ರಾಮನಗರ : ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಅಂತಿಮ?
ರಾಮನಗರ, ಮಾರ್ಚ್ 10 : ರೇಷ್ಮೆ ನಾಡು ರಾಮನಗರ ರಾಜಕೀಯವಾಗಿಯೂ ಬಹಳ ಪ್ರಬಲವಾಗಿದೆ. ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆ ಇದಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ರಾಜಕೀಯ ಚಿತ್ರಣ ಏನು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ರಾಮನಗರ ಕ್ಷೇತ್ರದ ಹಾಲಿ ಶಾಸಕರು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ. 'ರಾಮನಗರ ಕ್ಷೇತ್ರ ನನ್ನ ಕರ್ಮಭೂಮಿ, ರಾಮನಗರದಿಂದಲೇ ಈ ಬಾರಿಯೂ ಸ್ಪರ್ಧೆ ಮಾಡುತ್ತೇನೆ' ಎಂದು ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
ಕ್ಷೇತ್ರ ಪರಿಚಯ: ರಾಮನಗರದಲ್ಲಿ ಕುಮಾರಸ್ವಾಮಿ ಸೋಲಿಸುವುದು ಸುಲಭವಲ್ಲ
2007ರ ಆಗಸ್ಟ್ನಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಮನಗರವನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಿದರು. ಆಗಿನಿಂದಲೂ ಜಿಲ್ಲೆಯಲ್ಲಿ ಜೆಡಿಎಸ್ ಸಾಕಷ್ಟು ಪ್ರಭಾವವನ್ನು ಹೊಂದಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಸದ್ಯ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಜಿಲ್ಲೆಯಲ್ಲಿ ಕಾಂಗ್ರೆಸ್ ಕಟ್ಟಿಬೆಳೆಸುವ ಹೊಣೆ ಹೊತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸ್ಪರ್ಧೆಗೆ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದಾರೆ?.
'ಡಿಕೆಶಿ ಜತೆ ಹೊಂದಾಣಿಕೆ ಮಾಡಿಕೊಂಡು ಕಾರ್ಯಕರ್ತರಿಗೆ ವಿಷ ಹಾಕಲ್ಲ'
2004ರಿಂದ ಜಿಲ್ಲೆಯಲ್ಲಿ ಜೆಡಿಎಸ್ ಪ್ರಭಾವವನ್ನು ಹೊಂದಿದೆ. 4 ಚುನಾವಣೆಗಳಲ್ಲಿ ಜೆಡಿಎಸ್ ಇಲ್ಲಿ ಗೆಲುವು ಸಾಧಿಸುವುದರೊಂದಿಗೆ ಕ್ಷೇತ್ರದ ಮೇಲೆ ಭಾರೀ ಹಿಡಿತ ಹೊಂದಿದೆ. ಈ ಬಾರಿಯ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರೇ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ. ಆದ್ದರಿಂದ, ಈ ಬಾರಿಯು ಗೆಲುವಿಗೆ ಕಷ್ಟಪಡಬೇಕಿಲ್ಲ.
ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳು
ರಾಮನಗರ ಜಿಲ್ಲೆ ಮಾಗಡಿ, ರಾಮನಗರ, ಕನಕಪುರ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ. ರಾಮನಗರ ಕ್ಷೇತ್ರದ ಶಾಸಕರು ಎಚ್.ಡಿ.ಕುಮಾರಸ್ವಾಮಿ, ಕನಕಪುರ ಕ್ಷೇತ್ರಕ್ಕೆ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಶಾಸಕರು.
ಚನ್ನಪಟ್ಟಣ ಕ್ಷೇತ್ರದ ಶಾಸಕರು ಸಿ.ಪಿ.ಯೋಗೇಶ್ವರ. 2013ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಆಯ್ಕೆಯಾಗಿ, ಬಳಿಕ ಕಾಂಗ್ರೆಸ್ ಸೇರಿ, ಸದ್ಯ ಬಿಜೆಪಿ ಸೇರಿದ್ದು, ಈ ಬಾರಿಯೂ ಟಿಕೆಟ್ ಖಚಿತವಾಗಿದೆ.
ಮಾಗಡಿ ಕ್ಷೇತ್ರದ ಶಾಸಕರು ಒಂದು ಕಾಲದಲ್ಲಿ ಕುಮಾರಸ್ವಾಮಿ ಆಪ್ತರಾಗಿದ್ದ ಎಚ್.ಸಿ.ಬಾಲಕೃಷ್ಣ. ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಿ ಪಕ್ಷದಿಂದ ಅಮಾನತುಗೊಂಡಿದ್ದಾರೆ. ಕಾಂಗ್ರೆಸ್ ಸೇರಲಿರುವ ಅವರು ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.
ಎಚ್.ಡಿ.ಕುಮಾರಸ್ವಾಮಿ ಬಲಾಬಲ
'ರಾಮನಗರ ಕ್ಷೇತ್ರ ನನ್ನ ಕರ್ಮಭೂಮಿ, ರಾಮನಗರದಿಂದಲೇ ಈ ಬಾರಿಯೂ ಸ್ಪರ್ಧೆ ಮಾಡುತ್ತೇನೆ' ಎಂದು ಕುಮಾರಸ್ವಾಮಿ ಈಗಾಲಗೇ ಘೋಷಣೆ ಮಾಡಿದ್ದಾರೆ. ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಿದ್ದು ಕುಮಾರಸ್ವಾಮಿ ಅವರೇ.
2004ರ ಚುನಾವಣೆಯಲ್ಲಿ 69,554, 2008 ಚುನಾವಣೆಯಲ್ಲಿ 71,700, 2013ರ ಚುನಾವಣೆಯಲ್ಲಿ 83,447 ಮತಗಳನ್ನು ಪಡೆದು ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಜಯಗಳಿಸಿದ್ದಾರೆ. ಈ ಬಾರಿ ಅವರನ್ನು ಸೋಲಿಸಲು ಬಿಜೆಪಿ ಮತ್ತು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿವೆ.
2004ರಲ್ಲಿ ಕುಮಾರಸ್ವಾಮಿ ರಾಮನಗರಕ್ಕೆ ಬಂದರು. ಕಾಂಗ್ರೆಸ್ನ ಸಿ.ಎಂ.ಲಿಂಗಪ್ಪರನ್ನು ಕುಮಾರಸ್ವಾಮಿ ಬರೋಬ್ಬರಿ 25 ಸಾವಿರ ಮತಗಳಿಂದ ಸೋಲಿಸಿ ವಿಧಾನಸೌಧದ ಪ್ರವೇಶಿಸಿದರು. ಮುಖ್ಯಮಂತ್ರಿಯಾಗಿದ್ದಾಗ ಇದೇ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು.
2008 ರಲ್ಲಿ ಕುಮಾರಸ್ವಾಮಿ 47 ಸಾವಿರ ಭರ್ಜರಿ ಮತಗಳ ಜಯಗಳಿಸಿದರು. 2013ರಲ್ಲಿ 25 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದಾರೆ.
ಇಕ್ಬಾಲ್ ಹುಸೇನ್ ಸ್ಪರ್ಧೆ?
ರಾಮನಗರದಲ್ಲಿ ಈ ಬಾರಿ ಇಕ್ಬಾಲ್ ಹುಸೇನ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ. ಈಗಾಗಲೇ ಅವರು ಕ್ಷೇತ್ರದಲ್ಲಿ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯವಾಗಿದ್ದಾರೆ.
ಇಕ್ಬಾಲ್ ಹುಸೇನ್ ರಾಮನಗರದ ಜಿಲ್ಲಾ ಪಂಚಾಯಿತಿಯ ಅಧ್ಯಕ್ಷರು. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಇಕ್ಬಾಲ್ ಹುಸೇನ್ ಸ್ಪರ್ಧೆಗೆ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
2008ರಲ್ಲಿ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಿಎಂ ರಾಮಕೃಷ್ಣ ಹೆಗೆಡೆ ಅವರ ಪುತ್ರಿ ಮಮತಾ ಹೆಗಡೆ ನಿಚ್ಚಾನಿ ಸ್ಪರ್ಧಿಸಿದ್ದರು. 23,678 ಮತಗಳನ್ನು ಪಡೆದಿದ್ದರು. 2013ರಲ್ಲಿ ಮರಿದೇವ್ರು ಅವರು 58,049 ಮತಗಳನ್ನು ಪಡೆದಿದ್ದರು.
ಬಿಜೆಪಿ ಟಿಕೆಟ್ಗೆ ಪೈಪೋಟಿ
ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು? ಎಂಬುದು ಇನ್ನೂ ಅಂತಿಮವಾಗಿಲ್ಲ. ಎಸ್.ಆರ್.ನಾಗರಾಜ್, ಜಗದೀಶ್ ಗೌಡ ಹೆಸರು ಕೇಳಿಬರುತ್ತಿದೆ. ಯಾರು ಅಭ್ಯರ್ಥಿ? ಎಂದು ಕೆಲವೇ ದಿನಗಳಲ್ಲಿ ಅಂತಿಮಗೊಳ್ಳಲಿದೆ.
ರಾಮನಗರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪ್ರಬಲ ಪೈಪೋಟಿ ನಡೆಯುವ ಸಾಧ್ಯತೆ ಇದೆ. 2008ರಲ್ಲಿ ಬಿಜೆಪಿಯ ಎಂ.ರುದ್ರೇಶ್ ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧಿಸಿದ್ದರು 24, 440 ಮತ ಪಡೆದಿದ್ದರು. 2013ರ ಚುನಾವಣೆಯಲ್ಲಿ ಶಿವಮಾದು ಅವರು ಸ್ಪರ್ಧಿಸಿದ್ದರು ಕೇವಲ 1,776 ಮತಗಳನ್ನು ಪಡೆದಿದ್ದರು.
ಡಿ.ಕೆ.ಶಿವಕುಮಾರ್ ಗೆ ಚಾಲೆಂಜ್
ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಮುಂದೆ ದೊಡ್ಡ ಸವಾಲು ಇದೆ.
ರಾಮನಗರ ಜಿಲ್ಲೆಯಲ್ಲಿ ಒಂದು ಕಡೆ ಎಚ್.ಡಿ.ಕುಮಾರಸ್ವಾಮಿ ಮತ್ತೊಂದು ಕಡೆ ಬಿಜೆಪಿಯನ್ನು ಎದುರಿಸಬೇಕಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿದ್ದ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ ಬಿಜೆಪಿ ಸೇರಿದ್ದಾರೆ. ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಸೋಲಿಸಲೇಬೇಕು ಎಂದು ಡಿಕೆಶಿ ಸಹೋದರರು ಪಣ ತೊಟ್ಟಿದ್ದಾರೆ.
ಮತ್ತೊಂದು ಕಡೆ ರಾಜಕೀಯ ಕಡು ವಿರೋಧಿಯಾದ ಎಚ್.ಡಿ.ಕುಮಾರಸ್ವಾಮಿ ಅವರನ್ನು ರಾಮನಗರ ಕ್ಷೇತ್ರದಲ್ಲಿ ಮಣಿಸಬೇಕಾಗಿದೆ. ಆದ್ದರಿಂದ, ಡಿಕೆಶಿ ಸಹೋದರರು ತಂತ್ರ ರೂಪಿಸುತ್ತಿದ್ದಾರೆ.