ಕ್ಷೇತ್ರ ಬದಲಾವಣೆ: ಅಡ್ಡಗೋಡೆಯ ಮೇಲೆ ದೀಪ ಇಟ್ಟ ಸಿದ್ದರಾಮಯ್ಯ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ತವರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ಸಿನ ಜಿ.ಟಿ.ದೇವೇಗೌಡ ವಿರುದ್ದ ಪರಾಭವಗೊಂಡು, ಬಾದಾಮಿ ಕ್ಷೇತ್ರದಲ್ಲಿ ಜಯಗಳಿಸಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕ್ಷೇತ್ರ ಬದಲಾವಣೆಯತ್ತ ಚಿತ್ತ ಹರಿಸಿದ್ದಾರೆಯೇ?
ಹೀಗೊಂದು ಸುದ್ದಿ ಕಳೆದ ಎರಡ್ಮೂರು ದಿನಗಳಿಂದ ಚಾಲ್ತಿಯಲ್ಲಿದೆ. ಬಾದಾಮಿಯಲ್ಲೂ ಬಿಜೆಪಿಯ ಶ್ರೀರಾಮುಲು ವಿರುದ್ದ ಫೋಟೋ ಫಿನಿಷ್ ಫಲಿತಾಂಶದಲ್ಲಿ ಗೆದ್ದಿದ್ದ ಸಿದ್ದರಾಮಯ್ಯ, ಬೇರೊಂದು ಜಿಲ್ಲೆಯತ್ತ ಗಮನ ಹರಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು.
ಮಳೆಗಾಲದ ಅಧಿವೇಶನ ಹಿನ್ನೆಲೆ: ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
ಈ ಬಗ್ಗೆ, ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಸಿದ್ದರಾಮಯ್ಯ, "ಸದ್ಯ ನಾನು ಬಾದಾಮಿ ಕ್ಷೇತ್ರದ ಶಾಸಕ"ಎನ್ನುವ ಹೇಳಿಕೆಯನ್ನು ನೀಡಿ, ಕ್ಷೇತ್ರ ಬದಲಾವಣೆಯ ಸುದ್ದಿಗೆ ಸ್ಪಷ್ಟವಾದ ಉತ್ತರವನ್ನು ನೀಡಲಿಲ್ಲ.
ಅಹಿಂದ ವರ್ಗದ ಮತ ಬ್ಯಾಂಕ್ ಅನ್ನು ಆಧರಿಸಿ, ಸಿದ್ದರಾಮಯ್ಯನವರನ್ನು ಚಾಮುಂಡೇಶ್ವರಿ ಅಥವಾ ಬಾದಾಮಿಯಿಂದ ಹೊರತಾದ ಕ್ಷೇತ್ರದಿಂದ ಕಣಕ್ಕಿಳಿಸಲು ಪ್ರಯತ್ನ ತೆರೆಮೆರೆಯಲ್ಲಿ ಆರಂಭವಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಯಾವ ಜಿಲ್ಲೆಯತ್ತ ಸಿದ್ದರಾಮಯ್ಯ ಚಿತ್ತ?
ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಸಿದ್ದರಾಮಯ್ಯ
ಬಾದಾಮಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಸಿದ್ದರಾಮಯ್ಯನವರಲ್ಲಿ ಮಾಧ್ಯಮದವರು ಕ್ಷೇತ್ರ ಬದಲಾವಣೆಯ ಬಗ್ಗೆ ಪ್ರಶ್ನೆಯನ್ನು ಎತ್ತಿದರು. ಆ ವೇಳೆ, "ಸದ್ಯ ನಾನು ಬಾದಾಮಿ ಕ್ಷೇತ್ರದ ಶಾಸಕ"ಎಂದು ಹೇಳಿದರು. ಆ ವೇಳೆ, ಮಾಜಿ ಶಾಸಕ ಚಿಮ್ಮನಕಟ್ಟಿ, ಸಿದ್ದರಾಮಯ್ಯನವರ ಜೊತೆಗಿದ್ದರು.
ಕೋಲಾರ ಜಿಲ್ಲಾ ಕಾಂಗ್ರೆಸ್
ಮುಂಬರುವ ಅಸೆಂಬ್ಲಿ ಚುನಾವಣೆಗೆ ಇನ್ನೂ ಸಾಕಷ್ಟು ಸಮಯಾವಕಾಶವಿದ್ದರೂ, ಟಿಕೆಟ್ ಗಾಗಿ ಅನೇಕರು ಈಗಾಗಲೇ ಪ್ರಯತ್ನಿಸಲು ಆರಂಭಿಸಿದ್ದಾರೆ. ಅದರಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್ ನಾಯಕರು ಕೂಡಾ. ಜಿಲ್ಲೆಯನ್ನು ಕಾಂಗ್ರೆಸ್ಸಿನ ಭದ್ರಕೋಟೆಯನ್ನಾಗಿಸುವುದು ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲುವಂತೆ ಮಾಡಲು, ಸಿದ್ದರಾಮಯ್ಯನವರನ್ನು ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಿಂದ ಕಣಕ್ಕಿಳಿಸುವ ಬಗ್ಗೆ ಪ್ರಯತ್ನ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ.
ಒಳಜಗಳವನ್ನೂ ತಪ್ಪಿಸಬಹುದಾಗಿದೆ ಎನ್ನುವ ಸುದ್ದಿ
ಕೋಲಾರ ಜಿಲ್ಲೆಯಲ್ಲಿ ಸಿದ್ದರಾಮಯ್ಯನವರು ಕಣಕ್ಕಿಳಿದರೆ, ಇದರಿಂದ ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪ್ರಭಾವ ಬೀರಬಹುದಾಗಿದೆ ಎನ್ನುವ ಲೆಕ್ಕಾಚಾರವನ್ನು ಕೋಲಾರ ಕಾಂಗ್ರೆಸ್ ಮುಖಂಡರು ಹೊಂದಿದ್ದಾರೆ. ಜೊತೆಗೆ, ಒಳಜಗಳವನ್ನೂ ತಪ್ಪಿಸಬಹುದಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
Recommended Video
ಅಹಿಂದ ಮತಗಳು ನಿರ್ಣಾಯಕ ಪಾತ್ರ
ಇದಕ್ಕಿಂತ ಪ್ರಮುಖವಾಗಿ, ಕೋಲಾರದಲ್ಲಿ ಅಹಿಂದ ಮತಗಳು ನಿರ್ಣಾಯಕ ಪಾತ್ರವನ್ನು ವಹಿಸುವುದರಿಂದ, ಸಿದ್ದರಾಮಯ್ಯನವರು ಸ್ಪರ್ಧಿಸಿದರೆ, ಆ ವರ್ಗದ ಮತ ಸೆಳೆಯಲು ಸುಲಭವಾಗಬಹುದು ಎನ್ನುವ ಲೆಕ್ಕಾಚಾರವನ್ನೂ ಕಾಂಗ್ರೆಸ್ ಮುಖಂಡರು ಹೊಂದಿದ್ದಾರೆ. ಸದ್ಯಕ್ಕಂತೂ ಕ್ಷೇತ್ರ ಬದಲಾವಣೆಯ ಸುದ್ದಿ ವೇಗವನ್ನು ಪಡೆಯದಿದ್ದರೂ, ಸಿದ್ದರಾಮಯ್ಯ ಈ ಬಗ್ಗೆ ಸ್ಪಷ್ಟವಾದ ಉತ್ತರವನ್ನು ನೀಡದೇ ಇರುವುದು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.