ದೆಹಲಿಯಲ್ಲಿ ಅಮಿತ್ ಶಾ ಅದೇನು ಸೂಚನೆ ಕೊಟ್ಟರೋ. 76ರ ಬಿಎಸ್ವೈ, ಇನ್ ಫುಲ್ ಸ್ವಿಂಗ್
2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಕರ್ನಾಟಕ ಈಗಿನ ರೀತಿಯಲ್ಲೇ ಭಾರೀ ಅತಿವೃಷ್ಟಿಯನ್ನು ಕಂಡಿತ್ತು. ಸಹಾಯಹಸ್ತ ಚಾಚಿ ಎಂದು ರಾಜಧಾನಿಯ ರಸ್ತೆಗೆ ಖುದ್ದು ಮುಖ್ಯಮಂತ್ರಿಗಳೇ ಇಳಿದಿದ್ದಾಗ, ಕೋಟಿ ಕೋಟಿ ಲೆಕ್ಕದಲ್ಲಿ ಸಾರ್ವಜನಿಕರು ಸಹಾಯಹಸ್ತವನ್ನು ಚಾಚಿ, ಸಂತ್ರಸ್ತರ ಜೊತೆಗೆ ನಾವಿದ್ದೇವೆ ಎಂದು ಸಾರಿದ್ದರು.
ಹನ್ನೊಂದು ವರ್ಷಗಳ ನಂತರ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ. ಆಗ ಮತ್ತು ಈಗಿನ ವ್ಯತ್ಯಾಸವೇನಂದರೆ ಆಗ ಪೂರ್ಣ ಪ್ರಮಾಣದ ಸಂಪುಟವಿದ್ದರೆ, ಈಗ ಯಡಿಯೂರಪ್ಪ ಅಖೇಲಾ..
ಲೇಟ್ ಆದರೂ ಲೇಟೆಸ್ಟ್ ಅನ್ನುವ ಹಾಗೇ, ಎಪ್ಪತ್ತಾರರ ಯಡಿಯೂರಪ್ಪ ಯುವಕರು ನಾಚುವಂತೆ ಪ್ರವಾಹ ಪೀಡಿತ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಂಬಂಧಪಟ್ಟ ಸಚಿವರು, ಜಿಲ್ಲಾ ಉಸ್ತುವಾರಿಗಳು ಈ ಕ್ಲಿಷ್ಟ ಸಮಯದಲ್ಲಿ ಇರಲೇ ಬೇಕಾದಂತಹ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಏಕಾಂಗಿಯಾಗಿ, ಮುಖ್ಯ ಕಾರ್ಯದರ್ಶಿಗಳ (CS) ಸಹಾಯದೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯ ಸರಕಾರದ ಖಜಾನೆಯ ಸ್ಥಿತಿ ದೇವರಿಗೇ ಪ್ರೀತಿ: ಸಿಎಂ ಬಿಎಸ್ವೈ
ಸಂಪುಟ ರಚನೆ ಮಾಡಲು ಅದೇನು ಗುಸುಗುಸು ಗೊಂದಲ ಅಮಿತ್ ಶಾ ಅವರಲ್ಲಿದೆಯೋ ಗೊತ್ತಿಲ್ಲಾ.. ಆದರೆ, ಕಳೆದೆರಡು ದಿನಗಳಿಂದ, ಅದೂ ದೆಹಲಿಯಲ್ಲಿ ಅಮಿತ್ ಶಾ ಅವರನ್ನು ಯಡಿಯೂರಪ್ಪ ಭೇಟಿಯಾದ ನಂತರ, ಪರಿಹಾರ ಕೆಲಸ ವೇಗವನ್ನು ಪಡೆದುಕೊಂಡಿದೆ.
ಯಡಿಯೂರಪ್ಪನವರಿಗೆ ಪಿಎಂ ಮೋದಿ, ಜೆ ಪಿ ನಡ್ಡಾ ಅವರ ಭೇಟಿ ಸಾಧ್ಯವಾಯಿತು
ಸುಷ್ಮಾ ಸ್ವರಾಜ್ ನಿಧನದ ಮುನ್ನಾದಿನ ದೆಹಲಿಗೆ ಹೋಗಿದ್ದ ಯಡಿಯೂರಪ್ಪನವರಿಗೆ ಪಿಎಂ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ ಪಿ ನಡ್ಡಾ ಅವರ ಭೇಟಿ ಸಾಧ್ಯವಾಯಿತೇ ಹೊರತು, ಅಮಿತ್ ಶಾ ದರ್ಶನ ಸಾಧ್ಯವಾಗಿರಲಿಲ್ಲ. ಆದರೆ, ದೂರವಾಣಿ ಮೂಲಕ ಬಿಎಸ್ವೈಗೆ ಸೂಚನೆ ನೀಡಿದ್ದ ಶಾ, ತುರ್ತಾಗಿ ರಾಜ್ಯಕ್ಕೆ ವಾಪಸ್ ಹೋಗುವಂತೆ ಸೂಚಿಸಿದ್ದರು.
ಯಡಿಯೂರಪ್ಪ ವೈಮಾನಿಕ ಸಮೀಕ್ಷೆ
'ಅಮಿತ್ ಶಾ ಸೂಚನೆಯಂತೆ ಬೆಳಗಾವಿಗೆ ಹೋಗುತ್ತಿದ್ದೇನೆ. ಖುದ್ದು ಪರಿಶೀಲನೆ ನಡೆಸಿ, ಸಂತ್ರಸ್ತರ ಕಷ್ಟಕ್ಕೆ ನಿಲ್ಲುತ್ತೇನೆ' ಎಂದು ದೆಹಲಿಯಿಂದ ವಾಪಸ್ ಆದ ಕೂಡಲೇ ಯಡಿಯೂರಪ್ಪ ಬೆಳಗಾವಿಗೆ ಹೋಗಿದ್ದರು. ಅಲ್ಲಿಂದ ಶುಕ್ರವಾರ (ಆ 9) ಸಂಜೆಯವರೆ ಸತತವಾಗಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದು, ವೈಮಾನಿಕ ಸಮೀಕ್ಷೆ, ಅಧಿಕಾರಿಗಳ ಜೊತೆ ಸಭೆಯನ್ನು ಯಡಿಯೂರಪ್ಪ ನಡೆಸಿದರು.
ಸಿಎಂ ಯಡಿಯೂರಪ್ಪ ಮುಂದೆಯೇ ಪ್ರವಾಹ ಸಂತ್ರಸ್ತರ ಮೇಲೆ ಲಾಠಿ ಚಾರ್ಜ್
ಕ್ಷೇತ್ರಕ್ಕೆ/ ಜಿಲ್ಲೆಗೆ ಸಂಬಂಧಿಸಿದ ಶಾಸಕರ ಟೀಂ ಅನ್ನು ಕಟ್ಟಿರುವ ಯಡಿಯೂರಪ್ಪ
ಅಮಿತ್ ಶಾ ಅವರ ಭೇಟಿಯ ನಂತರ ಶುರುವಾದ ಬಿಎಸ್ವೈ ಕೆಲಸದ ಓಘ, ಅಧಿಕಾರಿಗಳ ಮಟ್ಟದಲ್ಲಿ ಕಾಣುವಂತಾಗಿದೆ. ನಿಧಾನಗತಿಯಲ್ಲಿ ಸಾಗುತ್ತಿದ್ದ ಸಂತ್ರಸ್ತರ ಪರಿಹಾರದ ಕೆಲಸ, ದೆಹಲಿಯಿಂದ ಬಿಎಸ್ವೈ ವಾಪಸ್ ಬಂದ ನಂತರ ತೀವ್ರ ವೇಗವನ್ನು ಪಡೆದಿದ್ದಂತೂ ಹೌದು. ಆಯಾಯ, ಕ್ಷೇತ್ರಕ್ಕೆ/ ಜಿಲ್ಲೆಗೆ ಸಂಬಂಧಿಸಿದ ಶಾಸಕರ ಟೀಂ ಅನ್ನು ಕಟ್ಟಿರುವ ಯಡಿಯೂರಪ್ಪ, ತಾವೂ ಪರಿಹಾರ ಕೆಲಸಕ್ಕೆ ಮುಂದಾಗಿದ್ದಾರೆ, ಸಂತ್ರಸ್ತರ ಅಹವಾಲು ಸ್ವೀಕರಿಸುತ್ತಿದ್ದಾರೆ.
ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳ ಜೊತೆ ಸಭೆ
ಆಗಸ್ಟ್ ಏಳರ ಸಂಜೆ ಬೆಂಗಳೂರಿನಿಂದ ಬೆಳಗಾವಿಗೆ ಆಗಮಿಸಿದ ಯಡಿಯೂರಪ್ಪ, ಜಿಲ್ಲಾಧಿಕಾರಿಗಳು ಮತ್ತು ಇತರ ಅಧಿಕಾರಿಗಳ ಜೊತೆ ಸಭೆ ನಡೆಸಿ, ಪರಿಹಾರ ಕೇಂದ್ರಕ್ಕೆ ತೆರಳಿದ್ದಾರೆ. ಇದಾದ ಮರುದಿನ, ಬೆಳಗಾವಿ, ಚಿಕ್ಕೋಡಿ ಭಾಗದಲ್ಲಿನ ಪರಿಹಾರ ಕೇಂದ್ರ/ಗಂಜಿ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ.
ಅಮಿತ್ ಶಾ ಅದೇನು ಸೂಚನೆ ಕೊಟ್ಟರೋ. 76ರ ಯಡಿಯೂರಪ್ಪ ಫುಲ್ ಸ್ವಿಂಗ್ ನಲ್ಲಿ ಕೆಲಸ
ಇದರ ಮರುದಿನ ಶುಕ್ರವಾರ, ಬಾಗಲಕೋಟೆ ಜಿಲ್ಲೆಯಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಚಿಕ್ಕಪಡಸಲಗಿ, ಕೂಡಲಸಂಗಮ, ಮುಧೋಳ, ಢವಳೇಶ್ವರ, ನರಗುಂದ ಪ್ರದೇಶಕ್ಕೆ ಭೇಟಿ ನೀಡಿ, ಅಧಿಕಾರಿಗಳಿಗೆ ಸೂಚನೆ ನೀಡಿ, ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಸಂತ್ರಸ್ತರ ನೆರವಿಗೆ ಬನ್ನಿ ಎಂದು ಯಡಿಯೂರಪ್ಪ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ. ದೆಹಲಿಯಿಂದ ಬಂದ ನಂತರ ಬಿಎಸ್ವೈ ಕೆಲಸಕ್ಕೆ ಇನ್ನಷ್ಟು ವೇಗ ಬಂತೋ, ಇಲ್ಲದಿದ್ದರೂ, ಯಡಿಯೂರಪ್ಪ ಕೆಲಸಗಳನ್ನು ಮಾಡುತ್ತಿದ್ದರೋ, ಒಟ್ಟಿನಲ್ಲಿ, ಪರಿಹಾರ ಕೆಲಸ ಸ್ವಲ್ಪ ವೇಗವನ್ನಂತೂ ಪಡೆದುಕೊಂಡಿದೆ.