ಯಡಿಯೂರಪ್ಪ ಎಡವಿ ಬೀಳುವ ಮುನ್ನ ಹೀಗೊಂದು ಕಿವಿಮಾತು...
Recommended Video
ಕರ್ನಾಟಕದ ಇವತ್ತಿನ ರಾಜಕಾರಣದ ಜನಪ್ರಿಯ ನಾಯಕರಲ್ಲಿ ಹಾಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೂಡ ಒಬ್ಬರು; ಈ ಬಗ್ಗೆ ಸಂಶಯ ಬೇಕಿಲ್ಲ. ಇವತ್ತಿಗೆ ಮಾತ್ರ ಅಲ್ಲ, ಬಹುಶಃ ಭವಿಷ್ಯದಲ್ಲಿಯೂ ನೆನಪಿನಲ್ಲಿ ಉಳಿಯುವ ನಾಯಕ.
ಆದರೆ ಇವರ ಇತ್ತೀಚಿನ ನಡವಳಿಕೆ ರಾಜಕಾರಣದ ನಾಯಕತ್ವದ ಬಗೆಗೆ ಖುದ್ದು ಅವರಿಗೇ ತಳಮಳ ಸೃಷ್ಟಿಸಿದೆಯಾ? ಎಂಬ ಅನುಮಾನ ಹುಟ್ಟಿಸಿದೆ. ಇತ್ತೀಚೆಗೆ ಚಿಕ್ಕಮಗಳೂರು ಜಿಲ್ಲೆಯ ಗೌರಿಗದ್ದೆಯಲ್ಲಿರುವ ಯುವ ಅವಧೂತ ಸ್ವಯಂ ಘೋಷಿತ ಗುರೂಜಿ ವಿನಯ್ ಭೇಟಿ ಇಂತಹದೊಂದು ಪ್ರಶ್ನೆಗೆ ಕಾರಣ.
ರಾಜ್ಯ ರಾಜಕಾರಣದಲ್ಲಿ ಹಿಂದಿನಿಂದಲೂ ಒಂದು ಮಾತಿದೆ. "ಯಡಿಯೂರಪ್ಪ ಅಸೆಂಬ್ಲಿಯಲ್ಲಿ ಘರ್ಜಿಸುತ್ತಿರಬೇಕಾದರೆ, ವಿರೋಧಿಗಳ ಎದೆಯಲ್ಲಿ ಅವಲಕ್ಕಿ ಕುಟ್ಟುತ್ತಿತ್ತು" ಎಂದು. ಬಿಜೆಪಿ ಮತ್ತು ಬಿಎಸ್ವೈ ಬೆಂಬಲಿಗರು ಇದೇ ಮಾತನ್ನು ಹಲವು ವರ್ಷಗಳ ಕಾಲ ಬಳಸಿಕೊಂಡು ಬಂದಿದ್ದರು.
ಸಿಎಂ ತಬ್ಬಿಕೊಂಡು "ಎಚ್ಚರ" ಎಂದು ಪಿಸುಗುಟ್ಟಿದ ವಿನಯ್ ಗುರೂಜಿ, ಏನಿದರ ಒಳ ಅರ್ಥ?
ರೈತ ಪರ ಹೋರಾಟಗಳಿಂದ ಆರಂಭವಾಗಿ, ಬಿಜೆಪಿಯನ್ನು ತಳಮಟ್ಟದಿಂದ ಕಟ್ಟಿಕೊಂಡು ಬಂದು ಕೊನೆಗೆ ಅಧಿಕಾರವನ್ನು ಪಡೆದುಕೊಂಡವರು ಬಿಎಸ್ವೈ. ಲಿಂಗಾಯತ ಸಮುದಾಯದಲ್ಲಿ ನಾಯಕತ್ವದ ಹುರುಪನ್ನು ಸೃಷ್ಟಿಸಿದವರು. ಇವತ್ತಿಗೂ ಬಿಜೆಪಿಯ ಮಾಸ್ ಲೀಡರ್ಗಳ ಪೈಕಿ ಅಪರೂಪದ ಹೆಸರು ಯಡಿಯೂರಪ್ಪನವರದ್ದು.
ಹಲವು ಗುಣಗಳನ್ನು ಹೊಂದಿರುವ ಯಡಿಯೂರಪ್ಪ
ಇಂತಹ ಹಲವು ಗುಣಗಳನ್ನು ಹೊಂದಿರುವ ಯಡಿಯೂರಪ್ಪ ತಮ್ಮ ಬಗ್ಗೆಯೇ ನಂಬಿಕೆಯನ್ನು ಯಾಕೆ ಕಳೆದುಕೊಂಡರು? ಅಧಿಕಾರವನ್ನು ಉಳಿಸಿಕೊಳ್ಳಲು ಆಧ್ಯಾತ್ಮಿಕ ಸಲಹೆಗಳಿಗೆ ಮೊರೆ ಹೋಗುವ ಸನ್ನಿವೇಶ ಅವರಿಗೆ ಯಾಕೆ ಸೃಷ್ಟಿಯಾಗಿದೆ? ಇದು ಇವತ್ತು ಅವರು ಕೇಳಿಕೊಳ್ಳಬೇಕಿರುವ ಪ್ರಶ್ನೆ.
ಸಿಎಂ ಕಚೇರಿಯಿಂದ ಹೊರಬಿದ್ದ ಏಕಾಏಕಿ ಆದೇಶ: ಏನಿದರ ಹಿಂದಿನ ಮರ್ಮ!
ಗೌರಿಗದ್ದೆ ಆಶ್ರಮದಲ್ಲಿ ವಿಶೇಷ ಹೋಮ ಹವನ
ಕಳೆದ ವಾರ ಬಿಎಸ್ವೈ ಗೌರಿಗದ್ದೆ ಆಶ್ರಮದಲ್ಲಿ ತಮ್ಮ ಕುರ್ಚಿಗೆ ಯಾವುದೇ ಕಂಟಕ ಎದುರಾಗದಿರಲಿ ಎಂದು ವಿಶೇಷ ಹೋಮ ಹವನಗಳನ್ನು ನಡೆಸಿದರು. ಸ್ವರ್ಣಪೀಠಿಕೇಶ್ವರಿ ಆಶ್ರಮದಲ್ಲಿ ಶತರುದ್ರಯಾಗವನ್ನೂ ನಡೆಸಿದರು. ಸುಮಾರು ಆರು ಗಂಟೆಗಳ ನಂತರ ಹೋಮ ಹವನಗಳೆಲ್ಲವೂ ಮುಗಿದ ಮೇಲೆ ವಿನಯ್ ಗುರೂಜಿ ಸಿಎಂ ಅವರನ್ನು ಬೀಳ್ಕೊಡುವಾಗ ಕಾರಿನ ಬಳಿ ಅವರನ್ನು ತಬ್ಬಿಕೊಂಡು ಮುತ್ತಿಟ್ಟು "ಎಚ್ಚರದಿಂದ ಹೆಜ್ಜೆ ಇಡಿ," ಎಂದು ಹೇಳಿದ್ದಾರಂತೆ; ಹಾಗಂತ ವರದಿಗಳಾದವು.
ಬಿಜೆಪಿ ವರಿಷ್ಠರ ಪ್ರಭಾವ ರಾಜ್ಯ ಘಟಕದಲ್ಲಿ ಜಾಸ್ತಿಯಾಗುತ್ತಿದೆ.
ದಿನದಿಂದ ದಿನಕ್ಕೆ, ಬಿಜೆಪಿ ವರಿಷ್ಠರ ಪ್ರಭಾವ ರಾಜ್ಯ ಘಟಕದಲ್ಲಿ ಜಾಸ್ತಿಯಾಗುತ್ತಿದೆ. ಏನೇ ನಿರ್ಧಾರ ತೆಗೆದುಕೊಳ್ಳಬೇಕಾದರೂ, ಅಮಿತ್ ಶಾ ಅವರತ್ತ ಮುಖ ಮಾಡಬೇಕಾಗಿದೆ. ವರ್ಗಾವಣೆ 'ದಂಧೆ'ಯಂತೆ ನಡೆಯುತ್ತಿದೆ ಎನ್ನುವ ಕುಮಾರಸ್ವಾಮಿ ಆರೋಪಕ್ಕೆ ಪೂರಕವಾಗಿ, ಬಿಎಸ್ವೈ ವಿರುದ್ದ ದೆಹಲಿಗೆ ದೂರು ಹೋಗಿದೆ ಎನ್ನುವ ಸುದ್ದಿಯಿದೆ. ಅಮಿತ್ ಶಾ, ಕರ್ನಾಟಕ ಬಿಜೆಪಿಯ ಚಟುವಟಿಕೆಗಳ ಮೇಲೆ ತಮ್ಮ ಪ್ರಭಾವ ಬೀರಲು ಸಂಪೂರ್ಣ ಯಶಸ್ವಿಯಾಗಿದ್ದಾರೆ.
ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವಲ್ಲಿಂದ ಹಿಡಿದು
ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವಲ್ಲಿಂದ ಹಿಡಿದು, ಸಂಪುಟ ರಚನೆಯವರೆಗೆ ಮಹೂರ್ತ ಫಿಕ್ಸ್ ಮಾಡಿದವರು ಅಮಿತ್ ಶಾ. ಹೀಗಾಗಿ, ಯಡಿಯೂರಪ್ಪನವರಿಗೆ ಅಭದ್ರತೆ ಕಾಡುತ್ತಿದ್ದರೆ ಅದಕ್ಕೆ ಸಕಾರಣಗಳು ಮೇಲ್ನೋಟಕ್ಕೆ ಕಾಣುತ್ತಿವೆ. ಹಾಗಂತ ಅದಕ್ಕೆ ಪರಿಹಾರ ಸಿಗುವ ಜಾಗ ಯಾವುದು? ಆಶ್ರಮಗಳಾ? ಇದು ಕೇಳಿಕೊಳ್ಳಬೇಕಿರುವ ಪ್ರಶ್ನೆ.
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ಎಡಬಿಡದೇ ದೇವಸ್ಥಾನಗಳನ್ನು ಸುತ್ತಿದರು
ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗಲೂ ಎಡಬಿಡದೇ ದೇವಸ್ಥಾನಗಳನ್ನು ಸುತ್ತಿದರು. ಗ್ರಹಗತಿಗಳನ್ನು ಅಧಾರವಾಗಿಟ್ಟುಕೊಂಡು ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನವನ್ನು ಅವರ ಕುಟುಂಬ ಸದಸ್ಯರು ಮಾಡಿದರು. ಆದರೆ ಅಂತಿಮವಾಗಿ ಅವರು ಖುರ್ಚಿಯಿಂದ ಇಳಿಯಬೇಕಾಯಿತು. ಅವರ ಸ್ಥಾನಕ್ಕೆ ಬಂದ ಯಡಿಯೂರಪ್ಪ ಕೂಡ ಅರಾಮದಾಯಕ ಎನ್ನಿಸುವ ವಾತಾವರಣವನ್ನು ಸೃಷ್ಟಿಸಿಕೊಳ್ಳಲು ಈವರೆಗೂ ಸಾಧ್ಯವಾಗಿಲ್ಲ.
ಯಡಿಯೂರಪ್ಪ ಎಡವಿ ಬೀಳುವ ಮುನ್ನ ಹೀಗೊಂದು ಕಿವಿಮಾತು
ಯಡಿಯೂರಪ್ಪ ಅತೀತ ಶಕ್ತಿಯ ಮೂಲಕ ಪ್ರಜಾಪ್ರಭುತ್ವದ ಅಧಿಕಾರ ಸ್ಥಾನವನ್ನು ಉಳಿಸಿಕೊಳ್ಳಲು ನೋಡಿದರೆ? ಇದು ಜನ ನೀಡಿದ ತೀರ್ಪಿನ ಅಪಚಾರ ಮಾತ್ರ ಅಲ್ಲ, ಒಬ್ಬ ನಾಯಕ ತನ್ನ ಬಗ್ಗೆಯೇ ನಂಬಿಕೆ ಕಳೆದುಕೊಂಡಿದ್ದರ ಸೂಚಕ. ಸುತ್ತ ಮುತ್ತ ಇರುವವರು ಬೀಳಲಿ ಎಂದು ಬಯಸುತ್ತಿರುವ ಹೊತ್ತಿನಲ್ಲಿ ಬಿಎಸ್ವೈ ಇಂತಹ ವಿಚಾರಗಳಿಗ ಕಡೆಗೆ ಸೂಕ್ಷ್ಮತೆ ಬೆಳೆಸಿಕೊಳ್ಳುವುದು ಸೂಕ್ತ.