ಕೆಲಸ ಮಾಡೋದು ಬಿಟ್ಟು ಧರ್ಮಸ್ಥಳದಲ್ಲಿ ಆಣೆಪ್ರಮಾಣ ಮಾಡ್ತಾರಂತೆ!
Recommended Video
ಜನಪರ ಕೆಲಸ ಮಾಡಿಕೊಂಡು, ಜನಾನುರಾಗಿಯಾಗುವ ಬದಲು, ಧರ್ಮಸ್ಥಳ ಮಂಜುನಾಥಸ್ವಾಮಿಯ ಮುಂದೆ ಆಣೆಪ್ರಮಾಣ ಮಾಡಲು ಮುಂದಾಗಿದ್ದಾರೆ ದಕ್ಷಿಣಕನ್ನಡದ ರಾಜಕೀಯ ಮುಖಂಡರುಗಳು. ಅಲ್ಲಾ.. ಇವರಿಗೆಲ್ಲಾ ಧರ್ಮಸ್ಥಳದ ಮಂಜುನಾಥಸ್ವಾಮಿ ಬಿಟ್ಟಿಯಾಗಿ ಸಿಕ್ಕಿಬಿಟ್ಟಿದ್ದಾನೆಂದು ಅಂದ್ಕೊಂಡಿದ್ದಾರೋ ಏನೋ?
ತಮ್ಮನ್ನು ಉಲ್ಲೇಖಿಸಿ ಅತ್ಯಂತ ಕೆಟ್ಟಭಾಷೆ ಪ್ರಯೋಗಿಸಿ ರಮಾನಾಥ ರೈ ಮಾತನಾಡಿದ್ದಾರೆಂದು ಎಂಬತ್ತರ ಹಿರಿಯ ಜೀವ, ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಸಂಸದ ಜನಾರ್ಧನ ಪೂಜಾರಿ ವೇದಿಕೆಯಲ್ಲಿ ಬಿಕ್ಕಿಬಿಕ್ಕಿ ಅತ್ತಿರುವ ಘಟನೆ ಜಿಲ್ಲೆಯ ಎರಡು ಪ್ರಭಾವಿ ಸಮುದಾಯಗಳ ನಡುವೆ ಜಟಾಪಟಿಗೆ ಕಾರಣವಾಗಿದೆ.
ರಮಾನಾಥ್ ರೈ ಧರ್ಮಸ್ಥಳಕ್ಕೆ ಆಣೆ-ಪ್ರಮಾಣಕ್ಕೆ ಬರಲಿ
ರಾಜಕೀಯದಲ್ಲಿ ನಾನು ಅವರ ನೆರಳಿನಲ್ಲೇ ಬೆಳೆದು ಬಂದವನು, ಅಂಥವರ ವಿರುದ್ದ ಮಾತನಾಡುತ್ತೇನಾ.. ಛೇ.. ಇಲ್ಲವೇ ಇಲ್ಲಾ.. ಎಂದು ಅರಣ್ಯ ಸಚಿವ ರಮಾನಾಥ ರೈ ಕೂಡಾ ಕಣ್ಣೀರಿಟ್ಟಿದ್ದೂ ಆಗಿದೆ. ನಮ್ಮಿಬ್ಬರ ನಡುವೆ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಕಡ್ಡಿಯಾಡಿಸುತ್ತಿದ್ದಾರೆಂದು ರೈ ಆರೋಪಿಸಿದ್ದಾರೆ.
ಪೂಜಾರಿ ಮತ್ತು ರಮಾನಾಥ ರೈ ನಡುವಿನ ಕಲಹ ಈಗ, ರೈ ಮತ್ತು ಹರಿಕೃಷ್ಣ ಬಂಟ್ವಾಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. ಪಂಚಾಯತಿ ಲೆವೆಲಿನ ವ್ಯಕ್ತಿ ಮಾತನಾಡಿದ್ದಕ್ಕೆಲ್ಲಾ ಉತ್ತರ ನೀಡುವುದಿಲ್ಲ ಎಂದು ರೈ ಹೇಳಿದರೆ, ನಿಮ್ಮ ಯೋಗ್ಯತೆ ಏನೆಂದು ನನಗೆ ಗೊತ್ತಿಲ್ಲವಾ ಎಂದು ಹರಿಕೃಷ್ಣ ಬಂಟ್ವಾಳ ತಿರುಗೇಟು ನೀಡಿದ್ದಾರೆ.
ಸಾರ್ವಜನಿಕ ವೇದಿಕೆಯಲ್ಲಿ ಬಿಕ್ಕಿಬಿಕ್ಕಿ ಅತ್ತ ಪೂಜಾರಿ
ಪೂಜಾರಿಯವರ ಬಗ್ಗೆ ನಾನು ಕೆಟ್ಟದ್ದಾಗಿ ಮಾತನಾಡಲಿಲ್ಲ, ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ನಾನು ಸಿದ್ದ ಎನ್ನುವ ಸಚಿವ ರೈ ಹೇಳಿಕೆಗೆ, ಅವರು ಹೇಳಿದ್ದಕ್ಕೆ ನನ್ನಲ್ಲಿ ಪುರಾವಗಳಿವೆ, ನಾನೂ ಧರ್ಮಸ್ಥಳಕ್ಕೆ ಬರಲು ಸಿದ್ದ ಎಂದು ಹರಿಕೃಷ್ಣ ಬಂಟ್ವಾಳ ಚಾಲೆಂಜ್ ಮಾಡಿದ್ದಾರೆ.
ಬಿಎಸ್ವೈ, ಎಚ್ಡಿಕೆ ಆಣೆಪ್ರಮಾಣದ ಪ್ರಹಸನದ ನಂತರ ಇನ್ನೊಂದು ಘಟನೆ, ನಾಡಿನ ಧರ್ಮದೇಗುಲದ ಅಂಗಣಕ್ಕೆ ಹೋಗುವ ಸಾಧ್ಯತೆಯಿದೆ, ಮುಂದೆ ಓದಿ..
ತುಳುಭಾಷೆಯಲ್ಲಿ ತೀರಾ ಕೆಟ್ಟಪದ ರೈ ಬಳಸಿದ್ದಾರೆನ್ನುವ ಸುದ್ದಿ
ಮಂಗಳೂರು ವಿಮಾನ ನಿಲ್ದಾಣದಿಂದ ಸುರತ್ಕಲ್ ನಲ್ಲಿ ನಡೆಯುತ್ತಿದ್ದ ಪಕ್ಷದ ಮುಖಂಡರೊಬ್ಬರ ಮದುವೆ ಸಮಾರಂಭಕ್ಕೆ ಹೋಗುವ ಮುನ್ನ ರಮಾನಾಥ ರೈ, ಜನಾರ್ಧನ ಪೂಜಾರಿಯವರನ್ನು ತುಳುಭಾಷೆಯಲ್ಲಿ ತೀರಾ ಕೆಟ್ಟಪದ ಬಳಸಿ ಮಾತನಾಡಿದ್ದಾರೆ ಎನ್ನುವ ಸುದ್ದಿ ಜನಾರ್ಧನಪೂಜಾರಿ ಕಿವಿಗೆ ಬಿದ್ದಿತ್ತು. ಇದರಿಂದ ತೀವ್ರ ಮನನೊಂದ ಪೂಜಾರಿ, ಬಿಲ್ಲವ ಸಮುದಾಯದ ಧಾರ್ಮಿಕ ಕಾರ್ಯಕ್ರಮದ ವೇದಿಕೆಯೊಂದರಲ್ಲಿ ಬಿಕ್ಕಿಬಿಕ್ಕಿ ಅತ್ತಿದ್ದರು. ಈ ವಿಡಿಯೋ ವೈರಲ್ ಆಗಿ, ರೈ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗಿತ್ತು.
ಪೂಜಾರಿಯವರ ನೆರಳಿನಲ್ಲಿ ರಾಜಕೀಯದಲ್ಲಿ ಮೇಲೆ ಬಂದವನು
ಮೊದಲು ಪೂಜಾರಿಯವರ ಬಗ್ಗೆ ಮಾತನಾಡಿದ್ದಕ್ಕೆ ನಿಮ್ಮಲ್ಲಿ ಏನು ಪುರಾವೆಯಿದೆ ಎಂದು ಪ್ರಶ್ನಿಸಿದ್ದ ರಮಾನಾಥ ರೈ ನಂತರ, ಪಕ್ಷದ ವೇದಿಕೆಯೊಂದರಲ್ಲಿ ಮಾತನಾಡುತ್ತಾ ತಾನೂ ಕಣ್ಣೀರಿಟ್ಟಿದ್ದರು. ಪೂಜಾರಿಯವರ ನೆರಳಿನಲ್ಲಿ ರಾಜಕೀಯದಲ್ಲಿ ನೆಲೆಕಂಡವನು ನಾನು, ಅವರ ಕುಟುಂಬದವರು ನನ್ನನ್ನು ಅಂಕಲ್ ಎಂದು ಕರೆಯುತ್ತಾರೆ. ನಾನು ಅವರ ವಿರುದ್ದ ಮಾತನಾಡಲಿಲ್ಲ, ಇದೆಲ್ಲಾ ಹರಿಕೃಷ್ಣ ಬಂಟ್ವಾಳ ಅವರ ಪಿತೂರಿ. ಧರ್ಮಸ್ಥಳದಲ್ಲಿ ಬಂದು ಪ್ರಮಾಣ ಮಾಡಲು ನಾನು ಸಿದ್ದ ಎಂದು ಅರಣ್ಯ ಸಚಿವ ರಮಾನಾಥ ರೈ ಹೇಳಿದ್ದರು.
ಬಿಲ್ಲವ ಮತ್ತು ಬಂಟ್ಸ್ ಸಮುದಾಯಗಳ ನಡುವೆ ಜಟಾಪಟಿಗೆ ಕಾರಣ
ಯಾರಿಗಾದರೂ ನೋವು ತರುವಂತಿತ್ತು ಪೂಜಾರಿಯವರು ವೇದಿಕೆಯಲ್ಲಿ ಕಣ್ಣೀರಿಡುತ್ತಿರುವ ದೃಶ್ಯ. ಈ ಘಟನೆ ಜಿಲ್ಲೆಯ ಪ್ರಭಾವಿ ಬಿಲ್ಲವ ಮತ್ತು ಬಂಟ್ಸ್ ಸಮುದಾಯಗಳ ನಡುವೆ ಜಟಾಪಟಿಗೆ ಕಾರಣವಾಗಿದೆ. ನಮ್ಮ ಸಮುದಾಯದ ಹಿರಿಯ ಮುಖಂಡನನ್ನು ರಮಾನಾಥ ರೈ ಅವಮಾನ ಮಾಡಿದ್ದಾರೆಂದು ಅವರ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಚುನಾವಣಾ ವರ್ಷದಲ್ಲಿ ಈ ಘಟನೆ ಪ್ರಭಾವ ಬೀರುವ ಸಾಧ್ಯತೆಯನ್ನರಿತ ರಮಾನಾಥ ರೈ, ಈಗ ಆಣೆಪ್ರಮಾಣದ ವಿಚಾರ ಮಾತನ್ನಾಡುತ್ತಿದ್ದಾರೆಂದು ಇತ್ತೀಚೆಗಷ್ಟೇ ಬಿಜೆಪಿಗೆ ನಿಷ್ಠೆ ತೋರಿರುವ ಹರಿಕೃಷ್ಣ ಬಂಟ್ವಾಳ ಕಿಡಿಕಾರಿದ್ದಾರೆ.
ನನ್ನ ಮನೆಯಲ್ಲಿರುವುದು ಪೂಜಾರಿ, ನಾರಾಯಣ ಗುರುಗಳ ಫೋಟೋ
ನನ್ನ ಮನೆಯಲ್ಲಿರುವುದು ಪೂಜಾರಿಯವರ ಮತ್ತು ನಮ್ಮ ಗುರುಗಳಾದ ನಾರಾಯಣ ಗುರುಗಳ ಫೋಟೋ. ಜನಾರ್ಧನ ಪೂಜಾರಿಯವರು ಈ ಘಟನೆಯ ವಿಚಾರದಲ್ಲಿ ಸುಮ್ಮನಿದ್ದರೂ, ನಾನು ಸುಮ್ಮನಿರುವುದಿಲ್ಲ. ರಮಾನಾಥ ರೈಗಳು ಧರ್ಮಸ್ಥಳಕ್ಕೆ ಬಂದರೆ, ಪೂಜಾರಿಯವರ ಪರವಾಗಿ ನಾನೂ ಹೋಗಲು ಸಿದ್ದನಿದ್ದೇನೆಂದು ಹರಿಕೃಷ್ಣ ಬಂಟ್ವಾಳ ಚಾಲೆಂಜ್ ಮಾಡಿದ್ದಾರೆ.
ಬಿಲ್ಲವ ಸಮುದಾಯಕ್ಕೆ ತುಂಬಾ ಕೆಲಸ ಮಾಡಿದ್ದೇನೆ
ಯಾರೋ ಹೇಳಿದ ಮಾತನ್ನು ಪೂಜಾರಿಯವರು ಕೇಳಬಾರದು, ನಿಮ್ಮ ಮೇಲೆ ನನಗೆ ಯಾವುದೇ ಬೇಸರವಿಲ್ಲ. ನಾನು ಬಿಲ್ಲವ ಸಮುದಾಯಕ್ಕೆ ತುಂಬಾ ಕೆಲಸ ಮಾಡಿದ್ದೇನೆ ಎಂದು ರಮಾನಾಥ ರೈ ಹೇಳಿದ್ದಾರೆ. ಚುನಾವಣಾ ಭಯದಿಂದ ರೈಗಳು ಕಣ್ಣೀರು ಹಾಕುತ್ತಿದ್ದಾರೆಂದು ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ. ಒಟ್ಟಿನಲ್ಲಿ ಈ ಘಟನೆ, ಬಿಲ್ಲವ - ಬಂಟ್ಸ್ ಸಮುದಾಯಗಳ ಮನಸ್ಸನ್ನು ಕದಡಿಸಿದೆ.