IPL 2020: ಆರ್ಸಿಬಿ ಆಂಥೆಮ್ಗಿಂತಲೂ ಪಂಜಾಬ್ ತಂಡದಲ್ಲೇ ಕನ್ನಡ ಹೆಚ್ಚು!
ಬೆಂಗಳೂರು, ಸೆಪ್ಟೆಂಬರ್ 21: ಐಪಿಎಲ್ 2020 ಶುರುವಾದ ಬಳಿಕ ಎರಡನೆಯ ಪಂದ್ಯವೇ ಕ್ರಿಕೆಟ್ ಪ್ರೇಮಿಗಳನ್ನು ಉಗುರು ಕಚ್ಚುವಂತೆ ರೋಚಕತೆಯನ್ನು ಸೃಷ್ಟಿಸಿತ್ತು. ಇನ್ನೇನು ಕಿಂಗ್ಸ್ ಇಲೆವೆನ್ ಗೆದ್ದೇಬಿಟ್ಟಿತು ಎನ್ನುವ ಪಂದ್ಯ ಟೈ ಆಗಿ ಕೊನೆಗೆ ಸೂಪರ್ ಓವರ್ನಲ್ಲಿ ದೆಹಲಿ ತಂಡದ ಪಾಲಾಯಿತು. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆದ ಉದ್ಘಾಟನಾ ಪಂದ್ಯಕ್ಕಿಂತಲೂ ಈ ಪಂದ್ಯ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ. ಇದಕ್ಕೆ ಕಾರಣ ಕಿಂಗ್ಸ್ ಇಲೆವೆನ್ ತಂಡದಲ್ಲಿ ಕನ್ನಡಿಗರು ಹೆಚ್ಚಿರುವುದು.
ಆರ್ಸಿಬಿ ತಂಡದಲ್ಲಿ ಕರ್ನಾಟಕದ ಆಟಗಾರರಿಗೆ ಹೆಚ್ಚು ಅವಕಾಶ ಸಿಗುತ್ತಿಲ್ಲ. ಕಳೆದ ಆವೃತ್ತಿಗಳಲ್ಲಿ ಕರ್ನಾಟಕದ ಆಟಗಾರರು ತಂಡದಲ್ಲಿದ್ದರೂ ಅವರಿಗೆ ಒಂದೂ ಪಂದ್ಯವನ್ನು ಆಡಿಸಿರಲಿಲ್ಲ. ಈ ಆವೃತ್ತಿಯಲ್ಲಿಯೂ ಆರ್ಸಿಬಿಯಲ್ಲಿ ಇಬ್ಬರು ಕನ್ನಡಿಗರಿದ್ದಾರೆ. ಎಷ್ಟು ಅವಕಾಶ ಸಿಗಲಿದೆ ಎನ್ನುವುದು ಈಗಿರುವ ಪ್ರಶ್ನೆ. ಈ ಮಧ್ಯೆ ಆರ್ಸಿಬಿ ಕನ್ನಡಿಗರ ಭಾವನೆಗಳನ್ನು ಮತ್ತಷ್ಟು ಕೆಣಕಿದೆ.
CSK ತಂಡದಲ್ಲಿ ಹಿರಿಯ ಆಟಗಾರರದ್ದೇ ಗ್ಯಾಂಗ್
ಇತ್ತೀಚೆಗೆ ಬಿಡುಗಡೆಯಾದ ಆರ್ಸಿಬಿ ಆಂಥೆಮ್ನಲ್ಲಿ ನೆಪಮಾತ್ರಕ್ಕೆ ಒಂದೆರಡು ಕನ್ನಡದ ಸಾಲುಗಳಿದ್ದವು. ಬೆಂಗಳೂರನ್ನು ಪ್ರತಿನಿಧಿಸುವ ತಂಡದ ಹಾಡಿನಲ್ಲಿ ಮುಕ್ಕಾಲು ಭಾಗ ಹಿಂದಿಯೇ ಇದೆ ಎಂಬ ಆರೋಪ ಕೇಳಿಬಂದಿದೆ. ಅದರ ಬಳಿಕ ಮತ್ತೊಂದು ಹಾಡನ್ನು ಬಿಡುಗಡೆ ಮಾಡಿದರೂ ಅದರಲ್ಲಿ ಕೂಡ ಹೆಚ್ಚೇನೂ ಕನ್ನಡವಿರಲಿಲ್ಲ. ಹೀಗೆ ಭಾವನಾತ್ಮಕವಾಗಿ ಆರ್ಸಿಬಿಯೊಂದಿಗೆ ಬೆಸೆದುಕೊಂಡಿದ್ದ ಕನ್ನಡಿಗರಿಗೆ ಆರ್ಸಿಬಿ ನಡೆ ನೋವುಂಟುಮಾಡಿದೆ. ಇದೇ ಕಾರಣಕ್ಕೆ ಕನ್ನಡಿಗರ ಅಭಿಮಾನ ಪಂಜಾಬ್ ತಂಡದತ್ತ ಬದಲಾಗುತ್ತಿದೆ. ಮುಂದೆ ಓದಿ.
ಕನ್ನಡಿಗರೇ ಹೆಚ್ಚಿರುವ ತಂಡ
ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೈದಾನದಲ್ಲಿ ಕನ್ನಡದ ಮಾತುಗಳನ್ನು ಕೇಳಿ ಕರ್ನಾಟಕದ ಕ್ರಿಕೆಟ್ ಪ್ರೇಮಿಗಳು ರೋಮಾಂಚಿತರಾಗಿದ್ದಾರೆ. ಕನ್ನಡಿಗ ಕೆ.ಎಲ್. ರಾಹುಲ್ ನಾಯಕರಾಗಿರುವ ತಂಡದಲ್ಲಿ ಒಟ್ಟು ಐವರು ಕನ್ನಡಿಗರಿದ್ದಾರೆ. ಭಾನುವಾರದ ಪಂದ್ಯದಲ್ಲಿ ನಾಲ್ವರು ಆಡಿದ್ದರು. ಹಾಗೆಯೇ ಈ ತಂಡಕ್ಕೆ ಕನ್ನಡಿಗ ಅನಿಲ್ ಕುಂಬ್ಳೆ ಕೋಚ್ ಎನ್ನುವುದು ಗಮನಾರ್ಹ ಸಂಗತಿ.
ಕನ್ನಡದಲ್ಲಿ ಮಾತುಕತೆ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದುದ್ದಕ್ಕೂ ಕನ್ನಡದಲ್ಲಿಯೇ ಮಾತುಗಳು ಪದೇ ಪದೇ ಕೇಳಿಬರುತ್ತಿತ್ತು. ಆರಂಭಿಕರಾಗಿ ಬ್ಯಾಟಿಂಗ್ ಇಳಿದಿದ್ದ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರವಾಲ್ ಕನ್ನಡದಲ್ಲಿಯೇ ಹೆಚ್ಚು ಸಂಭಾಷಿಸುತ್ತಿದ್ದರು. ಗೌತಮ್ ಹಾಗೂ ಮಯಾಂಕ್ ಕ್ರೀಸ್ನಲ್ಲಿದ್ದಾಗ, 'ಓಡು', 'ಬಾ', 'ಎರಡು', 'ಬೇಡ' ಮುಂತಾದವು ಸಾಮಾನ್ಯವಾಗಿ ಕೇಳಿಸುತ್ತಿದ್ದವು.
IPL 2020: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ದೌರ್ಬಲ್ಯ ಏನು ಗೊತ್ತೇ?
ಆಂಥೆಮ್ಗಿಂತ ಹೆಚ್ಚು ಕನ್ನಡ
ದೂರದ ದುಬೈನಲ್ಲಿ ಕನ್ನಡಿಗರ ಮಾತುಕತೆ ಕೇಳಿ ಅಭಿಮಾನಿಗಳು ರೋಮಾಂಚಿತರಾಗಿದ್ದಾರೆ. ಬೆಂಗಳೂರನ್ನು ಪ್ರತಿನಿಧಿಸುವ ಆರ್ಸಿಬಿಯ ಆಂಥೆಮ್ನಲ್ಲಿರುವ ಕನ್ನಡಕ್ಕಿಂತಲೂ ಹೆಚ್ಚು ಕನ್ನಡ ಪಂಜಾಬ್ ತಂಡದಲ್ಲಿ ಬಳಕೆಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಮೀಮ್ಸ್ಗಳು ಇದರ ಮೇಲೆಯೇ ಹರಿದಾಡುತ್ತಿವೆ.
ರಾಹುಲ್ ವಿಡಿಯೋ ವೈರಲ್
ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟಿಂಗ್ ವೇಳೆ ನಾಯಕ ಕೆ.ಎಲ್. ರಾಹುಲ್, ಕ್ಷೇತ್ರರಕ್ಷಣೆ ಸಜ್ಜುಗೊಳಿಸುವಾಗ ಆಡಿದ ಮಾತಿನ ವಿಡಿಯೋ ವೈರಲ್ ಆಗಿದೆ. 'ಮುಂದೆ ಬಾರೋ ***' ಎಂದು ಬೈಯುವ ವಿಡಿಯೋವನ್ನು ಜನರು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದು ಕರ್ನಾಟಕದ ಗೆಳೆಯನನ್ನೇ ಉದ್ದೇಶಿಸಿ ಆಡಿದ ಮಾತು.
ನೋಡ್ಕೊಂಡು ಮಾತಾಡ್ರೋ
ಈ ಸಂಭಾಷಣೆಯನ್ನು ಗಮನಿಸಿರುವ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್, 'Stump mic ಹತ್ರ ಇರುವಾಗ ಸ್ವಲ್ಪ ನೋಡ್ಕೊಂಡು ಮಾತಾಡ್ರೋ ಹುಡುಗ್ರಾ' ಎಂದು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ. ಕರ್ನಾಟಕದ ಆಟಗಾರರೇ ಹೆಚ್ಚಿರುವ ಈ ತಂಡವನ್ನು 'ಕಿಂಗ್ಸ್ ಇಲೆವೆನ್ ಕರ್ನಾಟಕ' ಎಂದೇ ಅನೇಕರು ಕರೆದಿದ್ದಾರೆ.
Recommended Video
ರಾಜಸ್ಥಾನ ತಂಡದಲ್ಲಿಯೂ ಮೂವರು ಕನ್ನಡಿಗರು
ರಾಜಸ್ಥಾನ ರಾಯಲ್ಸ್ ತಂಡದಲ್ಲಿ ರಾಬಿನ್ ಉತ್ತಪ್ಪ, ಶ್ರೇಯಸ್ ಗೋಪಾಲ್ ಮತ್ತು ಅನಿರುದ್ಧ್ ಜೋಷಿ ಕರ್ನಾಟಕದ ಆಟಗಾರರಾಗಿದ್ದಾರೆ. ಹೀಗಾಗಿ ಈ ಮೂವರ ಮೈದಾನದಲ್ಲಿದ್ದಾಗಲೂ ಕನ್ನಡದ ಮಾತುಗಳನ್ನು ನಿರೀಕ್ಷಿಸಬಹುದು. ಆದರೆ ಪಂಜಾಬ್ ತಂಡ ಈ ಪಂದ್ಯದ ಮೂಲಕ ಮನರಂಜನೆಯ ಜತೆಗೆ, ಕನ್ನಡಿಗರಿಗೆ ಭಾವನಾತ್ಮಕಾಗಿಯೂ ಹತ್ತಿರವಾಗಿದೆ.