ಸಿದ್ದರಾಮಯ್ಯ, ಎಚ್ಡಿಕೆ, ಬಿಎಸ್ವೈ ಮೂವರಿಗೂ 'ನಂಬಿಕಸ್ಥ' ಹಾಲೀ ಇಂಟೆಲಿಜೆನ್ಸ್ ಮುಖ್ಯಸ್ಥ
ಬೆಂಗಳೂರು, ಆ 2: ಈ ಹಿಂದೆಯೂ ಹರಿದಾಡುತ್ತಿದ್ದ ಸುದ್ದಿಗೆ ಜುಲೈ 31ರಂದು ಸರಕಾರ ತೆರೆ ಎಳೆದಿತ್ತು. ಬೆಂಗಳೂರು ನಗರದ ನೂತನ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ಅಧಿಕಾರ ಸ್ವೀಕರಿಸಿದ್ದಾರೆ.
ತಮ್ಮ ಒಂದು ವರ್ಷದ ಅವಧಿಯಲ್ಲಿ, ಅಯೋಧ್ಯೆ ತೀರ್ಪು, ಸಿಎಎ, ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ಸಂಬಂಧದ ಪ್ರತಿಭಟನೆ, ಕೊರೊನಾ ಸೇರಿದಂತೆ ಹಲವು ಸವಾಲಿನ ಜವಾಬ್ದಾರಿಯನ್ನು ನಿರ್ವಹಿಸಿದ್ದ ಭಾಸ್ಕರ್ ರಾವ್ ಅವರನ್ನು ಬೇರೊಂದು ಇಲಾಖೆಗೆ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರಿನ ನೂತನ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ನೇಮಕ
ಉತ್ತರಾಂಚಲ ಮೂಲದ, 1990ನೇ ಬ್ಯಾಚಿನ ಕಮಲ್ ಪಂತ್ ನಿರ್ವಹಿಸುತ್ತಿದ್ದ ಗುಪ್ತದಳ (ಇಂಟೆಲಿಜೆನ್ಸ್) ಇಲಾಖೆಗೆ ನೂತನ ಎಡಿಜಿಪಿಯಾಗಿ ಬಿ.ದಯಾನಂದ ಅವರನ್ನು ನೇಮಿಸಲಾಗಿದೆ. 1994ರ ಬ್ಯಾಚಿನ ದಯಾನಂದ, ಈ ಹಿಂದೆಯೂ ಈ ಖಾತೆಯನ್ನು ನಿಭಾಯಿಸಿದ್ದವರು.
ಕಾನೂನು, ಸುವ್ಯವಸ್ಥೆ, ಮಾಹಿತಿ ಸೇರಿದಂತೆ ಹಲವು ವಿಚಾರಗಳಲ್ಲಿ ಸರಕಾರಕ್ಕೆ ಅತ್ಯಂತ ಆಯಕಟ್ಟಿನ ಹುದ್ದೆಯಿದಾಗಿದ್ದು, ಯಡಿಯೂರಪ್ಪ, ಆ ಸ್ಥಾನಕ್ಕೆ, ದಯಾನಂದ ಅವರನ್ನು ನೇಮಿಸಿದ್ದಾರೆ. ಆ ಮೂಲಕ, ಮತ್ತೆ ಆ ಹುದ್ದೆ ದಯಾನಂದ ಅವರ ಪಾಲಾಗಿದೆ.
ಪಾಂಡೆಯವರನ್ನು ವರ್ಗಾಯಿಸಿ, ಆ ಜಾಗಕ್ಕೆ ಬಿ.ದಯಾನಂದ
2019ರ ಸಾರ್ವತ್ರಿಕ ಚುನಾವಣೆಯ ವೇಳೆ, ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಆ ವೇಳೆ, ಅಂದರೆ ಫೆಬ್ರವರಿಯಲ್ಲಿ 31 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ, ಎಚ್ಡಿಕೆ ಸರಕಾರ ಆದೇಶ ಹೊರಡಿಸಿತ್ತು. ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿದ್ದ ಅಮರ್ ಕುಮಾರ್ ಪಾಂಡೆಯವರನ್ನು ವರ್ಗಾಯಿಸಿ, ಆ ಜಾಗಕ್ಕೆ ಬಿ.ದಯಾನಂದ ಅವರನ್ನು ಎಚ್ಡಿಕೆ ನೇಮಿಸಿದ್ದರು.
ಕಮಲ್ ಪಂತ್ ಅವರು ಇಂಟೆಲೆಜಿನ್ಸ್ ಮುಖ್ಯಸ್ಥ
ಇದಾದ ಕೆಲವೇ ತಿಂಗಳಲ್ಲಿ ಬಿ ದಯಾನಂದ ಅವರನ್ನು ಮತ್ತೆ ವರ್ಗಾವಣೆ ಮಾಡಲಾಗಿತ್ತು. ಜುಲೈ 2019ರಲ್ಲಿ ಹನ್ನೊಂದು ಅಧಿಕಾರಿಗಳನ್ನು ಬಿಎಸ್ವೈ ಸರಕಾರ ವರ್ಗಾವಣೆ ಮಾಡಿತ್ತು. ಅದರಲ್ಲಿ, ದಯಾನಂದ ಅವರನ್ನು ಗುಪ್ತದಳದಿಂದ ಕೆಎಸ್ಆರ್ಪಿ ಐಜಿಪಿಯಾಗಿ ನೇಮಿಸಲಾಯಿತು. ಕಮಲ್ ಪಂತ್ ಅವರು ಇಂಟೆಲೆಜಿನ್ಸ್ ಮುಖ್ಯಸ್ಥರಾದರು.
ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಐದು ಅಧಿಕಾರಿಗಳು ಗುಪ್ತಚರ ಇಲಾಖೆಯ ಎಡಿಜಿಪಿ
ಇನ್ನು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯ ಐದು ವರ್ಷಗಳಲ್ಲಿ, ಐದು ಅಧಿಕಾರಿಗಳನ್ನು ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿ ಬದಲಾವಣೆ ಮಾಡಲಾಗಿತ್ತು. ಅವರೆಂದರೆ, ಗೋಪಾಲ್ ಹೊಸೂರು, ಆಶಿಸ್ ಮೋಹನ್ ಪ್ರಸಾದ್, ಸೌಮೇಂದು ಮುಖರ್ಜಿ, ಬಿ.ದಯಾನಂದ ಮತ್ತು ಎಂ.ಎನ್.ರೆಡ್ಡಿ. ಗುಪ್ತದಳದ ಮುಖ್ಯಸ್ಥರಾಗಿದ್ದ ದಯಾನಂದ ಅವರನ್ನು ಸಿದ್ದರಾಮಯ್ಯ ಸರಕಾರ, ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆಯ ಕಮಿಷನರ್ ಆಗಿ ವರ್ಗಾಯಿಸಿದ್ದರು.
ಮೂವರು ಸಿಎಂಗೂ ನಂಬಿಕಸ್ಥ ಹಾಲೀ ಇಂಟೆಲಿಜೆನ್ಸ್ ಐಪಿಎಸ್ ಅಧಿಕಾರಿ ಬಿ.ದಯಾನಂದ
ಆ ಮೂಲಕ, ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪನವರ ಅವಧಿಯಲ್ಲಿ ಬಿ.ದಯಾನಂದ, ಗುಪ್ತದಳದ ಉಸ್ತುವಾರಿ ನೋಡಿಕೊಂಡ ಐಪಿಎಸ್ ಅಧಿಕಾರಿ ಎನ್ನುವ ಅಪರೂಪದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬಹುತೇಕವಾಗಿ, ಗುಪ್ತದಳ ಇಲಾಖೆ ಮುಖ್ಯಮಂತ್ರಿಗಳ ಸುಪರ್ದಿಯಲ್ಲಿ ಇರುವುದರಿಂದ, ನೇರವಾಗಿ ಸಿಎಂ ಕಚೇರಿಯೇ, ಗುಪ್ತದಳ ಇಲಾಖೆಯ ಎಡಿಜಿಪಿ/ಕಮಿಷನರ್ ಹುದ್ದೆ ನೇಮಕದಲ್ಲಿ ಮುತುವರ್ಜಿಯನ್ನು ವಹಿಸುತ್ತದೆ.