ಪಂಚಮಸಾಲಿ ಮೀಸಲಾತಿ ಪ್ರತಿಭಟನಾ ಸ್ಥಳದ ಕಡೆ ತಲೆಯೂ ಹಾಕದ ಯತ್ನಾಳ್: ಇದರ ಹಿಂದಿದೆ 'ಆ' ಎಚ್ಚರಿಕೆ?
ಬೆಂಗಳೂರು, ಮಾರ್ಚ್ 6: ಕಳೆದ ಒಂದು ತಿಂಗಳಿನಿಂದ ಕುರುಬ ಮತ್ತು ಪಂಚಶಾಲಿ ಸಮುದಾಯದ ಮೀಸಲಾತಿ ಹೋರಾಟ ಸರಕಾರದ ಬುಡವನ್ನೇ ಅಲುಗಾಡಿಸಿತ್ತು. ಅಷ್ಟರ ಮಟ್ಟಿಗೆ ತೀವ್ರತೆಯಿಂದ ಸಾಗುತ್ತಿದ್ದ ಈ ಎರಡು ಸಮುದಾಯದ ಹೋರಾಟಗಳು ನಂತರ, ದಿನದಿಂದ ದಿನಕ್ಕೆ ಶಾಂತವಾಗುತ್ತಾ ಬಂತು.
ಪಂಚಮಸಾಲಿ ಪ್ರತಿಭಟನೆ ಇನ್ನೂ ಬೆಂಗಳೂರಿನಲ್ಲಿ ನಡೆಯುತ್ತಿದ್ದರೂ, ಅರಮನೆ ಮೈದಾನದಲ್ಲಿ ನಡೆದ ಪಾದಯಾತ್ರೆಯ ಅಂತಿಮ ಘಟ್ಟದ ಸಮಾವೇಶದಲ್ಲಿದ್ದ ವೀರಾವೇಶ ನಂತರ ಕಮ್ಮಿಯಾಗುತ್ತಾ ಸಾಗಿತು. ಅದಕ್ಕೆ ಕಾರಣ ಇಲ್ಲದಿಲ್ಲ.
ಇದು ಅದೇ "ಸಿಡಿ'ನಾ ಅಥವಾ ಆ "ಸಿಡಿ' ಬೇರೆ ಇದೆಯಾ?
ಅಂತಿಮ ಸಮಾವೇಶದ ನಂತರ ಈ ಸಮುದಾಯದ ಪೀಠಾಧಿಪತಿಗಳು ಮತ್ತು ಮುಖಂಡರ ನಡುವೆ ತೋರಿದ ಭಿನ್ನಾಭಿಪ್ರಾಯ, ಹೋರಾಟದ ದಿಕ್ಕನ್ನೇ ಬದಲಾಯಿಸಿತು ಎನ್ನುವುದು ಆ ಸಮುದಾಯದಲ್ಲಿ ಕೇಳಿ ಬರುತ್ತಿರುವ ಕೂಗು.
ಯತ್ನಾಳ್ ಸುಮ್ಮನಾದರೂ, ಕುಮಾರಸ್ವಾಮಿ ಸುಮ್ಮನಿಲ್ಲ: ನೇರ ಮೋದಿಗೆ ಪಶ್ನೆ
ಇದರೊಂದಿಗೆ ಯಡಿಯೂರಪ್ಪ ಒಂದು ವಿಚಾರದಲ್ಲಂತೂ ಸದ್ಯ ನಿಟ್ಟುಸಿರು ಬಿಡುತ್ತಿರುವುದಂತೂ ಹೌದು. ಪಂಚಮಸಾಲಿ ಹೋರಾಟದ ಹೆಸರಿನಲ್ಲಿ ಯಡಿಯೂರಪ್ಪನವರನ್ನು ತೀವ್ರವಾಗಿ ಟೀಕಿಸುತ್ತಿದ್ದ ಯತ್ನಾಳ್ ಸದ್ಯ, ಆ ಹೋರಾಟದ ಕಡೆ ಪ್ರತ್ಯಕ್ಷವಾಗಿ ತಲೆಹಾಕುತ್ತಿಲ್ಲ.
ಬಿಜೆಪಿ ಪಕ್ಷವೇ ಪಂಚಮಸಾಲಿಗಳ ವಿರುದ್ದ ಎನ್ನುವಂತೆ ಯತ್ನಾಳ್ ಬಿಂಬಿಸಿದ್ದರು
ಫೆಬ್ರವರಿ 21ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಪಂಚಮಸಾಲಿ ಸಮಾವೇಶ ನಡೆದಿತ್ತು. ಈ ಸಮಾವೇಶದಲ್ಲಿ ಲಕ್ಷಲಕ್ಷ ಜನರು ಭಾಗವಹಿಸಿದ್ದರು. ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡು, ಇಡೀ ಬಿಜೆಪಿ ಪಕ್ಷವೇ ಪಂಚಮಸಾಲಿಗಳ ವಿರುದ್ದ ಇದೆ ಎನ್ನುವಂತೆ ಯತ್ನಾಳ್ ಬಿಂಬಿಸಿದ್ದರು. ಇದು ಬಿಜೆಪಿ ವರಿಷ್ಠರ ಸಿಟ್ಟಿಗೆ ಕಾರಣವಾಗಿತ್ತು.
ಲಿಂಗಾಯಿತ ಸಮುದಾಯ ಬಿಜೆಪಿಯ ಪ್ರಮುಖ ವೋಟ್ ಬ್ಯಾಂಕ್
ಲಿಂಗಾಯಿತ ಸಮುದಾಯ ಬಿಜೆಪಿಯ ಪ್ರಮುಖ ವೋಟ್ ಬ್ಯಾಂಕ್. ಈಗ ಆ ಸಮುದಾಯವನ್ನು ಯಡಿಯೂರಪ್ಪ ವಿರುದ್ದ ಎತ್ತಿಕಟ್ಟಲು ಯತ್ನಾಳ್ ಪ್ರಯತ್ನಿಸಿದ್ದು ವರಿಷ್ಠರ ಕೋಪಕ್ಕೆ ಕಾರಣವಾಗಿತ್ತು. ಯಾಕೆಂದರೆ, ಯತ್ನಾಳ್ ಅವರು ಯಡಿಯೂರಪ್ಪನವರ ವಿರುದ್ದ ಸಿಟ್ಟು ಹೊರಹಾಕುತ್ತಿದ್ದರೂ, ಅದರ ಪ್ರತಿಕೂಲತೆ ಎದುರಾಗುವುದು ಬಿಜೆಪಿಗೆ. ಹಾಗಾಗಿ, ದೆಹಲಿಗೆ ಯತ್ನಾಳ್ ಅವರನ್ನು ಕರೆಸಿಕೊಂಡ ಬಿಜೆಪಿ ವರಿಷ್ಠರು ಖಡಕ್ ಎಚ್ಚರಿಕೆಯ ಜೊತೆಗೆ, ಪಕ್ಷ ಬಿಟ್ಟು ಹೋದರೂ ನಮ್ಮ ಆಕ್ಷೇಪವಿಲ್ಲ ಎನ್ನುವ ಮಾತನ್ನು ಆಡಿದ್ದರು ಎಂದು ಹೇಳಲಾಗುತ್ತಿದೆ.
ಜಯ ಮೃತ್ಯುಂಜಯಸ್ವಾಮಿ ಮತ್ತು ವಚನಾನಂದ ಸ್ವಾಮೀಜಿ ನಡುವೆ ಹೊಂದಾಣಿಕೆಯ ಕೊರತೆ
ಆ ಸಮಾವೇಶದ ನಂತರ ಯತ್ನಾಳ್, ಸಮುದಾಯದ ಹೋರಾಟದ ಸ್ಥಳವಾದ ಫ್ರೀಡಂ ಪಾರ್ಕ್ ಕಡೆ ಹೋಗಲೇ ಇಲ್ಲ. ಸಮುದಾಯದ ಜಯ ಮೃತ್ಯುಂಜಯಸ್ವಾಮಿ ಮತ್ತು ವಚನಾನಂದ ಸ್ವಾಮೀಜಿ ನಡುವೆ ಹೊಂದಾಣಿಕೆಯ ಕೊರತೆ ಒಂದು ಕಡೆ. ಇನ್ನೊಂದು ಕಡೆ ಕಾಶಪ್ಪನವರ್ ಮತ್ತು ಸಮುದಾಯದ ಬಿಎಸ್ವೈ ಸಂಪುಟದ ಸಚಿವರ ನಡುವೆ ಭಿನ್ನಾಭಿಪ್ರಾಯ ತೀವ್ರಗೊಂಡಿದ್ದರಿಂದ ಈ ಹೋರಾಟದ ಕಾವು ಸದ್ಯಕ್ಕಂತೂ ಕಮ್ಮಿಯಾಗುತ್ತಾ ಸಾಗುತ್ತಿದೆ.
ಯತ್ನಾಳ್ ನೀಡಿದ್ದ ಬೆಂಬಲ ಕಮ್ಮಿಯಾಗಲು ಬಿಜೆಪಿ ವರಿಷ್ಠರು ನೀಡಿದ್ದ ಕಟ್ಟೆಚ್ಚರ ಕಾರಣ
2A ಮೀಸಲಾತಿಗೆ ಪಾದಯಾತ್ರೆ ಆರಂಭಗೊಂಡು, ಅರಮನೆ ಮೈದಾನದ ಸಮಾವೇಶದ ವರೆಗೆ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದ ಬೆಂಬಲ, ನಂತರ ಕಮ್ಮಿಯಾಗಲು ಬಿಜೆಪಿ ವರಿಷ್ಠರು ನೀಡಿದ್ದ ಕಟ್ಟೆಚ್ಚರ ಮತ್ತು ಬಿಜೆಪಿಯಿಂದ ಅವರನ್ನು ಉಚ್ಚಾಟನೆ ಮಾಡಬೇಕು ಎನ್ನುವ ಕೂಗು ಹೆಚ್ಚಾಗುತ್ತಿದ್ದದ್ದು. ಐದು ರಾಜ್ಯಗಳ ಚುನಾವಣೆ ನಡೆಯುತ್ತಿರುವುದರಿಂದ ಪಕ್ಷದಲ್ಲಿ ಯಾವುದೇ ಅಶಿಸ್ತು ಸಹಿಸುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಉಸ್ತುವಾರಿ ಅರುಣ್ ಸಿಂಗ್ ಮೂಲಕ ರಾಜ್ಯದ ಮುಖಂಡರಿಗೆ ವರಿಷ್ಠರು ಕಳುಹಿಸಿದ್ದಾರೆ. ಹಾಗಾಗಿಯೇ, ಪಂಚಮಶಾಲಿ ಹೋರಾಟಕ್ಕೆ ಯತ್ನಾಳ್ ಪ್ರತ್ಯಕ್ಷ ಬೆಂಬಲವನ್ನು ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ.