ಕಾಂಗ್ರೆಸ್ಸಿನಿಂದ ದೂರದೂರವಾಗುತ್ತಿರುವ ಗೌಡ್ರು, ಕುಮಾರಣ್ಣ: ಬಿಜೆಪಿಯತ್ತ ಸಾಫ್ಟ್ ಕಾರ್ನರ್?
ಕೆಲವೇ ತಿಂಗಳ ಹಿಂದಿನ ವಿದ್ಯಮಾನವನ್ನೊಮ್ಮೆ ಅವಲೋಕಿಸೋಣ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸೋತಿದ್ದ ದೇವೇಗೌಡ್ರು, ರಾಜ್ಯಸಭೆಯ ಮೂಲಕ, ಕೇಂದ್ರ ರಾಜಕಾರಣಕ್ಕೆ ಎಂಟ್ರಿ ಬಯಸಿದ್ದರು. ಆದರೆ, ಅದು ಅಷ್ಟು ನಿರಾಯಾಸವೇನೂ ಆಗಿರಲಿಲ್ಲ.
Recommended Video
ಬಿಜೆಪಿಯಿಂದ ಇಬ್ಬರು, ಕಾಂಗ್ರೆಸ್ಸಿನಿಂದ ಒಬ್ಬರು, ಯಾವುದೇ ರಿಸ್ಕ್ ಇಲ್ಲದೇ ಗೆಲ್ಲಬಹುದಾಗಿತ್ತು. ಆದರೆ, ಗೌಡ್ರ ಆಯ್ಕೆಯ ವಿಚಾರದಲ್ಲಿ ಪರಿಸ್ಥಿತಿ ಹಾಗಿರಲಿಲ್ಲ. ಬಿಜೆಪಿ ಮನಸ್ಸು ಮಾಡಿದ್ದರೆ, ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದಾಗಿತ್ತು. ಹೇಗೂ, ಕ್ರಾಸ್ ವೋಟಿಂಗ್ ಮಾಡಿಸಿರುವ ಅನುಭವ ಬಿಜೆಪಿಗೆ ಇರುವುದರಿಂದ ಒಂದು ಕೈ ನೋಡಿಕೊಳ್ಳಬಹುದಾಗಿತ್ತು.
ಕೋವಿಡ್ 19 ಪರಿಕರ ಖರೀದಿ ಅಕ್ರಮ: ಬಿಜೆಪಿ, ಕಾಂಗ್ರೆಸ್ಸಿಗೆ ಸರಿಯಾಗಿ ಕಿವಿಹಿಂಡಿದ ಕುಮಾರಸ್ವಾಮಿ
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಜ್ಯಸಭೆಗೆ ಬನ್ನಿ ಎಂದು ದೇವೇಗೌಡ್ರಿಗೆ ಆಹ್ವಾನಿಸಿದ್ದರು. ಗೌಡ್ರು, ರಾಜ್ಯಸಭೆಗೆ ಆಯ್ಕೆಯಾಗಲು ಕಾಂಗ್ರೆಸ್ ಪಾತ್ರ ದೊಡ್ಡದು. ಜೊತೆಗೆ, ಬಿಜೆಪಿ ಕೂಡಾ, ದೇವೇಗೌಡ್ರ ಹಿರಿತನ/ಜಾತಿ ಲೆಕ್ಕಾಚಾರದಿಂದಾಗಿ ಮೂರನೇ ಅಭ್ಯರ್ಥಿಯ ಕಣಕ್ಕಿಳಿಸುವ ಗೋಜಿಗೆ ಹೋಗಲಿಲ್ಲ.
ಇದೆಲ್ಲಾ ಒಂದು ಕಡೆಯಾದರೆ, ಇತ್ತೀಚಿನ ಹಲವಾರು ವಿದ್ಯಮಾನಗಳನ್ನು ಅವಲೋಕಿಸುತ್ತಿದ್ದರೆ, ಒಂದಂತೂ ದಿಟವಾಗುತ್ತಿದೆ. ಕಾಂಗ್ರೆಸ್ಸಿನವರು, ಜೆಡಿಎಸ್ ಜೊತೆಗಿನ ಗತಸಖ್ಯದ ಬಗ್ಗೆ ಬಹಿರಂಗವಾಗಿಯೇ ಹೇಳಿಕೆಯನ್ನು ನೀಡುತ್ತಿದ್ದಾರೆ.
ಯಕಶ್ಚಿತ್ 'ಕುಮಾರಸ್ವಾಮಿ'ಯನ್ನು 'ಕುಮಾರಣ್ಣ'ನನ್ನಾಗಿಸಿದ್ದು ನಿಮ್ಮ ಪ್ರೀತಿ
ಜೆಡಿಎಸ್, ಕಾಂಗ್ರೆಸ್ಸಿನಿಂದ, ದೂರವಾಗಲು ಬಯಸುತ್ತಿದೆ
ಆದರೆ, ದೇವೇಗೌಡ್ರು ಈ ಬಗ್ಗೆ ಬಹಿರಂಗವಾಗಿ ಹೇಳಿಕೆಯನ್ನು ನೀಡುತ್ತಿಲ್ಲದಿದ್ದರೂ, ಕುಮಾರಸ್ವಾಮಿಯವರ ಇತ್ತೀಚಿನ ಹೇಳಿಕೆಗಳನ್ನು ಅಳೆಯುವುದಾದರೆ, ಸ್ಪಷ್ಟವಾಗಿ, ಜೆಡಿಎಸ್, ಕಾಂಗ್ರೆಸ್ಸಿನಿಂದ, ಜಾತ್ಯಾತೀತವಾಗಿ ದೂರವಾಗಲು ಬಯಸುತ್ತಿದೆ, ಆಗುತ್ತಿದೆ ಕೂಡಾ..
ನಿಖಿಲ್ ಕುಮಾರಸ್ವಾಮಿ ಮದುವೆ
ನಿಖಿಲ್ ಕುಮಾರಸ್ವಾಮಿ ಮದುವೆಯ ವಿಚಾರ. ಬಿಜೆಪಿಯವರೇ, ಲಾಕ್ ಡೌನ್ ನಿಯಮ, ಸಾಮಾಜಿಕ ಅಂತರವನ್ನು ಮುರಿಯಲಾಗಿದೆ ಎಂದು ಆರೋಪಿಸಿದ್ದರೂ, ಸಿಎಂ ಯಡಿಯೂರಪ್ಪ ಏನೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. "ಗೌಡ್ರದ್ದು ದೊಡ್ಡ ಕುಟುಂಬ, ಲಾಕ್ ಡೌನ್ ಇರುವುದರಿಂದ, ತಮ್ಮ ಲಿಮಿಟ್ ನಲ್ಲಿ ಮದುವೆ ಮುಗಿಸಿದ್ದಾರೆ. ಅವರಿಗೆ ಅಭಿನಂದನೆಗಳು"ಎಂದು ಬಿಎಸ್ವೈ ಹೇಳಿದ್ದರು. ಇದಕ್ಕೆ, ಕುಮಾರಸ್ವಾಮಿ ಧನ್ಯವಾದವನ್ನೂ ಸಲ್ಲಿಸಿದ್ದರು.
ಕಂದಾಯ ಸಚಿವ ಅಶೋಕ್
ಕೋವಿಡ್ ಉಪಕರಣ ಖರೀದಿ ವಿಚಾರದಲ್ಲಿ ಕಂದಾಯ ಸಚಿವ ಅಶೋಕ್ ಮಾತನಾಡುತ್ತಾ, "ಕಾಂಗ್ರೆಸ್ಸಿನವರಿಗೆ ಸಮಯ ಸಂದರ್ಭ ಅನ್ನುವುದು ಇಲ್ಲ. ಎಲ್ಲಾ ವೇಳೆಯೂ ಅವರಿಗೆ ರಾಜಕೀಯವೇ ಮುಖ್ಯ, ಇಂತಹ ಸಮಯದಲ್ಲಿ, ಜೆಡಿಎಸ್ ನವರನ್ನು ನೋಡಿ ಕಲಿಯಲಿ"ಎಂದು ಹೇಳಿದ್ದರು.
ಡಿಕೆಶಿ ಪದಗ್ರಹಣ ಸಮಾರಂಭ
ಇನ್ನು, ಡಿಕೆಶಿ ಪದಗ್ರಹಣ ಸಮಾರಂಭದಲ್ಲಿ ದಿನೇಶ್ ಗುಂಡೂರಾವ್, ಸಿದ್ದರಾಮಯ್ಯ, ಬಹಿರಂಗವಾಗಿಯೇ, ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ನಮಗೆ ಸೋಲಾಯಿತು ಎಂದು ಹೇಳಿದ್ದರು. ಅದಕ್ಕೆ, "ಜೆಡಿಎಸ್ ಮನೆ ಬಾಗಿಲಿಗೆ ಬಂದವರು ನೀವೇ, ನಾವಲ್ಲ" ಎನ್ನುವ ಪ್ರತ್ಯುತ್ತರವೂ ರೇವಣ್ಣ ಕಡೆಯಿಂದ ಬಂದಿತ್ತು.
ಈ ಇಳಿವಯಸ್ಸಿನಲ್ಲೂ, ಪರಿಶ್ರಮದಿಂದ ಬಿಎಸ್ವೈ ದುಡಿಯುತ್ತಿದ್ದಾರೆ
ಯಡಿಯೂರಪ್ಪನವರ ಸರಕಾರದ ಬಗ್ಗೆ ನಿಮಗೆ ಸಾಫ್ಟ್ ಕಾರ್ನರ್ ಇದೆಯಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ, "ಈ ಇಳಿವಯಸ್ಸಿನಲ್ಲೂ, ಪರಿಶ್ರಮದಿಂದ ಬಿಎಸ್ವೈ ದುಡಿಯುತ್ತಿದ್ದಾರೆ. ಈ ಬಗ್ಗೆ, ನನ್ನ ಮನಸ್ಸಿನಲ್ಲಿ ಎಲ್ಲೋ ಸಾಫ್ಟ್ ಕಾರ್ನರ್ ಇರುವುದು ಹೌದು" ಎಂದು ಕುಮಾರಸ್ವಾಮಿ ಒಪ್ಪಿಕೊಂಡಿದ್ದರು.
ಕಾಂಗ್ರೆಸ್ಸಿನ ಒಂದು ಗುಂಪು ಸರಕಾರ ಬೀಳುವುದನ್ನೇ ಕಾಯುತ್ತಿತ್ತು
"ನಾನು ಅಧಿಕಾರದಲ್ಲಿದ್ದಾಗ, ಪಡಬಾರದ ನೋವನ್ನು ಅನುಭವಿಸಿದೆ. ಕಾಂಗ್ರೆಸ್ಸಿನ ಒಂದು ಗುಂಪು (ಪರೋಕ್ಷವಾಗಿ ಸಿದ್ದರಾಮಯ್ಯ) ಸರಕಾರ ಬೀಳುವುದನ್ನೇ ಕಾಯುತ್ತಿತ್ತು. ಸಮ್ಮಿಶ್ರ ಸರಕಾರ ಬೀಳಲು ಬಿಜೆಪಿ ಹೇಗೆ ಕಾರಣವೋ, ಕಾಂಗ್ರೆಸ್ ಕೂಡಾ"ಎಂದು ಕುಮಾರಸ್ವಾಮಿ ಹೇಳಿದ್ದರು. ಇದೆಲ್ಲಾ, ಕೆಲವೊಂದು ಸ್ಯಾಂಪಲ್ ಗಳು ಅಷ್ಟೇ.., ಈ ರೀತಿಯ ಕಾಂಗ್ರೆಸ್ - ಜೆಡಿಎಸ್ ದೂರವಾಗಬಹುದು ಎನ್ನುವ ಮತ್ತು ಜೆಡಿಎಸ್ , ಬಿಜೆಪಿ ಜೊತೆ ಸಾಫ್ಟ್ ಕಾರ್ನರ್ ಹೊಂದಿದೆಯೇ ಎನ್ನುವ ಶಂಕೆ ಮೂಡುವ ವಿದ್ಯಮಾನಗಳು, ರಾಜ್ಯ ರಾಜಕೀಯದಲ್ಲಿ ಸದ್ಯ ನಡೆಯುತ್ತಿದೆ.