ಎಲ್ಲಾ ಪ್ರಶ್ನೆಗೆ ಉತ್ತರ ಕೊಟ್ಟ ರೆಡ್ಡಿ, ಶ್ರೀರಾಮುಲು ಗೆಲ್ಲಿಸುವುದು ಒಂದೇ ಗುರಿ!
Recommended Video
ಚಿತ್ರದುರ್ಗ, ಏಪ್ರಿಲ್ 26 : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜನಾರ್ದನ ರೆಡ್ಡಿ ಅವರ ಪಾತ್ರವೇನು?. 2015ರ ಜನವರಿಯಲ್ಲಿ ಹುಟ್ಟಿದ್ದ ಪ್ರಶ್ನೆ ಇದು. ಆಗ ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜೈಲು ಸೇರಿದ್ದ ಜನಾರ್ದನ ರೆಡ್ಡಿ ಅವರು ಬಿಡುಗಡೆಗೊಂಡಿದ್ದರು. ಈ ಪ್ರಶ್ನೆಗೆ ಈಗ ಉತ್ತರ ಸಿಗುತ್ತಿದೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಮಾಜಿ ಸಚಿವ ಜನಾರ್ದನ ರೆಡ್ಡಿ ಬಿಜೆಪಿ ಪಕ್ಷದ ಯಾವುದೇ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ರೆಡ್ಡಿ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದರೆ, ರಾಜ್ಯ ಬಿಜೆಪಿ ನಾಯಕರು ಹೈ ಕಮಾಂಡ್ ನಾಯಕರತ್ತ ಕೈ ತೋರಿಸುತ್ತಿದ್ದರು.
ಅಂದು ಗಾಲಿ ಜನಾರ್ದನ ರೆಡ್ಡಿ ಹಾಕಿದ್ದ ಸ್ಕೆಚ್ ಯಾವುದು?
ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, 'ಬಿಜೆಪಿಗೂ ಜನಾರ್ದನ ರೆಡ್ಡಿಗೂ ಸಂಬಂಧವಿಲ್ಲ' ಎಂದು ಹೇಳಿದ್ದರು. ಈ ಹೇಳಿಕೆ ಬಳಿಕ ಪುನಃ ಜನಾರ್ದನ ರೆಡ್ಡಿ ಪಾತ್ರವೇನು? ಎಂಬ ಚರ್ಚೆ ಆರಂಭವಾಯಿತು.
ಜನಾರ್ದನ ರೆಡ್ಡಿ ಜತೆ ಸೇರಿ ಬಿಜೆಪಿ ಹೆಣೆದಿರುವ ತ್ರಿಶೂಲ ವ್ಯೂಹ ಏನದು?
ಜನಾರ್ದನ ರೆಡ್ಡಿ ಅವರ ಆಪ್ತ ಸ್ನೇಹಿತ, ಬಳ್ಳಾರಿ ಸಂಸದ ಬಿ.ಶ್ರೀರಾಮುಲು ಅವರು ಬಾದಾಮಿ ಮತ್ತು ಮೊಳಕಾಲ್ಮೂರು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀರಾಮುಲು ಅವರ ಎದುರಾಳಿ. ಆದ್ದರಿಂದ, ಜನಾರ್ದನ ರೆಡ್ಡಿ ಅವರು ಚುನಾವಣಾ ಪ್ರಚಾರಕ್ಕೆ ಧುಮುಕಿದ್ದಾರೆ.
ಶ್ರೀರಾಮುಲು ಜೊತೆ ಜನಾರ್ದನ ರೆಡ್ಡಿ
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಲ್ಲಿ ಬಿ.ಶ್ರೀರಾಮುಲು ನಾಮಪತ್ರ ಸಲ್ಲಿಸುವಾಗ ಜನಾರ್ದನ ರೆಡ್ಡಿ ಜೊತೆಗಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ರಾಷ್ಟ್ರಮಟ್ಟದ ನಾಯಕರ ಜೊತೆ ಅವರು ವೇದಿಕೆ ಹಂಚಿಕೊಂಡರು, ರೋಡ್ ಶೋನಲ್ಲಿ ಪಾಲ್ಗೊಂಡಿದ್ದರು.
ಮೊಳಕಾಲ್ಮೂರು ಕ್ಷೇತ್ರದಲ್ಲಿ ಜನಾರ್ದನ ರೆಡ್ಡಿ ಅವರು ಬೆಂಬಲಿಗರ ಜೊತೆ ಪ್ರಚಾರ ಆರಂಭಿಸಿದ್ದಾರೆ. ಕ್ಷೇತ್ರದಲ್ಲಿ ಬಿ.ಶ್ರೀರಾಮುಲು ಅವರನ್ನು ಗೆಲ್ಲಿಸುವುದೇ ಗುರಿ ಎಂದು ಜನಾರ್ದನ ರೆಡ್ಡಿ ಪ್ರಚಾರವನ್ನು ನಡೆಸುತ್ತಿದ್ದಾರೆ.
'ರಾವಣನ ಸಂಹಾರ ಖಂಡಿತ'
ಬುಧವಾರ ಮೊಳಕಾಲ್ಮೂರು ಕ್ಷೇತ್ರದ ಕಣ್ಣಕುಪ್ಪೆ, ಬೊಮ್ಮದೇವನಹಳ್ಳಿ, ತಮ್ಮೇನಹಳ್ಳಿ, ರಾಜಾಪುರ ಗ್ರಾಮಗಳಲ್ಲಿ ಉರಿ ಬಿಸಿಲನ್ನು ಲೆಕ್ಕಿಸದೇ ಜನಾರ್ದನ ರೆಡ್ಡಿ ತೆರದ ವಾಹನದಲ್ಲಿ ರೋಡ್ ಶೋ ನಡೆಸಿ ಮಾತಯಾಚನೆ ಮಾಡಿದರು.
'ರಾಜ್ಯದಲ್ಲಿ ಸಿದ್ದರಾವಣನ ಸರ್ಕಾರವಿದೆ. ಈ ಚುನಾವಣೆಯಲ್ಲಿ ರಾವಣನನ್ನು ಸಂಹಾರ ಮಾಡುತ್ತೇವೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿಯನ್ನು ನಡೆಸಿದ್ದಾರೆ. ಹಲವು ಗ್ರಾಮಗಳಲ್ಲಿ ಪ್ರಚಾರವನ್ನು ಮುಂದುವರೆಸಿದ್ದಾರೆ.
ಎನ್.ವೈ.ಗೋಪಾಕೃಷ್ಣ ಕರೆತಂದರು
ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಎನ್.ವೈ.ಗೋಪಾಲಕೃಷ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತ್ತು. ಅಸಮಾಧಾನಗೊಂಡಿದ್ದ ಅವರನ್ನು ಬಿಜೆಪಿಗೆ ಕರೆತರುವಲ್ಲಿ ಜನಾರ್ದನ ರೆಡ್ಡಿ ಅವರ ಚಿಂತನೆಯೂ ಕೆಲಸ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗ ಗೋಪಾಲಕೃಷ್ಣ ಅವರು ಕೂಡ್ಲಗಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.
ಮೊಳಕಾಲ್ಮೂರಿನಲ್ಲಿ ಬಿಜೆಪಿ ಟಿಕೆಟ್ ಸಿಗದೇ ಅಸಮಾಧಾನಗೊಂಡು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ತಿಪ್ಪೇಸ್ವಾಮಿ ಅವರ ಮನವೊಲಿಕೆ ಕಾರ್ಯವನ್ನು ಜನಾರ್ದನ ರೆಡ್ಡಿ ಮಾಡುತ್ತಿದ್ದಾರೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಶುಕ್ರವಾರ ಅಂತಿಮ ದಿನವಾಗಿದೆ.
|
ಸಿದ್ದರಾಮಯ್ಯ ವಾಗ್ದಾಳಿ
ಮಾಜಿ ಸಚಿವ ಜನಾರ್ದನ ರೆಡ್ಡಿ ಚುನಾವಣಾ ಪ್ರಚಾರಕ್ಕೆ ಇಳಿದಿರುವುದು ಪ್ರತಿಪಕ್ಷಗಳ ಕೈಗೆ ಅಸ್ತ್ರ ಸಿಕ್ಕಂತೆ ಆಗಿದೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತವೆ. ಈಗಾಗಲೇ ಸಿದ್ದರಾಮಯ್ಯ ಅವರು ಟ್ವಿಟರ್ನಲ್ಲಿ ಜನಾರ್ದನ ರೆಡ್ಡಿ ವಿರುದ್ದ ವಾರ್ ಆರಂಭಿಸಿದ್ದಾರೆ.