ಕಂಡವ್ರ ದುಡ್ಡು ಕಕ್ಕಸು: ಮಾಧ್ಯಮದವರ ಮೇಲೆ ಕೆಂಪಯ್ಯ 'ಕೆರಳಿದ ಸಿಂಹ'
ಬೆಂಗಳೂರಿನ ಆದಾಯ ತೆರಿಗೆ ಇಲಾಖೆಯ ಕೇಂದ್ರ ಕಚೇರಿಗೆ ಆಗಮಿಸಿದ್ದ ರಾಜ್ಯ ಗೃಹ ಸಚಿವರ ಭದ್ರತಾ ಸಲಹೆಗಾರ ಮತ್ತು ಮಾಜಿ ಪೊಲೀಸ್ ಮುಖ್ಯಸ್ಥ (IPS) ಕೆಂಪಯ್ಯ, ಮಾಧ್ಯಮದವರು ಕೇಳಿದ ಪ್ರಶ್ನೆಯೊಂದಕ್ಕೆ 'ಕೆಂಪಾ'ದ ಘಟನೆ ನಡೆದಿದೆ.
ಖಾಸಗಿ ವಾಹಿನಿಯ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಕೆಂಡವಾದ ಕೆಂಪಯ್ಯ, ಅಕ್ಷರಸ: ಮಾಧ್ಯಮದವರ ವಿರುದ್ದ ಹರಿಹಾಯ್ಡಿದಿದ್ದಾರೆ. ಕೆಂಪಯ್ಯನವರ ಪ್ರಕಾರ ಮಾಧ್ಯಮದವರು ಸುಳ್ಳು ಸುದ್ದಿ ಪ್ರಸಾರ ಮಾಡುವವರು, ಸಾಮಾಜಿಕ ಕಳಕಳಿ ಇಲ್ಲದವರು. (ಐಟಿ ಅಧಿಕಾರಿಗಳಿಂದ ಕೆಂಪಯ್ಯ ವಿಚಾರಣೆ)
ನಿಯತ್ತು ನನ್ನ ರಕ್ತದಲ್ಲಿದೆ, ಕಂಡವರ ದುಡ್ಡು ಯಾವನಿಗ್ರೀ ಬೇಕು. ನಿಯತ್ತಿನಿಂದ ಬದುಕುವವನು ನಾನು. ದೇವರನ್ನು ನಂಬಿದವನು ನಾನು, ದೇವರಿಗೇ ಎಲ್ಲಾ ಬಿಡುತ್ತೇನೆ ಎಂದು ಕೆಂಪಯ್ಯ ಮಾಧ್ಯಮದವರ ಮೇಲೆ ಹರಿಹಾಯ್ದಿದ್ದಾರೆ.
ಅಕ್ರಮ ಗಳಿಕೆ ಹೊಂದಿದ್ದೀರಾ ಎಂದು ಮಾಧ್ಯಮದವರೊಬ್ಬರು ಕೇಳಿದ ಪ್ರಶ್ನೆಗೆ ಕೆಂಡಾಮಂಡಲವಾದ ಕೆಂಪಯ್ಯ, ಆದಾಯ ತೆರಿಗೆ ಎನ್ನುವುದು ವೈಯಕ್ತಿಕ ವಿಚಾರ. ಮಾಧ್ಯಮದವರು ಬಂದು ಅದನ್ನು ಪಬ್ಲಿಕ್ ಮಾಡಿದ್ರು ಎಂದು ಸಿಟ್ಟಾಗಿದ್ದಾರೆ.
ನಗರದ Infantry ರಸ್ತೆಯಲ್ಲಿರುವ ಐಟಿ ಕಚೇರಿಗೆ ಬುಧವಾರ (ಮೇ 4) ಆಗಮಿಸಿದ್ದ ಕೆಂಪಯ್ಯನವರನ್ನು ಅಧಿಕಾರಿಗಳು ಸುಮಾರು ಮೂರರಿಂದ ನಾಲ್ಕು ತಾಸುಗಳ ವಿಚಾರಣೆ ನಡೆಸಿದ್ದಾರೆ. ನೀವು, ಕ್ಯಾಮರಾ ಲೈಟ್ ಆಫ್ ಮಾಡುವ ತನಕ ಹೋಗುವುದಿಲ್ಲ, ಅಣ್ಣಾವ್ರು ಹೇಳಿದ್ದನ್ನು ಪಾಲಿಸುತ್ತಿದ್ದೇನೆ. ಮುಂದೆ ಓದಿ..
ಸುಳ್ಳು ಸುದ್ದಿ ಪ್ರಸಾರ ಮಾಡಬೇಡಿ
ಬೆಳಿಗ್ಗೆಯಿಂದ ರಾತ್ರಿಯವರೆಗೆ ಸುಳ್ಳು ಸುದ್ದಿ ಪ್ರಸಾರ ಮಾಡಬೇಡಿ. ದೇವ್ರೊಬ್ಬ ಇದ್ದಾನೆ, ಎಲ್ಲಾ ನೋಡ್ತಾವ್ನೆ. ನನ್ನ ರಕ್ತದ ಕಣಕಣದಲ್ಲೂ ನಿಯತ್ತು ಇದೆ. ಹೇಗೆ ಅಕ್ರಮ ಗಳಿಕೆ ಹೊಂದಿದ್ದೇನೆಂದು ನನ್ನನ್ನು ಪ್ರಶ್ನಿಸುತ್ತೀರಾ, ವಾಟ್ ರೈಟ್ ಯು ಹ್ಯಾವ್ ಎಂದು ಕೆಂಪಯ್ಯ ಮಾಧ್ಯಮದವರ ಮೇಲೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ರಾಜ್ ಅಪಹರಣ
ಡಾ. ರಾಜ್ ಅಪಹರಣ/ಬಿಡುಗಡೆಯ ನಂತರ ನನಗೆ ಬಂದ ಒಂದೂವರೆ ಕೋಟಿ ರೂಪಾಯಿ ಹಣವನ್ನು ಟ್ರಸ್ಟ್ ರಚಿಸಿ ಸದ್ವಿನಿಯೋಗ ಮಾಡುತ್ತಿದ್ದೇನೆ, ಹೀಗಿರುವಾಗ ನನ್ನನ್ನು ಪ್ರಶ್ನಿಸುತ್ತೀರಾ - ಕೆಂಪಯ್ಯ.
ಕಂಡವರ ದುಡ್ಡು ಕಕ್ಕಸು
ಕಂಡವರ ದುಡ್ಡು ಕಕ್ಕಸು, ಅದರ ಮೇಲೆ ವ್ಯಾಮೋಹ ಇರಬಾರದು ಎಂದು ಡಾ. ರಾಜಕುಮಾರ್ ನನಗೆ ಹೇಳಿದ್ದನ್ನು ಪಾಲಿಸಿಕೊಂಡು ಬರುತ್ತಿದ್ದೇನೆ. ಮಾಧ್ಯಮದವರು ನೀವು ಸರಿಯಿಲ್ಲಾ, ಕ್ಯಾಮರಾ ಲೈಟ್ ಆಫ್ ಮಾಡುವ ತನಕ ಹೋಗುವುದಿಲ್ಲ ಎಂದು ಕೆಂಪಯ್ಯ ಹಠ ಹಿಡಿದಿದ್ದರು.
ಜನರಿಗೆ ಸಹಾಯ ಮಾಡಬೇಕು
ಸರ್ವೀಸ್ ನಲ್ಲಿದ್ದಾಗ ಮತ್ತು ಈಗಲೂ ಜನರಿಗೆ ಸಹಾಯ ಮಾಡಬೇಕೆಂದು ಬದುಕಿರುವವನು, ಕಂಡವರ ದುಡ್ಡು ನನಗ್ಯಾಕ್ರೀ ಬೇಕು. ಮೈಂಡ್ ಯುವರ್ ಲಾಂಗ್ವೇಜ್. ಏನು ನನ್ನ ಮೇಲೆ ದೌರ್ಜನ್ಯ ನಡೆಸ್ತೀರಾ - ಮಾಧ್ಯಮದವರಿಗೆ ಕೆಂಪಯ್ಯ.
ಕೆಂಪಯ್ಯ ಗರಂ ಆಗಲು ಕಾರಣವೇನು?
3 ಪರಿಷತ್ ಸದಸ್ಯರ ನಿವಾಸಗಳ ಮೇಲೆ ನಡೆದಿದ್ದ ಐಟಿ ದಾಳಿ ಸಂದರ್ಭದಲ್ಲಿ, ಡೈರಿಯಲ್ಲಿ ಕೆಂಪಯ್ಯ ಹೆಸರು ಉಲ್ಲೇಖವಾಗಿತ್ತು.ಈ ಮಾಹಿತಿ ಆಧಾರದಲ್ಲಿ ಕೆಂಪಯ್ಯನವರನ್ನು ಅಧಿಕಾರಿಗಳು ವಿಚಾರಣೆಗೆ ಕರೆಸಿದ್ದರು. ವಿಚಾರಣೆ ಮುಗಿಸಿ ಹೊರಬಂದ ಸಂದರ್ಭದಲ್ಲಿ ಅಕ್ರಮ ಗಳಿಗೆ ಹೊಂದಿದ್ದೀರಾ ಎಂದು ಮಾಧ್ಯಮದವರೊಬ್ಬರು ಕೇಳಿದ ಪ್ರಶ್ನೆಯೇ ಕೆಂಪಯ್ಯ ಕೆರಳಲು ಕಾರಣ.