ವರ್ಚಸ್ವೀ ನಾಯಕ 'ಡಿಕೆಶಿ'ಯನ್ನು ಕೆಲವೇ ಜಿಲ್ಲೆಗಳಿಗೆ ಸೀಮಿತಗೊಳಿಸಿದ ಒಕ್ಕಲಿಗರ ಪ್ರತಿಭಟನೆ!
ಹಿರಿಯ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಬಂಧನವನ್ನು ಪ್ರತಿಭಟಿಸಿ, ರಾಜ್ಯ ಒಕ್ಕಲಿಗರ ಸಂಘ, ಇತರ ಸಂಘಟನೆಗಳು ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ, ಬುಧವಾರ (ಸೆ 11) ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಆಯೋಜಿಸಿತ್ತು. ಇದು ಹಲವು ಆಯಾಮಗಳಲ್ಲಿ ಈಗ ಚರ್ಚೆಯ ವಿಷಯವಾಗಿದೆ.
ಡಿಕೆಶಿ ಜೈಲಿನಿಂದ ಹೊರಬಂದ ಮೇಲೆ, ಒಂದೋ ಅವರು ಇನ್ನಷ್ಟು ವರ್ಚಸ್ವೀ ನಾಯಕರಾಗಿ ಹೊರಹೊಮ್ಮಬಹುದು. ಅಥವಾ ರಾಜ್ಯದ ಕೆಲವೇ ಕೆಲವು ಜಿಲ್ಲೆಗಳಿಗೆ ಮತ್ತು ಒಂದು ಸಮುದಾಯಕ್ಕೆ ಮಾತ್ರ ಅವರು ಸೀಮಿತವಾಗಬಹುದು.
ಇಂದು ಒಕ್ಕಲಿಗರು, ಅಂದು ಲಿಂಗಾಯತರು: ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು?
ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ, ಕುಮಾರಸ್ವಾಮಿಗೆ ಡಿಕೆಶಿ ಅಕ್ಷರಸಃ ಟ್ರಬಲ್ ಶೂಟರ್ ಆಗಿದ್ದರು. ಡಿಕೆಶಿ, ಬರೀ ಕೆಲವು ಜಿಲ್ಲೆಗಳಿಗೆ ಮೀಸಲಾಗಿದ್ದವರಲ್ಲ. ಬೆಳಗಾವಿ ಸಹಕಾರಿ ಬ್ಯಾಂಕಿನ ಚುನಾವಣೆಯಲ್ಲೂ ತಮ್ಮ ಪ್ರಭಾವವನ್ನು ತೋರಿಸಿದ್ದರು. ಇನ್ನು, ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದರು.
ಡಿಕೆಶಿ ಬಂಧನಕ್ಕೆ ಒಕ್ಕಲಿಗ ಟಚ್: ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಬಿಜೆಪಿ ಮಾಸ್ಟರ್ ಪ್ಲಾನ್
ಪಕ್ಷಕ್ಕೆ ಬೇಕಾದಾಗ ಕಟಿಬದ್ದರಾಗಿ ನಿಲ್ಲುವ ಡಿಕೆಶಿಯವರ ಪಕ್ಷದ ಮೇಲಿನ ನಿಯತ್ತು ಪ್ರಶ್ನಾತೀತ. ಡಿಕೆಶಿ ಒಕ್ಕಲಿಗ ಸಮುದಾಯದ ಪ್ರಭಾವೀ ನಾಯಕರು. ಆದರೆ, ಎಂದೂ ಒಂದು ಸಮುದಾಯಕ್ಕೆ ಮಾತ್ರ ಡಿಕೆಶಿ ಸೀಮಿತವಾಗಿರಲಿಲ್ಲ. ಸಿದ್ದಗಂಗಾ ಮಠಕ್ಕೂ ಹೋಗುತ್ತಿದ್ದರು, ಪೇಜಾವರ ಶ್ರೀಗಳ ಆಶೀರ್ವಾದವನ್ನೂ ಪಡೆಯುತ್ತಿದ್ದರು.
ಒಕ್ಕಲಿಗರ ಬೃಹತ್ ಪ್ರತಿಭಟನೆ ಚರ್ಚೆಯ ವಿಷಯ
ಒಕ್ಕಲಿಗರ ಬೃಹತ್ ಪ್ರತಿಭಟನೆ ಚರ್ಚೆಯ ವಿಷಯವಾಗುತ್ತಿರುವುದು ಇಲ್ಲೇ. ಹಳೇ ಮೈಸೂರು ಭಾಗಕ್ಕೆ ಮೀಸಲಾಗುವಂತೆ, ಅರ್ಥಾತ್ ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆಗಳ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ಮಾತ್ರ ಪ್ರತಿಭಟನೆಗೆ ಕರೆಸಲಾಗಿತ್ತೇ ಎನ್ನುವುದಿಲ್ಲಿ ಪ್ರಶ್ನೆ. ತಮ್ಮ ಸಮುದಾಯದ ಶಕ್ತಿಪ್ರದರ್ಶನಕ್ಕೆ ಬುಧವಾರದ (ಸೆ 11) ಪ್ರತಿಭಟನೆಯನ್ನು ವೇದಿಕೆಯನ್ನಾಗಿ ಬಳಸಿಕೊಳ್ಳಲಾಯಿತಾ? ಅಥವಾ ಡಿಕೆಶಿಗೆ ನೈತಿಕ ಬಲ ತುಂಬಲು ಈ ಪ್ರತಿಭಟನೆ ಮಾಡಲಾಯಿತಾ? ಎನ್ನುವುದೇ ಅರ್ಥವಾಗದ ಪ್ರಶ್ನೆ.
ಕಾಂಗ್ರೆಸ್ಸಿನ ಮತ್ತು ಜೆಡಿಎಸ್ಸಿನ ಮೇಲ್ಪಂಕ್ತಿಯ ಮುಖಂಡರಾರೂ ಭಾಗವಹಿಸಿರಲಿಲ್ಲ
ಪ್ರತಿಭಟನೆಯಲ್ಲಿ ಕಾಂಗ್ರೆಸ್ಸಿನ ಮತ್ತು ಜೆಡಿಎಸ್ಸಿನ ಮೇಲ್ಪಂಕ್ತಿಯ ಮುಖಂಡರಾರೂ ಭಾಗವಹಿಸಿರಲಿಲ್ಲ. ದಿನೇಶ್ ಗುಂಡೂರಾವ್, ರಾಮಲಿಂಗ ರೆಡ್ಡಿ, ಕೃಷ್ಣ ಭೈರೇಗೌಡ, ಉಗ್ರಪ್ಪ ಮುಂತಾದವರು ಬಿಟ್ಟರೆ, ಯಾರೂ ಅತ್ತ ಸುಳಿಯಲಿಲ್ಲ. ಜೆಡಿಎಸ್ ನಿಂದ ಶಿವರಾಮೇಗೌಡ್ರು ಬಿಟ್ಟರೆ, ಮತ್ಯಾವ ನಾಯಕರೂ ಅಲ್ಲಿಗೆ ತಲೆಹಾಕಲಿಲ್ಲ.
ಮಾಜಿ ಮುಖ್ಯಮಂತ್ರಿಗಳು ಪ್ರತಿಭಟನಾ ಸಭೆಗೆ ನನಗೆ ಆಮಂತ್ರಣವಿರಲಿಲ್ಲ ಎಂದು ಹೇಳಿದ್ದಾರೆ
ಪಕ್ಕದ ಚನ್ನಪಟ್ಟಣದಲ್ಲೇ ಇದ್ದ ಮಾಜಿ ಮುಖ್ಯಮಂತ್ರಿಗಳು ಪ್ರತಿಭಟನಾ ಸಭೆಗೆ ನನಗೆ ಆಮಂತ್ರಣವಿರಲಿಲ್ಲ ಎಂದು ಹೇಳಿದ್ದಾರೆ. ಆಮಂತ್ರಣ ಕೊಡಲು ಇದೇನು ಬಾಡೂಟವೇ ಅಥವಾ ಸತ್ಯನಾರಾಯಣ ವೃತ ಪೂಜೆಯೇ? ಹಳೆಯ ದುಷ್ಮನಿ ಏನೇ ಇರಲಿ. ಆದರೆ, ಸಮ್ಮಿಶ್ರ ಸರಕಾರದಲ್ಲಿ ನಿಮಗೆ ಬೆನ್ನಿಗೆ ಬೆನ್ನಾಗಿ ನಿಂತವರ ಬಂಧನದ ವಿರುದ್ದ ನಡೆದ ಪ್ರತಿಭಟನೆಗೆ ಹೋಗದಿದ್ದದ್ದು ಸರಿಯೇ? ಎನ್ನುವುದು ಪ್ರತಿಭಟನೆಯಲ್ಲಿ ಸೇರಿದ್ದ ಕೆಲವು ಕಾರ್ಯಕರ್ತರ ಆಫ್ ದಿ ರೆಕಾರ್ಡ್ ವಿಷಾದದ ಮಾತುಗಳು.
ರಾಜಧಾನಿಯಲ್ಲಿ ನಡೆಯುವ ಪ್ರೊಟೆಸ್ಟಿಗೆ ತೂಕ ಜಾಸ್ತಿಯಲ್ಲವೇ?
ನಮ್ಮ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ಕುಮಾರಸ್ವಾಮಿಯವರು ಹೇಳಿದ್ದಾರೆ. ಆದರೂ, ಗೌಡ್ರು, ಕುಮಾರಸ್ವಾಮಿ ಅಲ್ಲಿ ಇದ್ದರೆ, ಅದರೆ ತೂಕವೇ ಬೇರೆಯಾಗುತ್ತಿತ್ತು, ಎನ್ನುವುದೂ ಕಾರ್ಯಕರ್ತರ ಮಾತು. ಡಿಕೆಶಿ ಬಂಧನ ಪ್ರತಿಭಟಿಸಿ ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ಸಣ್ಣಮಟ್ಟಿನ ಪ್ರತಿಭಟನೆ ನಡೆದಿರಬಹುದು. ಆದರೆ, ರಾಜಧಾನಿಯಲ್ಲಿ ನಡೆಯುವ ಪ್ರೊಟೆಸ್ಟಿಗೆ ತೂಕ ಜಾಸ್ತಿಯಲ್ಲವೇ?
ವರ್ಚಸ್ವೀ ನಾಯಕ 'ಡಿಕೆಶಿ'ಯನ್ನು ಕೆಲವೇ ಜಿಲ್ಲೆಗಳಿಗೆ ಸೀಮಿತಗೊಳಿಸಿದ ಒಕ್ಕಲಿಗರ ಪ್ರತಿಭಟನೆ!
ತರಾತುರಿಯಲ್ಲಿ ರಾಮಲಿಂಗ ರೆಡ್ಡಿ ಅದ್ಯಾಕೆ ಬೃಹತ್ ಪ್ರತಿಭಟನೆ ಆಯೋಜಿಸಿದ್ದರೋ? ಐದಾರು ಜಿಲ್ಲೆ, ಹಳೇ ಮೈಸೂರು ಭಾಗದ ಹೊರತಾಗಿ, ಬೇರೆ ಜಿಲ್ಲೆಗಳಿಗೆ ಮಾಹಿತಿ ಇರಲಿಲ್ಲವೋ? ಉದ್ದೇಶಪೂರ್ವಕವಾಗಿ ಹೀಗೆ ಮಾಡಲಾಯಿತೋ? ಒಟ್ಟಿನಲ್ಲಿ ರಾಜ್ಯದ ಪ್ರಭಾವೀ, ವರ್ಚಸ್ವೀ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು, ಸೆಪ್ಟಂಬರ್ ಹನ್ನೊಂದರ ಪ್ರತಿಭಟನೆ, ಕೆಲವೇ ಕೆಲವು ಜಿಲ್ಲೆಗಳಿಗೆ ಸೀಮಿತವಾಗಿ ಮಾಡಿದಂತಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ಸತ್ಯ.