ಕಾಂಗ್ರೆಸ್ ಪಕ್ಷದ 'ಡೊನೇಷನ್ ಗೇಟ್' ಬಗ್ಗೆ ಜನ ಏನು ಹೇಳ್ತಾರೆ?
ಬೆಂಗಳೂರು, ಫೆಬ್ರವರಿ 24: ಕರ್ನಾಟಕದ ಸಿದ್ದರಾಮಯ್ಯ ಸರಕಾರ ಕಾಂಗ್ರೆಸ್ ಪಕ್ಷದ ಹೈಕಮಾಂಡಿಗೆ ಕೊಟ್ಟಿದ್ದಾರೆ ಎನ್ನಲಾದ ಕೋಟ್ಯಾಂತರ ರೂಪಾಯಿ ಕಪ್ಪ ವಿಚಾರ ಸಾರ್ವಜನಿಕರ ಚರ್ಚೆಗೆ ಬಂದು ಹಲವು ದಿನಗಳೇ ಕಳೆದಿದ್ದವು.
ಆದರೆ ಗುರುವಾರ ರಾಷ್ಟ್ರೀಯ ಮಾಧ್ಯಮಗಳಲ್ಲಿ ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಗೆ ಸೇರಿದ್ದು ಎನ್ನಲಾದ ಡೈರಿಯ ಪುಟಗಳು ಬಹಿರಂಗವಾಗುತ್ತಿದ್ದಂತೆ ಈ ಚರ್ಚೆ ಮತ್ತೊಂದು ಮಗ್ಗುಲಿಗೆ ಹೊರಳಿಕೊಂಡಿದೆ. ಜನ ತಮ್ಮ ತಮ್ಮಲ್ಲೇ ಮಾತನಾಡಲು ಆರಂಭಿಸಿದ್ದಾರೆ.[ಡೊನೇಷನ್ ಗೇಟ್ ಹಗರಣ : ಯಾರು ಏನು ಹೇಳುತ್ತಿದ್ದಾರೆ?]
2018ರ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ನಡೆಯುತ್ತಿರುವ ಈ ಡೈರಿ ಕೆಸರೆರೆಚಾಟಗಳನ್ನು ಜನ ಹೇಗೆ ಸ್ವೀಕರಿಸಿದ್ದಾರೆ? ಜನರ ಅಭಿಪ್ರಾಯವೇನು ಎಂಬುದನ್ನು ಇಲ್ಲಿ ದಾಖಲಿಸಲಾಗಿದೆ.[ಕಾಂಗ್ರೆಸ್ 'ಸತ್ಯಮೇವ ಜಯತೆ' ಬಲೂನಿಗೆ 'ಡೊನೇಶನ್ ಗೇಟ್' ಪಿನ್ ಚುಚ್ಚಿದ ಬಿಜೆಪಿ]
ಎಲ್ಲಿಂದ ಬಂತು ದುಡ್ಡು?
ನೋಡಿ ನಾವಿಲ್ಲಿ 100-200 ರೂಪಾಯಿಗೆ ಪರದಾಡುತ್ತಿದ್ದೇವೆ. ಅವರಿಗೆ ಎಲ್ಲಿಂದ ಬಂತು ಅಷ್ಟು ದುಡ್ಡು? ಅದೆಷ್ಟೊ ಕೋಟಿ ಕೋಟಿ ಕೊಟ್ರಂತಲ್ವಾ, ಸಾವಿರ ಕೋಟಿ? ಅಷ್ಟು ದುಡ್ಡು ಸುಮ್ಮನೆ ಬರುತ್ತದಾ? ದುಡ್ಡು ಕೊಟ್ಟವರನ್ನು ಜೈಲಿಗೆ ಹಾಕ್ಲಿ - ಕಿರಣ್, ಗಾರೆ ಕಾರ್ಮಿಕ
ದೇವರಿಗೆ ಬಿಟ್ಟಿದ್ದು
ನಾವು ಏನೇ ಮಾಡಿದರೂ ಎಲ್ಲವನ್ನೂ ಅವನೊಬ್ಬ (ದೇವರು) ನೋಡ್ತಾನೆ. ಯಡಿಯೂರಪ್ಪರಿಗೆ ಏನಾಯಿತು? ಕೊನೆಗೆ ಜೈಲಿಗೆ ಹೋಗಲಿಲ್ವಾ? ಈಗ ಶಶಿಕಲಾ ತೆಗೆದುಕೊಳ್ಳಿ.. ಹಾಗೆಯೇ ಎಷ್ಟೇ ತಲೆ ಒಡೆದು ಮೋಸ ಮಾಡಿ ದುಡ್ಡು ನುಂಗಿದ್ರೆ, ಒಂದಲ್ಲಾ ಒಂದು ದಿವಸ ದೇವರು ಕೊಡ್ತಾನೆ. - ಸುಬ್ರಮಣ್ಯ ಭಟ್, ಅರ್ಚಕ
ಎಲ್ಲರೂ ಕಳ್ಳರೇ
ಚುನಾವಣೆ ಬಂದಾಗ ಇದೆಲ್ಲಾ ಇದ್ದದ್ದೆ. ಚುನಾವಣೆ ಮುಗಿಯುವರೆಗೆ ಏನಾದ್ರು ಮಾಡ್ತಿರಬೇಕು. ನಾವು ತಲೆನೇ ಕೆಡಿಸಿಕೊಳ್ಳುವುದಿಲ್ಲ. ಸುಮ್ನೆ ಎಲ್ಲರೂ ಕಳ್ಳರೇ. ಮೋಸ ಮಾಡ್ತಾರೆ - ರಾಧೆಮ್ಮ, ಕ್ಲರ್ಕ್
ಕೊಟ್ಟಿರಬಹುದು
ಪಕ್ಷದ ಮೇಲಿನವರಿಗೆ ಹಣ ಕೊಟ್ಟಿರಬಹುದು. ಸರಕಾರ ನಡೆಸ್ತಿದ್ದಾರಲ್ವಾ, ಹಾಗಾಗಿ ಹಣ ಕೊಡಬಹುದು. ಇದೆಲ್ಲಾ ಸಾಮಾನ್ಯ - ರವಿ ಕುಮಾರ್, ಉದ್ಯೋಗಾಕಾಂಕ್ಷಿ
ಅವರೇ ತನಿಖೆ ಮಾಡಲಿ
ನನಗನಿಸುವುದು ಬಿಜೆಪಿಯವರು ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ದುಡ್ಡು ಕೊಟ್ಟಿರಲಿಕ್ಕಿಲ್ಲ. ಇದ್ರೆ ತನಿಖೆ ಮಾಡಲಿ. ಐಟಿ ಇಲಾಖೆ ಬಳಿ ಆ ಡೈರಿ ಇರೋದಲ್ವಾ? ಬಿಜೆಪಿಯೇ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ತನಿಖೆ ಮಾಡಿ ಅವರೇ ಸತ್ಯ ಹೇಳಲಿ - ಜಮೀರ್, ಅಕೌಂಟೆಂಟ್
ಏನೂ ಬದಲಾಗಲ್ಲ
ಕಳೆದ ಚುನಾವಣೆಯಲ್ಲಿ ಏನಾಯಿತು.. ಆಗ ಬಿಜೆಪಿವರದ್ದು ಹಗರಣ ಬಂತು. ಈಗ ಇವರಿದ್ದು. ಅಧಿಕಾರಕ್ಕೆ ಬಂದ್ರೆ ಹೀಗೆಯೇ.. ಇವರು ದುಡ್ಡು ಕೊಟ್ರೋ ಗೊತ್ತಿಲ್ಲ. ಆದರೆ ಇದರಿಂದ ಏನೂ ಬದಲಾವಣೆ ಆಗುವುದಿಲ್ಲ. ನಾಳೆ ಬಂದವರೂ ಹೀಗೆಯೇ - ಶಾರದಾ , ಗೃಹಿಣಿ
ತಮಾಷೆ ನಡೆಯಲಿ
ನಡಿಲಿ ಬಿಡಿ.. ಸುಮ್ಮನೆ ಇದೆಲ್ಲಾ ನಾಲ್ಕು ದಿನ; ಎಲ್ಲರೂ ಬೊಬ್ಬೆ ಹಾಕ್ತಾರೆ. ನಮಗೇನೂ ಸಮಸ್ಯೆ ಇಲ್ಲ. ತಮಾಷೆ ನಡೆಯಲಿ. ನಡೆಯುವಷ್ಟು ದಿನ ನಡೆಯಲಿ. ಯಾರಾದ್ರೂ ಆರೋಪ ಮಾಡೋದು ಬಿಟ್ಟು, ಲಾಜಿಕ್ ಎಂಡ್ ಗೆ ಕೊಂಡೋಗ್ತಾರಾ? ಮೊನ್ನೆ ಯಾರೋ ಆ ಯಡಿಯೂರಪ್ಪರಿದ್ದು ಲಿಪ್ ಸಿಂಕ್ ಮಾಡಿ ವಿಡಿಯೋ ಹಾಕಿದ್ದರು.. ಇದಕ್ಕೆಲ್ಲಾ ಎಂಥ ಹೇಳುವುದು? - ಪುಟ್ಟಣ್ಣ, ಪಟ್ರೋಲ್ ಪಂಪ್ ಮಾಲಿಕ
ಕೊಟ್ಟಿರಬಹುದು ತೆಗೊಂಡಿರಬಹುದು
ದುಡ್ಡು ಕೊಟ್ಟಿರಬಹುದು, ತೆಗೆದುಕೊಂಡಿರಬಹುದು. ನಮಗೆಲ್ಲಾ ಹೇಗೆ ಗೊತ್ತಾಗ್ತದೆ? ವಿರೋಧ ಪಕ್ಷದಲ್ಲಿದ್ದವರು ಕಪ್ಪು ಚುಕ್ಕೆ ಹುಡುಕ್ತಾರೆ - ಶ್ರೀನಿವಾಸ್, ಬೀದಿ ಬದಿ ವ್ಯಾಪಾರಿ
ಕೋರ್ಟ್ ಹೇಳ್ಬೇಕು
ಅವರ ಮೇಲೆ ಇವರು, ಇವರ ಮೇಲೆ.. ಎಲ್ಲರೂ ಹೇಳ್ತಾರೆ. ನಾವೇನೂ ತಲೆ ಕೆಡಿಸಿಕೊಳ್ಳುವುದಿಲ್ಲ. ಕೊಟ್ಟಿದ್ದು ಸತ್ಯವೋ ಸುಳ್ಳೋ ನಾವು ಹೇಗೆ ಹೇಳುವುದು? ಕೋರ್ಟ್ ಹೇಳಬೇಕು. ಕೋರ್ಟ್ ಹೇಳಿದರೆ ಅಂತಿಮ. ಸಿಬಿಐ ತನಿಖೆ ಮಾಡಿ ಹೇಳಲಿ - ಕುಮಾರ್, ಸೆಕ್ಯುರಿಟಿ ಗಾರ್ಡ್
ಅವನೂ ಕಳ್ಳ, ಇವನೂ ಕಳ್ಳ
ಒಬ್ಬರು ಜೈಲಿಗೆ ಹೋಗಿ ಬಂದು ಇನ್ನೊಬ್ಬರಿಗೆ ಏನು ಹೇಳುವುದು? ಅವನು ನೀನು ಕುರಿ ಅಂತ ಹೇಳಿದರೆ, ಇವನು ನೀನು ಕುರಿ ಅನ್ನುವುದು. ನೀನು ಕಳ್ಳ.. ನೀನು ಕಳ್ಳ.. ತನಿಖೆ ಮಾಡಿ ಹೇಳಲಿ. ಅವರು ಡೈರಿಯೇ ನನ್ನದಲ್ಲ ಹೇಳ್ತಿದ್ದಾರಲ್ವಾ? ಅವ್ರಿದ್ದೇ ಅಂತ ಹೇಗೆ ಹೇಳ್ತಾರೆ? ಯಾರೋ ಬರೆದುಕೊಂಡಿರಬಹುದು.. ತನಿಖೆ ಮಾಡಲಿ - ಸೋಮಶೇಖರ್, ರಿಕ್ಷಾ ಚಾಲಕ