INTERVIEW: ಕೊರೊನಾ, ಆರಂಭದಲ್ಲಿ ಸವಾಲು ಎದುರಾಗಿದ್ದು ಸುಳ್ಳಲ್ಲ: ಶ್ರೀರಾಮುಲು
ಬೆಂಗಳೂರು, ಮೇ 19: ದೇಶ, ವಿದೇಶಗಳಿಂದ ಜನರು ರಾಜ್ಯಕ್ಕೆ ಬರುತ್ತಿರುವುದು, ಸಾರ್ವಜನಿಕ ಸಂಚಾರ ವ್ಯವಸ್ಥೆಯನ್ನು ಮತ್ತೆ ಆರಂಭಿಸಿರುವುದು. ಲಾಕ್ಡೌನ್ನ್ನು ಸಂಪೂರ್ಣವಾಗಿ ಸಡಿಲಿಕೆ ಮಾಡಿರುವುದು ಕೊರೊನಾ ವೈರಸ್ ಸೋಂಕು ಮತ್ತಷ್ಟು ಹರಡುವ ಸಾಧ್ಯತೆಗಳನ್ನು ಹೆಚ್ಚಿಸಿದೆ. ಇದೇ ಆತಂಕ ರಾಜ್ಯದ ಜನತೆಯನ್ನೂ ಕಾಡುತ್ತಿದೆ.
ಈ ಎಲ್ಲ ವಿಷಯಗಳ ಬಗ್ಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಮಾತನಾಡಿದ್ದಾರೆ. ಮೇ ಅಂತ್ಯದೊಳಗೆ ರಾಜ್ಯದಲ್ಲಿ ಕೊರೊನಾ ವೈರಸ್ ಪರೀಕ್ಷೆ ಮಾಡುವ ಲ್ಯಾಬ್ಗಳ ಸಂಖ್ಯೆ 60ಕ್ಕೆ ಏರಿಕೆಯಾಗಲಿದೆ. ಜನರು ಜಾಗ್ರತರಾಗಿದ್ದರೆ ಸಾಕು, ಭಯ ಪಡುವುದು ಬೇಡ ಎಂದು ಆರೋಗ್ಯ ಸಚಿವ ಶ್ರೀರಾಮುಲು ರಾಜ್ಯದ ಜನತೆಗೆ ಭರವಸೆ ತುಂಬಿದ್ದಾರೆ. ಲಾಕ್ಡೌನ್ ಸಡಿಲಿಕೆ, ಕೊರೊನಾ ವೈರಸ್ ನಿರ್ವಹಣೆ ಕುರಿತು 'ಒನ್ಇಂಡಿಯಾ' ಜೊತೆಗೆ EXCLUSIVE ಆಗಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ಸಂದರ್ಶನ ನಿಮಗಾಗಿ.
ಮೇ 14ರಿಂದ ಖಾಸಗಿ ಆಸ್ಪತ್ರೆಗಳ OPD ಆರಂಭ: ಆರೋಗ್ಯ ಸಚಿವ ಶ್ರೀರಾಮುಲು
'ಜೀವ ಇದ್ದರೆ ಜೀವನ'
ಒನ್ಇಂಡಿಯಾ: ರಾಜ್ಯದಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಹೇಗಿದೆ? ಆರೋಗ್ಯ ಇಲಾಖೆ ಸೋಂಕು ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟಿದೆಯಾ?
ಆರೋಗ್ಯ ಸಚಿವ ಬಿ ಶ್ರೀರಾಮುಲು: ರಾಜ್ಯದಲ್ಲಿ ಈಗಾಗಲೇ ಸೊಂಕಿತರ ಸಂಖ್ಯೆ 1373. ಆಗಿದೆ. (19/05/20 ಮಧ್ಯಾಹ್ನ) ನಾವು ಈಗಾಗಲೇ 1,40,024 ಪರೀಕ್ಷೆ ಮಾಡಿದ್ದೀವಿ. ದೇಶದಲ್ಲಿ ಸೋಂಕನ್ನು ವೇಗ ವಾಗಿ ಕಂಟ್ರೋಲ್ ಮಾಡಿದ ರಾಜ್ಯಗಳಲ್ಲಿ ಕರ್ನಾಟಕ ಒಂದು. ಹೀಗಾಗಿ ಎಲ್ಲಾ ನಮ್ಮ ಹಿಡಿತದಲ್ಲಿ ಇದೆ. ನಮ್ಮ ಸರ್ಕಾರ, ನಮ್ಮ ಎಲ್ಲಾ ಇಲಾಖೆಗಳು ಈ ಹೋರಾಟದಲ್ಲಿ ಸಕ್ಸಸ್ ಆಗಿವೆ.
ಒನ್ಇಂಡಿಯಾ: ಇವತ್ತಿನಿಂದ ರಾಜ್ಯದಲ್ಲಿ ಲಾಕ್ಡೌನ್ ಸಡಿಲಿಸಲಾಗಿದೆ, ಲಾಕ್ಡೌನ್ ತೆರವಿನಿಂದ ಸೋಂಕು ಹರಡುವುದು ಹೆಚ್ಚಾಗುವುದಿಲ್ಲವಾ?
ಆರೋಗ್ಯ ಸಚಿವ ಬಿ. ಶ್ರೀರಾಮುಲು: ಸುಮಾರು 50 ದಿನ ಲಾಕ್ಡೌನ್ ಮಾಡಿದ್ದೀವಿ. ನಿರಂತರ ಲಾಕ್ಡೌನ್ ಕಷ್ಟ. 'ಜೀವ ಇದ್ದರೆ ಜೀವನ' ಅಂತ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಹೇಳಿದ್ದಾರೆ. ಅಲ್ಲದೆ ಈ ಸುದೀರ್ಘ ಅವಧಿಯಲ್ಲಿ ಜನರು ಮುಂದೆ ಹೇಗೆ ಬದುಕಬೇಕು ಅನ್ನೋದನ್ನು ಕಲಿತ್ತಿದ್ದಾರೆ . ಸರ್ಕಾರ ನೀಡಿದ ಮಾರ್ಗಸೂಚಿಗಳನ್ನು ಜನ ಪಾಲಿಸಿಕೊಂಡು ಮುನ್ನಡೆದರೆ ದೊಡ್ಡ ಮಟ್ಟದ ಅಪಾಯ ಸಂಭವಿಸುವುದಿಲ್ಲ ಅನ್ನೋದು ನನ್ನ ಭಾವನೆ.
ರಕ್ಷಣೆ ಮಾಡುವುದು ಸರ್ಕಾರದ ಹೊಣೆ
ಒನ್ಇಂಡಿಯಾ: ಬೆಂಗಳೂರಿನಿಂದ ರಾಜ್ಯದ ವಿವಿಧೆಡೆಗೆ ಕಾರ್ಮಿಕರು ಸೇರಿದಂತೆ ಒಂದು ಲಕ್ಷಕ್ಕೂ ಅಧಿಕ ಜನರು ಹೋಗಿದ್ದಾರೆ? ಸೋಂಕು ಹರಡದಂತೆ ತಡೆಯಲು ಏನಾದ್ರು ಯೋಜನೆಗಳಿವೆಯಾ?
ಆರೋಗ್ಯ ಸಚಿವ ಬಿ. ಶ್ರೀರಾಮುಲು: ಎಲ್ಲರನ್ನೂ ಟೆಸ್ಟ್ ಮಾಡಿ ಬಸ್ ಟ್ರೈನ್ ಹತ್ತಿಸಲಾಗಿದೆ. ರೋಗ ಲಕ್ಷಣ ಇರುವವರಿಗೆ ಹೋಗುವ ಅವಕಾಶ ಕೊಟ್ಟಿಲ್ಲ. ಇನ್ನೂ ಅವರೆಲ್ಲ ಯಾವ ಯಾವ ಜಿಲ್ಲೆಗೆ ಹೋಗಿದ್ದಾರೆ ಅಲ್ಲಿಗೂ ಮಾಹಿತಿ ತಲುಪಿಸಲಾಗಿದೆ. ಹೋಮ್ ಕ್ವಾರಂಟೈನ್ ಮಾಡಿಸಲಾಗಿದೆ. ರೋಗವನ್ನು ಹರಡದಂತೆ ತಡೆಯುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಒನ್ಇಂಡಿಯಾ: ಹೊರದೇಶಗಳಿಂದಲೂ ಜನರು ಬರುತ್ತಿದ್ದಾರೆ, ಈ ಸಂದರ್ಭದಲ್ಲಿ ಸೋಂಕು ಹರಡುವುದು ಹೆಚ್ಚಾಗುವುದಿಲ್ಲವೇ? ಅದಕ್ಕೆ ಏನು ಮಾಡುತ್ತೀರಿ?
ಆರೋಗ್ಯ ಸಚಿವ ಬಿ. ಶ್ರೀರಾಮುಲು: ಹೊರದೇಶದಲ್ಲಿ ಇದ್ದರೂ ಕೂಡ ಅವರು ನಮ್ಮವರೆ. ಅವರ ರಕ್ಷಣೆ ಕೂಡ ಸರ್ಕಾರದ ಜವಾಬ್ದಾರಿ. ಹೊರದೇಶದಿಂದ ಬಂದವರನ್ನು ಕೂಡ ಪರೀಕ್ಷಿ ಸಲಾಗಿದೆ. ವಿದೇಶದಿಂದ ಬರುತ್ತಿರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಹೊಟೇಲ್, ವಸತಿಗೃಹಗಳಲ್ಲಿ 14 ದಿನಗಳವರೆಗೆ ಕ್ವಾರಂಟೈನ್ ಮಾಡಲಾಗುತ್ತಿದೆ. ಗರ್ಭಿಣಿಯರು, 10 ವರ್ಷಕಿಂತ ಕೆಳಗಿನ ಮಕ್ಕಳು, 80 ವರ್ಷಕಿಂತ ಮೆಲ್ಪಟ್ಟವರಿಗೆ ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದೆ. ಹೀಗಾಗಿ ಸೋಂಕು ಹರಡುವ ಭಯವಿಲ್ಲ.
ಕೋವಿಡ್ಯೇತರ ಖಾಯಿಲೆಗಳಿಗೆ ಖಾಸಗಿ ವೈದ್ಯರು ಚಿಕಿತ್ಸೆ ನೀಡದಿದ್ದರೆ ನೋಂದಣಿ ರದ್ದು
ಇಲಾಖೆ ಸಮಸ್ಯೆಗಳಿಗೆ ಪರಿಹಾರ
ಒನ್ಇಂಡಿಯಾ: ಒಬ್ಬ ಸಚಿವರಾಗಿ ನಿಮ್ಮ ಇಲಾಖೆಯಲ್ಲಿ ನಿಮಗೆ ಏನಾದರೂ ಕೊರತೆ ಕಾಣಿಸಿದೆಯಾ? ಏನಾದರೂ ನ್ಯೂನತೆಗಳಿವೆ ಸರಿ ಮಾಡಬೇಕು ಅನ್ನಿಸಿದೆಯಾ?
ಆರೋಗ್ಯ ಸಚಿವ ಬಿ. ಶ್ರೀರಾಮುಲು: ಈ ಕೊರೊನಾ ವೈರಸ್ ನಮ್ಮ ಪಾಲಿಗೆ ಹೊಸದು. ಹೀಗಾಗಿ ಆರಂಭದಲ್ಲಿ ಒಂದಷ್ಟು ಸವಾಲು ಎದುರಾಗಿದ್ದು ಸುಳ್ಳಲ್ಲ. ಆದ್ರೆ ಈಗ ಅದನ್ನೆಲ್ಲ ಬಗೆ ಹರಿಸಿದ್ದೇವೆ. ಏನೇ ಸಮಸ್ಯೆ ಎದುರಾದರೂ ಕೂಡ ಅದಕ್ಕೆ ಪರಿಹಾರ ಹುಡುಕಿ ಮುಂದಕ್ಕೆ ಹೋಗ್ತಾ ಇದ್ದೇವೆ.
ಒನ್ಇಂಡಿಯಾ: ಬಳಿಸಿದ, ಹಳೆಯ PPE ಕಿಟ್ಗಳನ್ನು ಖರೀದಿ ಮಾಡಲಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ, ಅದು ನಿಮ್ಮ ಗಮನಕ್ಕೆ ಬಂದಿದೆಯಾ? ನಿಮ್ಮ ಕ್ರಮ ಏನೂ?
ಆರೋಗ್ಯ ಸಚಿವ ಬಿ. ಶ್ರೀರಾಮುಲು: PPE ಕಿಟ್ಗಳ ಖರೀದಿಗೆ ಹಿರಿಯ ಐಎಎಸ್ ಅಧಿಕಾರಿಗಳ ಸಮಿತಿ ರಚಿಸಲಾಗಿದೆ. ಅವರು ಗುಣಮಟ್ಟ ನೋಡಿ ಖರೀದಿ ಮಾಡ್ತಾರೆ. ಇದರಲ್ಲಿ ಏನೇ ಲೋಪ ಕಂಡು ಬಂದರೂ ತನಿಖೆ ಮಾಡಿಸಿ ಕ್ರಮ ತೆಗೆದುಕೊಳ್ಳುತ್ತೇವೆ. ಇಂತಹ ಸಂದರ್ಭದಲ್ಲಿ ಸಣ್ಣ ವ್ಯತ್ಯಾಸವನ್ನು ನಾನು ಸಹಿಸುವುದಿಲ್ಲ.
ಪ್ಲಾಸ್ಮಾ ಚಿಕಿತ್ಸೆ ಪರಿಣಾಮಕಾರಿ
ಒನ್ಇಂಡಿಯಾ: ಪ್ಲಾಸ್ಮಾ ಚಿಕಿತ್ಸೆ ಪರಿಣಾಮಕಾರಿಯಾಗುತ್ತಿಲ್ಲ ಎನ್ನಲಾಗುತ್ತಿದೆ. ಚಿಕಿತ್ಸೆ ಬಳಿಕ ಸೋಂಕಿತ ಮೃತಪಟ್ಟಿದ್ದಾರೆ ಎನ್ನಲಾಗಿದೆ. ನಿಜವಾ?
ಆರೋಗ್ಯ ಸಚಿವ ಬಿ. ಶ್ರೀರಾಮುಲು: ಪ್ಲಾಸ್ಮಾ ಚಿಕಿತ್ಸೆ ಸುಮಾರು 2 ವಾರಗಳಿಂದ ಉತ್ತಮವಾಗಿ ನಡೆಯುತ್ತಿದೆ. ಇದರಲ್ಲಿ 2 ತರದ ಭಾಗಗಳಿದ್ದು ಡೋನರ್ ಪ್ಲಾಸ್ಮಾ ಹಾಗೂ ರೆಸಿಪಿಯಂಟ್ ಪ್ಲಾಸ್ಮಾ ಎಂದು ಇದೆ. ಡೋನರ್ ಪ್ಲಾಸ್ಮಾದ ಕೆಲಸ ಸುಮಾರು 2ರಿಂದ ಮೂರು ವಾರಗಳ ಮೊದಲೇ ಶುರುವಾಗಿತ್ತು.
ಈ ಪ್ಲಾಸ್ಮಾ ಚಿಕಿತ್ಸೆಗಾಗಿ ಡೋನರ್ ಬೇಕಿತ್ತು. ರಾಜ್ಯ ಸರ್ಕಾರದ ಡೇಟಾಬೇಸ್ನಿಂದ ಸುಮಾರು 156 ಪೇಶಂಟ್ಗಳನ್ನು ವಾಲಂಟಿಯರ್ ಟೀಂಗಳು ಕ್ಲಿನಿಕಲ್ ಟ್ರಯಲ್ ಪ್ರೋಟೋಕಾಲ್ ಪ್ರಕಾರ ಅವರನ್ನು ಕಾಂಟ್ಯಾಕ್ಟ್ ಮಾಡಿ ಅವರ ಬ್ಲಡ್ ಗ್ರೂಪ್ ಇತ್ಯಾದಿಗಳ ಬಗ್ಗೆ ಮಾಹಿತಿ ನೀಡಲು ಶುರು ಮಾಡಿದ್ದಾರೆ.
ಈಗ ಇದರಲ್ಲಿ ಮುಖ್ಯವಾಗಿ ಏನು ಅಂಶವಿದೆ ಎಂದರೆ ಡೋನರ್ ಆಗುವುದಕ್ಕೆ ಏನಿರಬೇಕೆಂದರೆ, ಅವರು 2 ವಾರ ಕಂಪ್ಲೀಟ್ ಗುಣ ಆಗಬೇಕು. 2 ಟೆಸ್ಟ್ ನಲ್ಲಿ ನೆಗೆಟಿವ್ ಬಂದಿರಬೇಕು, ಅದಾದ ಮೇಲೆ ಅವರು ಎಲಿಜಬಲ್ ಇರುತ್ತಾರೆ. ಇವತ್ತಿಗೆ ಸುಮಾರು 5 ಬಾಟಲ್ ಪ್ಲಾಸ್ಮಾವನ್ನು ಎಸ್ ಸಿ ಜಿ ಆಸ್ಪತ್ರೆ ನಲ್ಲಿ ರೆಡಿ ಇಡಲಾಗಿದೆ. ಕ್ಲಿನಿಕಲ್ ಟ್ರಯಲ್ ನ ಕಾರಣಕ್ಕೋಸ್ಕರ. ಅದಲ್ಲದೆ ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಎಲಿಜಿಬಲ್ ಪೇಶಂಟ್ ಗಳನ್ನು ಸ್ಕ್ರೀನ್ ಮಾಡಲು ಶುರು ಮಾಡಿದ್ದಾರೆ.
ಆದರೆ ಈ ಚಿಕಿತ್ಸೆ ನೀಡಿದ ರಾಜ್ಯದ ಮೊದಲ ರೋಗಿ ನಿಧನ ಆದ್ರು. ಬಟ್ ಅವರು ನಿಧನರಾಗಿದ್ದು ಹೃದಯಾಘಾತದಿಂದ. ಅವರಿಗೆ ಶುಗರ್, ರಕ್ತ ದೊತ್ತಡ ಹೀಗೆ ಅನೇಕ ಸಮಸ್ಯೆ ಇದ್ದವು. ಕೊನೆಯದಾಗಿ ಅವರನ್ನು ಉಳಿಸೋಕೆ ಸಾಧ್ಯವಾ ಅಂತ ಈ ಚಿಕಿತ್ಸೆ ನೀಡಲಾಗಿತ್ತು.
ಹಾಗಾಗಿ ಇದು ಚಿಕಿತ್ಸೆ ವೈಫಲ್ಯ ಅಲ್ಲ. ನಾವು ಮೊದಲ ಹೆಜ್ಜೆ ಇಟ್ಟಿದ್ದೇವೆ. ಬೇರೆ ದೇಶಗಳ ಫಲಿತಾಂಶ ಎಲ್ಲ ನೋಡಿದ ಮೇಲೆ ಇದು ಪರಿಣಾಮಕಾರಿ ಚಿಕಿತ್ಸೆ ಅನ್ನೋದು ಗೊತ್ತಾಗಿದೆ. ಈ ಚಿಕಿತ್ಸೆಗೆ ಸರ್ಕಾರ ಎಲ್ಲಾ ರೀತಿಯ ಬೆಂಬಲ ಕೊಡುತ್ತಿದೆ.
ವೈರಸ್ ಜೊತೆ ಬದುಕುವ ಅನಿವಾರ್ಯತೆ
ಒನ್ಇಂಡಿಯಾ: ಕೊರೊನಾ ವೈರಸ್ ಜೊತಗೆ ಇನ್ನೂ ಬಹಳಷ್ಟು ಕಾಲ ಬದುಕಬೇಕಾಗ ಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ? ಹೇಗೆ ನಿಭಾಯಿಸ್ತೀರಿ
ಆರೋಗ್ಯ ಸಚಿವ ಬಿ. ಶ್ರೀರಾಮುಲು: ಹೌದು...ಮುಂದೆಯೂ ಕೆಲ ವರ್ಷಗಳ ಕಾಲ ವೈರಸ್ ಜೊತೆ ನಾವು ಬದುಕುವ ಅನಿವಾರ್ಯತೆ ಇದೆ. ಹೀಗಾಗಿ ಜನರು ಸ್ವಯಂ ಜಾಗರೂಕತೆ ತೆಗೆದುಕೊಳ್ಳಬೇಕು. ಸೋಶಿಯಲ್ ಡಿಸ್ಟೆನ್ಸ್, ಸ್ಯಾನಿಟೈಜರ್ ಬಳಕೆ, ಮಾಸ್ಕ್ ಬಳಕೆ ಈ ಮೂರು ಮಂತ್ರಗಳನ್ನು ಪಾಲಿಸಲೇ ಬೇಕು.
ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಇಲಾಖೆ ಸೂಚನೆಯನ್ನು ಪಾಲಿಸಬೇಕು. ಇದರ ಜೊತೆಗೆ ಏನೇ ಲಕ್ಷಣ ಬಂದರು ಡಾಕ್ಟರ್ನ ಭೇಟಿಯಾಗಿ, ಈ ಮೂಲಕ ಸೋಂಕನ್ನು ದೂರ ಇಡುವ ಪ್ರಯತ್ನವನ್ನು ಜನ ಮಾಡಬೇಕು ಅಂತ ವಿನಂತಿ ಮಾಡಿಕೊಳ್ಳುತ್ತೇನೆ. ಇದರ ಜೊತೆಗೆ ಸರ್ಕಾರ ಮಾಡಬೇಕಾದ ಎಲ್ಲಾ ಕರ್ತವ್ಯಗಳನ್ನು ಸರಕಾರ ಮಾಡಲಿದೆ.
ಮೇ ಅಂತ್ಯಕ್ಕೆ ದಿನಕ್ಕೆ 15000 ಟೆಸ್ಟ್
ಒನ್ಇಂಡಿಯಾ: ಕೋವಿಡ್ 19 ಸೋಂಕು ಟೆಸ್ಟ್ ಮಾಡುವ ಸಾಮರ್ಥ್ಯ ಹೆಚ್ಚಾಗಬೇಕು ಎಂಬ ಬೇಡಿಕೆಯಿದೆ. ಏನು ಮಾಡ್ತೀರಿ?
ಆರೋಗ್ಯ ಸಚಿವ ಬಿ. ಶ್ರೀರಾಮುಲು: ಮೊದಲಿಗೆ ರಾಜ್ಯದಲ್ಲಿ ದಿನಕ್ಕೆ 1000 ಟೆಸ್ಟ್ ಆಗ್ತಿತ್ತು. ಈಗ ದಿನಕ್ಕೆ 6000 ಟೆಸ್ಟ್ ಆಗ್ತಿದೆ. ಮೇ ಅಂತ್ಯಕ್ಕೆ ದಿನಕ್ಕೆ 15000 ಟೆಸ್ಟ್ ಮಾಡಬೇಕು ಅನ್ನುವ ಗುರಿ ಹೊಂದಿದ್ದೇವೆ. ಇನ್ನು ಈಗ ರಾಜ್ಯದಲ್ಲಿ ಸುಮಾರು 38 ಲ್ಯಾಬ್ ಇವೆ. ಮೇ ಅಂತ್ಯಕ್ಕೆ ಒಟ್ಟು 60 ಲ್ಯಾಬ್ ಕಾರ್ಯ ನಿರ್ವಹಿಸಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಆದಷ್ಟು ಹೆಚ್ಚೆಚ್ಚು ಪರೀಕ್ಷೆ ಮಾಡ್ತೇವೆ. ಇದರಿಂದ ಮತ್ತಷ್ಟು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.
ಒನ್ಇಂಡಿಯಾ: ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳಲ್ಲಿ ಹೊಂದಾಣಿಕೆಯ ಕೊರತೆ ಏನಾದ್ರು ಇದೆಯಾ?
ಆರೋಗ್ಯ ಸಚಿವ ಬಿ. ಶ್ರೀರಾಮುಲು: ಇದು ನಮ್ಮ ವೈಯಕ್ತಿಕ ಲಾಭ ನೋಡುವ ಟೈಮ್ ಅಲ್ಲ. ಇಲಾಖೆ ನಡುವೆ ಯಾವುದೇ ಹೊಂದಾಣಿಕೆ ಕೊರತೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಮಾರ್ಗದರ್ಶನದಲ್ಲಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಾವು ಒಟ್ಟಾಗಿ ಈ ವೈರಸ್ ವಿರುದ್ಧ ಹೋರಾಡುತ್ತಿದ್ದೇವೆ, ಹೋರಾಟ ಮುಂದುವರೆಯಲಿದೆ.