ದಲಿತರಿಗೆ ಪ್ರತ್ಯೇಕ ಸ್ಮಶಾನ: ಏನಿದು ಸರಕಾರದ ಹೊಸ 'ನಾನ್ ಸೆನ್ಸ್' ಸುತ್ತೋಲೆ?
ಉಡುಪಿ, ಫೆ 27: 'ಕುಲಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ' ಎನ್ನುವ ಕನಕದಾಸರ ಕೀರ್ತನೆಯ ಅರ್ಥವನ್ನು ಮೊದಲು ಸರಕಾರ ಮತ್ತು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕಿದೆ.
ಸಮಾಜ ಕಲ್ಯಾಣ ಇಲಾಖೆ, ತಾನು ಹೊರಡಿಸಿರುವ ಸುತ್ತೋಲೆಯನ್ನು ವಾಪಸ್ ಪಡೆಯದೇ ಇದ್ದಲ್ಲಿ ಈ ವಿಚಾರ ಗಂಭೀರ ಸ್ವರೂಪ ಪಡೆಯುವ ಸಾಧ್ಯತೆಯಿಲ್ಲದಿಲ್ಲ. ಇತ್ತೀಚೆಗೆ, ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ನಡೆದ ಘಟನೆಯ ತರುವಾಯ ಇಂತಹ ಸುತ್ತೋಲೆ ಇಲಾಖೆಯಿಂದ ಬಂದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.
ಬುದ್ಧಿವಂತರ ಜಿಲ್ಲೆಯಲ್ಲೇ ಅಸ್ಪೃಶ್ಯತೆ! ಪಂಚಾಯತಿ ಮುಂದೆ ಚಟ್ಟ ಕಟ್ಟಿದ ದಲಿತರು
ಸಮಾಜ ಇಲಾಖೆಯ ಸಹಾಯಕ ನಿರ್ದೇಶಕರಿಂದ, ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ಹೀಗೊಂದು ಸುತ್ತೋಲೆ ಬಂದಿದೆ. ಅದರಲ್ಲಿ, ಪ್ರತೀ ಗಾಮಗಳಲ್ಲಿ ಪರಿಶಿಷ್ಟ ಜನಾಂಗದವರಿಗೆ ಪ್ರತ್ಯೇಕ ಸ್ಮಶಾನ ಇಲ್ಲದೇ ಇದ್ದ ಪಕ್ಷದಲ್ಲಿ, ಗ್ರಾಮವಾರು ಸ್ಮಶಾನಕ್ಕೆ ಜಾಗ ಮಂಜೂರು ಮಾಡುವಂತೆ ಪ್ರಸ್ತಾವನೆ ಕಳುಹಿಸಿಕೊಡುವಂತೆ ಸೂಚಿಸಲಾಗಿದೆ.
ಸ್ಮಶಾನವನ್ನು ಎಲ್ಲಾ ವರ್ಗದವರು ಬಳಸಿಕೊಳ್ಳುತ್ತಿರುವ ಈ ಸಮಯದಲ್ಲಿ, ಪ್ರತ್ಯೇಕ ಸ್ಮಶಾನ ಮಂಜೂರು ಮಾಡಲು ಸರಕಾರ ಮುಂದಾಗಿದೆಯೇ ಎನ್ನುವ ಗಂಭೀರ ಪ್ರಶ್ನೆ ಈಗ ಎದುರಾಗಿದೆ.
ಉಡುಪಿಯ ಉಚ್ಚಿಲ ಬಡಾ ಗ್ರಾ.ಪಂ ವ್ಯಾಪ್ತಿಯಲ್ಲಿ ಸಾರ್ವಜನಿಕ ಹಿಂದೂ ರುದ್ರಭೂಮಿ ಇದ್ದರೂ ಅದರಲ್ಲಿ ದಲಿತರಿಗೆ ಶವ ಸಂಸ್ಕಾರ ಮಾಡಲು ಒಂದು ಸಮುದಾಯ ಬಿಡುತ್ತಿಲ್ಲ. ಯಾರಾದರೂ ಸಾವನ್ನಪ್ಪಿದರೆ ಶವವನ್ನು ಪಕ್ಕದ ಗ್ರಾಮಕ್ಕೆ ಒಯ್ದು ಅಂತ್ಯಸಂಸ್ಕಾರ ನಡೆಸಬೇಕಿದೆ.
ಕಳೆದ ಜನವರಿ 28ರಂದು, ಉಚ್ಚಿಲ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು. ಯಥಾಪ್ರಕಾರ ಊರಲ್ಲಿರುವ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡಲು ಅನುಮತಿ ಸಿಕ್ಕಿರಲಿಲ್ಲ. ಸ್ಮಶಾನ ಬಂದ್ ಆಗಿದ್ದ ಕಾರಣ ದಲಿತರ ಸಹನೆ ಕಟ್ಟೆ ಒಡೆದು, ಸ್ಮಶಾನವಿಲ್ಲದಿರುವುದನ್ನು ಪ್ರತಿಭಟಿಸಿ, ದಸಂಸ, ಗ್ರಾಪಂ ಕಚೇರಿ ಎದುರು ಚಟ್ಟ ನಿರ್ಮಿಸಿ ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.