ಮತ್ತೆ ಪರಿಷತ್ ಕಲಾಪ ಕರೆದಿರುವುದೇ ಕಾನೂನು ಬಾಹಿರ: ಸಿ.ಎಂ. ಇಬ್ರಾಹಿಂ
ಬೆಂಗಳೂರು, ಡಿ. 14: ಸರ್ಕಾರದ ಸೂಚನೆಯೆ ಮೇರೆಗೆ ನಾಳೆ (ಡಿ.15) ಮತ್ತೆ ವಿಧಾನ ಪರಿಷತ್ ಕಲಾಪ ಸಮಾವೇಶ ಗೊಳ್ಳಲಿದೆ. ಪ್ರಮುಖವಾಗಿ ಸಭಾಪತಿ ಕೆ. ಪ್ರತಾಪ್ ಚಂದ್ರ ಶೆಟ್ಟಿ ಅವರ ವಿರುದ್ಧ ಬಿಜೆಪಿ ಸದಸ್ಯರು ಸಲ್ಲಿಸಿದ್ದ ಅವಿಶ್ವಾಸ ಗೊತ್ತುವಳಿ ಕುರಿತು ಚರ್ಚಿಸಲು ಬಿಜೆಪಿ ಸದಸ್ಯರು ಒತ್ತಾಯಿಸಿದ್ದರು. ಹೀಗಾಗಿ ನಾಳೆ ಬೆಳಗ್ಗೆ 11 ಗಂಟೆಗೆ ವಿಧಾನ ಪರಿಷತ್ ಕಲಾಪ ಆರಂಭವಾಗಲಿದೆ.
Recommended Video
ಈ ಬಗ್ಗೆ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ ಅವರು, ನಾಳೆ ಕರೆದಿರುವ ಪರಿಷತ್ ಕಲಾಪವನ್ನು ಕರೆದಿರುವುದೇ ಕಾನೂನು ಬಾಹಿರ ಎಂದಿದ್ದಾರೆ. ಸಂಪುಟದಲ್ಲಿ ನಿರ್ಣಯಿಸಿ ಅದನ್ನು ರಾಜ್ಯಪಾಲರಿಗೆ ಕಳುಹಿಸಬೇಕು. ಅದರ ಮೇಲೆ ರಾಜ್ಯಪಾಲರು ಸದನ ಕರೆಯಬೇಕು. ಕಳೆದ 70 ವರ್ಷಗಳ ಇತಿಹಾಸದಲ್ಲಿ ವಿಧಾನ ಪರಿಷತ್ ಕಾರ್ಯದರ್ಶಿ ಅವರಿಂದ ಪತ್ರ ಬರೆಯಿಸಿ ನಮ್ಮನ್ನು (ಪರಿಷತ್ ಸದಸ್ಯರನ್ನು) ಸದನಕ್ಕೆ ಕರೆದಿರುವುದೇ ಕಾನೂನು ಬಾಹಿರ. ಅದು ಒಪ್ಪುವಂಥದ್ದು ಅಲ್ಲ. ನಾಳೆ ಈ ಬಗ್ಗೆ ಒಂದು ತೀರ್ಮಾನವನ್ನು ನಾವು ಕೈಗೊಳ್ಳುತ್ತೇನೆ ಎಂದರು.
ಇನ್ನು ಗೋ ಹತ್ಯೆ ವಿಧೇಯಕದ ಬಗ್ಗೆ ಮಾತನಾಡಿದ ಇಬ್ರಾಹಿಂ ಅವರು, ಗೋ ಹತ್ಯೆ ಮಾಡುವುದು ಬೇಡ ಅಂತಾ ನಾನೇ ಮುಸ್ಲಿಮರಿಗೆ ಹೇಳುತ್ತೇನೆ. ಆದರೆ ಹಸು ಹಾಲು ಕೊಡುವುದನ್ನು ನಿಲ್ಲಿಸಿದರೆ ಅದನ್ನು ಸಾಕುವವರು ಯಾರು? ಜರ್ಸಿ ಹಸು ಗಂಡು ಕರುವನ್ನು ಹಾಕಿದರೆ ಅದನ್ನು 13 ವರ್ಷ ಸಾಕುವವರು ಯಾರು? ಹೀಗಾಗಿ ಈ ವಿಧೇಯಕದ ಬಗ್ಗೆ ರೈತ ಸಂಘದವರೊಂದಿಗೆ ಕುಳಿತು ಸಿಎಂ ಯಡಿಯೂರಪ್ಪ ಅವರು ಮಾತನಾಡಲಿ ಎಂದು ಒತ್ತಾಯಿಸಿದ್ದಾರೆ.