ಬೆಳಗಾವಿ ಉಪ ಚುನಾವಣೆ: ಕಾಂಗ್ರೆಸ್ ಟಿಕೆಟ್ಗಾಗಿ ಶುರುವಾಯ್ತು ಶೀತಲ ಸಮರ!
ಬೆಂಗಳೂರು, ಮಾ. 01: ಸದ್ಯದಲ್ಲಿಯೇ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಘೋಷಣೆ ಆಗಲಿದೆ. ಉಪ ಚುನಾವಣೆಗೆ ಯಾವುದೇ ಪಕ್ಷಗಳು ಇನ್ನೂ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಈ ಮಧ್ಯೆ ಕಾಂಗ್ರೆಸ್ ಟಿಕೆಟ್ಗಾಗಿ ಎರಡು ಪ್ರಭಾವಿ ಕುಟುಂಬಗಳ ಮಧ್ಯೆ ಕೋಲ್ಡ್ ವಾರ್ ಶುರುವಾಗಿದೆ ಎಂಬ ಮಾಹಿತಿ ಬಂದಿದೆ.
ಬೆಳಗಾವಿ ಲೋಕಸಭಾ ಉಪ ಚುನಾವಣೆ ಟಿಕೆಟ್ಗಾಗಿ ಜಿಲ್ಲಾ ಕಾಂಗ್ರೆಸ್ ನಾಯಕರ ನಡುವೆ ಶೀತಲ ಸಮರವೇರ್ಪಟ್ಟಿದೆ. ಜಿಲ್ಲೆಯ ಎರಡು ಪ್ರಭಾವಿ ರಾಜಕೀಯ ಕುಟುಂಬಗಳಾದ ಜಾರಕಿಹೊಳಿ ಹಾಗೂ ಹುಕ್ಕೇರಿ ಮನೆತನಗಳ ಮಧ್ಯೆ ಪೈಪೋಟಿ ಶುರುವಾಗಿದೆ. ಉಪ ಚುನಾವಣೆ ಟಿಕೆಟ್ಗಾಗಿ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಅವರು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ ಪ್ರಕಾಶ್ ಹುಕ್ಕೇರಿ ಅವರ ಬೇಡಿಕೆಗೆ ಸತೀಶ್ ಜಾರಕಿಹೊಳಿ ಅಡ್ಡಗಾಲು ಹಾಕಿದ್ದಾರಂತೆ. ಅವರಿಗೆ ಬೆಳಗಾವಿ ಉಪ ಚುನಾವಣೆ ಟಿಕೆಟ್ ಕೊಡುವುದು ಬೇಡ, ಅವರು ಚಿಕ್ಕೋಡಿಯಲ್ಲೇ ಇರಲಿ ಎಂದು ಒತ್ತಡ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
Recommended Video
ಆ ಮೂಲಕ ಪ್ರಕಾಶ್ ಹುಕ್ಕೇರಿ ಅವರನ್ನು ಚಿಕ್ಕೋಡಿ ಕ್ಷೇತ್ರಕ್ಕೇ ಸೀಮಿತ ಮಾಡಲು ಸತೀಶ್ ಜಾರಕಿಹೊಳಿ ಪ್ಲ್ಯಾನ್ ಮಾಡಿದ್ದಾರೆ. ಪ್ರಕಾಶ್ ಹುಕ್ಕೇರಿ ಬೆಳಗಾವಿ ರಾಜಕಾರಣಕ್ಕೆ ಬಂದರೆ ಭವಿಷ್ಯದಲ್ಲಿ ಕಷ್ಟವಾಗಬಹುದು. ಬೆಳಗಾವಿ ಭಾಗದಲ್ಲಿ ಅಸ್ತಿತ್ವ ಹೋಗುತ್ತದೆ ಎಂಬ ಆತಂಕ ಅವರಿಗಿದೆ ಎನ್ನಲಾಗಿದೆ. ಹೀಗಾಗಿ ಕೆಪಿಸಿಸಿ ಕಾಯಾಧ್ಯಕ್ಷರೂ ಆಗಿರುವ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಪ್ರಕಾಶ್ ಹುಕ್ಕೇರಿ ಅವರ ಮಧ್ಯೆ ಟಿಕೆಟ್ಗಾಗಿ ಪೈಪೋಟಿ ಶುರುವಾಗಿದೆ ಎಂಬ ಮಾಹಿತಿ ಕಾಂಗ್ರೆಸ್ ವಲಯದಿಂದ ಕೇಳಿ ಬಂದಿದೆ.