ದೊಡ್ಡಾಟದ ಮೂಲಕ ದೇವೇಗೌಡರಿಂದ ಸಿದ್ದರಾಮಯ್ಯಗೆ ಚೆಕ್ ಮೇಟ್?
ಕರ್ನಾಟಕ ರಾಜಕಾರಣದಲ್ಲಿ ಇಷ್ಟೆಲ್ಲ ದೊಡ್ಡ ಮಟ್ಟದಲ್ಲಿ ಬೆಳವಣಿಗೆಯಾದರೂ ಕುಮಾರಸ್ವಾಮಿ ಈ ತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಶನಿವಾರ ನಡೆದ ಈ ದಿಢೀರ್ ಬೆಳವಣಿಗೆ ಹಿಂದೆ ಜೆಡಿಎಸ್ ವರಿಷ್ಠರಾದ ದೇವೇಗೌಡರು ಇದ್ದಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಸ್ವತಃ ತಮ್ಮ ಮಗನೇ ಮುಖ್ಯಮಂತ್ರಿ ಆಗಿರುವ ಮೈತ್ರಿ ಸರಕಾರ ಕೆಡವಲು ಅವರು ಯಾಕೆ ಬಯಸುತ್ತಾರೆ ಎಂಬ ಪ್ರಶ್ನೆ ಮೂಡುತ್ತದೆ.
ಸದ್ಯಕ್ಕೆ ಹರಿದಾಡುತ್ತಿರುವ ಮತ್ತೊಂದು ವದಂತಿ ಪ್ರಕಾರ, ರಾಮಲಿಂಗಾ ರೆಡ್ಡಿ ಆಗಲೀ ವಿಶ್ವನಾಥ್ ಆಗಲೀ ದೇವೇಗೌಡರಿಗೆ ಆಪ್ತರು. ಈಚೆಗೆ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದಿದ್ದರು. ಈ ಮೈತ್ರಿ ಸರಕಾರವನ್ನು ಸಿದ್ದು ನೆಮ್ಮದಿಯಾಗಿ ಇರಲು ಬಿಡಲ್ಲ ಎಂಬುದು ಖಾತ್ರಿ ಆದ ಮೇಲೆ ದೇವೇಗೌಡರು ಬೃಹನ್ನಾಟಕದ ಸ್ಕ್ರಿಪ್ಟ್ ರೂಪಿಸಿದರು ಎನ್ನಲಾಗುತ್ತಿದೆ.
I am sorry, ಐ ಆಮ್ ಹೆಲ್ಪ್ ಲೆಸ್: ಹೈಕಮಾಂಡಿಗೆ ಸಿದ್ದರಾಮಯ್ಯ?
ಅದಕ್ಕೆ ತಕ್ಕಂತೆ ಕಾಂಗ್ರೆಸ್ ನ ಅಸಮಾಧಾನಿತ ನಾಯಕರನ್ನು ಸಂಪರ್ಕಿಸಲು, ಮಾತುಕತೆಗೆ ಡಿ.ಕೆ.ಶಿವಕುಮಾರ್ ಮಾತ್ರ ಪ್ರಯತ್ನಿಸುತ್ತಿದ್ದಾರೆ ವಿನಾ ಸಿದ್ದರಾಮಯ್ಯ ಎಲ್ಲೂ ಕಾಣಿಸಿಕೊಂಡಿಲ್ಲ. ಇನ್ನು ರಾಮಲಿಂಗಾ ರೆಡ್ಡಿ, ವಿಶ್ವನಾಥ್ ರಂಥವರು ಬಿಜೆಪಿಗೆ ಹೋಗುವಂಥವರಲ್ಲ. ಈ ಸರಕಾರ ಬೀಳುವ ಸ್ಥಿತಿ ಇದೆ ಎಂದು ಹೈಕಮಾಂಡ್ ಚೌಕಾಶಿಗೆ ಬಂದರೆ, ಸಿದ್ದರಾಮಯ್ಯ ಅವರನ್ನು ಡಮ್ಮಿ ಮಾಡಬೇಕು ಎಂದು ಹೇಳಬಹುದು ಎಂಬುದು ಲೆಕ್ಕಾಚಾರ.
ಆದರೆ, ಈ ಲೆಕ್ಕಾಚಾರ ಕೂಡ ಪೂರ್ಣವಾಗಿ ನಂಬಲು ಸಾಧ್ಯವಾಗುತ್ತಿಲ್ಲ ಏಕೆಂದರೆ, ಸಿದ್ದರಾಮಯ್ಯ ಅವರ ಆಪ್ತರು ಕೂಡ ಅತೃಪ್ತರ ಗುಂಪಿನಲ್ಲಿ ಇದ್ದಾರೆ. ಅದೇ ವೇಳೆ ಕುಮಾರಸ್ವಾಮಿಗೆ ಆಪ್ತರಾದ ಮುನಿರತ್ನ ಕಾಣಿಸಿಕೊಳ್ಳುತ್ತಿರುವುದು ಈಗಿನ ಬೆಳವಣಿಗೆಗಳು ದೇವೇಗೌಡರ ಆಟ ಎಂಬ ಅನುಮಾನ ಹೆಚ್ಚಾಗಲು ಕಾರಣವಾಗಿದೆ.