ಸಂತಾಪ; ಗೀತಾ ನಾಗಭೂಷಣ ಮಹಿಳಾ ಕುಲದ ಕಣ್ಮಣಿ
ಬೆಂಗಳೂರು, ಜೂನ್ 29 : ನಾಡೋಜ ಗೀತಾ ನಾಗಭೂಷಣ ನಿಧನಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಭಾನುವಾರ ರಾತ್ರಿ 75 ವರ್ಷದ ಗೀತಾ ನಾಗಭೂಷಣ ವಿಧಿವಶರಾಗಿದ್ದಾರೆ.
ಕಲಬುರಗಿಯ ಸ್ವಸ್ತಿಕ್ ನಗರದಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಮಧ್ಯಾಹ್ನ ನಗರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ಹಿರಿಯ ಸಾಹಿತಿ ಗೀತಾ ನಾಗಭೂಷಣ್ ವಿಧಿವಶ
ಮಾಜಿ ಸಚಿವ ಜನಾರ್ದನ ರೆಡ್ಡಿ ಗೀತಾ ನಾಗಭೂಷಣ ನಿಧನಕ್ಕೆ ಸಂತಾಪವನ್ನು ಸೂಚಿಸಿದ್ದಾರೆ. "ಅವರು ನಡೆದು ಬಂದ ದಾರಿ, ಪಟ್ಟ ಶ್ರಮವೇ ಹೆಣ್ಣಿನ ಹರಸಾಹಸದ ಒಂದು ಕಾದಂಬರಿಯಾಗಬಲ್ಲದು" ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
ಮೊದಲ ಸ್ತ್ರೀವಾದಿ ಲೇಖಕಿ ಡಾ. ವಿಜಯಾ ದಬ್ಬೆ ವಿಧಿವಶ
ಜನಾರ್ದನ ರೆಡ್ಡಿ ಪೋಸ್ಟ್
ಗೀತಾ ನಾಗಭೂಷಣ ಕನ್ನಡ ಸಾಹಿತ್ಯದ ಪ್ರಸಿದ್ಧ ಬರಹಗಾರ್ತಿಯರಲ್ಲೊಬ್ಬರು. ನಾಡೋಜ ಗೀತಾ ನಾಗಭೂಷಣ, ತಮಗಿದ್ದ ಕಿತ್ತು ತಿನ್ನುವ ಬಡತನ, ಅಸಹಕಾರಕ ಪರಿಸರ, ಹೆಣ್ಣು ಮಕ್ಕಳ ನ್ನು ಶಾಲೆಗೆ ಕಳುಹಿಸದ ಸಾಮಾಜಿಕ ವ್ಯವಸ್ಥೆ ಇತ್ಯಾದಿಗಳನ್ನೆಲ್ಲಾ ದೃಢಸಂಕಲ್ಪ ಮತ್ತು ಹೋರಾಟದ ಮನೋಭಾವಗಳಿಂದ ತಮ್ಮ ಶಿಕ್ಷಕ ವೃತ್ತಿ, ಬರಹ ಪ್ರವೃತ್ತಿ ಮತ್ತು ನಡೆಗಳಿಂದ ಸಮಾಜಕ್ಕೆ ಬೆಳಕು ಕಾಣಿಸುವಲ್ಲಿ ನಿರಂತರ ಪ್ರಯತ್ನಶೀಲರಾದವರು
2017 - ಜ್ಞಾನಪೀಠ ಪ್ರಶಸ್ತಿ ಪಡೆದ ಹಿಂದಿ ಲೇಖಕಿ ಕೃಷ್ಣ ಸೋಬ್ತಿ
ಅವರು ನಡೆದು ಬಂದ ದಾರಿ, ಪಟ್ಟ ಶ್ರಮವೇ ಹೆಣ್ಣಿನ ಹರಸಾಹಸದ ಒಂದು ಕಾದಂಬರಿಯಾಗಬಲ್ಲದು. ಸಿಟ್ಟು, ಸಿಡುಕು, ತಿರಸ್ಕಾರ, ಅಪಮಾನಗಳ ಮಧ್ಯೆಯೇ ಬೆಳೆದು ನಿಂತವರು. ಕಡುಬಡತನದಲ್ಲಿದ್ದ, ಹಿಂದುಳಿದ ಜಾತಿಯ ಅನಕ್ಷರಸ್ಥ ಬಡಕುಟುಂಬದಲ್ಲಿ ಹುಟ್ಟಿ ತಮ್ಮ ಬಾಲ್ಯ ಹಾಗೂ ಯೌವನದಲ್ಲಿ ಸಿಹಿಗಿಂತ ಕಹಿಯನ್ನೇ ಹೆಚ್ಚಾಗಿ ಕಂಡ ಗೀತಾ ನಾಗಭೂಷಣ್ ಅವರು ಪುಸ್ತಕದ ಪ್ರೀತಿ ಮತ್ತು ಅಧ್ಯಯನದತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿದರು.
ಬೆತ್ತಲೆ ಸೇವೆ, ದೇವಿಯ ಹೆಸರಿನಲ್ಲಿ ನಡೆಸುವ ದೇವದಾಸಿ ಸೇವೆ, ಮುಗ್ಧ ನಿರ್ಗತಿಕ ಹೆಂಗಸರ ಮೇಲಿನ ದೌರ್ಜನ್ಯ, ಲೈಂಗಿಕ ಶೋಷಣೆ, ಮೂಢ ನಂಬಿಕೆಗಳ ಅನಿಷ್ಟ ಪದ್ಧತಿಗಳ ವಿರುದ್ಧ ಧ್ವನಿ ಎತ್ತಿ ತಮ್ಮ ಬರಹಗಳ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.
ನಿರ್ಭಿಡೆಯಿಂದ, ಧೈರ್ಯದಿಂದ ಹಳ್ಳಿಯ ಹಿಂದುಳಿದ ಅಮಾಯಕ ಹೆಂಗಸರ ಸ್ಥಿತಿಗತಿಗಳ ಬಗ್ಗೆ, ಪಟ್ಟಣ ಪ್ರದೇಶಗಳ ಕೊಳಚೆ ಪ್ರದೇಶಗಳ ಹೆಣ್ಣು ಮಕ್ಕಳ ಬಗ್ಗೆ, ಅವರ ಸಂಕಟ ಶೋಷಣೆಗಳ ಬಗ್ಗೆ ಓದುಗರ ಮನ ಕುದಿಯುವಂತೆ ಬರೆದರು.
ಸಾಮಾಜಿಕ ಕಳಕಳಿ ಹೊಂದಿದ್ದ ಹಾಗೂ ಬರಹಗಳ ಮೂಲಕ ಸಮಾಜವನ್ನು ತಿದ್ದುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಗೀತಾ ನಾಗಭೂಷಣ್ ಅವರ ನಿಧನ ನಿಜಕ್ಕೂ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.
ದೇವರು ಅವರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.
- ಗಾಲಿ ಜನಾರ್ದನ ರೆಡ್ಡಿ