ಮತ್ತೆ 'ಡಿಸಿಎಂ' ಹುದ್ದೆ ಕುರಿತು ಮಾತನಾಡಿದ ಸಚಿವ 'ರಮೇಶ್ ಜಾರಕಿಹೊಳಿ'!
ಬೆಂಗಳೂರು, ನ. 25: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಒಪ್ಪಿಗೆ ಕೊಡುತ್ತಿಲ್ಲ ಎಂಬ ಕೊರಗು ಒಂದೆಡೆ ಕಾಡುತ್ತಿದೆ. ಇದೇ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ಸರಣಿ ಸಭೆಗಳು ಬಿಜೆಪಿಯಲ್ಲಿಯೇ ಚರ್ಚೆ ಹುಟ್ಟುಹಾಕಿವೆ. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲವಾದರೂ ಆಪರೇಶನ್ ಕಮಲದ ಮೂಲಕ ಬಿಜೆಪಿ ಸೇರಿರುವ ಎಲ್ಲ 17 ಜನರೂ ಮಂತ್ರಿಯಾಗಬೇಕು ಎಂದು ಸಚಿವ ರಮೇಶ್ ಜಾರಕಿಹೊಳಿ ಅವರು ಪ್ರಯತ್ನ ನಡೆಸಿದ್ದಾರೆ.
ಇದೇ ಸಂದರ್ಭದಲ್ಲಿ ಮೂಲ ಬಿಜೆಪಿ ನಾಯಕರೂ ಕೂಡ ಅವರ ಮನೆಗೆ ಎಡತಾಕುತ್ತಿದ್ದಾರೆ. ಇದಕ್ಕೆ ಕಾರಣ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ಹೈಕಮಾಂಡ್ ಜೊತೆಗೆ ಹೊಂದಿರುವ ಉತ್ತಮ ಬಾಂಧವ್ಯ. ಇಂದು (ನ.25) ಮತ್ತೆ ಬಿಜೆಪಿಯ ಇತರ ನಾಯಕರೊಂದಿಗೆ ರಮೇಶ್ ಜಾರಕಿಹೊಳಿ ಅವರು ಚರ್ಚೆ ನಡೆಸಿದ್ದಾರೆ. ಬೆಳಗಾವಿ ಭಾಗದ ಪ್ರಭಾವಿ ಬಿಜೆಪಿ ನಾಯಕರೂ ಚರ್ಚೆಯಲ್ಲಿ ಭಾವಹಿಸಿರುವುದು ತೀವ್ರ ಕುತೂಹಲ ಮೂಡಿಸಿದೆ.
ಬಿ. ಎಲ್. ಸಂತೋಷ್ ಭೇಟಿಯಾದ ರಮೇಶ್ ಜಾರಕಿಹೊಳಿ
ಇದೇ ಚರ್ಚೆಯ ಬಳಿಕ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ಉಪ ಮುಖ್ಯಮಂತ್ರಿ ಹುದ್ದೆ ಬೇಡಿಕೆ ಕುರಿತು ಮಹತ್ವದ ಮಾತನ್ನಾಡಿದ್ದಾರೆ.
ನೀವೇ ನನ್ನನ್ನು ಸ್ಟ್ರಾಂಗ್ ಮಾಡಿದ್ದೀರಿ
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರ ರಾಜಕೀಯ ಚಟುವಟಿಕೆಗಳನ್ನು ಗಮನಿಸಿ, ಅವರು ಬಿಜೆಪಿಯಲ್ಲಿ ಬಲಗೊಳ್ಳುತ್ತಿದ್ದಾರಾ? ಎಂಬ ಚರ್ಚೆಗಳು ಬಿಜೆಪಿಯಲ್ಲಿಯೇ ಶುರುವಾಗಿಯೆ.
ಆದರೆ ಇದಕ್ಕೆ ಬೆಂಗಳೂರಿನಲ್ಲಿ ಸ್ಪಷ್ಟನೆ ಕೊಟ್ಟಿರುವ ಅವರು, ನಾನೇನು ಸ್ಟ್ರಾಂಗ್ ಅಲ್ಲ, ನೀವೇ ಮಾದ್ಯಮದವರೇ ನನ್ನನ್ನು ಸ್ಟ್ರಾಂಗ್ ಮಾಡುತ್ತಿದ್ದೀರಿ ಎಂದು ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ನಾನು ಜಲಸಂಪನ್ಮೂಲ ಸಚಿವ. ನೀರಾವರಿ ಸಮಸ್ಯೆ ಗಳ ಬಗ್ಗೆ ಚರ್ಚಿಸಲು ಶಾಸಕರು ಬರುತ್ತಾರೆ ಅಷ್ಟೇ ಎಂದಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನಗೆ ವಿಶ್ವಾಸದಿಂದ ನೀರಾವರಿ ಖಾತೆ ಕೊಟ್ಟಿದ್ದಾರೆ. ನಾನು ಡಿಸಿಎಂ ಸ್ಥಾನವನ್ನು ಯಾವತ್ತೂ ಕೇಳಿಲ್ಲ. ಮುಂದೆ ಕೇಳೋದೂ ಇಲ್ಲ ಎಂದು ರಮೇಶ್ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದ್ದಾರೆ. ಇದರಲ್ಲಿಯೇ ನಾನು ಬಹಳ ಖುಷಿಯಿಂದ ಯಿಂದ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಜೊತೆಗೆ ಮಂತ್ರಿ ಮಂಡಲ ವಿಸ್ತರಣೆ ಕುರಿತೂ ಅವರು ಮಾತನಾಡಿದ್ದಾರೆ.
ಯೋಗೇಶ್ವರ್ ಪರ ಬ್ಯಾಟಿಂಗ್
ನಾನು ಆರನೇ ಬಾರಿ ಶಾಸಕ ಎಂದಿರುವ ರಮೇಶ್ ಜಾರಕಿಹೊಳಿ ಅವರು, ನನಗೆ ಸಿಪಿ ಯೋಗೇಶ್ವರ್ ತುಂಬಾ ಪರಿಚಯ ಎಂದು ಹೇಳಿದ್ದಾರೆ. ಅವನನ್ನು ಮಂತ್ರಿ ಮಾಡದಂತೆ ನನ್ನ ಕೆಲ ಗೆಳೆಯರು ಕೂಡ ವಿರೋಧ ಮಾಡಿದ್ದು ನಿಜ. ಆದರೆ ಅವನಿಗೆ ಸಚಿವ ಸ್ಥಾನ ಕೊಡಿಸಲು ಹೋರಾಟ ಮಾಡುವುದು ನನ್ನ ಧರ್ಮ.
ಸಂಪುಟ ವಿಸ್ತರಣೆ: ಹಲವು ಗುಸುಗುಸು ಸುದ್ದಿಗೆ ಕಾರಣರಾದ ಪ್ರಲ್ಹಾದ್ ಜೋಶಿ, ಜಾರಕಿಹೊಳಿ
ಆದರೆ ಅವನನ್ನು ಮಂತ್ರಿ ಮಾಡೋದು ಹೈಕಮಾಂಡ್ ಗೆ ಬಿಟ್ಟಿದ್ದು. ಅವನನ್ನು ಹೈಕಮಾಂಡ್, ಮಂತ್ರಿ ಮಾಡಿದರೆ ಖುಷಿ, ಮಾಡದೆ ಇದ್ದರೂ ಖುಷಿ. ಆದರೆ ಅವನ ಪರವಾಗಿ ನಾನು ಕೊನೆ ವರೆಗೂ ಬ್ಯಾಟಿಂಗ್ ಮಾಡುತ್ತೇನೆ ಎಂದಿದ್ದಾರೆ.
ಶಶಿಕಲಾ ಜೊಲ್ಲೆ ನನ್ನ ಸಹೋದರಿ
ಇನ್ನು ತಮ್ಮನ್ನು ಸಚಿವೆ ಶಶಿಕಲಾ ಜೊಲ್ಲೆ ಭೇಟಿ ಮಾಡಿದ್ದರ ಕುರಿತೂ ಸಚಿವ ಜಾರಕಿಹೊಳಿ ಮಾತನಾಡಿದ್ದಾರೆ. ಶಶಿಕಲಾ ಜೊಲ್ಲೆ ನನ್ನ ಸಹೋದರಿ. ಅವರು ನಮ್ಮನೆಗೆ ಬರುವುದರಲ್ಲಿ ಏನೂ ವಿಶೇಷತೆ ಇಲ್ಲ. ಹೈಕಮಾಂಡ್ ಯಾರನ್ನು ಸಂಪುಟದಿಂದ ಕೈ ಬಿಡುತ್ತಾರೋ? ಯಾರನ್ನು ಸೇರಿಸಿಕೊಳ್ಳುತ್ತೊ? ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧವಾಗಿರುತ್ತೇನೆ. ಅದರ ಬಗ್ಗೆ ನಾನು ಏನು ತಲೆ ಕೆಡೆಸಿಕೊಂಡಿಲ್ಲ ಎಂದಿದ್ದಾರೆ.
Recommended Video
ರಾಜಕಾರಣದಲ್ಲಿ ಆಶಾಭಾವನೆ ಇರಬೇಕು
ಸಿಪಿ ಯೋಗೇಶ್ವರ್ ಅವಿರಿಗೆ ಸಚಿವ ಸ್ಥಾನ ಸಿಗುತ್ತದೆಯಾ ಎಂಬ ಪ್ರಶ್ನೆಗೆ ಉತ್ತರಿಸಿರುವ ರಮೇಶ್ ಜಾರಕಿಹೊಳಿ ಅವರು, ರಾಜಕಾರಣದಲ್ಲಿ ಆಶಾಭಾವನೆ ಇರಬೇಕು ಎಂದಿದ್ದಾರೆ. ಯೋಗೇಶ್ವರ್ ವಿರೋಧಿಸುವ ಶಾಸಕರಿಗೂ ಇದನ್ನೇ ಹೇಳಿದ್ದೇನೆ. ನೀವು ನಿಮ್ಮ ಪರವಾಗಿ ಇರೀ, ನಾನಂತೂ ಸಿಪಿ ಯೋಗೇಶ್ವರ್ಗೆ ಸಚಿವ ಸ್ಥಾನ ಕೊಡಿಸಲು ಪ್ರಯತ್ನ ಮಾಡುತ್ತೇನೆ.
ಹೀಗಾಗಿ ಯಾರು ಕೂಡ ನನ್ನ ಮೇಲೆ ಬೇಸರ ಮಾಡಿಕೊಳ್ಳದಂತೆ ಮನವಿ ಮಾಡಿದ್ದೇನೆ. 17 ಜನ ಶಾಸಕರು ಹೇಗೋ ಸರ್ಕಾರ ರಚನೆಗೆ ಕಾರಣವೊ? ಹಾಗೇ ಬಿಜೆಪಿಯ 104 ಶಾಸಕರು ಕೂಡ ಸರ್ಕಾರ ರಚನೆಗೆ ಕಾರಣ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ. ನಿಜ ಹೌದು, ಅವರ ಮಾತು ಸತ್ಯ ಎಂದು ಹೇಳಿ ರಮೇಶ್ ಜಾರಕಿಹೊಳಿ ಅವರು ಮತ್ತೆ ಬೆಂಗಳೂರಿನಿಂದ ದೆಹಲಿಗೆ ತೆರಳಿದರು.