ಡಿಕೆಶಿ ಮೇಲೆ ಐಟಿ ದಾಳಿ: ಬಿಜೆಪಿ ಮುಖಂಡರ ಮೌನದ ಹಿಂದಿನ ಮರ್ಮವೇನು?
Recommended Video
ರಾಜ್ಯ ಕಾಂಗ್ರೆಸ್ಸಿನ ಪ್ರಭಾವಿ ಮುಖಂಡ ಮತ್ತು ಜಲಸಂಪನ್ಮೂಲ, ವೈದ್ಯಕೀಯ ಶಿಕ್ಷಣ ಸಚಿವ ಡಿ ಕೆ ಶಿವಕುಮಾರ್ ಅವರ ಮೇಲೆ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯದ (ಇಡಿ) ಹದ್ದಿನ ಕಣ್ಣು ಮುಂದುವರಿಯುತ್ತಲೇ ಇದೆ. ತೆರಿಗೆ ವಂಚನೆ ಆರೋಪ ಇವರ ಮೇಲೆ ಏನಿದೆಯೋ ಅದು ಐಟಿ ಇಲಾಖೆಯಿಂದ ಇಡಿಗೆ ಹಸ್ತಾಂತರವಾಗುವ ಸಾಧ್ಯತೆಯಿದೆ.
ಗುಜರಾತ್ ನಿಂದ ರಾಜ್ಯಸಭೆಗೆ ಅಹಮದ್ ಪಟೇಲ್ ಆಯ್ಕೆಯ ವಿಚಾರದಲ್ಲಿ, ಕೇಂದ್ರ ಮಟ್ಟದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪ್ರತಿಷ್ಠೆಯ ಕಿತ್ತಾಟದ ವೇಳೆ, ಆರಂಭವಾದ ಐಟಿ ದಾಳಿ ಮತ್ತು ವಿಚಾರಣೆ, ಡಿ ಕೆ ಶಿವಕುಮಾರ್ ಅವರನ್ನು ನಕ್ಷತ್ರಿಕನಂತೆ ಹಿಂಬಾಲಿಸಿಕೊಂಡು ಬರುತ್ತಲೇ ಇದೆ.
ಅಣ್ಣನ ವಿರುದ್ಧ ಹವಾಲ ಎಂಬ ಮಸಲತ್ತಿನ ಕತ್ತಿ ಎಂದ ಡಿಕೆ ಸುರೇಶ್
ಐಟಿ, ಸಿಬಿಐ ಮತ್ತು ಇಡಿ ಸ್ವತಂತ್ರ ಸಂಸ್ಥೆಯೆಂದು ಕೇಂದ್ರದಲ್ಲಿರುವ ಸರಕಾರಗಳು ಹೇಳುತ್ತಾ ಬಂದಿದ್ದರೂ, ಮೂರೂ ಸಂಸ್ಥೆಗಳ ಕಾರ್ಯವೈಖರಿ ನಡೆಯುವುದು ಕೇಂದ್ರ ಗೃಹ ಇಲಾಖೆಯ ಮರ್ಜಿಯಂತೆ ಎನ್ನುವುದಕ್ಕೆ ಬಿಜೆಪಿಯ ಆಡಳಿತವೂ ಹೊರತಾಗಿಲ್ಲ, ಕಾಂಗ್ರೆಸ್ ಆಡಳಿತ ಅದಕ್ಕಿಂತ ಮುಂಚೆ ಹೊರತಾಗಿಲ್ಲ..
ಡಿಕೆಶಿ ಮತ್ತು ಅವರ ಸಹೋದರನ ಮೇಲೆ ಐಟಿ ದಾಳಿ ನಡೆದರೂ, ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ ಇದರ ಲಾಭವನ್ನು ಪಡೆದುಕೊಳ್ಲದೇ, ಮೌನಕ್ಕೆ ಶರಣಾಗಿರುವುದು ಹೊಸದೇನಲ್ಲ. ಗುಜರಾತ್ ರಾಜ್ಯಸಭೆಯ ಚುನಾವಣೆಯ ವೇಳೆ, ಹೇಗೆ ರಾಜ್ಯ ಬಿಜೆಪಿ ಮುಖಂಡರು ಸುಮ್ಮನಿದ್ದರೋ, ಈಗಲೂ ಮೌನ ಮುಂದುವರಿದಿದೆ.
ಹೈಕಮಾಂಡ್ಗೆ ಹಣ ನೀಡಿಲ್ಲ, ಹವಾಲಾ ಬಗ್ಗೆ ಗೊತ್ತೇ ಇಲ್ಲ: ಡಿಕೆಶಿ
ಅಕ್ರಮ ಆಸ್ತಿ, ಹವಾಲ ವಿಚಾರದಲ್ಲಿ ಡಿಕೆಶಿ ಮೇಲೆ ಮತ್ತೆ ಐಟಿ ಇಲಾಖೆಯ ಕಣ್ಣುಬಿದ್ದಿದೆ. ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವುದರಿಂದ, ಜೆಡಿಎಸ್ ಡಿಕೆಶಿ ವಿಚಾರದಲ್ಲಿ ಏನೂ ಹೇಳಿಕೆ ನೀಡಲಾಗದ ಸ್ಥಿತಿಯಲ್ಲಿರುವುದು ಗೊತ್ತಿರುವ ರಾಜಕೀಯ ವಿಚಾರವಾದರೂ, ಬಿಜೆಪಿ ಮುಖಂಡರು ಯಾಕೆ ಸುಮ್ಮನಿದ್ದಾರೆ ಎನ್ನುವುದೇ ಇಲ್ಲಿ ಪ್ರಶ್ನೆ?.
ವಿಶ್ವಾಸಮತದ ವೇಳೆ ಮಾಡಿದ ಭಾಷಣ
ಯಡಿಯೂರಪ್ಪನವರು ವಿಶ್ವಾಸಮತದ ವೇಳೆ ಮಾಡಿದ ಭಾಷಣವನ್ನು ಸೂಕ್ಷ್ಮವಾಗಿ ಅವಲೋಕಿಸುವುದಾದರೆ, ಅವರು ಮತ್ತು ಡಿ ಕೆ ಶಿವಕುಮಾರ್ ಪರಮಾಪ್ತರು ಎನ್ನುವುದನ್ನು ಗಮನಿಸಬಹುದಾಗಿದೆ. ಯಡಿಯೂರಪ್ಪನವರು ನನ್ನ ಸ್ನೇಹಿತ ಎಂದೇ ಡಿಕೆಶಿ ಹೇಳಿದ್ದರು. ಮುಖ್ಯಮಂತ್ರಿಯಾಗ ಬೇಕೆಂದು ಬಯಸುತ್ತಿರುವ ನಿಮ್ಮನ್ನು ಖಳನಾಯಕ ಎಂದು ಹೇಳುತ್ತೀನಾ, ಆದರೆ ಆ ಪಕ್ಷದಲ್ಲಿದ್ದರೆ ನೀವು ಸಿಎಂ ಆಗುತ್ತೀರಾ ಎಂದು ಬಿಎಸ್ವೈ ಹೇಳಿದ್ದರು. ರಾಜ್ಯ ಬಿಜೆಪಿ ಮುಖಂಡರ ಮೌನಕ್ಕೆ, ಡಿಕೆಶಿ ಜೊತೆ ಉತ್ತಮ ಸಂಬಂಧವಿರುವುದೂ ಕಾರಣವಾಗಿರಬಹುದು.
ಸ್ಪೀಕರ್ ರಮೇಶ್ ಕುಮಾರ್ ನೀಡಿದ್ದ ಹೇಳಿಕೆ
ಬಿಎಸ್ವೈ - ಡಿಕೆಶಿ ನಡುವೆ 'ಖಳನಾಯಕ' ಪದಪ್ರಯೋಗದ ವಿಚಾರದಲ್ಲಿ ನಡೆಯುತ್ತಿದ್ದ ಮಾತಿನ ಚಕಮಕಿಯ ವೇಳೆ, ನಿಮ್ಮಿಬ್ಬರ ಮೈತ್ರಿ ಬ್ರೇಕ್ ಆಗೋದು ಬೇಡ, ಹೀಗೇ ಮುಂದುವರಿಯಲಿ ಎನ್ನುವ ಮಾತನ್ನು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದರು. ಡಿಕೆಶಿ ರಾಜಕೀಯದ ಜೊತೆಗೆ ಉದ್ಯಮಿಯೂ ಹೌದು ಎನ್ನುವುದು ಗೊತ್ತಿರುವ ವಿಚಾರ. ಡಿಕೆಶಿ ಒಡೆತನದ ಸಂಸ್ಥೆಗಳಲ್ಲಿ ಯಡಿಯೂರಪ್ಪ ಆದಿಯಾಗಿ ಬಿಜೆಪಿ ಮುಖಂಡರು ಪಾಲುದಾರರಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಹಾಗಾಗಿ, ಬಿಜೆಪಿ ಮುಖಂಡರು ತುಟಿಪಿಟಿಕ್ ಅನ್ನೋದೇ ಇರುವುದಕ್ಕೆ ಇದೂ ಒಂದು ಕಾರಣ ಇದ್ದಿರಬಹುದು.
ವಾಗ್ದಾಳಿಗೆ ಮುಂದಾಗಬಾರದು ಎನ್ನುವ ಕೇಂದ್ರದ ಸೂಚನೆ
ಚುನಾವಣೆಗೆ ಮುನ್ನ ಮತ್ತು ಬಹುಮತಕ್ಕೆ ಸಂಖ್ಯಾಬಲದ ಕೊರತೆ ಕಂಡುಬಂದಾಗ, ಡಿ ಕೆ ಶಿವಕುಮಾರ್ ಅವರನ್ನು ಬಿಜೆಪಿಯತ್ತ ಸೆಳೆಯಲು ನೇರ ಕೇಂದ್ರ ಬಿಜೆಪಿ ಮುಖಂಡರೇ ಮುಂದಾಗಿದ್ದರು ಎನ್ನುವ ಸುದ್ದಿ ಗೌಪ್ಯವಾಗಿ ಏನೂ ಉಳಿದಿಲ್ಲ. ಐಟಿ, ಇಡಿ ದಾಳಿ ಏನೇ ಇರಲಿ, ರಾಜ್ಯ ಬಿಜೆಪಿ ಮುಖಂಡರು, ತೀವ್ರ ಪ್ರತಿಭಟನೆ, ವಾಗ್ದಾಳಿಗೆ ಮುಂದಾಗಬಾರದು ಎನ್ನುವ ಸೂಚನೆ ಕೇಂದ್ರ ಬಿಜೆಪಿಯಿಂದ ಬಂದಿರಲೂ ಬಹುದು.
ಸೂಕ್ತ ಸಮಯದಲ್ಲಿ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆ
ನನ್ನಲ್ಲೂ ದಾಖಲೆಗಳಿವೆ, ಡೈರಿಗಳಿವೆ, ಸೂಕ್ತ ಸಮಯದಲ್ಲಿ ಎಲ್ಲವನ್ನೂ ಬಹಿರಂಗ ಪಡಿಸುತ್ತೇನೆಂದು ಡಿ ಕೆ ಶಿವಕುಮಾರ್ ಮತ್ತು ಅವರ ಸಹೋದರ ಡಿ ಕೆ ಸುರೇಶ್ ಹೇಳುತ್ತಿರುವುದರಿಂದ, ಅವರ ಮೇಲಿನ ಐಟಿ ದಾಳಿಯ ವಿಚಾರದಲ್ಲಿ ರಾಜ್ಯ ಬಿಜೆಪಿ ಮುಖಂಡರು ಕಾಟಾಚಾರಕ್ಕೆ ಪ್ರತಿಭಟನೆ ನಡೆಸಿ ಸುಮ್ಮನಾಗುತ್ತಿರಬಹುದು. ನನ್ನಲ್ಲೂ ದಾಖಲೆಗಳಿವೆ ಎಂದು ಡಿಕೆಶಿ ಪದೇಪದೇ ಹೇಳುತ್ತಿರುವುದು ಗಮನಿಸಬೇಕಾದ ವಿಚಾರ.
ಉಪ್ಪು ತಿಂದವರು, ನೀರು ಕುಡಿಯಲೇ ಬೇಕು
ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ, ಉಪ್ಪು ತಿಂದವರು, ನೀರು ಕುಡಿಯಲೇ ಬೇಕು ಎಂದು ಡಿಕೆಶಿ ಐಟಿ ದಾಳಿ ವಿಚಾರದಲ್ಲಿ ಹೇಳಿಕೆಯನ್ನು ನೀಡಿದ್ದನ್ನು ಬಿಟ್ಟರೆ, ರಾಜ್ಯ ಬಿಜೆಪಿ ಮುಖಂಡರಿಂದ ಯಾವುದೇ ಕನಿಷ್ಠ ಪ್ರತಿಕ್ರಿಯೆಯೂ ವ್ಯಕ್ತವಾಗಿಲ್ಲ. ಮುಂಬರುವ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಬಿಜೆಪಿ ಮುಖಂಡರು ಹೆಚ್ಚು ಇದರ ಬಗ್ಗೆ ತಲೆಕೆಡಿಸಿಕೊಳ್ಳದೇ ಇರುವು ನಿರ್ಧಾರಕ್ಕೆ ಬಂದಿರಬಹುದು.