ಜನತಾ ದರ್ಶನ ಹಾಗೂ ಗ್ರಾಮ ವಾಸ್ತವ್ಯಕ್ಕೆ ಮತ್ತೆ ಚಾಲನೆ: ಕುಮಾರಸ್ವಾಮಿ
Recommended Video
ಬೆಂಗಳೂರು, ಜೂನ್ 20: ಪ್ರಜೆಗಳ ಕುಂದುಕೊರತೆಗಳನ್ನು ಆಲಿಸುವ ಜನತಾ ದರ್ಶನ ಹಾಗೂ ಜನತೆಯ ಮನೆಯ ಬಾಗಿಲಿಗೆ ತೆರಳಿ ಅವರ ದುಃಖ ದುಮ್ಮಾನಗಳನ್ನು ಕಣ್ಣಾರೆ ಕಂಡು ಪರಿಹಾರ ಹುಡುಕುವ ಗ್ರಾಮ ವಾಸ್ತವ್ಯ ಎರಡೂ ಕಾರ್ಯಕ್ರಮಗಳಿಗೂ ಮತ್ತೆ ಚಾಲನೆ ನೀಡುವುದಾಗಿ ಕುಮಾರಸ್ವಾಮಿ ಹೇಳಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಜೆಟ್ ಕಾರಣದಿಂದ ಈಗ ಜನತಾದರ್ಶನ ನಿಲ್ಲಿಸಲಾಗಿದ್ದು ಶೀಘ್ರವೇ ಪುನರ್ ಆರಂಭವಾಗುತ್ತದೆ ಎಂದರು.
ರೈತರ ಸಾಲ ಮನ್ನಾ ಮಾಡಲು ಇಷ್ಟೆಲ್ಲಾ ತಯಾರಿ ನಡೆದಿದೆ
ಕೃಷಿ ಮಾತ್ರವಲ್ಲದೆ ಆರೋಗ್ಯ, ವಸತಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿಯೂ ದೊಡ್ಡ ಮಟ್ಟದ ಬದಲಾವಣೆ ತರಬೇಕೆನ್ನುವುದು ತಮ್ಮ ಮಹದಾಸೆಯಾಗಿದೆ. ಇದಕ್ಕಾಗಿ ಪಕ್ಷಾತೀತವಾಗಿ ಸಲಹೆಗಳನ್ನು ಸ್ವೀಕರಿಸಲು ನಾನು ತಯಾರಿದ್ದೇನೆ ಎಂದರು.
ಕೇವಲ ಜಾತ್ಯಾತೀತ ಜನತ ಪಕ್ಷದಲ್ಲಿನ ತಮ್ಮ ಸ್ನೇಹಿತರು ಮಾತ್ರವಲ್ಲ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷದಲ್ಲಿನ ಗೆಳೆಯರೂ ಕೂಡಾ ರಾಜಕೀಯ ನಿರ್ವಹಣೆಗೆ ಸಮಯ ವ್ಯರ್ಥ ಮಾಡಿಕೊಳ್ಳಬೇಡಿ ಎಂದು ಅವರು ಹೇಳಿದರು.
ಸರ್ಕಾರ ಕಾರ್ಯಾರಂಭ ಮಾಡಿದೆ
ಸರ್ಕಾರ ತನ್ನ ಕಾರ್ಯವನ್ನು ಈಗಾಗಲೇ ಆರಂಭ ಮಾಡಿದೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್, ಕಂದಾಯ ಸಚಿವ ಆರ್. ವಿ. ದೇಶಪಾಂಡೆ, ಲೋಕೋಪಯೋಗಿ ಸಚಿವ ಹೆಚ್. ಡಿ. ರೇವಣ್ಣ, ಕೃಷಿ ಸಚಿವ ಎನ್. ಹೆಚ್. ಶಿವಶಂಕರರೆಡ್ಡಿ ಅವರು ಅತ್ಯಂತ ಕ್ರಿಯಾಶೀಲರಾಗಿ ಮಳೆಯಿಂದ ಹಾನಿಗೊಳಗಾದ ಪ್ರದೇಶಕ್ಕೆ ಭೇಟಿ ನೀಡಿ ಈಗಾಗಲೇ ಕೆಲಸ ಮಾಡುತ್ತಿದ್ದಾರೆ ನಮ್ಮದು ಮೈಮರೆಯುವ ಸರ್ಕಾರವಲ್ಲ, ಚಲನಶೀಲ ಸರ್ಕಾರ ಎಂಬುದಕ್ಕೆ ಇದೇ ಸಾಕ್ಷಿ ಎಂದು ಕುಮಾರಸ್ವಾಮಿ ಅವರು ಬಣ್ಣಿಸಿದರು.
ರಾಹುಲ್ ಬಳಿ ಯಾರ ಮೇಲೂ ದೂರು ಹೇಳಿಲ್ಲ: ಎಚ್ಡಿಕೆ
ತಕ್ಷಣವೇ ಸ್ಪಂದನೆ
ನವದೆಹಲಿಯಲ್ಲಿ ಸೋಮವಾರ ವ್ಯಾಯಾಮ ಮಾಡುತ್ತಿದ್ದ ಸಂದರ್ಭದಲ್ಲಿ ಏಕ ಕಾಲಕ್ಕೆ ಟಿವಿ ಕೂಡಾ ನೋಡುತ್ತಿದ್ದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಲೋಂಡದಲ್ಲಿರುವ ಸರ್ಕಾರಿ ಶಾಲೆಗೆ ಮಕ್ಕಳು ಐದಾರು ಕಿ. ಮೀ ಕಾಡಿನಲ್ಲಿ ನಡೆದು ಬರುತ್ತಿದ್ದಾರೆ ಎಂಬ ಸುದ್ದಿಯನ್ನು ದೃಶ್ಯ ಮಾಧ್ಯಮದಲ್ಲಿ ಕಂಡೊಡನೆಯೇ ಅದೇ ದಿನ ಮಧ್ಯಾಹ್ನ ಎರಡು ಗಂಟೆಯೊಳಗೆ ಬಸ್ ಸಂಪರ್ಕ ಕಲ್ಪಿಸಲು ಸೂಚಿಸಿದೆ. ಇದೀಗ ಬಸ್ ಸಂಚಾರ ಪ್ರಾರಂಭವಾಗಿದೆ.
ಆತ್ಮಹತ್ಯೆಗೆ ಪ್ರಯತ್ನಿಸಿದ ರೈತನ ಭೇಟಿ
ಕಬಿನಿ ಜಲಾಶಯದಿಂದ ನೀರು ಹೊರ ಬಿಟ್ಟಾಗ ಭತ್ತದ ಗದ್ದೆಗೆ ನೀರು ಹರಿದು ಆತಂಕಕ್ಕೆ ಒಳಗಾದ ರೈತನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ದೃಶ್ಯವನ್ನು ನೋಡಿದ ಕೂಡಲೇ ಆತನನ್ನು ತಮ್ಮ ಕಚೇರಿಗೆ ಕರೆತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆತನ ಬವಣೆಯನ್ನು ಆಲಿಸಿ ಕೃಷಿ ಸಚಿವರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲೇ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲು ಮುಂದಾಗಿದ್ದೇನೆ. ಇದು ಮಾಧ್ಯಮಗಳಲ್ಲಿ ಬಿತ್ತರವಾದ ಕೆಲವು ಘಟನೆಗಳಿಗೆ ತಮ್ಮ ಕ್ಷಿಪ್ರ ಸ್ಪಂದನೆ ಎಂದರು.
ಆರ್.ಟಿ.ಇ ದುರುಪಯೋಗ ತಡೆ
ಶಿಕ್ಷಣ ಹಕ್ಕು ಕಾಯಿದೆ ಬಡವರ ಮಕ್ಕಳಿಗೆ ಅನುಕೂಲವಾಗುತ್ತಿಲ್ಲ. ಇದು ದುರುಪಯೋಗವಾಗುತ್ತಿದೆ. ಒಂದೆಡೆ ಖಾಸಗಿ ಶಾಲೆಗಳ ಮೇಲೆ ಒತ್ತಡ ಹಾಗೂ ಬೇಡಿಕೆ ಎರಡೂವರೆ ಪಟ್ಟು ಹೆಚ್ಚಾಗಿದೆ. ಮತ್ತೊಂದಡೆ ಸರ್ಕಾರ ಶಾಲೆಗಳಲ್ಲಿನ ದಾಖಲಾತಿ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿರುವ ಹಿನ್ನೆಲೆಯಲ್ಲಿ ಕುಂದು-ಕೊರತೆ ನಿವಾರಣೆಗಾಗಿ ಮೀಸಲಿರುವ ಜಿಲ್ಲಾ ಮಟ್ಟದ ಸಮಿತಿಗಳಿಗೆ ಮರು ಚಾಲನೆ ನೀಡಿ ಅವುಗಳನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದರು.