ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ರೆಡ್ಡಿಗೆ ಬಂಧನ ಭೀತಿ
ಬೆಂಗಳೂರು, ನವೆಂಬರ್ 09: ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಜನಾರ್ದನ ರೆಡ್ಡಿಗೆ ಮತ್ತಷ್ಟು ಆತಂಕ ಎದುರಾಗಿದೆ. ರೆಡ್ಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಲಾಗಿದೆ.
ಆಂಬಿಡೆಂಟ್ ಪ್ರಕರಣದಲ್ಲಿ ಲಂಚ ಪಡೆದ ಹಾಗೂ ಈಡಿದ ಆರೋಪವನ್ನು ಸಿಸಿಬಿ ಮಾಡಿತ್ತು. ಮತ್ತು ಅವರ ಬಂಧನಕ್ಕೆ ಬಲೆ ಬೀಸಿತ್ತು. ರೆಡ್ಡಿ ಅವರ ಬೆಂಗಳೂರು ಹಾಗೂ ಬಳ್ಳಾರಿಯ ಮನೆಗಳ ಮೇಲೆ ರೇಡ್ ಸಹ ಮಾಡಲಾಗಿತ್ತು.
ಇಂದು ಸಿಟಿ ಸಿವಿಲ್ ಕೋರ್ಟ್ನಲ್ಲಿ ರೆಡ್ಡಿ ಪರ ವಕೀಲ ಸಿ.ಎಚ್.ಹನುಮಂತರಾಯ ಅವರು ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಹಾಕಿದ್ದರು. ಆದರೆ ವಿಚಾರಣೆ ನಡೆಸಿದ ನ್ಯಾಯಾಲಯವು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ. ಅಲ್ಲದೆ ಸಿಸಿಬಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಸಲ್ಲಿಸಲು ಅವಕಾಶ ನೀಡಿದೆ.
'ಭಾನುವಾರವೇ ವಿಚಾರಣೆಗೆ ಬರ್ತಾರೆ'
ಸಿಸಿಬಿ ವಿಚಾರಣೆಗೆ ರೆಡ್ಡಿ ಅವರು ಏಕೆ ಹಾಜರಾಗಿಲ್ಲ ಎಂದು ನ್ಯಾಯಾಧೀಶರು ಕೇಳಿದರು. ಬಂಧಿಸುವ ಭೀತಿ ಇತ್ತೆಂದು ಹೇಳಿದ ರೆಡ್ಡಿ ಪರ ವಕೀಲರು ವಕೀಲರು, ನಿರೀಕ್ಷಣಾ ಜಾಮೀನು ದೊರೆತರೆ ಭಾನುವಾರವೇ ವಿಚಾರಣೆಗೆ ಹಾಜರಾಗುತ್ತಾರೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.
ಬಂಧನದ ಭೀತಿ ಮೇಲ್ನೋಟಕ್ಕೆ ಕಾಣುತ್ತಿಲ್ಲ
ಆದರೆ ರೆಡ್ಡಿ ಅವರನ್ನು ಬಂಧಿಸಲು ಗಟ್ಟಿಯಾದ ಕಾರಣಗಳು ಇಲ್ಲ, ವಿಚಾರಣೆಗೆ ಹಾಜರಾದರೆ ಬಂಧಿಸುತ್ತಾರೆ ಎಂದು ಯಾವ ಆಧಾರದಲ್ಲಿ ಹೇಳುತ್ತೀರಿ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದರು ಅಲ್ಲದೆ, ಬಂಧನದ ಭೀತಿಯೂ ಮೇಲ್ನೋಟಕ್ಕೆ ಕಾಣುತ್ತಿಲ್ಲ ಎಂಬ ಅಭಿಪ್ರಾಯವನ್ನು ನ್ಯಾಯಾಧೀಶರು ವ್ಯಕ್ತಪಡಿಸಿದರು.
ಜನಾರ್ದನ ರೆಡ್ಡಿಗೆ ಮುಂದುವರೆದ ಬಂಧನದ ಭೀತಿ?
ನಿರೀಕ್ಷಣಾ ಜಾಮೀನು ಅರ್ಜಿ ಮುಂದೂಡಿದ ಕಾರಣ ಜನಾರ್ದನ ರೆಡ್ಡಿ ಅವರಿಗೆ ಬಂಧನದ ಭೀತಿ ಮುಂದುವರೆದಿದೆ. ಅಥವಾ ಅವರೇ ಖುದ್ದಾಗಿಯಾದರೂ ಸಿಸಿಬಿ ಎದುರು ವಿಚಾರಣೆಗೆ ಹಾಜರಾಗಬೇಕಾಗಿದೆ. ಸಿಸಿಬಿ ಸಹ ಜನಾರ್ದನ ರೆಡ್ಡಿಗೆ ಈಗಾಗಲೇ ನೊಟೀಸ್ ಜಾರಿ ಮಾಡಿದ್ದು, ನವೆಂಬರ್ 12ರ ಸೋಮವಾರದಂದು ವಿಚಾರಣೆಗೆ ಹಾಜರಾಗುವಂತೆ ಹೇಳಲಾಗಿದೆ.
ಮಧ್ಯಂತರ ಜಾಮೀನು ಅರ್ಜಿ ಹಿಂಪಡೆದ ವಕೀಲ
ಜನಾರ್ದನ ರೆಡ್ಡಿ ಪರ ವಕೀಲರು ಎರಡು ಜಾಮೀನು ಅರ್ಜಿ ಸಲ್ಲಿಸಿದ್ದರು. ಒಂದು ನಿರೀಕ್ಷಣಾ ಜಾಮೀನಾದರೆ, ಮಧ್ಯಂತರ ಜಾಮೀನು ಅರ್ಜಿ ಎರಡೂ ಸಲ್ಲಿಸಿದ್ದರು. ಅದರಲ್ಲಿ ಮಧ್ಯಂತರ ಜಾಮೀನು ಅರ್ಜಿಯನ್ನು ವಕೀಲರೆ ಹಿಂಪಡೆದು, ಮೂಲ ಅರ್ಜಿಯಾದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮುಂದುವರೆಸಿದರು.
ಸಿಸಿಬಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ಜನಾರ್ದನ ರೆಡ್ಡಿ ಅವರ ನಿರೀಕ್ಷಣಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಿಸಿಬಿಗೆ ಅವಕಾಶವನ್ನೂ ನ್ಯಾಯಾಲಯವು ನೀಡಿತು. ಇಂದು ತಾನೆ ಸಿಸಿಬಿಯು ರೆಡ್ಡಿ ಆಪ್ತ ಅಲಿಖಾನ್ ನ ನಿರೀಕ್ಷಣಾ ಜಾಮೀನು ರದ್ದು ಮಾಡುವಂತೆ ಅರ್ಜಿ ಸಲ್ಲಿಸತ್ತು. ಅದರ ವಿಚಾರಣೆ ಸಹ ಸೋಮವಾರಕ್ಕೆ ಮುಂದೂಡಲ್ಪಟ್ಟಿದೆ.