ಬಿಜೆಪಿಯನ್ನು ಭಾರೀ ಇಕ್ಕಟ್ಟಿಗೆ ಸಿಲುಕಿಸಿದ ಉಡುಪಿ ಶ್ರೀಗಳ ರಾಜಕೀಯ ಎಂಟ್ರಿ
ಉಡುಪಿ ಅಷ್ಟಮಠಗಳಲ್ಲೊಂದಾದ ಶಿರೂರು ಮಠದ ಲಕ್ಷ್ಮೀವರತೀರ್ಥ ಸ್ವಾಮೀಜಿಗಳು ಚುನಾವಣೆಗೆ ಸ್ಪರ್ಧಿಸುವುದಾಗಿ ಮಾಡಿರುವ ಘೋಷಣೆ ಉಡುಪಿಯಲ್ಲಿ ಹೊಸ ರಾಜಕೀಯ ಸಮೀಕರಣ ಹುಟ್ಟುಹಾಕಿದೆ. ನೇರವಾಗಿ ಇದು ಬಿಜೆಪಿ ಮತಬ್ಯಾಂಕಿಗೆ ಧಕ್ಕೆಯಾಗಲಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
ಉಡುಪಿ ಜಿಲ್ಲಾ ಬಿಜೆಪಿ ಘಟಕದ ವಿರುದ್ದ ಅಸಮಾಧಾನ ಹೊರಹಾಕಿರುವ ಶಿರೂರು ಶ್ರೀಗಳು, ರಾಜ್ಯ ಮತ್ತು ಕೇಂದ್ರ ಬಿಜೆಪಿಯ ವಿರುದ್ದ ನನಗೇನೂ ತಕರಾರಿಲ್ಲ ಎಂದು ಸಾರಿದ್ದಾರೆ. ಬಿಜೆಪಿ ಟಿಕೆಟ್ ಕೊಟ್ಟರೇ ಆ ಪಕ್ಷದಿಂದಲೇ ಸ್ಪರ್ಧಿಸುತ್ತೇನೆ, ಇಲ್ಲಾಂದರೆ ಪಕ್ಷೇತರರರಾಗಿ ಎಂದಿದ್ದಾರೆ. ಹಾಲೀ ಕಾಂಗ್ರೆಸ್ಸಿನ ಶಾಸಕ ಮತ್ತು ಜಿಲ್ಲಾ ಉಸ್ತುವಾರಿ ಪ್ರಮೋದ್ ಮಧ್ವರಾಜ್ ಅವರ ಕಾರ್ಯವೈಖರಿಯನ್ನು ಶ್ರೀಗಳು ಹೊಗಳಿದ್ದಾರೆ.
ಓದುಗರ ಓಲೆ : ಸ್ವಾಮಿಗಳೇ ಈ ಕ್ರಾಂತಿಕಾರಿ ಬದಲಾವಣೆ ತರ್ತೀರಾ?
ಉಡುಪಿ ಅಷ್ಟಮಠಗಳ ಪೈಕಿ ಹೆಚ್ಚು ಪ್ರಸಿದ್ದಿ ಪಡೆದಿರುವುದು ಪೇಜಾವರ ಮಠದ ಹಿರಿಯ ಶ್ರೀಗಳು. ಆದರೆ ಶಿರೂರು ಶ್ರೀಗಳ ಖಡಕ್ ಸ್ವಭಾವದ ಬಗ್ಗೆ ಉಡುಪಿಯ ಜನತೆಗೆ ಚೆನ್ನಾಗಿ ಅರಿವಿದೆ. ಹಾಗಾಗಿಯೇ, ಶಿರೂರು ಶ್ರೀಗಳ ಪಾಲಿಟಿಕಲ್ ಎಂಟ್ರಿ ಈ ಭಾಗದಲ್ಲಿ ವಿಶೇಷ ಮಹತ್ವ ಪಡೆದಿರುವುದು.
ತೀರಾ ಇತ್ತೀಚೆಗೆ ಉಡುಪಿ ಕೃಷ್ಣಮಠದ ಪಾರ್ಕಿಂಗ್ ಜಾಗದಲ್ಲಿ ಅಕ್ರಮವಾಗಿ ತಲೆಯೆತ್ತಿದ್ದ ಅಂಗಡಿಗಳನ್ನು, ಬೆಳ್ಳಂಬೆಳಗ್ಗೆ ನೆಲಸಮ ಮಾಡಿಸಿದ್ದ ಶಿರೂರು ಶ್ರೀಗಳು, ಪರೋಕ್ಷವಾಗಿ ಪೇಜಾವರ ಮಠದ ವಿರುದ್ದ ಕಿಡಿಕಾರಿದ್ದರು. ಕೃಷ್ಣಮುಖ್ಯಪ್ರಾಣನ ಪೂಜೆ ಮಾಡಲೂ ಗೊತ್ತು, ಬುಲ್ಡೋಜರ್ ಹತ್ತಿಸಲೂ ಗೊತ್ತು ಎಂದು ಶಿರೂರು ಶ್ರೀಗಳು ಹೇಳಿದ್ದರು.
Recommended Video
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಸಾಮಾನ್ಯವಾಗಿ ಶಿರೂರು ಶ್ರೀಗಳು ಕೃಷ್ಣಮಠದ ವಿಚಾರದಲ್ಲಿ ಯಾವುದಾದರೂ ನಿರ್ಧಾರ ತೆಗೆದುಕೊಂಡರೆ, ಅದಕ್ಕೆ ಇತರ ಅಷ್ಟಮಠಗಳು ತಕರಾರು ಎತ್ತುವುದಿಲ್ಲ ಎನ್ನುವುದೂ, ಈ ಭಾಗದ ಜನರಿಗೆ ಗೊತ್ತಿರುವ ವಿಚಾರ. ಹಾಗಾಗಿ, ಶಿರೂರು ಶ್ರೀಗಳ ರಾಜಕೀಯ ಎಂಟ್ರಿಯ ಬಗ್ಗೆ 'ಅದು ಅವರ ವೈಯಕ್ತಿಕ ವಿಚಾರ' ಎಂದಷ್ಟೇ ಹೇಳಿಕೆ ನೀಡಿ ಇತರ ಶ್ರೀಗಳು ಸುಮ್ಮನಾಗಿದ್ದಾರೆ. ಶ್ರೀಗಳು ಕಣಕ್ಕಿಳಿದರೆ ಹೇಗೆ ಬಿಜೆಪಿಗೆ ತೊಂದರೆಯಾಗಲಿದೆ, ಮುಂದೆ ಓದಿ
ಇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿರುವ ಶಿರೂರು ಶ್ರೀಗಳು
ಮಾಧ್ವ ಪೀಠದ ಕಟ್ಟುನಿಟ್ಟಿನ ಸಂಪ್ರದಾಯದ ಜೊತೆಗೆ ಇತರ ಚಟುವಟಿಕೆಗಳಲ್ಲೂ ಸಕ್ರಿಯವಾಗಿರುವ ಶಿರೂರು ಶ್ರೀಗಳು, ಜಿಲ್ಲೆಯ ವಿಶ್ವಹಿಂದೂ ಪರಿಷತ್ ಮತ್ತು ಇತರ ಹಿಂದೂಪರ ಸಂಘಟನೆಗಳ ಕೆಲಸಗಳಲ್ಲೂ ಗುರುತಿಸಿಕೊಂಡಿರುವುದು ಪ್ರಮುಖವಾಗಿ ಬಿಜೆಪಿಗೆಯಾಗುವ ಹಿನ್ನಡೆ. ಯಾಕೆಂದರೆ, ಕರಾವಳಿ ಭಾಗದಲ್ಲಿ ಹಿಂದೂ ಸಂಘಟನೆಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಜೊತೆಜೊತೆಗೆ ಕಾಂಗ್ರೆಸ್ ಪ್ರಾಯೋಜಿತ ಕಾರ್ಯಕ್ರಮಗಳಲ್ಲೂ ಶ್ರೀಗಳು ಭಾಗವಹಿಸಿದ್ದುಂಟು.
ಬಿಜೆಪಿ ಟಿಕೆಟ್ ಸಿಕ್ಕರೇ ಆ ಪಕ್ಷದಿಂದಲೇ ಸ್ಪರ್ಧಿಸುವುದಾಗಿ ಶಿರೂರು ಶ್ರೀ ಹೇಳಿಕೆ
ಬಿಜೆಪಿ ಟಿಕೆಟ್ ಸಿಕ್ಕರೇ ಆ ಪಕ್ಷದಿಂದಲೇ ಸ್ಪರ್ಧಿಸುವುದಾಗಿ ಶಿರೂರು ಶ್ರೀಗಳು ಹೇಳಿರುವುದು ಬಿಜೆಪಿಯನ್ನು ಮುಜುಗರಕ್ಕೀಡಾಗುವಂತೆ ಮಾಡಿದೆ. ಶತಮಾನಗಳ ಇತಿಹಾಸವಿರುವ ಮಾಧ್ವಪೀಠದ ಶ್ರೀಗಳೊಬ್ಬರು ಕಣಕ್ಕಿಳಿದರೆ, ಬಿಜೆಪಿಯ ಸಾಂಪ್ರದಾಯಿಕ ಮತಗಳ ಜೊತೆ, ಮಠದ ಅನುಯಾಯಿಗಳು ಮತ್ತು ಖಟ್ಟರ್ ಹಿಂದೂವಾದಿಗಳ ಮತ ಬಿಜೆಪಿಯಿಂದ ಇಬ್ಭಾಗವಾಗುವ ಸಾಧ್ಯತೆಗಳು ಇಲ್ಲದಿಲ್ಲ.
ಬಿಜೆಪಿಗೆ ನೇರವಾಗಿ ಏಟು ಬೀಳುವುದು ಉಡುಪಿ ಅಸೆಂಬ್ಲಿ ಕ್ಷೇತ್ರದಲ್ಲಿ
ಕರಾವಳಿ ಭಾಗದಲ್ಲಿ ಬಿಜೆಪಿಗೆ ಬೆನ್ನೆಲುಬಾಗಿ ನಿಂತಿರುವುದೇ ಹಿಂದೂಪರ ಸಂಘಟನೆಗಳು. ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಐದು ಅಸೆಂಬ್ಲಿ ಕ್ಷೇತಗಳಿದ್ದರೂ, ಶಿರೂರು ಶ್ರೀಗಳ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ, ಬಿಜೆಪಿಗೆ ನೇರವಾಗಿ ಏಟು ಬೀಳುವುದು ಉಡುಪಿ ಅಸೆಂಬ್ಲಿ ಕ್ಷೇತ್ರದಲ್ಲಿ ಮಾತ್ರ. ಹಿಂದೂ ಸಂಘಟನೆಗಳು ಶ್ರೀಗಳ ಪರವಾಗಿ ನಿಂತರೆ, ಬಿಜೆಪಿಗೆ ತೀವ್ರವಾಗಿ ಕಾರ್ಯಕರ್ತರ ಸಮಸ್ಯೆ ಕಾಡಲಿದೆ.
ಯಡಿಯೂರಪ್ಪ, ಶೋಭಾ ಶ್ರೀಗಳ ಜೊತೆ ಹಲವು ಸುತ್ತಿನ ಮಾತುಕತೆ
ಶಿರೂರು ಶ್ರೀಗಳ ಚುನಾವಣೆಗೆ ಇಳಿಯುವ ನಿರ್ಧಾರದ ಸೀರಿಯಸ್ನೆಸ್ ಅರಿತೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಶ್ರೀಗಳ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನುವ ಮಾಹಿತಿಯಿದೆ. ಕಣಕ್ಕಿಳಿಯದಂತೆ ಶಿರೂರು ಶ್ರೀಗಳ ಮನವೊಲಿಸುವ ಪ್ರಯತ್ನ ನಡೆಸಿದ್ದಾರಾ ಎನ್ನುವ ಬಗ್ಗೆ ಸದ್ಯ ಸ್ಪಷ್ಟ ಮಾಹಿತಿಯಿಲ್ಲ.
ಪೇಜಾವರ ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನತೀರ್ಥರು
ಪೇಜಾವರ ಮಠದ ಕಿರಿಯ ಶ್ರೀಗಳಾದ ವಿಶ್ವಪ್ರಸನ್ನತೀರ್ಥರನ್ನು ಚುನಾವಣಾ ಕಣಕ್ಕಿಳಿಸಲು ನೇರವಾಗಿ ಕೇಂದ್ರ ಬಿಜೆಪಿ ಘಟಕದಿಂದ ಪೇಜಾವರ ಹಿರಿಯ ಶ್ರೀಗಳಿಗೆ ಒತ್ತಡ ಹೇರಲಾಗಿತ್ತು. ಆದರೆ, ಪೇಜಾವರ ಶ್ರೀಗಳು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದ್ದ ವಿಚಾರ ತಡವಾಗಿ ಬಹಿರಂಗವಾಗಿದೆ.
ಕಾಂಗ್ರೆಸ್ಸಿಗೆ ಉಡುಪಿ ಕ್ಷೇತ್ರ ಸುಲಭ ತುತ್ತು ಎನ್ನುವುದು ಸದ್ಯದ ಲೆಕ್ಕಾಚಾರ
ಉಡುಪಿ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬೇಕು ಎನ್ನುವ ನಿರ್ಧಾರಕ್ಕೆ ಇನ್ನೂ ಬಿಜೆಪಿ ಬಂದಿಲ್ಲ. ರಘುಪತಿ ಭಟ್ ಅಥವಾ ಸುಧಾಕರ್ ಶೆಟ್ಟಿ ಸಂಭಾವ್ಯ ಅಭ್ಯರ್ಥಿಗಳು ಎಂದು ಹೇಳಲಾಗುತ್ತಿದೆ. ಒಂದು ವೇಳೆ, ಬಿಜೆಪಿ ಎಲ್ಲಾ ಲೆಕ್ಕಾಚಾರ ಬದಿಗಿಟ್ಟು ಶಿರೂರು ಶ್ರೀಗಳಿಗೆ ಟಿಕೆಟ್ ನೀಡಿದರೆ, ಹಾಲೀ ಶಾಸಕ ಪ್ರಮೋದ್ ಮಧ್ವರಾಜ್ ಅವರಿಗೆ ತುರುಸಿನ ಸ್ಪರ್ಧೆ ನೀಡಬಹುದು ಎಂದು ಹೇಳಲಾಗುತ್ತಿದೆ. ಇಲ್ಲದಿದ್ದರೆ, ಬಿಜೆಪಿ ಅಭ್ಯರ್ಥಿಯ ಜೊತೆ, ಶಿರೂರು ಶ್ರೀಗಳು ಕಣಕ್ಕಿಳಿದರೆ, ಕಾಂಗ್ರೆಸ್ಸಿಗೆ ಉಡುಪಿ ಕ್ಷೇತ್ರ ಸುಲಭ ತುತ್ತು ಎನ್ನುವುದು ಸದ್ಯದ ಲೆಕ್ಕಾಚಾರ.