವ ಎಚ್ಡಿಕೆ ಹೇಳಿಕೆ ಸತ್ಯ ಇರಬಹುದೇ"
ಸಾರ್ವಜನಿಕ ಜೀವನದಲ್ಲಿ ಇರುವವರು ಎಚ್ಚರಿಕೆಯಿಂದ ಇರಬೇಕು ಮತ್ತು ಕಷ್ಟ ಹೇಳಿಕೊಂಡು ಬರುವವರಿಗೆ ಸ್ಪಂದಿಸಬೇಕು ಎನ್ನುವುದಷ್ಟೇ ಉದ್ದೇಶವಾಗಿದ್ದರೆ, ಇವರ ಬಳಿ ಇದೆ ಎನ್ನಲಾಗುತ್ತಿರುವ ಸಿಡಿ ಬಿಡುಗಡೆ ಮಾಡಲು ಇವರು ಯಾಕೆ ಸೂಕ್ತ ಸಮಯ ಕಾಯುತ್ತಿದ್ದಾರೆ. ಐದು ಕೋಟಿ ಡೀಲ್ ಎನ್ನುವ ಕುಮಾರಸ್ವಾಮಿಯವರ ಹೇಳಿಕೆ ಸತ್ಯ ಇರಬಹುದೇ ಎನ್ನುವ ಗುಮಾನಿ ಕಾಡುವುದು ಇಲ್ಲೇ..
ಬೆಂಗಳೂರು ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ ಆರು ಸಚಿವರು
ಜೆಡಿಎಸ್-ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಆರು ಸಚಿವರು (ಸೋಮಶೇಖರ್, ಸುಧಾಕರ್, ಭೈರತಿ, ನಾರಾಯಣ ಗೌಡ, ಬಿ.ಸಿ.ಪಾಟೀಲ್ ಮತ್ತು ಶಿವರಾಂ ಹೆಬ್ಬಾರ್) ಬೆಂಗಳೂರು ಸಿವಿಲ್ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ, ತಮ್ಮ ವಿರುದ್ದ ಯಾವುದೇ ಅವಹೇಳನಕಾರಿ ವಿಚಾರ ಪ್ರಸಾರವಾಗದಂತೆ ಆದೇಶ ನೀಡಬೇಕೆಂದು ಮನವಿ ಮಾಡಿದ್ದಾರೆ.
|
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು, ಸುಧಾಕರ್ ಟ್ವೀಟ್
"ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬ ಪರಿಸ್ಥಿತಿ ಇರುವುದು ಸುಳ್ಳಲ್ಲ, ಸತ್ಯ ಹೊಸಲು ದಾಟುವುದರೊಳಗೆ, ಸುಳ್ಳು ಊರೆಲ್ಲಾ ಸುತ್ತಾಡಿಕೊಂಡು ಬಂದಿರುತ್ತದೆ ಎಂಬಂತೆ, ಜೀವಮಾನವಿಡೀ ಗಳಿಸಿರುವ ಒಳ್ಳೆಯ ಹೆಸರು, ಯಾರದೋ ಷಡ್ಯಂತ್ರದಿಂದ ಕ್ಷಣಮಾತ್ರದಲ್ಲಿ ನಶಿಸಿ ಹೋಗುವ ಸಾಧ್ಯತೆ ಇರುವುದರಿಂದ, ಮುನ್ನೆಚ್ಚರಿಕೆಯಿಂದ ಪ್ರಮಾಣೀಕರಿಸದ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದೇವೆ."ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.
Recommended Video
ಇಂತಹ ಮನಸ್ಥಿತಿಯವರನ್ನು ಮೊದಲು ಮಟ್ಟಹಾಕಬೇಕು
ಕುಮಾರಸ್ವಾಮಿಯವರು ಹೇಳಿದಂತೆ ಇಂತಹ ಸಿಡಿ ಪ್ರಕರಣಗಳು ಬ್ಲ್ಯಾಕ್ ಮೇಲ್ ಆಗಿರುವ ಘಟನೆಗಳೇ ಹೆಚ್ಚು. ಇಂದು ಬಿಜೆಪಿ ಸಚಿವರು, ನಾಳೆ ಇನ್ನೊಂದು ಪಕ್ಷದ ಮುಖಂಡರಿಗೂ ಇಂತಹ ಪ್ರಕರಣಗಳು ಅಂಟಿ ಕೊಳ್ಲಬಹುದು. ಇಲ್ಲಿ, ಪಕ್ಷ ಮತ್ತು ಯಾವ ಸರಕಾರ ಇದೆ ಎನ್ನುವುದು ಮುಖ್ಯವಲ್ಲ, ಬೇಕಾಗಿರುವುದು ಸತ್ಯಾಸತ್ಯತೆ. ಇಂತವೆಲ್ಲಾ, ಬೆದರಿಕೆ ಪ್ರಕರಣಗಳಾಗಿದ್ದರೆ, ಇಂತಹ ಮನಸ್ಥಿತಿಯವರನ್ನು ಮೊದಲು ಮಟ್ಟಹಾಕಬೇಕು ಎನ್ನುವ ಕುಮಾರಸ್ವಾಮಿಯವರ ಹೇಳಿಕೆ ಸರಿಯಾಗಿಯೇ ಇದೆ.