ಇದು ಅದೇ "ಸಿಡಿ'ನಾ ಅಥವಾ ಆ "ಸಿಡಿ' ಬೇರೆ ಇದೆಯಾ?
ಬೆಂಗಳೂರು, ಫೆ. 02: ರಾಜ್ಯ ಬಿಜೆಪಿಯಲ್ಲಿ ಕೇಳಿ ಬರುತ್ತಿದ್ದ 'ಸಿಡಿ ಬಾಂಬ್' ಸ್ಫೋಟವಾಗುತ್ತಿದ್ದಂತೆಯೆ ಬಿಜೆಪಿ ಸರ್ಕಾರದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಈ ಹಿಂದೆ ಬಹಿರಂಗವಾಗಿಯೇ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು 'ಸಿಡಿ ಬಾಂಬ್' ಇರುವ ಬಗ್ಗೆ ಆರೋಪ ಮಾಡಿದ್ದರು. ಹೀಗಾಗಿ ಅವರು ಆರೋಪಿಸಿದ್ದ ಸಿಡಿ ಇದೆನಾ? ಅಥವಾ ಮತ್ತೊಂದು 'ಸಿಡಿ' ಶೀಘ್ರದಲ್ಲಿಯೇ ಬಹಿರಂಗವಾಗಲಿದೆಯಾ ಎಂಬುದು ಕುತೂಹಲ ಮೂಡಿಸಿದೆ.
ಇದು ಎರಡು ತಿಂಗಳುಗಳ ಹಿಂದಿನ 'ಸಿಡಿ' ಎಂದು ದೂರುದಾರ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿ ಬಳಿ ಕೊಟ್ಟಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ವಿರುದ್ಧ ದೂರು ದಾಖಲಾಗುತ್ತಿದ್ದಂತೆಯೆ ರಾಜ್ಯ ಬಿಜೆಪಿಯಲ್ಲಿ ಆತ್ಮಾವಲೋಕನದ ಮಾತುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಪಕ್ಷದಲ್ಲಿ ಆಂತರಿಕವಾಗಿ ಬಹಳಷ್ಟು ಬೆಳವಣಿಗೆಗಳು ಹಾಗೂ ಚರ್ಚೆಗಳು ಆರಂಭವಾಗಿವೆ ಎಂಬ ಮಾಹಿತಿ ಬಂದಿವೆ.
ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ; ಕಾಂಗ್ರೆಸ್ ಸರಣಿ ಟ್ವೀಟ್
ಮತ್ತಷ್ಟು ಹೆಚ್ಚಾಗಲಿದೆ ಮೂಲ-ವಲಸೆ ಕಂದಕ
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಬಿಡುಗಡೆ ಆಗುತ್ತಿದ್ದಂತೆಯೆ ರಾಜ್ಯ ಬಿಜೆಪಿಯಲ್ಲಿ ಮತ್ತೊಮ್ಮೆ ಆತ್ಮಾವಲೋಕನದ ಚರ್ಚೆ ಶುರುವಾಗಿದೆ ಎಂಬ ಮಾಹಿತಿ ಬಂದಿದೆ. ಈ ಹಿಂದೆಯೇ ವಲಸಿಗರಿಗೆ ಹೆಚ್ಚಿನ ಪ್ರಾಶಸ್ತ್ಯ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಿಗುತ್ತಿದೆ ಎಂದು ಹಿರಿಯ ಶಾಸಕರೇ ಬಹಿರಂಗವಾಗಿ ಆರೋಪ ಮಾಡಿದ್ದರು. ಪಕ್ಷದಲ್ಲಿನ ಸಮಸ್ಯೆಗಳನ್ನು ಚರ್ಚೆ ಮಾಡಲು ಶಾಸಕಾಂಗ ಪಕ್ಷದ ಸಭೆ ಕರೆಯಲು ಬಿಜೆಪಿ ಹಾರ್ಡ್ಕೋರ್ ಶಾಸಕರು ರಾಜ್ಯಾಧ್ಯಕ್ಷರಿಗೆ ಪತ್ರ ಬರೆದಿದ್ದರು. ಈಗ ಮೂಲ-ವಲಸೆ ಕಂದಕ ಮತ್ತಷ್ಟು ಹೆಚ್ಚಾಗಲಿದ್ದು, ಸಿದ್ದಾಂತದ ಬಗ್ಗೆಯೂ ಹಿರಿಯ ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದನ್ನು ನೆನಪಿಸಿಕೊಳ್ಳಬಹುದು.
ಸಿಎಂ ಯಡಿಯೂರಪ್ಪ ಅವರಿಗೆ ಸಂಕಷ್ಟ
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಮೂಲ ಕಾರಣ ಸಚಿವ ರಮೇಶ್ ಜಾರಕಿಹೊಳಿ ಅಂದರೂ ತಪ್ಪಿಲ್ಲ. ಯಾಕೆಂದರೆ ಮೈತ್ರಿ ಸರ್ಕಾರದಲ್ಲಿ ಮೊದಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದು ರಮೇಶ್ ಜಾರಕಿಹೊಳಿ ಅವರು. ಹೀಗಾಗಿ ಅವರು ರಾಜೀನಾಮೆ ಕೊಟ್ಟ ಬಳಿಕ ದೊಡ್ಡ ಮಟ್ಟದಲ್ಲಿ ಆಪರೇಷನ್ ಕಮಲ ಸಫಲವಾಗಲು ಕಾರಣವಾಯ್ತು. ರಮೇಶ್ ಜಾರಕಿಹೊಳಿ ಅವರನ್ನು ಹಿಂಬಾಲಿಸಿದ ಜೆಡಿಎಸ್-ಕಾಂಗ್ರೆಸ್ ಪಕ್ಷದ 16 ಶಾಸಕರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು.
ರಾಜೀನಾಮೆ ಪಡೆಯುತ್ತಾರಾ ಯಡಿಯೂರಪ್ಪ?
ಹಿಂದೆ ಇದೇ ರೀತಿಯ ಆರೋಪ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಬಂದಿತ್ತು. ಸಿದ್ದರಾಮಯ್ಯ ಅವರ ಸರ್ಕಾರದ ಹಿರಿಯ ಸಚಿವರೊಬ್ಬರ ರಾಸಲೀಲೆ ಸಿಡಿ ಬಹಿರಂಗೊಂಡಿತ್ತು. ಆಗ ನೈತಿಕ ಹೊಣೆ ಹೊತ್ತು ಆ ಸಚಿವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಆದರೆ ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ರಮೇಶ್ ಜಾರಕಿಹೊಳಿ ಅವರು ಮೂಲ ಕಾರಣ. ಹೀಗಾಗಿ ತಕ್ಷಣವೇ ಅವರ ರಾಜೀನಾಮೆಯನ್ನು ಬಿಜೆಪಿ ಪಡೆಯುತ್ತದೆಯಾ? ಎಂಬ ಚರ್ಚೆಗಳು ಆರಂಭವಾಗಿವೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆಗೆ
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬಿಜೆಪಿ ಹೈಕಮಾಂಡ್ಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಹತ್ತಿರವಾಗಿದ್ದರು. ಜೊತೆಗೆ ಮಹಾರಾಷ್ಟ್ರದಲ್ಲಿಯೂ ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರಲು ಪ್ರಯತ್ನಗಳನ್ನು ಆರಂಭಿಸಿದ್ದರು. ಹೀಗಾಗಿ ಕೇಂದ್ರ ಬಿಜೆಪಿಯಲ್ಲಿಯೂ ಜಾರಕಿಹೊಳಿ ಅವರು ಪ್ರಭಾವಿಯಾಗಿದ್ದರು. ಆದರೆ ಶಿಸ್ತಿನ ಪಕ್ಷ ಬಿಜೆಪಿಗೆ 'ಸಿಡಿ ಬಾಂಬ್' ಬಹಳಷ್ಟು ಮುಜುಗುರವನ್ನುಂಟು ಮಾಡಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ರಮೇಶ್ ಜಾರಕಿಹೊಳಿ ಅವರನ್ನು ಪಕ್ಷದಲ್ಲಿ ಇಟ್ಟುಕೊಳ್ಳುತ್ತದೆಯಾ ಎಂಬುದನ್ನು ಕಾಯ್ದು ನೋಡಬೇಕಿದೆ.