ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು, ಚೇತರಿಕೆ!
ಬೆಂಗಳೂರು, ನ. 15: ಮಾಜಿ ಸಚಿವ, ಗಣಿಧಣಿ ಜಿ. ಜನಾರ್ಧನರೆಡ್ಡಿ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು ಬೆಂಗಳೂರಿಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ ಎಂಬ ಮಾಹಿತಿ ಬಂದಿದೆ. ನಿನ್ನೆ (ಭಾನುವಾರ) ರಾತ್ರಿ ದಿಢೀರ್ ಎಂದು ಗ್ಯಾಸ್ಟ್ರಿಕ್ ಸಮಸ್ಯೆ ಜನಾರ್ಧನರೆಡ್ಡಿ ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗ್ಯಾಸ್ಟ್ರಿಕ್ ಸಮಸ್ಯೆ ಕಂಡು ಬಂದಿದ್ದರೂ ನಂತರ ಅವರಿಗೆ ಹೃದಯ ಸಂಬಂಧಿ ಪರೀಕ್ಷೆಗಳನ್ನೂ ಕೂಡ ಮಾಡಲಾಗಿದೆ ಎಂಬ ಮಾಹಿತಿಯಿದೆ. ಪರೀಕ್ಷಾ ವರದಿಗಳು ಇನ್ನೂ ಬರಬೇಕಾಗಿದೆ ಎನ್ನಲಾಗಿದೆ.
ಅವರ ಆರೋಗ್ಯದಲ್ಲಿ ಯಾವುದೇ ತೊಂದರೆಯಿಲ್ಲ ಎಂಬ ಮಾಹಿತಿಯಿದೆ. ಇದೀಗ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಅವರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಭಾನುವಾರ ರಾತ್ರಿ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಂಡಿದ್ದು, ಸ್ವಲ್ಪ ಮಟ್ಟಿನ ಜ್ವರವೂ ಇತ್ತು ಎನ್ನಲಾಗಿದೆ. ಇದೀಗ ಅವರು ಸುಧಾರಿಸಿಕೊಂಡಿದ್ದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂಬ ಮಾಹಿತಿಯಿದೆ.
2006ರಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ, ಆ ನಂತರ 2008ರಲ್ಲಿ ಸ್ವಂತ ಬಲದ ಮೇಲೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದಾಗ ಮಾಜಿ ಸಿಎಂ ಯಡಿಯೂರಪ್ಪ ಅವರ ಸಂಪುಟದಲ್ಲಿ ಪ್ರವಾಸೋದ್ಯಮ ಸಚಿವರಾಗಿ ಜಿ. ಜನಾರ್ದನ ರೆಡ್ಡಿ ಕೆಲಸ ಮಾಡಿದ್ದರು. 2008ರಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಜನಾರ್ದನ ರೆಡ್ಡಿ ಅವರು ನಾಲ್ವರು ಪಕ್ಷೇತರ ಶಾಸಕರ ಬೆಂಬಲ ಪಡೆಯುವಲ್ಲಿ ರೆಡ್ಡಿ ಅವರು ಪ್ರಮುಖ ಪಾತರ ವಹಿಸಿದ್ದರು. ನಂತರ ಗಣಿ ಹಗರಣದಲ್ಲಿ ಆರೋಪಗಳು ಎದುರಾದ ಬಳಿಕ ಸಕ್ರೀಯ ರಾಜಕಾರಣದಿಂದ ಜನಾರ್ದನ ರೆಡ್ಡಿ ದೂರವಾಗಿದ್ದಾರೆ.