ನವೆಂಬರ್ 23, 24 ರಂದು ರಾಜ್ಯದಲ್ಲಿ ಹೂಡಿಕೆದಾರರ ಸಮಾವೇಶ -ದೇಶಪಾಂಡೆ
ಬೆಂಗಳೂರು, ಸೆಪ್ಟೆಂಬರ್ 7: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಉತ್ತೇಜನ ನೀಡಲು ಹಾಗೂ ಉದ್ಯೋಗ ಸೃಷ್ಟಿಸುವ ಸಂಬಂಧ ನವೆಂಬರ್ 23, 24 ರಂದು ಬೆಂಗಳೂರಿನಲ್ಲಿ 'ವ್ಯಾಪಾರ ಅಭಿವೃದ್ಧಿ ಹಾಗೂ ಹೂಡಿಕೆದಾರರ ಸಮಾವೇಶ'ವನ್ನು ಆಯೋಜಿಸಲಾಗಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್. ವಿ. ದೇಶಪಾಂಡೆ ತಿಳಿಸಿದರು.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಸಮಾವೇಶದ ಲಾಂಛನ ಬಿಡುಗಡೆ ಮಾಡಿ ಹಾಗೂ ವೆಬ್ಸೈಟ್ಗೆ (http://investkarnataka.co.in/vdis2017/) ಚಾಲನೆ ನೀಡಿ ಮಾತನಾಡಿದ ಸಚಿವರು, ಸಣ್ಣ ಕೈಗಾರಿಕೆಗಳಿಂದಲೇ ಹೆಚ್ಚು ಉದ್ಯೋಗ ಸೃಷ್ಠಿ ಸಾಧ್ಯವಿದ್ದು ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಹೆಚ್ಚಿನ ಉತ್ತೇಜನ ನೀಡಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
"ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನವೆಂಬರ್ 23, 24 ರಂದು ಎರಡು ದಿನಗಳ ಕಾಲ ಈ ಸಮಾವೇಶ ನಡೆಯುಲಿದೆ. ದೇಶ, ವಿದೇಶಗಳ ಹಲವು ಸಣ್ಣ ಕೈಗಾರಿಕೆಗಳು ಈ ಸಮಾವೇಶದಲ್ಲಿ ಭಾಗವಹಿಸಲಿವೆ," ಎಂದು ಮಾಹಿತಿ ನೀಡಿದರು.
ಉತ್ಪಾದನಾ ವಲಯಗಳಿಂದ ಹೆಚ್ಚು ಉದ್ಯೋಗ ಸೃಷ್ಠಿ ಸಾಧ್ಯವಿದೆ. ಹಾಗಾಗಿ ಉತ್ಪಾದನಾ ವಲಯಕ್ಕೆ ಈ ಸಮಾವೇಶದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
"ಎರಡು ದಿನಗಳ ಕಾಲ ನಡೆಯುವ ಈ ಸಮಾವೇಶದಲ್ಲಿ ಏರೊಸ್ಪೆಸ್ ಮತ್ತು ಡಿಫೆನ್ಸ್ ಎಕ್ಯೂಮೆಂಟ್ಸ್ , ಜೈವಿಕ ಔಷಧಿ, ಕೃಷಿ ಮತ್ತು ಆಹಾರ ಸಂಸ್ಕರಣೆ, ಆಟೋಮೊಬೈಲ್ ಮತ್ತು ಜವಳಿ ವಿಷಯಗಳಿಗೆ ಸಂಬಂಧಿಸಿದಂತೆ ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗುವುದು," ಎಂದು ದೇಶಪಾಂಡೆ ಹೇಳಿದರು.
ಸಮಾವೇಶದ ಯಶಸ್ವಿಗಾಗಿ ಮುಂಬೈ, ನವದೆಹಲಿ, ಚೆನ್ನೈ, ಹೈದರಾಬಾದ್, ಪುಣೆ, ಅಹಮದಾಬಾದ್ ಹಾಗೂ ಜಮ್ಷೆಡ್ಪುರಗಳಲ್ಲಿ ರೋಡ್ ಶೋಗಳನ್ನು ಏರ್ಪಡಿಸಿ ರಾಜ್ಯದಲ್ಲಿನ ಉತ್ಪಾದನಾ ಪರಿಸರ ಮತ್ತು ಹೂಡಿಕೆಗಿರುವ ವಿಫುಲ ಅವಕಾಶಗಳ ಬಗ್ಗೆ ಪರಿಚಯಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ 15 ಲಕ್ಷ ಉದ್ಯೋಗ ಸೃಷ್ಠಿಸುವ ಗುರಿಹೊಂದಲಾಗಿದ್ದು, ನಿಗದಿತ ಗುರಿ ಸಾಧಿಸಲಾಗುವುದು ಎಂದು ಸಚಿವರು ತಿಳಿಸಿದರು.