ರಮ್ಯಾ Vs ಡಿಕೆಶಿ: ರಾಜ್ಯ ಕಾಂಗ್ರೆಸ್ಸಿನಲ್ಲಿ ಏನಾಗುತ್ತಿದೆ, ಬಣ ರಾಜಕೀಯ ಜೋರು?
ಎಐಸಿಸಿಯ ಮಾಜಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನ ಟ್ವೀಟ್ ವಿಚಾರ, ರಾಜ್ಯ ಕಾಂಗ್ರೆಸ್ಸಿನಲ್ಲಿನ ಗುಂಪುಗಾರಿಕೆಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದಿಯೇ? ಇದರ ಹಿಂದೆ ಕಾಣದ 'ಕೈ' ಕೆಲಸ ಮಾಡುತ್ತಿದೆಯೇ ಎನ್ನುವ ಗುಮಾನಿ ಕಾಂಗ್ರೆಸ್ ವಲಯದಲ್ಲಿ ಜೋರಾಗಿದೆ.
Recommended Video
ಬಿಜೆಪಿ ವಿರುದ್ದ ಭ್ರಷ್ಟಾಚಾರದ ವಿರುದ್ದ ಬೀದಿಗಿಳಿದಿದ್ದ ರಾಜ್ಯ ಕಾಂಗ್ರೆಸ್ ನಾಯಕರು ಈಗ ತಮ್ಮಲ್ಲೇ ಜೋರಾಗುತ್ತಿರುವ ಅಸಮಾಧಾನದ ಬೆಂಕಿಯನ್ನು ಶಮನಗೊಳಿಸಬೇಕಾಗಿದೆ. ಎಐಸಿಸಿಯಿಂದ ಹೊರ ಬಂದ ನಂತರ ರಮ್ಯಾ, ತಾನಾಯಿತು ತನ್ನ ಕೆಲಸವಾಯಿತು ಎನ್ನುವಂತೆ ರಾಜಕೀಯದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ.
ನನ್ನನ್ನು ಟ್ರೋಲ್ ಮಾಡುವಂತೆ ಕಾಂಗ್ರೆಸ್ ನಾಯಕರಿಂದಲೇ ಸೂಚನೆ: ರಮ್ಯಾ ಆಕ್ರೋಶ
ಸಚಿವ ಡಾ.ಅಶ್ವಥ್ ನಾರಾಯಣ ವಿರುದ್ದ ಪ್ರಮುಖವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಿರುಗಿಬಿದ್ದಂತಹ ಸಂದರ್ಭದಲ್ಲಿ ಮಾಜಿ ಸಚಿವ, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿಯ ಮುಖ್ಯಸ್ಥ ಎಂ.ಬಿ.ಪಾಟೀಲ್ ಅವರು ಅಶ್ವಥ್ ನಾರಾಯಣ ಅವರನ್ನು ಭೇಟಿಯಾಗಿದ್ದಾರೆ ಎಂದು ಹೇಳಲಾಗುತ್ತಿರುವ ಸುದ್ದಿ, ಕಾಂಗ್ರೆಸ್ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿತ್ತು.
ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ನೀಡಿದ್ದ ಪ್ರತಿಕ್ರಿಯೆಗೆ ರಮ್ಯಾ ಮಾಡಿದ್ದ ಟ್ವೀಟ್, ರಾಜ್ಯ ರಾಜಕೀಯದಲ್ಲಿ ಹೊಸಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ. ರಮ್ಯಾ ವಿರುದ್ದ ತಿರುಗಿಬಿದ್ದ ಡಿ.ಕೆ.ಶಿವಕುಮಾರ್ ಬಣದವರು ಈ ವಿಚಾರವನ್ನು ರಾಡಿರಂಪ ಮಾಡಿಕೊಂಡಿದ್ದಾರೆ.
ರಮ್ಯಾ ಈಗ ಖುರ್ಚಿಗೆ ಟವಲ್ ಹಾಕೋಕೆ ಬಂದಿದ್ದಾರೆ: ನಲಪಾಡ್
ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಗುರುತಿಸಿಕೊಳ್ಳುವ ಎಂ.ಬಿ.ಪಾಟೀಲ್
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಗುರುತಿಸಿಕೊಳ್ಳುವ ಎಂ.ಬಿ.ಪಾಟೀಲ್ ಅವರು ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆಗೆ ತೀವ್ರವಾಗಿ ಖಂಡಿಸಿದ್ದರು. ರಾಜ್ಯ ಕಾಂಗ್ರೆಸ್ಸಿನ ಹೆಚ್ಚಿನ ನಾಯಕರು ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿದ್ದರು. ಎಂ.ಬಿ.ಪಾಟೀಲ್ ಅವರನ್ನು ಬೆಂಬಲಿಸಿ ರಮ್ಯಾ ಮಾಡಿದ ಟ್ವೀಟ್ ನಿಂದಾಗಿ ಕಾಂಗ್ರೆಸ್ಸಿನ ಒಂದು ವಲಯ ತಿರುಗಿಬಿತ್ತು. ಆದರೆ, ಎಂ.ಬಿ.ಪಾಟೀಲ್ ಅವರನ್ನು ಸಮರ್ಥಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಅರಿತ ಒಂದು ಬಣ ಈ ವಿಚಾರದಿಂದ ನಿಧಾನವಾಗಿ ಹಿಂದಕ್ಕೆ ಸರಿಯಲು ಆರಂಭಿಸಿತು.
ಪಕ್ಷದ ಸಂಕಷ್ಟದ ಸಂದರ್ಭದಲ್ಲಿ ರಮ್ಯಾ ಪಕ್ಷದ ಪರವಾಗಿ ಕೆಲಸವನ್ನು ಮಾಡಿದ್ದವರು
'ಇಬ್ಬರೂ ನನಗೆ ವೈಯಕ್ತಿಕವಾಗಿ ಬೇಕಾದವರೇ, ಎಲ್ಲೋ ಕಮ್ಯೂನಿಕೇಶನ್ ಗ್ಯಾಪ್ ಆಗಿದೆ. ಈ ವಿಚಾರವನ್ನು ಬೆಳೆಸಿಕೊಂಡು ಹೋಗುವುದು ಬೇಡ"ಎಂದು ಡಿ.ಕೆ.ಶಿವಕುಮಾರ್ ಅವರೇನೋ ಹೇಳಿಕೆಯನ್ನು ನೀಡಿದ್ದಾರೆ. ಆದರೂ, ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ನಳಪಾಡ್ ಮತ್ತೆ ಈ ವಿಚಾರವನ್ನು ಕೆದಕಿದ್ದಾರೆ. ಜೊತೆಗೆ, ಎಂ.ಬಿ.ಪಾಟೀಲ್ ಅವರು ಈ ವಿಚಾರದಲ್ಲಿ ಟ್ವೀಟ್ ಮಾಡಿ, "ಪಕ್ಷದ ಸಂಕಷ್ಟದ ಸಂದರ್ಭದಲ್ಲಿ ರಮ್ಯಾ ಪಕ್ಷದ ಪರವಾಗಿ ಕೆಲಸವನ್ನು ಮಾಡಿದ್ದವರು. ನಮ್ಮ ಪಕ್ಷದ ಕೆಲವರು ಅವರ ವಿರುದ್ದ ಮಾತಾನಾಡುತ್ತಿದ್ದಾರೆ, ಇದು ತಪ್ಪು"ಎಂದು ಪಾಟೀಲ್ ಟ್ವೀಟ್ ಮಾಡಿದ್ದಾರೆ.
ಯಾವುದಾದರೂ ಕುರ್ಚಿ ಮೇಲೆ ಟವಲ್ ಹಾಕಲು ರಮ್ಯಾ ಬಂದಿದ್ದಾರಾ, ನಳಪಾಡ್
"ರಮ್ಯಾ ಇಷ್ಟು ದಿನ ಎಲ್ಲಿದ್ದರೂ ಅಂತ ನನಗೂ ಗೊತ್ತಿಲ್ಲ. ಇಷ್ಟು ತಿಂಗಳು,ಇಷ್ಟು ವರ್ಷ ರಮ್ಯಾ ಎಲ್ಲಿದ್ದರು? ಎಲ್ಲೂ ಇಲ್ಲದ ರಮ್ಯಾ ಸಡನ್ನಾಗಿ ಯಾಕೆ ಬಂದಿದ್ದಾರೆ. ರಮ್ಯಾ ತನ್ನ ಅಸ್ತಿತ್ವ ತೋರಿಸಲು ಬಂದಿದ್ದಾರಾ? ನಾನು ಒಬ್ಬಳು ಇದೀನಿ ಅಂತಾ ತೋರಿಸಿಕೊಳ್ಳುತ್ತಿದ್ದಾರಾ? ಯಾವುದಾದರೂ ಒಂದು ಕುರ್ಚಿ ಮೇಲೆ ಟವಲ್ ಹಾಕಲು ರಮ್ಯಾ ಬಂದಿದ್ದಾರಾ" ಎಂದು ನಳಪಾಡ್ ಹೇಳಿರುವುದು ವಿಚಾರ ಮತ್ತೆ ಜೀವಂತವಾಗಿರುವಂತೆ ಮಾಡಿದೆ. ಈ ವಿಚಾರದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ, ಸಿದ್ದರಾಮಯ್ಯ ಆಪ್ತರೂ ಆಗಿರುವ ಡಾ.ಎಚ್.ಸಿ.ಮಹದೇವಪ್ಪ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.
|
ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಟ್ವೀಟ್
"ಕಾಂಗ್ರೆಸ್ ನ ಬಂಧುಗಳೇ ಪ್ರಸ್ತುತ ಸಂದರ್ಭದಲ್ಲಿ ನಮ್ಮ ಎದುರಾಳಿ @BJP4Karnataka ಪಕ್ಷವೇ ಹೊರತು, @divyaspandana ಅವರಲ್ಲ. ಸೈದ್ಧಾಂತಿಕ ಹೋರಾಟದ ಹಾದಿಯಲ್ಲಿ ಅನಗತ್ಯ ಗೊಂದಲ ಮೂಡಬಾರದಷ್ಟೇ"ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪನವರು ಟ್ವೀಟ್ ಮಾಡಿದ್ದಾರೆ. ಇದರಿಂದಾಗಿ, ಪಕ್ಷದೊಳಗಿನ ಗೊಂದಲ ಮತ್ತೆ ಬೀದಿಗೆ ಬಂದಂತಾಗಿದೆ.