ಯೋಗ ದಿನಾಚರಣೆ 2022; ಯೋಗ ಮಾಡಿದ ರಾಜ್ಯದ ರಾಜಕೀಯ ನಾಯಕರು
ಬೆಂಗಳೂರು, ಜೂನ್ 21: ದೇಶದೆಲ್ಲೆಡೆ ವಿಶ್ವ ಯೋಗದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮೈಸೂರಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅರಮನೆ ಮುಂಭಾಗ ಸುಮಾರು 15 ಸಾವಿರ ಜನರೊಂದಿಗೆ ಯೋಗ ದಿನಾಚಾರಣೆಗೆ ಚಾಲನೆ ನೀಡಿದರು.
ಮೈಸೂರಿನಲ್ಲಿ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ, ಸಚಿವರು ಮತ್ತು ಶಾಸಕರು ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಂಗಳವಾರ ದೇಶದಲ್ಲಿ ಮತ್ತು ರಾಜ್ಯದ ಹಲವೆಡೆ ಯೋಗ ಕಾರ್ಯಕ್ರಮ ನಡೆದಿದ್ದು, ಸಚಿವರು, ಶಾಸಕರು ಯೋಗ ಮಾಡಿದರು.
ರಾಮದಾಸ್ ಜತೆ ಮೋದಿ ಸಲುಗೆಯ ಮಾತು: ಸಂಸದೆ ಸುಮಲತಾ ಕುಶಲೋಪಹರಿ ವಿಚಾರ
ಮಂಗಳವಾರ ಬೆಳಗ್ಗೆ 6.20ಕ್ಕೆ ರಾಡಿಸನ್ ಬ್ಲ್ಯೂ ಹೊಟೇಲ್ನಿಂದ ಹೊರಟ ಮೋದಿ ಅವರು 6.30ಕ್ಕೆ ಅರಮನೆ ಆವರಣ ಪ್ರವೇಶ ಮಾಡಿದರು. ಬಳಿಕ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಜನರ ಜೊತೆಗೆ ಮ್ಯಾಟ್ ಮೇಲೆ ಮೋದಿ ಯೋಗಾಭ್ಯಾಸ ನಡೆಸಿದರು.
ಮೈಸೂರು; ವೇದಿಕೆ ಇಳಿದು ಸಾರ್ವಜನಿಕರೊಂದಿಗೆ ಮೋದಿ ಯೋಗಾಭ್ಯಾಸ
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, "ಈ ಹಿಂದೆ ಯೋಗದ ಸಂಕೇತವು ಆಧ್ಯಾತ್ಮಿಕ ಸ್ಥಳಗಳು ಅಥವಾ ಸಾಂಪ್ರದಾಯಿಕ ಮನೆಗಳಂತಹ ಸ್ಥಳಗಳಲ್ಲಿ ಮಾತ್ರ ಕಾಣುತ್ತಿತ್ತು. ಆದರೆ ಇಂದು ಇದು ಜಗತ್ತಿನ ಮೂಲೆ ಮೂಲೆಯಲ್ಲಿ ಕಾಣುತ್ತಿದೆ. ಯೋಗವು ವಿಶ್ವ ಕರ್ಮವಾಗಿದೆ, ಪ್ರಪಂಚದ ಎಲ್ಲೆಡೆ ಯೋಗವನ್ನು ಮಾಡಲಾಗುತ್ತಿದೆ. ಯೋಗವು ನಮಗೆ, ನಮ್ಮ ದೇಶಕ್ಕೆ, ನಮ್ಮ ಜಗತ್ತಿಗೆ ಶಾಂತಿಯನ್ನು ತರುತ್ತದೆ" ಎಂದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಯೋಗ ಕಾರ್ಯಕ್ರಮದಲ್ಲಿ ಭಾಗಿ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಯೋಗ ದಿನಾಚಾರಣೆಯಲ್ಲಿ ಪಾಲ್ಗೊಂಡರು. ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಸಿಟಿ ರವಿ ಜೊತೆಗೆ ನೂರಾರು ಮಂದಿ ಸಾಮೂಹಿಕ ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಸಿ. ಟಿ. ರವಿ ಕಚ್ಚೆ ಪಂಚೆ ಧರಿಸಿ ಯೋಗಾ ಕಾರ್ಯಕ್ರಮದಲ್ಲಿ ಗಮನ ಸೆಳೆದರು.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡಿನ ಐತಿಹಾಸಿಕ ಹೋಯ್ಸಳೇಶ್ವರ ದೇವಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪಾಲ್ಗೊಂಡಿದ್ದರು. ಮೈಸೂರಿನಲ್ಲಿ ಪ್ರಧಾನಿ ಮೋದಿ ಭಾಷಣ ಮುಗಿದ ನಂತರ ಇಲ್ಲಿ ಯೋಗ ಪ್ರಾರಂಭಿಸಲಾಯಿತು. ಜಿಟಿ ಜಿಟಿ ಮಳೆ ಬೀಳುತ್ತಿದ್ದರೂ ನೂರಾರು ಮಂದಿ ಯೋಗ ಮಾಡಿ ಗಮನ ಸೆಳೆದರು.
ಗಮನ ಸೆಳೆದ ಶಾಲಾ ಮಕ್ಕಳ ಯೋಗಾಸನ
ಚಾಮರಾಜನಗರಲ್ಲಿ 8ನೇ ವಿಶ್ವ ಯೋಗ ದಿನದ ಪ್ರಯುಕ್ತ ಸಾವಿರಾರು ಮಂದಿ ಯೋಗಾಸನ ಭಂಗಿಗಳನ್ನು ಪ್ರದರ್ಶಿಸಿದರು. ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಎಡಿಸಿ ಕಾತ್ಯಾಯಿನಿ ದೇವಿ, ಜಿಪಂ ಸಿಇಒ ಗಾಯತ್ರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಯೋಗಾಸನ ಮಾಡಿದರು. ಭುಜಂಗಾಸನ, ವೃಕ್ಷಾಸನ, ಮತ್ಸ್ಯಾಸನ, ನಮಸ್ಕಾರಾಸನ, ಹಸ್ತಪಾದಾಸನ ಮತ್ತು ಸೂರ್ಯ ನಮಸ್ಕಾರ, ಧ್ಯಾನವನ್ನು ಮಾಡಲಾಯಿತು.
ಮನೆಯಲ್ಲೇ ಯೋಗ ಮಾಡಿದ ಆರಗ ಜ್ಞಾನೇಂದ್ರ
ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಳೂರಿನ ತಮ್ಮ ನಿವಾಸದಲ್ಲಿ ಯೋಗ ಮಾಡಿದರು. "ಮಾನವೀಯತೆಗಾಗಿ ಯೋಗ" ಎಂಬ ಘೋಷವಾಕ್ಯದೊಂದಿಗೆ ಜಗತ್ತಿನೆಲ್ಲೆಡೆ ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಯಾಗುತ್ತಿದೆ. ನಾನು ನಮ್ಮ ಬೆಂಗಳೂರು ನಿವಾಸದಲ್ಲಿ ಯೋಗಾಭ್ಯಾಸ ಮಾಡಿದೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ತಿಳಿಸಿದ್ದಾರೆ.
ಬಿಸಿ ಪಾಟೀಲ್ ನೇತೃತ್ವದಲ್ಲಿ ಯೋಗ
ಹಾವೇರಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆ ಇವರ ಸಹಯೋಗದಲ್ಲಿ ಹಿರೇಕೆರೂರಿನ ಅಬಲೂರು ಗ್ರಾಮದ ಬಸವೇಶ್ವರ ದೇವಸ್ಥಾನದ ಮೈದಾನದ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು. ಕೃಷಿ ಸಚಿವ ಬಿಸಿ ಪಾಟೀಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಗಾಸನ ಮಾಡಿದರು. ಯು.ಬಿ ಬಣಕಾರ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಂಠಾದ ಅಂಗಡಿ ಬಿ.ಸಿ ಪಾಟೀಲ್ಗೆ ಸಾಥ್ ನೀಡಿದರು. ಅಲ್ಲದೆ ನೂರಾರು ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಮಾತನಾಡಿದ ಬಿಸಿ ಪಾಟೀಲ್ ಯೋಗ ಎನ್ನುವುದು ಬರೀ ದೇಹದ ದಂಡನೆಯಲ್ಲ,ಇದು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸ್ವಾಸ್ಥ್ಯಕ್ಕೂ ಅದ್ಭುತ ಕ್ರಿಯಾ ಸಾಧನ ಎಂದರು.
ಬೆಂಗಳೂರಿನಲ್ಲೂ ಹಲವು ಕಡೆ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮಹಾಲಕ್ಷ್ಮಿ ಎಜುಕೇಶನ್ ಟ್ರಸ್ಟ್ ,ನೆಮ್ಮದಿ ಯೋಗ ಶಾಲೆ ಮತ್ತು ಪ್ರಣವ ಯೋಗ ಪ್ರತಿಷ್ಟಾನದ ಸಹಯೋಗದಲ್ಲಿಂದು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ಶಂಕರಮಠ ವೃತ್ತದಲ್ಲಿರುವ ಸ್ವಾಮಿ ವಿವೇಕಾನಂದ ಆಟದ ಮೈದಾನದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಅಬಕಾರಿ ಸಚಿವ ಕೆ. ಗೋಪಾಲಯ್ಯ ಭಾಗವಹಿಸಿದ್ದರು. ಬಿಬಿಎಂಪಿ ಮಾಜಿ ಉಪಮೇಯರ್ ಹೇಮಲತಾ ಕೆ.ಗೋಪಾಲಯ್ಯ ಹಾಗೂ ಸಾವಿರಕ್ಕೂ ಅಧಿಕ ಯೋಗ ಪಟುಗಳು ಭಾಗವಹಿಸಿದ್ದರು.
Recommended Video