ಸತೀಶ್ ಜಾರಕಿಹೊಳಿ ಅಂದು ಹೇಳಿದ್ದ ಆ ಒಂದು 'ವಸ್ತು' ಇದೇ ಏನು?
ಬೆಂಗಳೂರು, ಮಾರ್ಚ್ 6: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿ.ಡಿ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ಆ ಪ್ರಕರಣಕ್ಕಿಂತಲೂ ಈಗ ಆರು ಸಚಿವರು ತಮ್ಮ ವಿರುದ್ಧ ಮಾಧ್ಯಮಗಳು ಅವಹೇಳನಾಕಾರಿ ಮತ್ತು ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸುವಂತೆ ಕೋರಿ ಕೋರ್ಟ್ ಮೊರೆ ಹೋಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಇನ್ನೂ 19 ಮಂದಿಯ ಸಿಡಿ ತಮ್ಮ ಬಳಿ ಇದೆ ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ಹೇಳಿರುವುದು, ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದ ನಾಯಕರ ಒಂದು ಗುಂಪು ಮಾತ್ರವೇ ಒಟ್ಟಿಗೆ ಕೋರ್ಟ್ ಮೆಟ್ಟಿಲೇರಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಾಗಾದರೆ ಈ ಸಚಿವರ ಮೇಲೆಯೂ ಇಂತಹ ಸಿಡಿಗಳು ಇವೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಮೇಟಿ ವಿವಾದ, ಸಿದ್ದರಾಮಯ್ಯ ದುಪ್ಪಟ ಎಳೆದಿದ್ದು ಏನಾಯ್ತು?: ಕಟ್ಟಾ ಪ್ರಶ್ನೆ
ಈ ಸಿಡಿ ಕುರಿತಾಗಿ ರಮೇಶ್ ಜಾರಕಿಹೊಳಿ ಅವರಿಗೆ ಹಲವು ತಿಂಗಳ ಮುಂಚೆಯೇ ತಿಳಿದಿತ್ತು. ಅದು ಹೊರಬರದಂತೆ ತಡೆಯಲು ಸಾಕಷ್ಟು ಪ್ರಯತ್ನಿಸಿದ್ದರು. ಯುವತಿಗೆಯನ್ನು ಕೂಡ ಹಾಕಿದ್ದರು. ಹೀಗಾಗಿ ಆಕೆಯನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಿ ಕುಟುಂಬದವರು ತಮ್ಮ ಮೂಲಕ ದೂರು ನೀಡಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ತಿಳಿಸಿದ್ದರು. ಈಗ ಈ ಘಟನೆಗೂ ಸುಮಾರು ಒಂದೂವರೆ ವರ್ಷದ ಹಿಂದೆ ಸತೀಶ್ ಜಾರಕಿಹೊಳಿ ಅವರು ನೀಡಿದ್ದ ಹೇಳಿಕೆಯೂ ಸಂಬಂಧವಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಮುಂದೆ ಓದಿ.
ಸಮ್ಮಿಶ್ರ ಸರ್ಕಾರದ ಪತನ
2019ರಲ್ಲಿ ರಮೇಶ್ ಜಾರಕಿಹೊಳಿ ಮತ್ತು ಇತರೆ ನಾಯಕರ ಬಂಡಾಯ ತಂಡ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದ ಶಾಸಕರು ಮತ್ತು ಸಚಿವರು ರಾಜೀನಾಮೆ ನೀಡಿ ಮುಂಬೈನ ಹೋಟೆಲ್ ಸೇರಿಕೊಂಡಿದ್ದರು. ಸುಮಾರು ಎರಡು ತಿಂಗಳ ನಾಟಕೀಯ ಬೆಳವಣಿಗೆಗಳ ಬಳಿಕ ಸರ್ಕಾರ ಪತನಗೊಂಡಿತ್ತು.
ಸತೀಶ್ ಜಾರಕಿಹೊಳಿ ಮಾತುಗಳು
ಸರ್ಕಾರ ಪತನಕ್ಕೂ ಮುನ್ನ ಹಾಗೂ ನಂತರದ ಸಂದರ್ಭಗಳಲ್ಲಿ ಕಾಂಗ್ರೆಸ್ ಮುಖಂಡ ಹಾಗೂ ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಜಾರಕಿಹೊಳಿ ಅವರು ಒಂದು ವಿಚಾರವನ್ನು ಪದೇ ಪದೇ ಮಾಧ್ಯಮಗಳ ಮುಂದೆ ಹೇಳಿದ್ದರು. ರಮೇಶ್ ಜಾರಕಿಹೊಳಿ ಅವರ ಈಗಿನ ಸ್ಥಿತಿಗೂ, ಅಂದು ಸತೀಶ್ ಜಾರಕಿಹೊಳಿ ಹೇಳಿದ್ದ ಹೇಳಿಕೆಗೂ ನಂಟು ಇದೆಯೇ?
ಜನರ ಬಾಯಲ್ಲಿ ರಾಜಕಾರಣಗಳೆಲ್ಲಾ ಲಫಂಗರು ಎಂದು ಹೇಳಿಸಿಕೊಳ್ಳುವ ಹಾಗಾಗಿದೆ: ಸಿದ್ದರಾಮಯ್ಯ
ಸರ್ಕಾರದ ಪತನಕ್ಕೆ 'ವಸ್ತು'ವೇ ಕಾರಣ
'ರಮೇಶ್ ಜಾರಕಿಹೊಳಿ 'ಒಂದು ವಸ್ತು' ಕಳೆದುಕೊಂಡಿದ್ದಾರೆ. ಮೈತ್ರಿ ಸರ್ಕಾರ ಉರುಳಲು ಆ 'ವಸ್ತು' ಕಾರಣ. ಆ 'ವಸ್ತು' ಯಾವುದೆಂದು ಸಮಯ ಬಂದಾಗ ಹೇಳುತ್ತೇನೆ. ಅದನ್ನು ಹೇಳಲೇಬೇಕು. ಇಲ್ಲದಿದ್ದರೆ ನಮ್ಮ ಕುಟುಂಬದಿಂದಲೇ ಸರ್ಕಾರ ಉರುಳಿತು ಎಂಬ ಅಪವಾದ ಇತಿಹಾಸದಲ್ಲಿ ಉಳಿದುಬಿಡುತ್ತದೆ. ಆದರೆ ನಮ್ಮ ಕುಟುಂಬದಿಂದ ಸರ್ಕಾರ ಪತನಗೊಂಡಿಲ್ಲ. ಒಂದು ವಸ್ತುವಿನಿಂದಲೇ ಸರ್ಕಾರಕ್ಕೆ ಹೀಗಾಯಿತು' ಎಂದು ಸತೀಶ್ ಜಾರಕಿಹೊಳಿ ಹೇಳಿದ್ದರು.
ಡಿಸಿಎಂ ಆದ ಬಳಿಕ ಹೇಳುತ್ತೇನೆ
'ಬಿಜೆಪಿ ಸರ್ಕಾರದಲ್ಲಿ ರಮೇಶ್ ಜಾರಕಿಹೊಳಿ ಶೇ 99ರಷ್ಟು ಡಿಸಿಎಂ ಆಗಿಯೇ ಆಗುತ್ತಾರೆ. ಆಗ ನಾವು ಅವರ ವಿರುದ್ಧ ಸಮಾವೇಶ ನಡೆಸುತ್ತೇವೆ. ಆಗ ಅವರು ಕಳೆದುಕೊಂಡ ವಸ್ತು ಯಾವುದು ಎಂದು ಬಹಿರಂಗಪಡಿಸುತ್ತೇನೆ' ಎಂದು ಹಲವು ಸಂದರ್ಭಗಳಲ್ಲಿ ಸತೀಶ್ ಜಾರಕಿಹೊಳಿ ಹೇಳಿದ್ದರು. ಆ 'ವಸ್ತು' ಯಾವುದು ಎಂದು ಬಹಿರಂಗಪಡಿಸಲಿ ಎಂದು ರಮೇಶ್ ಜಾರಕಿಹೊಳಿ ಸವಾಲು ಹಾಕಿದ್ದರು.
ಸರ್ಕಾರ ಪತನಕ್ಕೆ ಕಾರಣ ಏನು?: ಕಾದು ನೋಡಿ, ಮುಂದೆ ಹೇಳ್ತೀನಿ ಎಂದ ಸತೀಶ್ ಜಾರಕಿಹೊಳಿ
ಇನ್ನೂ ಬಹಿರಂಗಪಡಿಸದ ಸತೀಶ್
ಬಿಜೆಪಿ ಸರ್ಕಾರದಲ್ಲಿ ರಮೇಶ್ ಜಾರಕಿಹೊಳಿ ಅವರು ತಮ್ಮ ಬೇಡಿಕೆಯಂತೆಯೇ ಜಲಸಂಪನ್ಮೂಲ ಸಚಿವ ಸ್ಥಾನ ಪಡೆದುಕೊಂಡರೂ, ಅವರ ಬಯಕೆಯ ಉಪ ಮುಖ್ಯಮಂತ್ರಿ ಸ್ಥಾನ ದಕ್ಕಲಿಲ್ಲ. ಹಾಗೆಯೇ ಅವರು ಕಳೆದುಕೊಂಡಿದ್ದ 'ವಸ್ತು' ಯಾವುದು ಎಂಬುದನ್ನು ಈ ಒಂದೂವರೆ ವರ್ಷದಲ್ಲಿ ಸತೀಶ್ ಜಾರಕಿಹೊಳಿ ಬಹಿರಂಗಪಡಿಸಲಿಲ್ಲ. ಈಗ ರಮೇಶ್ ಜಾರಕಿಹೊಳಿ ಅವರನ್ನು ಸಂಕಷ್ಟದಲ್ಲಿ ಸಿಲುಕಿಸಿರುವ ಸಿಡಿಗೂ, ಸತೀಶ್ ಹೇಳುತ್ತಿದ್ದ 'ವಸ್ತು'ವಿಗೂ ಸಂಬಂಧವಿದೆಯೇ? ಇದಕ್ಕೆ ಅವರೇ ಉತ್ತರ ನೀಡಬೇಕು.