ಭಾನುವಾರ ಜನತಾ ಕರ್ಫ್ಯೂ; ಏನಿರುತ್ತೆ?, ಏನಿರಲ್ಲ?
ಬೆಂಗಳೂರು, ಮಾರ್ಚ್ 21 : ಕೊರೊನಾ ಸೋಂಕು ಹರಡದಂತೆ ತಡೆಯಲು ಮಾರ್ಚ್ 22ರ ಭಾನುವಾರ 'ಜನತಾ ಕರ್ಫ್ಯೂ' ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂಗೆ ಜನರು ಬೆಂಬಲ ನೀಡಲಿದ್ದು ಇಡೀ ದೇಶದಲ್ಲಿಯೇ ಸ್ವಯಂ ಘೋಷಿತ ಬಂದ್ ನಡೆಯಲಿದೆ.
ಭಾನುವಾರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯ ತನಕ 'ಜನತಾ ಕರ್ಫ್ಯೂ' ನಡೆಯಲಿದೆ. ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಮನೆಯಿಂದ ಜನರು ಹೊರಬಾರಬಾರದು ಎಂದು ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಏನಿದು ಜನತಾ ಕರ್ಫ್ಯೂ? ವೈರಸ್ ಭೀತಿ ನಡುವೆ ಹೇಗೆ ವರ್ಕ್ ಆಗುತ್ತೆ?
ಮನೆಯಲ್ಲಿರುವ ಜನರು ಸಂಜೆ 5 ರಿಂದ 5.05ರ ತನಕ ಕಿಟಕಿ, ಬಾಲ್ಕನಿಗಳ ಬಳಿ ನಿಂತು ಅಭಿನಂದನೆ ಸಲ್ಲಿಸಲು ಚಪ್ಪಾಳೆ ತಟ್ಟಬೇಕು ಎಂದು ಸಹ ಕರೆ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕರೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದ್ದು, 'ಜನತಾ ಕರ್ಫ್ಯೂ'ಗೆ ಬೆಂಬಲ ಸಿಗಲಿದೆ.
ಮೋದಿ ಘೋಷಿಸಿದ್ದ 'ಜನತಾ ಕರ್ಫ್ಯೂ' ಮೆಚ್ಚಿದ ವಿಶ್ವ ಆರೋಗ್ಯ ಸಂಸ್ಥೆ
'ಜನತಾ ಕರ್ಫ್ಯೂ' ಹಿನ್ನಲೆಯಲ್ಲಿ ಭಾನುವಾರ ಯಾವ ಸೇವೆ ಇರುತ್ತದೆ?, ಯಾವುದು ಇರುವುದಿಲ್ಲ ಎಂಬ ಮಾಹಿತಿ ಇಲ್ಲಿದೆ. ತುರ್ತು ಸೇವೆಗಳಾದ ಆಸ್ಪತ್ರೆ, ಔಷಧಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ. ಅಗತ್ಯ ವಸ್ತುಗಳು ಸಹ ದೊರೆಯಲಿವೆ.
ಸ್ಥಬ್ಧಗೊಳ್ಳಲಿದೆ ಕಾರವಾರ; 'ಜನತಾ ಕರ್ಫ್ಯೂ'ಗೆ ವ್ಯಾಪಾರಿ ಸಂಘಟನೆಗಳ ಬೆಂಬಲ
ರೈಲು ಸೇವೆಗಳು ಲಭ್ಯವಿರುವುದಿಲ್ಲ
`'ಜನತಾ ಕರ್ಫ್ಯೂ' ಹಿನ್ನಲೆಯಲ್ಲಿ ಭಾನುವಾರ ರೈಲು ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಶನಿವಾರ ಮಧ್ಯರಾತ್ರಿಯಿಂದ ಭಾನುವಾರ ರಾತ್ರಿ 10 ಗಂಟೆಯ ತನಕ ರೈಲು ಸಂಚಾರ ಇರುವುದಿಲ್ಲ ಎಂದು ಭಾರತೀಯ ರೈಲ್ವೆ ಈಗಾಗಲೇ ಸ್ಪಷ್ಟಪಡಿಸಿದೆ. ಆದ್ದರಿಂದ, ದೂರದ ಊರುಗಳಿಗೆ ಪ್ರಯಾಣಿಸುವ ಆಲೋಚನೆ ಇದ್ದರೆ ಮುಂದಕ್ಕೆ ಹಾಕಿಕೊಳ್ಳಿ.
ಮೆಟ್ರೋ, ಬಸ್ ಸೇವೆ ಇಲ್ಲ
ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಮೆಟ್ರೋ ಸೇವೆ ಸ್ಥಗಿತಗೊಳ್ಳಲಿದೆ. ಬೆಂಗಳೂರಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಶುಕ್ರವಾರವೇ ತಿಳಿಸಲಾಗಿದೆ.
ಓಲಾ, ಊಬರ್, ವಿಮಾನ
ಓಲಾ, ಊಬರ್ ಮಾಲೀಕರು ಮತ್ತು ಚಾಲಕರ ಸಂಘ 'ಜನತಾ ಕರ್ಫ್ಯೂ'ಗೆ ಬೆಂಬಲ ನೀಡಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರದಲ್ಲಿ ಓಲಾ, ಊಬರ್ ಟ್ಯಾಕ್ಸಿ ಸೇವೆ ಸ್ಥಗಿತಗೊಳ್ಳಲಿದೆ. ಕೇಂದ್ರ ಸರ್ಕಾರ ಮಾರ್ಚ್ 22ರಿಂದ ಒಂದು ವಾರ ಅಂತರಾಷ್ಟ್ರೀಯ ವಿಮಾನಗಳಿಗೆ ಲ್ಯಾಂಡಿಂಗ್ ನೀಡದಿರಲು ತೀರ್ಮಾನಿಸಿದೆ. ಆದ್ದರಿಂದ, ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಜನರ ಸಂಖ್ಯೆಯೂ ಕಡಿಮೆಯಾಗಲಿದೆ.
ಮಾರುಕಟ್ಟೆ, ಪೆಟ್ರೋಲ್ ಬಂಕ್ ಬಂದ್
ಮಾರುಕಟ್ಟೆ, ಪೆಟ್ರೋಲ್ ಬಂಕ್ ಭಾನುವಾರ ಬಂದ್ ಆಗಿರುತ್ತದೆ. ಸರಕು ಸಾಗಣೆ ವಾಹನಗಳು ಸಂಚಾರವನ್ನು ನಡೆಸುವುದಿಲ್ಲ. ಆಟೋಗಳು ಸಹ ರಸ್ತೆಗೆ ಇಳಿಯುವುದು ಅನುಮಾನವಾಗಿದೆ. ಮೆಡಿಕಲ್ ಶಾಪ್ ಬಾಗಿಲು ತೆರೆದಿರುತ್ತದೆ.
ಹೋಟೆಲ್, ಇಂದಿರಾ ಕ್ಯಾಂಟೀನ್
ಹೋಟೆಲ್, ರೆಸ್ಟೋರೆಂಟ್ಗಳು ಬಾಗಿಲು ಮುಚ್ಚಲಿವೆ. ಕರ್ನಾಟಕ ಸರ್ಕಾರ ಶನಿವಾರದಿಂದ 1 ವಾರಗಳ ಕಾಲ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಹೋಟೆಲ್ ಬಂದ್ ಮಾಡಲು ಸೂಚನೆ ನೀಡಿದೆ. ಹೋಟೆಲ್ಗೆ ಭೇಟಿ ನೀಡಿ ಪಾರ್ಸೆಲ್ ತರಲು ಅವಕಾಶವನ್ನು ನೀಡಲಾಗಿದೆ. ಅಲ್ಲಿಯೇ ಕುಳಿತು ತಿನ್ನಲು ಅವಕಾಶವನ್ನು ಕೊಟ್ಟಿಲ್ಲ.
ಯಾವ-ಯಾವ ಸೇವೆ ಇರುತ್ತೆ?
'ಜನತಾ ಕರ್ಫ್ಯೂ' ಇದ್ದರೂ ಆಸ್ಪತ್ರೆ, ಮೆಡಿಕಲ್ ಶಾಪ್ ಇರುತ್ತದೆ. ಆಂಬ್ಯುಲೆನ್ಸ್, ಅಗ್ನಿ ಶಾಮಕದಳ ಕಾರ್ಯ ನಿರ್ವಹಣೆ ಮಾಡಲಿದೆ. ಹಾಲು, ಮೊಸರುಗಳನ್ನು ಮಾರುವ ಅಂಗಡಿ ತೆರೆದಿರುತ್ತದೆ.