ಬಿಜೆಪಿಗೆ ಸೆಲ್ಯೂಟ್ ಹೊಡೆದ ಶಂಕರ ಬಿದರಿ (ಐಪಿಎಸ್)
ಬೆಂಗಳೂರು, ಆ.19 : ನಿವೃತ್ತ ಪೊಲೀಸ್ ಮಹಾನಿರ್ದೇಶಕ ಮತ್ತು ಸರ್ವ ಜನಶಕ್ತಿ ಪಕ್ಷದ ಸಂಸ್ಥಾಪಕ ಶಂಕರ ಬಿದರಿ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದಾರೆ. ಬುಧವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಸಮ್ಮುಖದಲ್ಲಿ ಶಂಕರ ಬಿದರಿ ಬಿಜೆಪಿಗೆ ಸೇರ್ಪಡೆಗೊಳ್ಳಲಿದ್ದಾರೆ.
ಕಾಂಗ್ರೆಸ್, ಸಮಾಜವಾದಿ ಪಕ್ಷ ತೊರೆದ ನಂತರ ಸರ್ವ ಜನಶಕ್ತಿ ಪಕ್ಷವನ್ನು ಶಂಕರ ಬಿದರಿ ಕಟ್ಟಿದ್ದರು. 2014ರ ಲೋಕಸಭೆ ಚುನಾವಣೆಗೆ ಬಾಗಲಕೋಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಚುನಾವಣೆ ಮುಗಿದ ಬಳಿಕ ಬಿಜೆಪಿ ಸೇರಲು ಆಹ್ವಾನ ಬಂದಿದೆ ಎಂದು ಶಂಕರ ಬಿದರಿ ತಿಳಿಸಿದ್ದರು.
ಬುಧವಾರ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಶಂಕರ ಬಿದರಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ. ಈ ಮೂಲಕ ಶಂಕರ ಬಿದರಿ ಮತ್ತೊಮ್ಮೆ ಪಕ್ಷಾಂತರ ಮಾಡಿದ್ದಾರೆ. [ಜನಶಕ್ತಿ ಪಕ್ಷ ಸ್ಥಾಪಿಸಿದ ಶಂಕರ ಬಿದರಿ]
ರಾಜಕಾರಣಕ್ಕೆ ಬಂದ ಕೆಲವು ತಿಂಗಳುಗಳಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷಗಳನ್ನು ತೊರೆದಿದ್ದ ಶಂಕರ ಬಿದರಿ ಅವರು ಲೋಕಸಭೆ ಚುನಾವಣೆಗೂ ಮುನ್ನ ಸರ್ವ ಜನಶಕ್ತಿ ಪಕ್ಷ ಸ್ಥಾಪಿಸಿದ್ದರು. ಲೋಕಸಭೆ ಚುನಾವಣೆಗೆ ಬಾಗಲಕೋಟೆ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ 10,959 ಮತಗಳನ್ನು ಪಡೆದಿದ್ದರು.
ಕಾಂಗ್ರೆಸ್ ಸೇರಿದ್ದರು
ಮೊದಲು ಕಾಂಗ್ರೆಸ್ ಸೇರಿದ್ದ ಶಂಕರ ಬಿದರಿ ಆ ಪಕ್ಷವನ್ನು ತೊರೆದಿದ್ದರು. ಐದು ವರ್ಷಗಳ ಕಾಲ ನನಗೆ ಯಾವುದೇ ಸ್ಥಾನಮಾನ ನೀಡದಿರಲು ರಾಜ್ಯ ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದರು. ಇದರಿಂದ ನಾನು ನನ್ನ ರಾಜಕೀಯ ಜೀವನದ ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ಕಾಂಗ್ರೆಸ್ ತೊರೆಯುತ್ತಿರುವುದಾಗಿ ಹೇಳಿದ್ದರು.
ಸಮಾಜವಾದಿ ಪಕ್ಷ ಸೇರ್ಪಡೆ
ಕಾಂಗ್ರೆಸ್ ತೊರೆದ ಶಂಕರ ಬಿದರಿ ಅವರು ಸಮಾಜವಾದಿ ಪಕ್ಷ ಸೇರಿದ್ದರು. ಸಮಾಜವಾದಿ ಪಕ್ಷದ ಕರ್ನಾಟಕ ರಾಜ್ಯಾಧ್ಯಕ್ಷರನ್ನಾಗಿ ಅವರನ್ನು ನೇಮಕ ಮಾಡಲಾಗಿತ್ತು. ಆದರೆ, ಚನ್ನಪಟ್ಟಣ ಶಾಸಕ ಸಿಪಿ ಯೋಗೀಶ್ವರ್ ನಡುವಿನ ಭಿನ್ನಮತದ ಕಾರಣ ಅವರು ಎಸ್ಪಿಗೂ ಗುಡ್ ಬೈ ಹೇಳಿದ್ದರು.
ಸರ್ವ ಜನಶಕ್ತಿ ಪಕ್ಷ ಸ್ಥಾಪನೆ
ಸಮಾಜವಾದಿ ಪಕ್ಷ ತೊರೆದ ಬಳಿಕ ಶಂಕರ ಬಿದರಿ ಸರ್ವ ಜನಶಕ್ತಿ ಪಕ್ಷ ಸ್ಥಾಪಿಸಿದ್ದರು. ಆದರೆ, ಪಕ್ಷ ನೋಂದಣಿಯಾಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದರು.
ಸುಳಿವು ಕೊಟ್ಟಿದ್ದ ಶಂಕರ ಬಿದರಿ
ಕಳೆದ ವಾರ ಬಿಜೆಪಿ ಸೇರಲು ಕಾರ್ಯಕರ್ತರು ಮತ್ತು ಹಿತೈಷಿಗಳು ಸಲಹೆ ನೀಡಿದ್ದಾರೆ ಎಂದು ಹೇಳಿದ್ದ ಶಂಕರ ಬಿದರಿ, ಬಿಜೆಪಿ ಸೇರ್ಪಡೆ ಕುರಿತು ಸುಳಿವು ನೀಡಿದ್ದರು.
ಬಿಜೆಪಿಗೆ ಶಂಕರ ಬಿದರಿ
ಸದ್ಯ, ಶಂಕರ ಬಿದರಿ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಆ.20ರ ಬುಧವಾರ ಪಕ್ಷದ ಕಚೇರಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.