'ನಮ್ಮ ಶಾಲೆ ನನ್ನ ಕೊಡುಗೆ' ಕಾರ್ಯಕ್ರಮಕ್ಕೆ ಡಿಜಿಟಲ್ ಪಾವತಿ ಮೂಲಸೌಕರ್ಯ
ಬೆಂಗಳೂರು, ಸೆಪ್ಟೆಂಬರ್ 7: ತನ್ನ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಶ್ರೇಣಿಯನ್ನು ವಿಸ್ತರಿಸುತ್ತಿರುವ ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಕರ್ನಾಟಕ ರಾಜ್ಯ ಸರ್ಕಾರದ 'ನಮ್ಮ ಶಾಲೆ - ನನ್ನ ಕೊಡುಗೆ' ಉಪಕ್ರಮಕ್ಕೆ ಪಾವತಿ ಸೇವೆ ಒದಗಿಸಲಿದೆ.
ಕರ್ನಾಟಕದಲ್ಲಿನ ಯಾವುದೇ ಸರ್ಕಾರಿ ಶಾಲೆಗೆ ಧನ ಸಹಾಯ ಮಾಡಲು ಬಯಸುವ ದಾನಿಗಳಿಗೆ, 'ನಮ್ಮ ಶಾಲೆ - ನನ್ನ ಕೊಡುಗೆ' ಉಪಕ್ರಮವು ಪಾವತಿ ಸೌಲಭ್ಯ ಒದಗಿಸುವ ಗುರಿ ಹೊಂದಿದೆ. ವಿಧಾನಸೌಧದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕಾರ್ಯಕ್ರಮವನ್ನು ಔಪಚಾರಿಕವಾಗಿ ಉದ್ಘಾಟಿಸಿದರು. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ವಿ ಅನ್ಬು ಕುಮಾರ್, ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಜಯ್ ಕನ್ವಲ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
'ನಮ್ಮ ಶಾಲೆ - ನನ್ನ ಕೊಡುಗೆ' ಕಾರ್ಯಕ್ರಮವು ಸಾರ್ವಜನಿಕರು, ಶಾಲೆಗಳ ಹಳೆಯ ವಿದ್ಯಾರ್ಥಿಗಳು ಮತ್ತು ಭಾಗಿದಾರರಲ್ಲಿ ಶಾಲೆಯ ಮಾಲೀಕತ್ವದ ಪ್ರಜ್ಞೆಯನ್ನು ಬೆಳೆಸುವ ಮತ್ತು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವ ಉದಾತ್ತ ಉದ್ದೇಶ ಹೊಂದಿದೆ. ಈ ಕಾರ್ಯಕ್ರಮದ ಪ್ರಕಾರ, ದಾನಿಗಳಿಂದ ಪಡೆಯುವ ದೇಣಿಗೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ [ಕೆಎಸ್ಡಿಪಿಐ] ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯ ಒಂದೇ ಖಾತೆಯಲ್ಲಿ ಸ್ವೀಕರಿಸಲಾಗುತ್ತದೆ. ನಂತರ ಅದನ್ನು ಸಂಬಂಧಿಸಿದ ಶಾಲೆಯ ಖಾತೆಗೆ ವರ್ಗಾಯಿಸಲಾಗುವುದು.
ಈ ಪಾಲುದಾರಿಕೆಯ ನೆರವಿನಿಂದ, ದಾನಿಗಳು ತಮ್ಮ ದೇಣಿಗೆಗಳನ್ನು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ (ಜನ ಎಸ್ಎಫ್ಬಿ) ಆರ್ಟಿಜಿಎಸ್, ಎನ್ಇಎಫ್ಟಿ, ಯುಪಿಐ, ಐಎಂಪಿಎಸ್, ಡೆಬಿಟ್ ಕಾರ್ಡ್, ಎನ್ಎಸಿಎಚ್ ಮುಂತಾದ ಸೌಲಭ್ಯಗಳನ್ನು ಬಳಸಿಕೊಂಡು ಸುಲಭವಾಗಿ ಪಾವತಿಸಬಹುದು. ಕರ್ನಾಟಕದಲ್ಲಿ ಐದು ಲಕ್ಷ ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ಜನ ಎಸ್ಎಫ್ಬಿ, ಇದಕ್ಕೆ ಪೂರಕವಾಗಿ ತನ್ನ ವಿಶಾಲವಾದ ಜಾಲದ ನೆರವಿನಿಂದ ದಾನಿಗಳು ಕರ್ನಾಟಕದಾದ್ಯಂತ ಹೆಚ್ಚಿನ ಸಂಖ್ಯೆಯ ಸರ್ಕಾರಿ ಶಾಲೆಗಳನ್ನು ತಲುಪಲು ಅನುವು ಮಾಡಿಕೊಡುತ್ತದೆ. ದಾನಿಗಳ ಯಾವುದೇ ತಾಂತ್ರಿಕ ಮತ್ತು ಕಾರ್ಯಾಚರಣೆಯ ಪ್ರಶ್ನೆಗಳನ್ನು ಪರಿಹರಿಸಲು ಬ್ಯಾಂಕ್, ದಿನದ 24 ಗಂಟೆಗಳ ಕಾಲ (24 ಘಿ 7 ) ಕಾರ್ಯನಿರ್ವಹಿಸುವ ದೂರು ಪರಿಹರಿಸುವ ಸೌಲಭ್ಯವನ್ನು ಅಭಿವೃದ್ಧಿಪಡಿಸಿದೆ.
ಮರಗೊಂಡನಹಳ್ಳಿಯ ಜಿಎಚ್ಎಸ್ ಕಾಂಪೊಸಿಟ್ ಶಾಲೆಯಲ್ಲಿ ಆರ್ಒ ನೀರಿನ ಘಟಕ ಸ್ಥಾಪಿಸುವುದಕ್ಕೆ ನೆರವಾಗಲು ಜನ ಎಸ್ಎಫ್ಬಿ ಸಿಇಒ ಅಜಯ್ ಕನ್ವಲ್ ಅವರು ಮುಖ್ಯಮಂತ್ರಿಗಳಿಗೆ ದೇಣಿಗೆಯ ಚೆಕ್ ಅನ್ನು ನೀಡಿದರು.
Recommended Video
ಈ ಸಂದರ್ಭದಲ್ಲಿ ಮಾತನಾಡಿದ, ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಅಜಯ್ ಕನ್ವಲ್ ಅವರು, 'ಕರ್ನಾಟಕ ಸರ್ಕಾರವು ಸಾವಿರಾರು ಶಾಲೆಗಳು ಮತ್ತು ಕಾಲೇಜುಗಳ ಪ್ರಯೋಜನಕ್ಕಾಗಿ ಡಿಜಿಟಲೀಕರಣವನ್ನು ಸದುಪಯೋಗಪಡಿಸಿಕೊಳ್ಳಲು ಗಮನಾರ್ಹ ಪ್ರಯತ್ನವನ್ನು ಮಾಡಿದೆ. ನಮ್ಮ ಡಿಜಿಟಲ್ ಮೂಲಸೌಕರ್ಯಗಳ ಮೂಲಕ ಈ ಪ್ರಯತ್ನಕ್ಕೆ ನಾವು ಕೊಡುಗೆ ನೀಡುತ್ತಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ರಾಜ್ಯದಾದ್ಯಂತ ಶಾಲಾ ಮಕ್ಕಳಿಗೆ ಸಹಾಯ ಮಾಡುವಲ್ಲಿ ನಾವು ಕೂಡ ಒಂದು ಸಣ್ಣ ಪಾತ್ರವನ್ನು ನಿರ್ವಹಿಸುವ ಅದೃಷ್ಟಶಾಲಿಯಾಗಿದ್ದೇವೆ' ಎಂದು ಹೇಳಿದ್ದಾರೆ.