ಕಾಂಗ್ರೆಸ್ ಮುಖಂಡರ ಮೇಲೆ ಐಟಿ ಅಧಿಕಾರಿಗಳ ರೇಡ್
ನಿನ್ನೆ ತಾನೆ ಕಾಂಗ್ರೆಸ್ ಟಿಕೆಟ್ ಪಡೆದು ಸಂಭ್ರಮದಲ್ಲಿದ್ದ ಕೆಲವು ಕಾಂಗ್ರೆಸ್ ನಾಯಕರು ಮತ್ತು ಅವರ ಬೆಂಬಲಿಗರಿಗೆ ಇಂದು ಐಟಿ ಇಲಾಖೆ ಶಾಕ್ ನೀಡಿದೆ.
ಕರ್ನಾಟಕ ಚುನಾವಣೆ: ಹಣದ ಭರಾಟೆ ತಡೆಗೆ ಐಟಿ ಇಲಾಖೆಯಿಂದ ಕ್ರಮ
ರಾಜ್ಯದ ಕೆಲವೆಡೆ ಐಟಿ ಅಧಿಕಾರಿಗಳು ಕಾಂಗ್ರೆಸ್ ಮುಖಂಡರ ಹಾಗೂ ಅಭ್ಯರ್ಥಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕಮಗಳೂರಿನ ಮೂರು ಕಾಂಗ್ರೆಸ್ನ ಪ್ರಭಾವಿ ಮುಖಂಡರ ಮನೆ ಮೇಲೆ ಹಾಗೂ ಆನೆಕಲ್ನ ಕಾಂಗ್ರೆಸ್ ಅಭ್ಯರ್ಥಿ ಮನೆ ಮೇಲೆ ಐಟಿ ರೇಡ್ ನಡೆದಿವೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಕೊಪ್ಪದ ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರಳಿ ಸೇರಿದಂತೆ ಕಾಂಗ್ರೆಸ್ ಮುಖಂಡರಾದ ಸುಬ್ರಹ್ಮಣ್ಯ ಶೆಟ್ಟಿ ಮತ್ತು ಸತೀಶ್ ಅವರುಗಳ ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಬೆಳಿಗಿನಿಂದ ದಾಖಲೆಗಳ ಪರಿಶೀಲನೆಯಲ್ಲಿ ನಿರತರಾಗಿದ್ದಾರೆ.
ಆನೆಕಲ್ ಕ್ಷೇತ್ರದ ಹಾಲಿ ಶಾಸಕ ಮತ್ತು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಬಿ.ಶಿವಣ್ಣ ಅವರ ಮನೆಯ ಮೇಲೂ ಐಟಿ ದಾಳಿ ನಡೆದಿದೆ. ಬಿ.ಶಿವಣ್ಣ ಅವರ ಬಳಿ ಬೇನಾಮಿ ಆಸ್ತಿ ಇದ್ದು, ಅದನ್ನು ಈ ಚುನಾವಣೆಯಲ್ಲಿ ಬಳಸುತ್ತಾರೆ ಎಂದು ದೂರು ಬಂದ ಕಾರಣ ಅವರ ಮನೆ ಮೇಲೆ ದಾಳಿ ಮಾಡಲಾಗಿದೆ.
ಐಟಿ ಅಧಿಕಾರಿಗಳು ನಿನ್ನೆ ರಾತ್ರಿ ಶಾಸಕ ಶಿವಣ್ಣ ಅವರ ಎರಡು ಮನೆಗಳು, ಕಚೇರಿಗಳ ಮೇಲೆ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸತೊಡಗಿದ್ದಾರೆ. ಜತೆಗೆ, ಅವರ ಪಕ್ಕದ ಮನೆಗಳಿಗೂ ಭೇಟಿ ಕೊಟ್ಟು ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷ ಬಿಜೆಪಿ ಸೇಡಿನ ಕೃತ್ಯಕ್ಕೆ ಕೈಹಾಕಿದ್ದು, ಈ ಐಟಿ ದಾಳಿ ನಡೆದಿದೆ ಎಂದು ಶಿವಣ್ಣ ಕಿಡಿಕಾರಿದ್ದಾರೆ.
ಎರಡು ತಂಡಗಳಲ್ಲಿ 20ಕ್ಕೂ ಹೆಚ್ಚು ಆಧಿಕಾರಿಗಳು ಐಟಿ ಬೇಟೆಗಿಳಿದಿದ್ದು, ಶಿವಣ್ಣ ಅವರಿಗೆ ಸೇರಿದ ಇತರೆ ಸ್ಥಳಗಳಲ್ಲೂ ದಾಳಿ ನಡೆಸಿದ್ದಾರೆ. ಚಂದಾಪುರದಲ್ಲಿರುವ ಸೂರ್ಯಸಿಟಿಯಲ್ಲಿ ಶಿವಣ್ಣಗೆ ಸೇರಿದ ಕಚೇರಿಗಳಲ್ಲಿಯೂ ಐಟಿ ತಪಾಸಣೆ ನಡೆಯುತ್ತಿದೆ.
ಚುನಾವಣೆ ಮುಗಿಯುವ ಒಳಗಾಗಿ ಚುನಾವಣಾ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರ ಮೇಲೆ ಇನ್ನಷ್ಟು ಐಟಿ ದಾಳಿಗಳು ಆಗುವ ಮುನ್ಸೂಚನೆ ಇದೆ.