ಪದ್ಮನಾಭನಗರ : ಆರ್.ಅಶೋಕ ಸೋಲಿಸಲು ಜೆಡಿಎಸ್, ಕಾಂಗ್ರೆಸ್ ತಂತ್ರ!
Recommended Video
ಬೆಂಗಳೂರು, ಜನವರಿ 23 : ಬೆಂಗಳೂರು ನಗರದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರ ಪದ್ಮನಾಭನಗರ. ಕ್ಷೇತ್ರದ ಹಾಲಿ ಶಾಸಕರು ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕ ಆರ್.ಅಶೋಕ. ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಅಶೋಕ ಅವರನ್ನು ಸೋಲಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ತಂತ್ರ ರೂಪಿಸುತ್ತಿವೆ.
ಆರ್.ಅಶೋಕ ಅವರಿಗೆ ಈ ಬಾರಿ ಗುರು-ಶಿಷ್ಯರೇ ಎದುರಾಳಿಗಳಾಗುವ ಸಾಧ್ಯತೆ ಇದೆ. ಹೌದು. ಒಂದು ಕಾಲದಲ್ಲಿ ಅಶೋಕ ಅವರಿಗೆ ರಾಜಕೀಯ ಗುರುವಾಗಿದ್ದ ಎಂ.ಶ್ರೀನಿವಾಸ್ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುವ ಸಾಧ್ಯತೆ ಇದೆ.
ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಪರಿಚಯ
ಅಶೋಕ ಅವರ ಬೆಂಬಲಿಗರಾಗಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಆಗಿದ್ದ ಡಿ.ವೆಂಕಟೇಶಮೂರ್ತಿ ಅವರು ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಆದ್ದರಿಂದ ಎಂ.ಶ್ರೀನಿವಾಸ, ಡಿ.ವೆಂಕಟೇಶಮೂರ್ತಿ ಅವರಲ್ಲಿ ಯಾರಿಗೆ ಟಿಕೆಟ್ ಸಿಕ್ಕಿದರೂ ಅಶೋಕ ಅವರಿಗೆ ಗುರು ಅಥವ ಶಿಷ್ಯರು ಎದುರಾಳಿಗಳಾಗುತ್ತಾರೆ.
ಬಿಜೆಪಿ ವಲಯದಲ್ಲಿಯೇ 'ಬೆಂಗಳೂರಿನ ಸಾಮ್ರಾಟ್' ಎಂದು ಆರ್.ಅಶೋಕ ಕರೆಸಿಕೊಳ್ಳುತ್ತಾರೆ. ಬಲಿಷ್ಠ ಕಾರ್ಯಕರ್ತರ ಪಡೆ, ಬಿಬಿಎಂಪಿ ಸದಸ್ಯರ ಭಾರೀ ಬೆಂಬಲ ಹೊಂದಿರುವ ಅಶೋಕ ಅವರನ್ನು ಸೋಲಿಸುವುದು ಅಷ್ಟು ಸುಲಭದ ಕೆಲಸವೇನಲ್ಲ...
ಗುರುವೇ ಎದುರಾಳಿ
ಪದ್ಮನಾಭನಗರದಲ್ಲಿ ಆರ್.ಅಶೋಕ ವಿರುದ್ಧ ಎಂ.ಶ್ರೀನಿವಾಸ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಅಶೋಕ ಅವರಿಗೆ ಒಂದು ಕಾಲದಲ್ಲಿ ರಾಜಕೀಯ ಗುರುವಾಗಿದ್ದ ಎಂ.ಶ್ರೀನಿವಾಸ ಅವರು ಟಿಕೆಟ್ ಸಿಕ್ಕಿದರೆ ಶಿಷ್ಯನಿಗೆ ಸೋಲಿನ ರುಚಿ ತೋರಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಡಿ.ವೆಂಕಟೇಶಮೂರ್ತಿ
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ನಲ್ಲಿ ಗುರುತಿಸಿಕೊಂಡಿದ್ದ ಬಿಬಿಎಂಪಿಯ ಮಾಜಿ ಮೇಯರ್ ಡಿ.ವೆಂಕಟೇಶಮೂರ್ತಿ ಕಾಂಗ್ರೆಸ್ ಸೇರುವ ಸಾಧ್ಯತೆ ಇದೆ. ಪಕ್ಷ ಸೇರಿದರೆ ಪದ್ಮನಾಭವನಗರದಲ್ಲಿ ಅವರೂ ಟಿಕೆಟ್ ಆಕಾಂಕ್ಷಿ. ರಾಯಣ್ಣ ಬ್ರಿಗೇಡ್ ಗೊಂದಲ ತಾರಕಕ್ಕೇ ಏರಿದಾಗ ಡಿ.ವೆಂಕಟೇಶಮೂರ್ತಿ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಅಮಾನತು ಮಾಡಲಾಗಿತ್ತು. ನಂತರ ಅದನ್ನು ವಾಪಸ್ ಪಡೆಯಲಾಗಿತ್ತು.
ಚೇತನ್ ಗೌಡ ಆಕಾಂಕ್ಷಿಯಾಗಿದ್ದರು
ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಅವರ ಪುತ್ರ ಚೇತನ್ ಗೌಡ ಅವರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ, ಶಿವರಾಮೇಗೌಡ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿರುವುದರಿಂದ ಚೇತನ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಕಡಿಮೆ ಇದೆ.
ಜೆಡಿಎಸ್ ಅಭ್ಯರ್ಥಿ ಯಾರು?
ಪದ್ಮನಾಭನಗರದಿಂದ ವಿ.ಕೆ.ಗೋಪಾಲ್ ಅವರು ಜೆಡಿಎಸ್ ಅಭ್ಯರ್ಥಿ. ಒಂದು ವರ್ಷದಿಂದ ಕ್ಷೇತ್ರದಲ್ಲಿ ಸಂಚಾರ ನಡೆಸಿ ಪ್ರಚಾರ ನಡೆಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸಕ್ರಿಯವಾಗಿದ್ದಾರೆ.
ನಿಷ್ಠಾವಂತ ಕಾರ್ಯಕರ್ತರ ಪಡೆ
ಆರ್.ಅಶೋಕ ಅವರನ್ನು ಸೋಲಿಸುವುದು ಸುಲಭದ ಮಾತಲ್ಲ. ನಿಷ್ಠಾವಂತ ಕಾರ್ಯಕರ್ತರ ಪಡೆಯನ್ನು ಅವರು ಹೊಂದಿದ್ದಾರೆ. ಮಾಜಿ ಉಪಮುಖ್ಯಮಂತ್ರಿಯಾಗಿರುವ ಅಶೋಕ ಅವರು ಬೆಂಗಳೂರಿನ ರಾಜಕಾರಣದ ಮೇಲೆ ಭಾರೀ ಹಿಡಿತ ಹೊಂದಿದ್ದಾರೆ. ಪದ್ಮನಾಭನಗರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ನಿವಾಸವಿದೆ. ಆದರೂ, ಜೆಡಿಎಸ್ ಕ್ಷೇತ್ರದಲ್ಲಿ ಗೆಲುವು ಕಂಡಿಲ್ಲ.
2013ರ ಫಲಿತಾಂಶ
2013ರ ಚುನಾವಣೆಯಲ್ಲಿ ಆರ್.ಅಶೋಕ ಅವರು 53,680 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ನ ಎಲ್.ಎಸ್.ಚೇತನ್ ಗೌಡ ಅವರು 33,557 ಮತ, ಜೆಡಿಎಸ್ನ ಡಾ.ಎಂ.ಆರ್.ವಿ. ಪ್ರಸಾದ್ 26,272 ಮತಗಳನ್ನು ಪಡೆದಿದ್ದರು.