ನಿಮ್ಮದೆಲ್ಲಾ ಗೊತ್ತಿದೆ: ಸಚಿವ ಜಿಟಿಡಿಗೆ ಅಸೆಂಬ್ಲಿಯಲ್ಲೇ ಎಚ್ಡಿಕೆ ಕ್ಲಾಸ್?
ಬೆಂಗಳೂರು, ಜುಲೈ 15: ಒಂದು ಕಡೆ ಬೆಳಗ್ಗೆಯಿಂದಲೇ 'ಕಮ್ ಬ್ಯಾಕ್ ಜಿಟಿಡಿ' ಪೋಸ್ಟ್ ವೈರಲ್ ಆಗಿದ್ದು, ಇನ್ನೊಂದೆಡೆ, ಸದನ ಆರಂಭವಾಗುವುದಕ್ಕೂ ಮೊದಲು ಸಚಿವ ಜಿ ಟಿ ದೇವೇಗೌಡ, ಬಿಜೆಪಿ ಮುಖಂಡರನ್ನು ಕೈಕುಲುಕಿ ಮಾತನಾಡಿರುವುದು ಮುಖ್ಯಮಂತ್ರಿಗಳ ಸಿಟ್ಟಿಗೆ ಕಾರಣವಾಗಿದೆಯಾ?
ಸ್ಪೀಕರ್ ರಮೇಶ್ ಕುಮಾರ್, ಸದನವನ್ನು ಗುರುವಾರಕ್ಕೆ (ಜುಲೈ 18) ಮುಂದೂಡಿದ ನಂತರ, ಮುಖ್ಯಮಂತ್ರಿ ಕುಮಾರಸ್ವಾಮಿ ಮೈತ್ರಿ ಸರಕಾರದ ಶಾಸಕರ ಬಳಿ ಅಸೆಂಬ್ಲಿಯಲ್ಲಿ ಮಾತುಕತೆ ನಡೆಸುತ್ತಿದ್ದರು.
ಎಚ್ಡಿಕೆ ವಿಶ್ವಾಸಮತ ಯಾಚನೆಗೂ ಮುನ್ನ ವಿಧಾನಸಭೆ ಸಂಖ್ಯಾಬಲವೇನು?
ಆಗ, ಮೊದಲು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಮೇಲೆ ಸಿಟ್ಟಾದ ಮುಖ್ಯಮಂತ್ರಿಗಳು ಜಿ ಟಿ ದೇವೇಗೌಡರ ವಿರುದ್ದವೂ ಕಿಡಿಕಾರಿದರು ಎನ್ನುವ ಮಾಹಿತಿಯಿದೆ. ನೀವು ಎಲ್ಲೆಲ್ಲಿ ಸುತ್ತಾಡಿಕೊಂಡು ಬಂದಿದ್ದೀರಿ, ನಿಮ್ಮದೆಲ್ಲಾ ನಮಗೆ ಗೊತ್ತಿದೆ ಎಂದು ಕುಮಾರಸ್ವಾಮಿ, ಜಿಟಿಡಿ ವಿರುದ್ದ ಬೇಸರ ವ್ಯಕ್ತಪಡಿಸಿದರು ಎಂದು ಹೇಳಲಾಗುತ್ತಿದೆ.
ಸದನ ಆರಂಭವಾಗಿ ಊಟದ ಬ್ರೇಕ್ ನಂತರ ಬಿಜೆಪಿ ಶಾಸಕರಾದ ಶ್ರೀರಾಮುಲು ಮತ್ತು ಸೋಮಶೇಖರ ರೆಡ್ಡಿ ಮೂಲೆಯ ಆಸನವೊಂದರಲ್ಲಿ ಮಾತುಕತೆ ನಡೆಸುತ್ತಿದ್ದರು. ಆಗ, ಅಲ್ಲಿಗೆ ಜಿ ಟಿ ದೇವೇಗೌಡರು ಬಂದರು.
ಜಿಟಿಡಿ ತಮ್ಮ ಸೀಟಿನ ಬಳಿ ಬಂದ ಕೂಡಲೇ, ಎದ್ದು ನಿಂತ, ಶ್ರೀರಾಮುಲು, ರೆಡ್ಡಿ ಅವರ ಕೈಕುಲುಕಿ ಮಾತುಕತೆ ನಡೆಸಲಾರಂಭಿಸಿದರು. ಸುಮಾರು 5-10 ನಿಮಿಷದ ಮೂವರ ನಡುವಿನ ಸಂವಾದ, ಕ್ಯಾಮರಾ ಕಣ್ಣಲ್ಲಿ ಬಿಡದಂತೆ ಸೆರೆಯಾಗಿತ್ತು.
ಜುಲೈ 18ಕ್ಕೆ ಕುಮಾರಸ್ವಾಮಿ ವಿಶ್ವಾಸಮತ ಯಾಚನೆ
ಜಿ.ಟಿ.ದೇವೇಗೌಡ ಅವರು ಬಿಜೆಪಿ ಸೇರುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ 'ಕಮ್ ಬ್ಯಾಕ್ ಜಿಟಿಡಿ' ಎನ್ನುವ ಅಭಿಯಾನ ಸೋಮವಾರ ಬೆಳಗ್ಗೆ ಪ್ರಾರಂಭವಾಗಿತ್ತು. ಜೊತೆಗೆ, ಅವರ ಅಭಿಮಾನಿಯೊಬ್ಬ ಜಿಟಿಡಿ 'ಬಿಜೆಪಿ' ಸೇರಲಿದ್ದಾರೆಂದು ಪೋಸ್ಟ್ ಹಾಕಿದ್ದ. ಈ ವಿದ್ಯಮಾನಗಳು, ಕುಮಾರಸ್ವಾಮಿ ಕೋಪಕ್ಕೆ ಕಾರಣವಾಗಿರಬಹುದು.