ಬಿಜೆಪಿ ಕಾರ್ಯಕಾರಿಣಿಯ 1ದಿನದ ಮುನ್ನ ಬಿಎಸ್ವೈ ರವಾನಿಸಿದ ಸಂದೇಶ
ಬೆಣ್ಣೆನಗರಿ ಎಂದೇ ಹೆಸರಾಗಿರುವ ದಾವಣಗೆರೆಯಲ್ಲಿ, ಎರಡು ದಿನಗಳ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ನಾಳೆಯಿಂದ (ಸೆ 18) ಆರಂಭವಾಗಲಿದೆ. ಕೇಂದ್ರ ಸಚಿವರು, ರಾಜ್ಯ ಉಸ್ತುವಾರಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ, ರಾಜ್ಯ ಸಚಿವರು ಸೇರಿದಂತೆ, ಪಕ್ಷದ ಗಣ್ಯರ ದಂಡೇ ಇಲ್ಲಿಗೆ ಹರಿದು ಬರಲಿದೆ.
ಯಡಿಯೂರಪ್ಪನವರು ರಾಜೀನಾಮೆ ನೀಡಿದ ನಂತರ ನಡೆಯುತ್ತಿರುವ ಸಭೆ ಇದಾಗಿರುವುದರಿಂದ ಸಾಕಷ್ಟು ಕುತೂಹಲ ಕೆರಳಿಸಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ, ಸಭೆಯ ಮೂಲಕ ಯಡಿಯೂರಪ್ಪನವರು ವರಿಷ್ಠರಿಗೆ ಸಂದೇಶ ರವಾನಿಸಲಿದ್ದಾರಾ ಎನ್ನುವುದು.
ಗೌರಿ ಆಯಿತು, ಚೌತಿ ಮುಗಿಯಿತು: ಬಿಎಸ್ವೈ ರಾಜ್ಯ ಪ್ರವಾಸದ ಚಕ್ರ ತಿರುಗಲೇ ಇಲ್ಲ, ಕಾರಣ?
ಕಾರ್ಯಕಾರಿಣಿಗೆ ಒಂದು ದಿನದ ಮುನ್ನ ಯಡಿಯೂರಪ್ಪನವರು ಮೂರು ಜಿಲ್ಲೆಗಳ ಪ್ರವಾಸದಲ್ಲಿದ್ದಾರೆ. ಮೈಸೂರು, ಶಿವಮೊಗ್ಗ ನಂತರ ದಾವಣಗೆರೆ ಜಿಲ್ಲೆಯ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಭಾಗವಹಿಸಲಿದ್ದಾರೆ. ರಾಜ್ಯ ಪ್ರವಾಸದ ಬಗ್ಗೆಯೂ ಯಡಿಯೂರಪ್ಪನವರು ಮೈಸೂರಿನಲ್ಲಿ ಮಾಧ್ಯಮದವರ ಮುಂದೆ ಹೇಳಿಕೆಯನ್ನು ನೀಡಿದ್ದಾರೆ.
ದಾವಣಗೆರೆಗೆ ಬರುವ ಕೇಸರಿ ನಾಯಕರು ಚಪ್ಪರಿಸಲಿದ್ದಾರೆ ಬೆಣ್ಣೆದೋಸೆ, ತರಹೇವಾರಿ ಖಾದ್ಯಗಳು!
ಮೈಸೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮಾಜಿ ಸಿಎಂ ಯಡಿಯೂರಪ್ಪನವರು ಆಯ್ಕೆ ಮಾಡಿಕೊಂಡ ಕ್ಷೇತ್ರ ಕೃಷ್ಣರಾಜ. ಕ್ಷೇತ್ರದಲ್ಲಿ 20 ದಿನಗಳ 'ಮೋದಿ ಯುಗ್ ಉತ್ಸವ್' ಕಾರ್ಯಕ್ರಮವನ್ನು ಸ್ಥಳೀಯ ಶಾಸಕರಾದ ಎಸ್.ಎ.ರಾಮದಾಸ್ ಹಮ್ಮಿಕೊಂಡಿದ್ದರು. ಈ 20 ದಿನಗಳ ಕಾರ್ಯಕ್ರಮವನ್ನು ಯಡಿಯೂರಪ್ಪನವರು ಉದ್ಘಾಟನೆ ಮಾಡಿದ್ದಾರೆ. ರಾಮದಾಸ್ ಅವರು ಸಚಿವ ಸ್ಥಾನ ಸಿಗದೇ ಇದ್ದಿದ್ದಕ್ಕೆ ತೀವ್ರ ಬೇಸರ ವ್ಯಕ್ತ ಪಡಿಸಿದ್ದು ಗೊತ್ತಿರುವ ವಿಚಾರ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮೈಸೂರು ಜಿಲ್ಲಾ ಪ್ರವಾಸದಲ್ಲಿ
ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮೈಸೂರು ಜಿಲ್ಲಾ ಪ್ರವಾಸದಲ್ಲಿದ್ದರು. ಶಿಷ್ಟಾಚಾರದ ಪ್ರಕಾರ ಸ್ಥಳೀಯ ಶಾಸಕರಾದ ರಾಮದಾಸ್ ಅಲ್ಲಿ ಹಾಜರಿರಬೇಕಿತ್ತು, ಆದರೆ ಅವರು ಹಾಜಲಿರಲಿಲ್ಲ. ಕ್ಯಾಬಿನೆಟ್ ಪಟ್ಟಿ ಘೋಷಣೆಯಾಗುವ ಒಂದು ದಿನದ ಮುನ್ನ, ಖುದ್ದು ಯಡಿಯೂರಪ್ಪನವರೇ ಸಚಿವ ಸ್ಥಾನ ಸಿಗುತ್ತಿರುವುದರ ಬಗ್ಗೆ ರಾಮದಾಸ್ ಅವರಿಗೆ ದೂರವಾಣಿ ಮೂಲಕ ಫೋನ್ ಮಾಡಿದ್ದರು. ಆದರೆ, ರಾಮದಾಸ್ ಅವರು ಹೇಳುವ ಪ್ರಕಾರ, ರಾಜ್ಯ ಮೂಲದ ವ್ಯಕ್ತಿಯೊಬ್ಬರು ಕೊನೇ ಕ್ಷಣದಲ್ಲಿ ಇವರಿಗೆ ಸಚಿವ ಸ್ಥಾನ ತಪ್ಪಿಸಿದರು ಎಂದು.
ರಾಮದಾಸ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಯಡಿಯೂರಪ್ಪ ಶಿಫಾರಸು
ರಾಮದಾಸ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಯಡಿಯೂರಪ್ಪನವರೂ ಶಿಫಾರಸು ಮಾಡಿದ್ದರು. ಆದರೆ, ಯಡಿಯೂರಪ್ಪನವರ ಮಾತಿಗೆ ವರಿಷ್ಠರು ಬೆಲೆ ಕೊಟ್ಟಿರಲಿಲ್ಲ. ಸಿಎಂ ಕಾರ್ಯಕ್ರಮಕ್ಕೆ ಹೋಗದ ರಾಮದಾಸ್ ಅವರ ಕ್ಷೇತ್ರದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಭಾಗವಹಿಸುವ ಮೂಲಕ, ಪಕ್ಷದ ನಿಷ್ಟಾವಂತ ಶಾಸಕರ ಪರವಾಗಿ ಮುಂದೆಯೂ ನಿಲ್ಲಲಿದ್ದೇನೆ ಎನ್ನುವ ಸಂದೇಶವನ್ನು ಯಡಿಯೂರಪ್ಪ ರವಾನಿಸಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದೆ.
ವಿಜಯೇಂದ್ರ ಬಹುತೇಕ ಮೈಸೂರು ವ್ಯಾಪ್ತಿಯ ವರುಣಾದಲ್ಲಿ ನಾಮಪತ್ರ ಸಲ್ಲಿಸಲು ಹೊರಟಿದ್ದರು
ಕಳೆದ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಬಹುತೇಕ ಮೈಸೂರು ವ್ಯಾಪ್ತಿಯ ವರುಣಾದಲ್ಲಿ ನಾಮಪತ್ರ ಸಲ್ಲಿಸಲು ಹೊರಟಿದ್ದರು. ಆದರೆ, ಕೊನೇ ಕ್ಷಣದಲ್ಲಿ ಬಿಜೆಪಿ ಹೈಕಮಾಂಡ್ ಟಿಕೆಟ್ ನಿರಾಕರಿಸಿತ್ತು. ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಕೂಡಾ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರಿಂದ, ಭಾರೀ ಪೈಪೋಟಿಯ ಕ್ಷೇತ್ರವಾಗಲಿದೆ ಎಂದೇ ವ್ಯಾಖ್ಯಾನಿಸಲಾಗಿತ್ತು. ಹಾಗಾಗಿ, ಮೈಸೂರು ಜಿಲ್ಲೆಯ ಕ್ಷೇತ್ರದ ಮೂಲಕ ಯಡಿಯೂರಪ್ಪ ತಮ್ಮ ಮಗನಿಗೆ ನೆಲೆ ಕಲ್ಪಿಸಲು ಮೈಸೂರು ಪ್ರವಾಸಕ್ಕೆ ಬಂದರಾ ಎನ್ನುವುದು ಇನ್ನೊಂದು ಪ್ರಶ್ನೆ.
Recommended Video
ಬಿಜೆಪಿ ಕಾರ್ಯಕಾರಿಣಿಯ 1ದಿನದ ಮುನ್ನ ಬಿಎಸ್ವೈ ರವಾನಿಸಿದ ಸಂದೇಶ
ಗೌರಿ ಗಣೇಶ ಹಬ್ಬದ ನಂತರ ಯಡಿಯೂರಪ್ಪನವರು ರಾಜ್ಯ ಪ್ರವಾಸ ಹೊರಡಬೇಕಾಗಿತ್ತು, ಈ ಬಗ್ಗೆ ಅಧಿಕೃತವಾಗಿ ಹೇಳಿಕೆಯನ್ನೂ ನೀಡಿದ್ದರು. ಇದಾದ ನಂತರ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜೊತೆಗೆ ಪ್ರವಾಸ ಮಾಡುವುದಾಗಿ ಎಂದಾಯಿತು. ಈಗ, ಅಕ್ಟೋಬರ್ ತಿಂಗಳಲ್ಲಿ ಪ್ರವಾಸ ಎಂದಾಗಿದೆ, ನಿಶ್ಚಿತವಿಲ್ಲ. ಹೀಗಾಗಿ, ಒಂದೇ ದಿನ ಮೂರು ಜಿಲ್ಲೆಯ ಪ್ರವಾಸ ಮಾಡುವ ಮೂಲಕ, ನೀವು ಅನುಮತಿ ನೀಡದಿದ್ದರೆ, ಪ್ರವಾಸ ಮಾಡಲು ಸಮರ್ಥನಿದ್ದೇನೆ ಎನ್ನುವ ಸಂದೇಶವನ್ನು ಯಡಿಯೂರಪ್ಪನವರು ರವಾನಿಸಿದ್ದಾರಾ ಎನ್ನುವುದು ಮೂರನೇ ಪ್ರಶ್ನೆ.