ಕುಚ್ಚಿಕು ಗೆಳೆಯ ರೆಡ್ಡಿ ಬಗ್ಗೆ ಶ್ರೀರಾಮಲು ಹೇಳಿದ್ದೇನು?
ಬುಧವಾರ ಗದಗದ ವಿದ್ಯಾದಾನ ಸಮಿತಿ ಮೈದಾನದಲ್ಲಿ ಶ್ರೀರಾಮುಲು ಅಭಿಮಾನಿ ಬಳಗದಿಂದ ಏರ್ಪಡಿಸಲಾಗಿದ್ದ 555 ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಸ್ನೇಹ ಕಡಿದುಕೊಳ್ಳುವಂತೆ ವಿಚಾರಣೆ ಸಂದರ್ಭದಲ್ಲಿ ಸಿಬಿಐ ಸೂಚಿಸಿದೆ ಎಂದು ಹೇಳಿದರು.
ಸಿಬಿಐ ಅಧಿಕಾರಿಗಳು ಜನಾರ್ದನ ರೆಡ್ಡಿ ಅವರ ಜೊತೆಗಿನ ಸ್ನೇಹವನ್ನು ಕಡಿದುಕೊಳ್ಳಿ, ಇಲ್ಲದಿದ್ದರೆ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನೀವು ಸಿಲುಕುತ್ತಿರಿ ಎಂದು ತಿಳಿಸಿದ್ದಾರೆ. ಆದರೆ, ಜನಾರ್ದನ ರೆಡ್ಡಿ ರಾಜಕೀಯವಾಗಿ ನನ್ನನ್ನು ಬೆಳಸಿದವರು, ಎಂತಹ ಪರಿಸ್ಥಿತಿ ಎದುರಾದರೂ ಅವರ ಜೊತೆಗಿನ ಸ್ನೇಹ ಮುಂದುವರೆಯುತ್ತದೆ ಎಂದು ಶ್ರೀರಾಮುಲು ಹೇಳಿದರು.
ಆದರೆ, ನಾನು ಜೈಲಿಗೆ ಹೋದರೂ ಸರಿ ಜನಾರ್ದನ ರಡ್ಡಿ ಅವರ ಸ್ನೇಹವನ್ನು ಕಡಿದುಕೊಳ್ಳಲಾರೆ. ಸಿಬಿಐ ಸೂಚನೆಯನ್ನೂ ಮೀರಿ ರೆಡ್ಡಿ ಜೊತೆಗಿನ ಸ್ನೇಹವನ್ನು ಮುಂದುವರೆಸುವುದಾಗಿ ಶ್ರೀರಾಮುಲು ಘೋಷಿಸಿದರು. ಆ ಮೂಲಕ ಅಕ್ರಮ ಗಣಿಕಾರಿಕೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ರೆಡ್ಡಿಯ ಜೊತೆಗಿನ ಸ್ನೇಹ ಗಟ್ಟಿಯಾದದ್ದು ಎಂದು ಸಾಬೀತು ಮಾಡಿದರು.
ಜನಾರ್ದನ ರೆಡ್ಡಿ ಅವರು ಜೈಲು ಸೇರಿದ ನಂತರ ಅವರನ್ನು ಹಲವಾರು ಬಾರಿ ಭೇಟಿಯಾಗಿ ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಬೆಳವಣಿಗೆ ಹಾಗೂ ಸಂಘಟನೆ ಕುರಿತು ವಿವರಣೆ ನೀಡಿದ್ದೇನೆ. ಅವರ ಅನುಪಸ್ಥಿತಿ ಹಾಗೂ ಸುರೇಶಬಾಬು ಜೈಲು ಸೇರಿದ ನಂತರ ನಾನು ಸಂಕಷ್ಟಕ್ಕೆ ಸಿಲುಕಿರುವುದು ನಿಜ, ತಮಗೆ ಎಂತಹ ಸಂಕಷ್ಟ ಎದುರಾದರೂ, ರೆಡ್ಡಿಯ ಸ್ನೇಹ ಬಿಡುವ ಪ್ರಶ್ನೆಯೇ ಇಲ್ಲ ಎಂದು ಶ್ರಿರಾಮಲು ತಿಳಿಸಿದರು.
ಮೈತ್ರಿ, ವಿಲೀನ ಇಲ್ಲ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಯಾವುದೇ ಪಕ್ಷದೊಂದಿಗೆ ಮೈತ್ರಿಮಾಡಿಕೊಳ್ಳುವಿದಿಲ್ಲ. ಪಕ್ಷವನ್ನು ಬಿಜೆಪಿ ಜೊತೆಗೆ ವಿಲೀನ ಮಾಡುವುದಿಲ್ಲ. ಎಲ್ಲಾ 28 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಪಕ್ಷ ಕಣಕ್ಕಿಳಿಸಲಿದೆ ಎಂದು ಶ್ರೀರಾಮುಲು ಹೇಳಿದರು.