ಉಪ ಚುನಾವಣೆಯಲ್ಲಿ ಸಿಎಂ ಬಿಎಸ್ವೈ-ಮಾಜಿ ಸಿಎಂ ಎಚ್ಡಿಕೆ ಒಳ ಒಪ್ಪಂದ?
ಬೆಂಗಳೂರು, ಅ. 03: ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳು ಅಲ್ಲ, ಶಾಶ್ವತ ಮಿತ್ರರೂ ಅಲ್ಲ ಎಂಬ ಮಾತಿದೆ. ಅದು ಕೇವಲ ಮಾತಷ್ಟೇ ಅಲ್ಲ, ಅದು ಆಗಾಗ ಸಾಬೀತಾಗುತ್ತಲೇ ಇದೆ. ಕಳೆದ ಬಿಬಿಎಂಪಿ ಚುನಾವಣೆಯಲ್ಲಿ, ಕಳೆದ ವಿಧಾನಸಭಾ ಚುನಾವಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮೂಲಕ ಸಾಬೀತಾಗಿದೆ. ಆ ಚುನಾವಣೆಯಲ್ಲಿ ಸ್ವತಃ ಸಿದ್ದರಾಮಯ್ಯ ಅವರು ಅವ್ರಪ್ಪನಾಣೆ ಕುಮಾರಸ್ವಾಮಿ ಅವರು ಸಿಎಂ ಆಗಲ್ಲ ಎಂದಿದ್ದರು. ಆದರೆ ಬದಲಾದ ಕಾಲದಲ್ಲಿ ಅವರೇ ಮುಂದು ನಿಂತು ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿದ್ದು ಈಗ ಇತಿಹಾಸ.
ಶಾಸಕ ಸ್ಥಾನಕ್ಕೆ ಮುನಿರತ್ನ ರಾಜೀನಾಮೆ ಕೊಡುವ ಮೂಲಕ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿದ್ದ ಆರ್.ಆರ್. ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಮತ್ತೊಮ್ಮೆ ಆ ಮಾತು ಸಾಬೀತಾಗುವಂತೆ ಕಾಣುತ್ತಿದೆ. ಈಗ ಚುನಾವಣೆ ಎದುರಿಸಲು ಒಳ ಒಪ್ಪಂದಕ್ಕೆ ರಾಜಕೀಯ ನಾಯಕರು ಮುಂದಾಗಿದ್ದಾರೆ. ಆಶ್ಚರ್ಯ ಎಂದರೆ ಆರ್.ಆರ್. ನಗರದ ಮಟ್ಟಿಗೆ ಈ ಬಾರಿ ಜೆಡಿಎಸ್-ಬಿಜೆಪಿ ಮಧ್ಯ ಒಳ ಒಪ್ಪಂದವಾಗಿದೆ ಎನ್ನಲಾಗಿದೆ. ತಮ್ಮ ಸರ್ಕಾರ ಬೀಳಲು ಕಾರಣವಾಗಿದ್ದ ಮುನಿರತ್ನ ಅವರನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಯಾಕೆ ಬೆಂಬಲಿಸುತ್ತಾರೆ ಎಂಬುದು ಸಹಜವಾಗಿ ಏಳುವ ಪ್ರಶ್ನೆ. ಆದರೆ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಎಚ್ಡಿಕೆ ಅವರ ರಾಜಕೀಯ ಲೆಕ್ಕಾಚಾರವೇ ಬೇರೆಯಿದೆ ಎನ್ನಲಾಗಿದೆ.
ಬಿಜೆಪಿಗೆ ಆರ್.ಆರ್. ನಗರ ಪ್ರತಿಷ್ಠೆಯ ಕಣ
ಬಿಜೆಪಿಗೆ ಆರ್.ಆರ್. ನಗರ ಉಪ ಚುನಾವಣೆ ಪ್ರತಿಷ್ಠೆಯ ವಿಚಾರವಾಗಿದ್ದು, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಹೊಣೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೇಲಿದೆ. ಹೀಗಾಗಿಯೇ ಜೆಡಿಎಸ್ ಜೊತೆಗೆ ಒಳ ಒಪ್ಪಂದಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ಇದಕ್ಕೆ ಪುಷ್ಟಿ ಕೊಡುವಂತೆ ಸಿಎಂ ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡು ಬಾರಿ ಭೇಟಿ ಮಾಡಿದ್ದಾರೆ.
ಆರ್.ಆರ್. ನಗರದಲ್ಲಿ ಒಕ್ಕಲಿಗ ಸಮುದಾಯದ ಮತಗಳು ಹೆಚ್ಚಾಗಿವೆ. ಜೆಡಿಎಸ್ ಒಕ್ಕಲಿಗ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮತಗಳ ವಿಭಜನೆಯಾಗುತ್ತವೆ. ಜೊತೆಗೆ ಅದರಿಂದ ಬಿಜೆಪಿಗೆ ಲಾಭವಾಗುತ್ತದೆ ಎಂಬುದು ರಾಜಕೀಯ ಲೆಕ್ಕಾಚಾರ. ಜೊತೆಗೆ ಈ ಒಪ್ಪಂದಕ್ಕೆ ಮುಂದಾಗಲು ಮತ್ತೊಂದು ಕಾರಣ ಶಿರಾ ಉಪಚುನಾವಣೆ.
ಶಿರಾ ಉಪ ಚುನಾವಣೆ
ಶಿರಾ ಉಪಚುನಾವಣೆಯಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಗಳಿಸಿರುವುದು ಮೂರನೇ ಸ್ಥಾನ. ಜೊತೆಗೆ ಗೊಲ್ಲ ಅಭಿವೃದ್ಧಿ ನಿಗಮ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ ವಿವಾದವಾಗಿದೆ. ಹೀಗಾಗಿ ನೆಲೆಯಿಲ್ಲದ ಕ್ಷೇತ್ರದಲ್ಲಿ ಗೆಲುವು ಅಸಾಧ್ಯ ಎಂಬ ತೀರ್ಮಾನಕ್ಕೆ ಬಿಜೆಪಿ ಬಂದಿದೆ ಎನ್ನಲಾಗಿದೆ. ಹೀಗಾಗಿ ಆರ್.ಆರ್. ನಗರ ಕ್ಷೇತ್ರದಲ್ಲಿ ಬಿಜೆಪಿಗೆ ಸಹಾಯ ಮಾಡಬೇಕು, ಹಾಗೆ ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ಬಿಜೆಪಿ ಸಹಕಾರ ಕೊಡಬೇಕು ಎಂಬ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ.
ಬಿಜೆಪಿ ಏನು ಮೋಸ ಮಾಡಿದೆ?
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರು ಆರ್.ಆರ್. ನಗರ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಅವರೊಂದಿಗೆ ಮಾತನಾಡುವಾಗ ಬಿಜೆಪಿ ನಮಗೆ ಏನು ಮೋಸ ಮಾಡಿದೆ ಎಂದು ಪ್ರಶ್ನೆ ಮಾಡಿದ್ದಾರಂತೆ. ರಾಜೀನಾಮೆ ಕೊಟ್ಟು ಹೋದವರು ಜೆಡಿಎಸ್-ಕಾಂಗ್ರೆಸ್ ಶಾಸಕರು. ಹೋಗಲಿಕ್ಕೆ ಬಿಟ್ಟವರು ಯಾರು? ಹೀಗಾಗಿ ಬಿಜೆಪಿ ನಾಯಕರ ಮೇಲೆ ವೃಥಾ ಆರೋಪ ಬೇಡ ಎಂದು ಕುಮಾರಸ್ವಾಮಿ ಅವರು ಆರ್.ಆರ್. ನಗರದಲ್ಲಿ ಬಿಜೆಪಿಗೆ ಬೆಂಬಲ ಕೊಡುವುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಶಿರಾದಲ್ಲಿ ಮೂರನೇ ಸ್ಥಾನದಲ್ಲಿದೆ ಬಿಜೆಪಿ
2018ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಬಿ. ಸತ್ಯನಾರಾಯಣ ಅವರು ಕಾಂಗ್ರೆಸ್ ಪಕ್ಷದ ಟಿ.ಬಿ. ಜಯಚಂದ್ರ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್.ಆರ್. ಗೌಡ 16 ಸಾವಿರ ಮತಗಳನ್ನು ಪಡೆಯುವುದರೊಂದಿಗೆ ಮೂರನೇ ಸ್ಥಾನದಲ್ಲಿದ್ದರು.
ಒಟ್ಟಾರೆ ಆ ಫಲಿತಾಂಶ ಹೀಗಿತ್ತು, 80 ಸಾವಿರಕ್ಕೂ ಅಧಿಕ ಮತಗಳನ್ನು ಪಡೆಯುವ ಮೂಲಕ ಜೆಡಿಎಸ್ ಅಭ್ಯರ್ಥಿಯಾಗಿದ್ದ ದಿ. ಮಾಜಿ ಶಾಸಕ ಬಿ. ಸತ್ಯನಾರಾಯಣ ಅವರು ಗೆದ್ದಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು 70 ಸಾವಿರ ಮತಗಳನ್ನು ಪಡೆದಿದ್ದರು. ಬಿಜೆಪಿ ಅಭ್ಯರ್ಥಿ ಎಸ್.ಆರ್. ಗೌಡ ಅವರು ಮೂರನೇ ಸ್ಥಾನ ಹಾಗೂಬ ಪಕ್ಷತರರಾಗಿ ಸ್ಪರ್ಧಿಸಿದ್ದ ಸಿ.ಎಂ. ನಾಗರಾಜ್ ಅವರು 12 ಸಾವಿರ ಮತಗಳನ್ನು ಗಳಿಸಿದ್ದರು. ಹೀಗಾಗಿ ಏನೇ ಪ್ರಯತ್ನ ಮಾಡಿದರೂ ಬಿಜೆಪಿಗೆ ಕಷ್ಟವಿದೆ ಎನ್ನಲಾಗಿದೆ.
Recommended Video
ಕಾಂಗ್ರೆಸ್ ಅಭ್ಯರ್ಥಿ ಗೊಂದಲ
ಜೆಡಿಎಸ್ ಈಗಾಗಲೇ ಮೂವರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಬೆಂಗಳೂರು ನಗರ ಅಧ್ಯಕ್ಷ ಪ್ರಕಾಶ್, ಆರ್.ಆರ್. ನಗರ ಕ್ಷೇತ್ರದ ಅಧ್ಯಕ್ಷ ಬೆಟ್ಟಸ್ವಾಮಿ ಗೌಡ, ಜ್ಞಾನಭಾರತಿ ಕೃಷ್ಣಮೂರ್ತಿ ಹೆಸರು ಅಂತಿಮವಾಗಿವೆ. ಅವರಲ್ಲಿ ಒಬ್ಬರನ್ನು ಜೆಡಿಎಸ್ ಕಣಕ್ಕಿಳಿಸಲಿದೆ ಎಂದು ಶಾಸಕ ಅಪ್ಪಾಜಿಗೌಡ ಅವರು ಕುಮಾರಸ್ವಾಮಿ ಅವರ ಸಲಹೆಯಂತೆ ಹೇಳಿಕೆ ಕೊಟ್ಟಿದ್ದಾರೆ.
ಮತ್ತೊಂದೆಡೆ ಆರ್.ಆರ್. ನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷ ಇನ್ನೂ ಸೂಕ್ತ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಡಿ.ಕೆ ರವಿ ಅವರ ಮಾವ ಹನುಮಂತರಾಯಪ್ಪ ಈಗಲೂ ಜೆಡಿಎಸ್ನಲ್ಲಿದ್ದಾರೆ. ಅವರ ಪುತ್ರಿ ಕುಸುಮಾ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಪ್ರಯತ್ನಿಸಿತ್ತು. ಆದರೆ ಇದಕ್ಕೆ ಡಿ.ಕೆ ರವಿ ಅವರ ತಾಯಿ ವಿರೋಧ ವ್ಯಕ್ತವಾಗಿದೆ. ಈ ಎಲ್ಲ ಗೊಂದಗಲಗಳ ಲಾಭವನ್ನು ಆರ್ಆರ್ ನಗರ ಚುನಾವಣೆಯಲ್ಲಿ ಪಡೆಯುವುದು ಹಾಗೂ ಶಿರಾ ಚುನಾವಣೆಯಲ್ಲಿ ಜೆಡಿಎಸ್ ಅನುಕಂಪದ ಲಾಭವನ್ನು ಪಡೆದುಕೊಳ್ಳುವುದು ಎರಡೂ ಪಕ್ಷಗಳ ರಾಜಕೀಯ ಲೆಕ್ಕಾಚಾರವಾಗಿದೆ ಎನ್ನಲಾಗಿದೆ.