ವೈರಿಯ ಬದಲಾಯಿಸಿಕೊಂಡ ಜನಾರ್ದನ ರೆಡ್ಡಿ, ಎಚ್ಡಿಕೆ ಹೊಸ ಗುರಿ
Recommended Video
ಬೆಂಗಳೂರು, ನವೆಂಬರ್ 16: ಜನಾರ್ದನ ರೆಡ್ಡಿ ಮತ್ತು ಸಿದ್ದರಾಮಯ್ಯ ಅವರು ಹಳೆಯ ರಾಜಕೀಯ ವೈರಿಗಳು ಎಂಬುದು ಜನಜನಿತ. ಆದರೆ ಈಗ ಹಠಾತ್ತಾಗಿ ಜನಾರ್ದನ ರೆಡ್ಡಿ ಅವರು ತಮ್ಮ ವೈರಿಯನ್ನು ಬದಲಾಯಿಸುವ ಸುಳಿವು ನೀಡಿದ್ದಾರೆ.
ಹೌದು, ಇತ್ತೀಚೆಗಷ್ಟೆ ಮೂರು ದಿನಗಳ ಕಾಲ ಜೈಲು ಸೇರಿ ಜಾಮೀನಿನ ಮೇಲೆ ಹೊರ ಬಂದ ಜನಾರ್ದನ ರೆಡ್ಡಿ ಅವರು ಆ ನಂತರ ನೀಡಿದ ಹೇಳಿಕೆಗಳಲ್ಲಿ ಈ ವಿಷಯ ಸ್ಪಷ್ಟವಾಗುತ್ತಿದೆ.
ಜೈಲಿನಿಂದ ಹೊರಬಂದ ನಂತರ ಜನಾರ್ದನ ರೆಡ್ಡಿ ಅವರು ತಮ್ಮ ಹಳೆಯ ವೈರಿ ಸಿದ್ದರಾಮಯ್ಯ ಅವರ ಬಗ್ಗೆ ಒಂದೂ ಮಾತನ್ನಾಡಲಿಲ್ಲ, ಬದಲಿಗೆ ಸಿಎಂ ಕುಮಾರಸ್ವಾಮಿ ಅವರ ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
ಸಿದ್ದರಾಮಯ್ಯ ಅವರ ವಿರುದ್ಧ ರಾಜಕೀಯವಾಗಿ ಗುದ್ದಾಡಿ ಸೋತಿರುವ ಜನಾರ್ದನ ರೆಡ್ಡಿ ಅವರು ಸೋಲೊಪ್ಪಿಕೊಂಡು ಸಿದ್ದರಾಮಯ್ಯ ಅವರೊಂದಿಗಿನ ವೈರತ್ವಕ್ಕೆ ಬೆನ್ನು ತೋರಿಸಿದರಾ ಎಂಬ ಅನುಮಾನವೂ ರೆಡ್ಡಿ ಅವರ ಇತ್ತೀಚಿನ ಮಾತುಗಳಿಂದ ವ್ಯಕ್ತವಾಗುತ್ತಿದೆ.
ಸಿದ್ದರಾಮಯ್ಯಗೆ ಮೇಲುಗೈ ಆಗಿತ್ತು
ಉಪಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವರು ಸಿದ್ದರಾಮಯ್ಯ ಅವರನ್ನು ಮಾತಿನ ಮೂಲಕ ತಡವಿಕೊಂಡಿದ್ದರು. ಇಬ್ಬರಿಗೂ ಭಾರಿ ವಾಗ್ದಾಳಿಯೇ ಆಯಿತು. ಆದರೆ ಕೊನೆಗೆ ರೆಡ್ಡಿ ಅವರು ಹೇಳಿದ 'ಮಾಡಿದ ಪಾಪಕ್ಕೆ ಮಗನ ಸಾವು' ಹೇಳಿಕೆ ಮತ್ತು ಅದಕ್ಕೆ ಸಿದ್ದರಾಮಯ್ಯ ನೀಡಿದ ಪ್ರತಿಕ್ರಿಯೆ ಸಿದ್ದರಾಮಯ್ಯ ಮತ್ತೆ ಮೇಲುಗೈ ಸಾಧಿಸುವಂತೆ ಮಾಡಿತು. ಬಿಜೆಪಿಗೆ ಹಿನ್ನಡೆಗೂ ಕಾರಣವಾಯಿತು.
ಕುಮಾರಸ್ವಾಮಿ ಜಪ ಮಾಡಿದ ರೆಡ್ಡಿ
ಜೈಲಿನಿಂದ ಹೊರಬಂದ ನಂತರ ಸುದೀರ್ಘವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ರೆಡ್ಡಿ ಅವರು ಕೇವಲ ಕುಮಾರಸ್ವಾಮಿ ಜಪವನ್ನೇ ಮಾಡಿದ್ದಾರೆ. ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ್ದು, ರಾಜಕೀಯ ದ್ವೇಷ ಸಾಧಿಸಿದ್ದು ಕುಮಾರಸ್ವಾಮಿಯೇ ಎಂದು ನೇರಾ-ನೇರಾ ವಾಗ್ದಾಳಿ ಮಾಡಿದ್ದಾರೆ.
ವೈರಿಯನ್ನು ಬದಲಾಯಿಸಿದರಾ ರೆಡ್ಡಿ?
ಆದರೆ ರಾಜ್ಯ ರಾಜಕಾರಣ ನೋಡಿದವರಿಗೆ ರೆಡ್ಡಿ ಅವರ ಮಾತು ಹೊಸದಾಗಿ ಕೇಳುತ್ತಿದೆ. ಈ ಮುಂಚೆಯೂ ಸಹ ಇವರಿಬ್ಬರ ನಡುವೆ ಅಂತಹಾ ರಾಜಕೀಯ ದ್ವೇಷವೇನೂ ಇರಲಿಲ್ಲ. ಆದರೆ ಹೀಗೆ ಏಕಾ-ಏಕಿ ರೆಡ್ಡಿ ಅವರು ಆರೋಪ ಮಾಡಿದ್ದರ ಹಿಂದೆ ಲೆಕ್ಕಾಚಾರವೇನು. ಅಥವಾ ರೆಡ್ಡಿ ಆರೋಪ ನಿಜವೇ ಆಗಿದ್ದರೆ, ರೆಡ್ಡಿ ಅವರ ಹಿಂದೆ ಬೀಳುವ ಅವಶ್ಯಕತೆ ಕುಮಾರಸ್ವಾಮಿ ಅವರಿಗೆ ಏನಿದೆ? ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಸಿದ್ದರಾಮಯ್ಯ ವಿರುದ್ಧ ವೈರತ್ವಕ್ಕೆ ಬ್ರೇಕ್?
ಉಪಚುನಾವಣೆ ಸಮಯದಲ್ಲಿ ಸಹ ಸಿದ್ದರಾಮಯ್ಯ ವಿರುದ್ಧ ಜನಾರ್ದನ ರೆಡ್ಡಿ ಕೆಂಡ ಕಾರಿದ್ದರು. ಆದರೆ ಸಿದ್ದರಾಮಯ್ಯ ವಿರುದ್ಧ ಗುದ್ದಾಟ ಗೋಡೆಗೆ ತಲೆಬಡಿದುಕೊಂಡಂತೆ ಎಂದು ಮನವರಿಕೆ ಆಗಿದೆಯಾ? ಅಥವಾ ಕುಮಾರಸ್ವಾಮಿ ಅವರನ್ನು ಹಣಿಯುವುದು ಸುಲಭ ಎಂಬ ಯೋಜನೆ ಏನಾದರೂ ಇದೆಯಾ? ಅಥವಾ ಈಗ ಕುಮಾರಸ್ವಾಮಿ ವಿರುದ್ಧ ಆರೋಪಗಳನ್ನು ಮಾಡಿ ಹೊಸ ವೈರಿಯನ್ನು ಹುಟ್ಟುಹಾಕಿಕೊಂಡರಾ ಎಂಬ ಅನುಮಾನ ರಾಜ್ಯ ರಾಜಕೀಯ ಪ್ರೇಕ್ಷಕರಲ್ಲಿ ಮೂಡಿದೆ.