ಕರಕುಶಲ ನಿಗಮ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಕುರ್ಚಿಗೆ ಮಳೆ ಜಡಿದ ಐಪಿಎಸ್ ಡಿ. ರೂಪಾ
ಬೆಂಗಳೂರು, ಜೂ. 01: ರಾಜ್ಯ ಕರಕುಶಲ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಎಸಗಿರುವ ಅಕ್ರಮ, ಅಧಿಕಾರದ ಬಗ್ಗೆ ವ್ಯವಸ್ಥಾಪಕ ನಿರ್ದೇಶಕಿ ಡಿ. ರೂಪಾ ಮೌದ್ಗಿಲ್ ಆರು ಪುಟಗಳ ದೂರನ್ನು ಸರ್ಕರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ್ದಾರೆ.
ನಿಗಮದ ಸಿಸಿಟಿವಿ ಡಿಡಿವಿಆರ್ ದುರುಪಯೋಗ ಪಡಿಸಿಕೊಂಡ ಹಿನ್ನೆಲೆಯಲ್ಲಿ ಮೇ. 31 ರಂದು ಡಿ. ನಿಗಮದ ವ್ಯವಸ್ಥಾಪಕಿ ಡಿ.ರೂಪಾ ಮೌದ್ಗಿಲ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದರು. ಇದರ ಬೆನ್ನಲ್ಲೇ ಡಿ. ರೂಪಾ ಮೌದ್ಗಿಲ್ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ನಿಗಮದ ಅಧ್ಯಕ್ಷ ಬೇಳೂರ ರಾಘವೇಂದ್ರ ಶೆಟ್ಟಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.
ಇದರ ಬೆನ್ನಲ್ಲೇ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಮಗ್ರ ವರದಿಯನ್ನು ಡಿ. ರೂಪಾ ಅವರು ಸಲ್ಲಿಸಿದ್ದು, ಬೇಳೂರ ರಾಘವೇಂದ್ರ ಶೆಟ್ಟಿ ಅವರು ನಿಗಮದಲ್ಲಿ ಎಸಗಿರುವ ಅವ್ಯವಹಾರ, ಅಧಿಕಾರ ದುರುಪಯೋಗ, ದುರ್ನಡತೆ ಬಗ್ಗೆ ಉಲ್ಲೇಖಿಸಿದ್ದಾರೆ.
ರಾಘವೇಂದ್ರ ಶೆಟ್ಟಿಯ ಆಪ್ತ ಎಂದು ಇಟ್ಟುಕೊಂಡಿದ್ದ ಶ್ರೀಕಾಂತ್ ಎಂಬಾತ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. ಇದರಿಂದ ನಿಗಮದ ಘನತೆಗೆ ಧಕ್ಕೆ ಆಗಿದೆ. ಈ ಹಗರಣದಲ್ಲಿ ರಾಘವೇಂದ್ರ ಶೆಟ್ಟಿಯ ಪಾತ್ರ ಇರುವ ಬಗ್ಗೆ ತನಿಖೆ ನಡೆಸುವಂತೆ ಕೋರುತ್ತೇನೆ ಎಂದು ರೂಪಾ ಅವರು ಮನವಿ ಮಾಡಿದ್ದಾರೆ. ಅಲ್ಲದೇ ಮಹಿಳಾ ಪಿಎ ಬೇಕೆಂದು ಬೇಡಿಕೆ ಇಟ್ಟಿರುವ ರಾಘವೇಂದ್ರ ಶೆಟ್ಟಿ, ಸುಳ್ಳು ಹೋಟೆಲ್ ಬಿಲ್ ಹಾಕಿಸಿ ಹಣ ಪಡೆಯಲು ಯತ್ನಿಸಿದ್ದು, ಇನ್ನೋವಾ ಕಾರನ್ನು ಅಪಘಾತಕ್ಕೆ ಒಳಪಡಿಸಿ ಹತ್ತು ಲಕ್ಷ ರೂ. ಹಣವನ್ನ ನಿಗಮದಿಂದ ವೆಚ್ಚ ಮಾಡಿಸಿದ್ದು, ನಿಯಮ ಮೀರಿ ಟೆಂಡರ್ ಗಳನ್ನು ನೀಡಿರುವ ಬಗ್ಗೆ ಸವಿವರವಾಗಿ ರೂಪಾ ಅವರು ವಿವರಿಸಿದ್ದಾರೆ. ಐಪಿಎಸ್ ಅಧಿಕಾರಿ ಡಿ. ರೂಪಾ ಅವರು ಮಾಡಿರುವ ಆರೋಪಗಳು ತನಿಖೆಗೆ ಒಳಪಟ್ಟಲ್ಲಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿಗೆ ಸಂಕಷ್ಟ ಎದುರಾಗಲಿದೆ.
ವಹಿವಾಟು 23 ಕೋಟಿ ರೂ.ಗೆ ಹೆಚ್ಚಳ
ರಾಘವೇಂದ್ರ ಶೆಟ್ಟಿ ನಿಗಮದ ಸಿಸಿಟಿವಿ ಹಾಗೂ ಡಿವಿಅರ್ ತಿದ್ದಿ ವಿರೂಪಗೊಳಿಸಿದ ಬಗ್ಗೆ ವರದಿ ಮಾಡಿರುತ್ತೇನೆ. ಇದರ ಬೆನ್ನಲ್ಲೇ ನನ್ನ ವಿರುದ್ಧ ನಾಲಿಗೆ ಹರಿಬಿಟ್ಟು ನಿರಾಧಾರ ಹೇಳಿಕೆ ನೀಡಿ ನನ್ನ ವೈಯಕ್ತಿಕ ಘನತೆಗೆ ಧಕ್ಕೆ ತರುವ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ರಾಘವೇಂದ್ರ ಶೆಟ್ಟಿ ಮಾಡಿರುವ ಅಕ್ರಮಗಳನ್ನು ವರದಿ ಸಲ್ಲಿಸುತ್ತಿದ್ದೇನೆ. ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ 2021-22 ರಲ್ಲಿ ಶೇ. 41 ರಷ್ಟು ಪ್ರತಿ ಸಾಧಿಸಿ 7.06 ಕೋಟಿ ರೂ. ಹೆಚ್ಚು ವಹಿವಾಟು ಮಾಡಿರುತ್ತದೆ. 16 ಕೋಟಿ ರೂ. ಇದ್ದ ನಿಗಮದ ವಹಿವಾಟು 23 ಕೋಟಿ ರೂ.ಗೆ ಹೆಚ್ಚಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುತ್ತೇನೆ. 2018 ರಲ್ಲಿ ನಿಗಮದಲ್ಲಿ 25 ಕೋಟಿ ರೂ. ವಂಚನೆಯಾಗಿದ್ದು, ಸಿಬಿಐ ಹಾಗೂ ಸಿಐಡಿಯಲ್ಲಿ ಕೇಸು ದಾಖಲಾಗಿದ್ದವು. ಇದಾದ ಬಳಿಕ ನಿಗಮದ ವಹಿವಾಟು ಕ್ಷೀಣಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ನಿಗಮದ ವಹಿವಾಟು ಏಳು ಕೋಟಿ ರೂ. ಹೆಚ್ಚಾಗಿದ್ದು, ನಾನು ತೆಗೆದುಕೊಂಡ ತೀರ್ಮಾನಗಳಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
4 ರಿಂದ 5 ಕೋಟಿ ರೂ. ವ್ಯವಹಾರದ ಮಾತುಕತೆ
2017-18 ರಲ್ಲಿ ನಿಗಮಕ್ಕೆ 25 ಕೋಟಿ ರೂ. ವಂಚಿಸಿ ಸೇವೆಯಿಂದ ವಜಾ ಆಗಿರುವ ಅಂದಿನ ಪ್ರಧಾನ ವ್ಯವಸ್ಥಾಪಕ ( ಹಣಕಾಸು) ಜಿ.ಕಿಶೋರ್ ಕುಮಾರ್, ಎಂಬುವರನ್ನು ಬೋರ್ಡ್ ನಿರ್ಧಾರದ ಮೇಲೆ ವಾಪಸು ಸೇವೆಗೆ ತೆಗೆದುಕೊಳ್ಳಲು ರಾಘವೇಂದ್ರ ಶೆಟ್ಟಿ ಪ್ರಯತ್ನ ಮಾಡಿದ್ದರು. ಕಿಶೋರ್ ಕುಮಾರ್ ಅವರನ್ನು ಸೇವೆಗೆ ವಾಪಸು ತೆಗೆದುಕೊಳ್ಳುವ ಪ್ರಸ್ತಾಪವನ್ನು ಬೋರ್ಡ್ ಮುಂದೆ ಇಡುವಂತೆ ಕಿಶೋರ್ ಕುಮಾರ್ ನನಗೆ ಮನವಿ ಸಲ್ಲಿಸಿದ್ದರು. ರಾಘವೇಂದ್ರ ಶೆಟ್ಟಿ ಅವರು ಬೋರ್ಡ್ ಮುಂದೆ ಇಟ್ಟು ಸೇವೆಗೆ ವಾಪಸು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ನನಗೆ ಹೇಳಿದ್ದರು. ಈ ನಿಗಮಕ್ಕೆ 25 ಕೋಟಿ ರೂ. ವಂಚಿಸಿದ ಕಿಶೋರ್ ಕುಮಾರ್ ನ್ನು ವಾಪಸು ಸೇವೆಗೆ ಸೇರಿಸಿಕೊಳ್ಳುವ ಪ್ರಸ್ತಾಪವನ್ನು ಬೋರ್ಡ್ ಮುಂದೆ ತರಲು ನಾನು ನಿರಾಕರಿಸಿರುತ್ತೇನೆ. ಕಿಶೋರ್ ಕುಮಾರ್ ಅವರನ್ನು ವಾಪಸು ಸೇವೆಗೆ ಸೇರಿಸಿಕೊಳ್ಳಲು ರಾಘವೇಂದ್ರ ಶೆಟ್ಟಿ ಅವರು 4 ರಿಂದ 5 ಕೋಟಿ ರೂ. ವ್ಯವಹಾರದ ಮಾತುಕತೆ ಆಗಿದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿರುತ್ತದೆ. ಈ ನಿಯಮ ಬಾಹಿರ ಕೆಲಸ ತಡೆದಿದ್ದರಿಂದ ಹತಾಶರಾಗಿ ರಾಘವೇಂದ್ರ ಶೆಟ್ಟಿ ದುರ್ನಡತೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ರೂಪಾ ಅವರು ರಾಘವೇಂದ್ರ ಶೆಟ್ಟಿಯ ಡೀಲ್ ನ್ನು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ನನ್ನ ಮೇಲೆ ಸುಳ್ಳು ಆರೋಪ
ನಿಗಮದ ದೈನಂದಿನ ಚಟುವಟಿಕೆಯಲ್ಲಿ ಅಧ್ಯಕ್ಷರು ಹಸ್ತಕ್ಷೇಪ ಮಾಡಬಾರದು ಎಂಬ ನಿಯಮವಿದ್ದರೂ ರಾಘವೇಂದ್ರ ಶೆಟ್ಟಿ, ಪ್ರತಿ ದಿನ ನಿಗಮದ ಕ್ಲರ್ಕ್ ಗಳನ್ನು ಕರೆದು ನಾನಾ ಕಡತಗಳನ್ನು ಕೊಡುವಂತೆ ಒತ್ತಾಯ ಮಾಡಿದ್ದು, ಸಿಬ್ಬಂದಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ. ಸರ್ಕಾರದ ಅಧಿಸೂಚನೆಯಂತೆ ನಿಗಮದ ದೈನಂದಿನ ಕಾರ್ಯದಲ್ಲಿ ಅಧ್ಯಕ್ಷರ ಹಸ್ತಕ್ಷೇಪಕ್ಕೆ ನಾನು ಆಸ್ಪದ ನೀಡಿರುವುದಿಲ್ಲ. ಹೀಗಾಗಿ ನನ್ನ ಮೇಲೆ ಸುಳ್ಳು ಆರೋಪ ಮಾಡಿ, ನಿಗಮದಲ್ಲಿ ದುರ್ನಡತೆ ತೋರಿದ್ದಾರೆ ಎಂದು ರೂಪಾ ಅವರು ಅರೋಪಿಸಿದ್ದಾರೆ.
ಚೆಕ್ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಶೆಟ್ಟಿ ವಿರುದ್ಧ ಸಿರ್ಸಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು, ಪೊಲೀಸರ ಕೈಗೆ ಸಿಗದೇ ತಪ್ಪಿಸಿಕೊಂಡಿರುತ್ತಾರೆ. ಹೀಗಾಗಿ ಸಮನ್ಸ್ ನಿಗಮದ ಕಚೇರಿ ಅವರ ಕೋಣೆ ಬಾಗಿಲಿಗೆ ಅಂಟಿಸಿ ಮಹಜರು ಮಾಡಿದ್ದು, ಇದರಿಂದ ನಿಗಮದ ಘನತೆಗೆ ಧಕ್ಕೆ ಬಂದಿದೆ. ಇಲ್ಲದೇ ಕರಕುಶಲ ನಿಗಮದ ಶೋ ರೂಂಗಳಲ್ಲಿ ಗಂಧದ ವಸ್ತುಗಳನ್ನು ರಾಘವೇಂದ್ರ ಶೆಟ್ಟಿ ತೆಗೆದುಕೊಂಡು ಹೋಗಿದ್ದು, ಹಣ ಪಾವತಿ ಮಾಡಿರುವುದಿಲ್ಲ. ಈ ಕುರಿತು ನಾನು ನೋಟಿಸ್ ನೀಡಿದ್ದು, ನೋಟಿಸ್ ಪ್ರತಿ ಲಗತ್ತಿಸಿದ್ದೇನೆ ಎಂದು ರೂಪಾ ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ನಿಗಮಕ್ಕೆ ಒಂದು ಪೈಸೆ ಕೂಡ ಪ್ರಯೋಜನ ಆಗಿರುವುದಿಲ್ಲ:
ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಅವರ ವೇತನ, ಭತ್ಯೆ, ವಿಮಾನ ವೆಚ್ಚ ಸೇರಿ ಪ್ರತಿ ತಿಂಗಳು ಐದು ಲಕ್ಷ ರೂ. ನಿಗಮದಿಂದ ವೆಚ್ಚ ಮಾಡಲಾಗುತ್ತಿದೆ. ಇವರು ಬಂದಾಗಿನಿಂದ ಸುಮಾರು ಒಂದು ಕೋಟಿ ರೂ. ನಿಗಮ ವೆಚ್ಚ ಮಾಡಿದ್ದು, ಇದಕ್ಕೆ ಸರಿಸಮನಾಗಿ ನಿಗಮಕ್ಕೆ ಒಂದು ಪೈಸೆ ಕೂಡ ಪ್ರಯೋಜನ ಆಗಿರುವುದಿಲ್ಲ. ರಾಘವೇಂದ್ರ ಶೆಟ್ಟಿ ನಾಲ್ಕು ಸಿಬ್ಬಂದಿಗೆ ನಿಗಮದಿಂದ ಸಂಬಳ ಮಾಡಿಸಿದ್ದು, ಒಬ್ಬರು ಒಂದು ದಿನ ಕೂಡ ನಿಗಮದಲ್ಲಿ ಕೆಲಸ ಮಾಡಿರುವುದಿಲ್ಲ. ರಾಘವೇಂದ್ರ ಶೆಟ್ಟಿ ಅವರು ತಮ್ಮ ಸಹಿಯಲ್ಲಿಯೇ ಸಂಬಳವನ್ನು ನಿಗಮದಿಂದ ಪಾವತಿ ಮಾಡಿ ಅವರನ್ನು ತಮ್ಮ ಕೆಲಸಕ್ಕೆ ಬಳಸಿಕೊಂಡು ಅಧಿಕಾರ ದುರುಪಯೋಗ ಪಡಿಸಿಕೊಂಡಿರುತ್ತಾರೆ ಎಂದು ವರದಿಯಲ್ಲಿ ವಿವರಿಸಿದ್ದಾರೆ.