ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರವಿ ಚನ್ನಣ್ಣನವರ್ ಅಬ್ಬರ
ದೇವನಹಳ್ಳಿ, ಆಗಸ್ಟ್ 15: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆಯ ಪೊಲೀಸ್ ಎಸ್ಪಿ ಆಗಿ ವರ್ಗಾವಣೆಗೊಂಡಿರುವ ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಅವರು ಜಿಲ್ಲೆಯ ಪರ್ಯಟನೆ ಈಗಾಗಲೇ ಆರಂಭಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೆ ನೆಲಮಂಗಲ ತಾಲ್ಲೂಕಿನಲ್ಲಿ ರಾತ್ರಿ ಗಸ್ತು ತಿರುಗಿದ್ದ ರವಿ ಚನ್ನಣ್ಣನವರ್ ಅವರು, ನಂತರ ಹೊಸಕೋಟೆಗೆ ಭೇಟಿ ನೀಡಿ ಸ್ಥಳೀಯ ಪೊಲೀಸ್ ವ್ಯವಸ್ಥೆಗೆ ಚುರುಕು ಮುಟ್ಟಿಸಿದ್ದರು. ಇಂದು ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣಕ್ಕೆ ಭೇಟಿ ನೀಡಿ ಪೊಲೀಸರು ಮತ್ತು ಸಾರ್ವಜನಿಕರೊಂದಿಗೆ ಸಭೆಯಲ್ಲಿ ರವಿ ಚನ್ನಣ್ಣನವರ್ ಭಾಗಿಯಾದರು.
ರವಿ ಚನ್ನಣ್ಣನವರ್ ಅವರ ಬರುವಿಕೆಯನ್ನು ತಿಳಿದು ಹಲವಾರು ಜನ ವಿಜಯಪುರ ಪೊಲೀಸ್ ಸ್ಟೇಶನ್ ಹಾಗೂ ಜನಸಂಪರ್ಕ ಸಭೆ ಆಯೋಜಿಸಿದ್ದ ಗಿರಿಜಾಶಂಕರ ಕಲ್ಯಾಣ ಮಂಟಪದ ಬಳಿ ನೆರೆದಿದ್ದರು. ತಮ್ಮೊಂದಿಗೆ ಚಿತ್ರ ಕ್ಲಿಕ್ಕಿಸಿಕೊಳ್ಳಲು ಬಂದ ಅಭಿಮಾನಿಗಳೊಂದಿಗೆ ಪ್ರೀತಿ, ಸಹನೆಯಿಂದ ವರ್ತಿಸಿ ಜನರ ಮನಸ್ಸನ್ನು ಮತ್ತೊಮ್ಮೆ ಗೆದ್ದರು ರವಿ ಚೆನ್ನಣ್ಣನವರ್.
ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿ: ರವಿ ಚನ್ನಣ್ಣನವರ್
ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ರವಿ ಚನ್ನಣ್ಣನವರ್, ಅಪರಾಧ ಮಾಡುವವರಿಗೆ ಶಿಕ್ಷೆ ಕಾದಿದೆ. ಆದರೆ ಇದಕ್ಕೆ ಸಾರ್ವಜನಿಕರು ಪೊಲೀಸರಿಗೆ ನೆರವು ನೀಡಬೇಕು, ಕಾನೂನು ಬಾಹಿರ ಚಟುವಟಿಕೆ ನಡೆಸುವುದು ಕಣ್ಣಿಗೆ ಬಿದ್ದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿ, ಮಾಹಿತಿ ನೀಡಿದವರ ಹೆಸರು ಗೌಪ್ಯವಾಗಿಡಲಾಗುತ್ತದೆ ಎಂದು ಹೇಳಿದರು.
ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಿ: ರವಿ ಚನ್ನಣ್ಣನವರ್
ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಜನರ ಪಾಲ್ಗೊಳ್ಳುವಿಕೆಗೆ ಮನವಿ ಮಾಡಿದ ರವಿ ಚನ್ನಣ್ಣನವರ್, 'ಟ್ರಾಫಿಕ್ ಸಮಸ್ಯೆಗೆ ಪೊಲೀಸ್ ಇಲಾಖೆಯಿಂದ ಮಾತ್ರವೇ ಬಗೆಹರಿಸಲಿಕ್ಕೆ ಸಾಧ್ಯವಿಲ್ಲ. ಸಂಘ ಸಂಸ್ಥೆಗಳ, ಪದವಿ ವಿದ್ಯಾರ್ಥಿಗಳು ಸಹಕರಿಸಿ ಸ್ವಯಂಪ್ರೇರಿತವಾಗಿ ಮುಂದೆ ಬಂದರೆ ಅಂಥವರನ್ನು ಟ್ರಾಫಿಕ್ ವಾರ್ಡನ್ಗಳಾಗಿ ನೇಮಕ ಮಾಡಿಕೊಳ್ಳುತ್ತೇವೆ. ಸಮವಸ್ತ್ರ ಕೊಡ್ತೇವೆ, ಗುರುತಿನ ಚೀಟಿ ಕೊಡ್ತೇವೆ, ವಾರದಲ್ಲಿ ಎರಡು ದಿನ ದಿನಕ್ಕೆ ಎರಡು ಗಂಟೆಗಳ ಕಾಲ ಮಾತ್ರ ಅವರು ಸೇವೆ ಮಾಡಬೇಕಾಗುತ್ತದೆ, ಇದರಿಂದ ಒಟ್ಟಾಗಿ ಸಮಸ್ಯೆ ಬಗೆಹರಿಸಿದಂತಾಗುತ್ತದೆ ಎಂದರು. ಸೇವೆ ಮಾಡಲಿಚ್ಛಿಸುವವರು 18 ರಿಂದ 60 ವರ್ಷದೊಳಗಿನವರಾಗಿರಬೇಕು, ಅಪರಾಧ ಹಿನ್ನೆಲೆಯಿಲ್ಲದವರಾಗಿರಬೇಕು ಎಂದು ಅವರು ಹೇಳಿದರು.
ಎರಡು ತಿಂಗಳಿಗೊಮ್ಮೆ ವೃತ್ತಿ ವ್ಯಾಪ್ತಿ ಸಭೆ: ರವಿ ಚನ್ನಣ್ಣನವರ್
ಎರಡು ತಿಂಗಳಿಗೊಮ್ಮೆ ಸರ್ಕಲ್ ವ್ಯಾಪ್ತಿಯಲ್ಲಿ ಸಭೆ ಮಾಡ್ತೇವೆ. ಜನಸಂಪರ್ಕ ಸಭೆಯಲ್ಲಿ ಕೇಳಿಬಂದ ದೂರುಗಳಲ್ಲಿ ಶೇ ೫೦ ರಷ್ಟು ಸಮಸ್ಯೆಗಳು ಬಗೆಹರಿದರೆ ಮಾತ್ರವೇ ಮುಂದಿನ ಸಭೆ ಮಾಡುತ್ತೇವೆ ಎಂದು ಭರವಸೆ ನೀಡಿದ ರವಿ ಚನ್ನಣ್ಣನವರ್, ಪೊಲೀಸ್ ನಿರ್ದೇಶನಗಳನ್ನು ಮೀರುವವರನ್ನು ಗಡಿಪಾರು ಮಾಡಿ ರೌಡಿಶೀಟರ್ ಕೇಸು ದಾಖಲಿಸುತ್ತೇವೆ. ಶಾಲೆಗಳಲ್ಲಿ ಪೋಷಕರು, ಶಿಕ್ಷಕರ ಸಭೆ ಮಾಡ್ತೇವೆ. ನಾಗರಿಕರ ಹಕ್ಕುಗಳ ರಕ್ಷಣೆ ನಮ್ಮ ಮೂಲ ಧ್ಯೇಯ ಎಂದರು.
ಹಲವು ಪೊಲೀಸ್ ಅಧಿಕಾರಿಗಳು ಭಾಗಿ
ಜನಸಂಪರ್ಕ ಸಭೆಯಲ್ಲಿ ದೊಡ್ಡಬಳ್ಳಾಪುರ ಉಪವಿಭಾಗದ ಡಿವೈಎಸ್ಪಿ ಮೋಹನ್ಕುಮಾರ್ ವಿಜಯಪುರ ವೃತ್ತ ನಿರೀಕ್ಷಕ ಪ್ರಕಾಶ್, ಇಲಾಖೆಯ ಇತರ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡ ಎಂ.ಸತೀಶ್ಕುಮಾರ್ ಹಾಜರಿದ್ದರು.