ಬೊಮ್ಮಾಯಿ ಮತ್ತು ಬಿಎಸ್ವೈಗೆ 'ಹೆತ್ತವರಿಗೆ ಹೆಗ್ಗಣ ಮುದ್ದು' ಎಂದ ಸಿದ್ದರಾಮಯ್ಯ
ಪ್ರಸಕ್ತ ವಿಧಾನಮಂಡಲದ ಅಧಿವೇಶನ ಯಾವುದೇ ಹೆಚ್ಚು ಗೌಜಿಗದ್ದಲವಿಲ್ಲದೇ ಸಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸದನದಲ್ಲಿ ನೀಡಿದ ಉತ್ತರಕ್ಕೆ ಸಂಬಂಧಿಸಿದಂತೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಅಸಮಾಧಾನ ವ್ಯಕ್ತ ಪಡಿಸಿದರು.
ವಿಚಾರ ವಿಷಯಾಂತರಗೊಳ್ಳುತ್ತಾ ಯಡಿಯೂರಪ್ಪನವರು ರಾಜೀನಾಮೆ ನೀಡಿದ ಸನ್ನಿವೇಶವನ್ನು ಸದನವನ್ನು ಸಿದ್ದರಾಮಯ್ಯನವರು ತಂದರು. ಅದಕ್ಕೆ, ಕಾಂಗ್ರೆಸ್ ಮುಖಂಡರಾದ ರಮೇಶ್ ಕುಮಾರ್ ಮತ್ತು ಎಂ.ಬಿ.ಪಾಟೀಲ್ ಧ್ವನಿಗೂಡಿಸಿದರು.
2814 ಅನಧಿಕೃತ ದೇವಾಲಯ ಅಧಿಕೃತಗೊಳಿಸಲು ಬಿಲ್ ಮಂಡನೆ ಮಾಡಲಿದ್ದಾರೆ ಶಾಸಕ ಎಸ್. ಎ. ರಾಮದಾಸ್
ಈ ವಿಚಾರದ ಬಗ್ಗೆ ಮಾತನಾಡುತ್ತಿರಬೇಕಾದರೆ, ಯಡಿಯೂರಪ್ಪ ನಗುತ್ತಾ ಇದ್ದರು. ಆಗ, ಮತ್ತೆ ಅವರನ್ನು ಕಿಚಾಯಿಸಿದ ಸಿದ್ದರಾಮಯ್ಯ, "ನೋಡಿ.. ನಮ್ಮ ಯಡಿಯೂರಪ್ಪನವರು ನಗುತ್ತಾ ಇದ್ದಾರೆ. ಅವರು ಸದನದ ಒಳಗಾಗಲಿ, ಹೊರಗಾಗಲಿ ನಗುವುದೇ ಕಮ್ಮಿ. ಬಹುಶಃ, ನನ್ನ ಪ್ರಶ್ನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಕೊಟ್ಟ ಉತ್ತರಕ್ಕೆ ಅವರು ನಗುತ್ತಿರಬೇಕು" ಎಂದು ಹೇಳಿದರು.
ಆಗ ಎದ್ದು ನಿಂತ ಯಡಿಯೂರಪ್ಪ, "ಸಿದ್ದರಾಮಯ್ಯನವರೇ, ಅಳೆದು ತೂಗಿ, ಸಿಎಂ ಬೊಮ್ಮಾಯಿಯವರು ಉತ್ತರವನ್ನು ನೀಡಿದ್ದಾರೆ. ಅವರು ಕೊಟ್ಟ ಅಂಕಿಅಂಶದಲ್ಲಿ ಏನಾದರೂ ತಪ್ಪಿದ್ದಲ್ಲಿ, ಅದನ್ನು ಸರಿಪಡಿಸಿಕೊಂಡು ಸದನದಲ್ಲಿ ಉತ್ತರಿಸಲಿದ್ದಾರೆ"ಎಂದು ಯಡಿಯೂರಪ್ಪನವರು ಅವರನ್ನು ಸಮರ್ಥಿಸಿಕೊಂಡರು.
ತಮ್ಮ ಆಪ್ತ ಬಸವರಾಜ ಬೊಮ್ಮಾಯಿಯವರ ಪರವಾಗಿ ನಿಂತ ಯಡಿಯೂರಪ್ಪ
"ಸಾಮಾನ್ಯವಾಗಿ ನಾನು ಮಾತನಾಡುವುದಿಲ್ಲ, ಇತ್ತೀಚಿನ ವರ್ಷಗಳಲ್ಲಿ, ಮುಖ್ಯಮಂತ್ರಿಯಾಗಿ ಎಲ್ಲವನ್ನೂಅರಿತು ಸಮಗ್ರವಾಗಿ ತಮ್ಮ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವುದರ ಮೂಲಕ, ಒಳ್ಳೆ ರೀತಿಯಲ್ಲಿ ಬೊಮ್ಮಾಯಿಯವರು ಮಾತನಾಡಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ. ನಾನು ನೋಡಿದ ಒಂದು ಉತ್ತಮ ಭಾಷಣ ಇಂದು ಮುಖ್ಯಮಂತ್ರಿಗಳದ್ದು ಆಗಿತ್ತು"ಎಂದು ತಮ್ಮ ಆಪ್ತ ಬಸವರಾಜ ಬೊಮ್ಮಾಯಿಯವರ ಪರವಾಗಿ ಬಿಎಸ್ವೈ ನಿಂತರು.
ರಾಜ್ಯದ ಜನತೆ, ಸದನ ನಿಮಗೆ ಅಭಿನಂದನೆ ಸಲ್ಲಿಸಬೇಕು - ರಮೇಶ್ ಕುಮಾರ್
"ನಾವು ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನದಿಂದ ತ್ಯಜಿಸಿ ಹೋಗಬೇಕಾದರೆ, ಇಷ್ಟೆಲ್ಲಾ ಸ್ಪರ್ಧೆ ಬಿಜೆಪಿಯಲ್ಲಿ ಇದ್ದರೂ, ಸಹಜವಾದ ಒತ್ತಡವಿದ್ದರೂ ಕೂಡಾ ನೀವು ಸಿಎಂ ಹುದ್ದೆಯ ಜವಾಬ್ದಾರಿಯನ್ನು ಬೊಮ್ಮಾಯಿಯವರಿಗೆ ಕೊಟ್ಟಿದ್ದೀರಿ. ಇದು, ನೀವು ಕೊಟ್ಟ ಜವಾಬ್ದಾರಿ, ಅದನ್ನು ಅವರು ನಿಭಾಯಿಸಲೇ ಬೇಕು. ಹಾಗಾಗಿ, ರಾಜ್ಯದ ಜನತೆ ಮತ್ತು ಸದನ ನಿಮಗೆ ಅಭಿನಂದನೆ ಸಲ್ಲಿಸಬೇಕು"ಎಂದು ರಮೇಶ್ ಕುಮಾರ್ ಅವರು ಹೇಳಿದರು.
ಎಷ್ಟಾದರೂ ಹೆತ್ತವರಿಗೆ ಹೆಗ್ಗಣ ಮುದ್ದಲ್ಲವೇ - ವಿರೋಧ ಪಕ್ಷದ ನಾಯಕ
"ಮುಖ್ಯಮಂತ್ರಿಯಾಗಿ ಬೊಮ್ಮಾಯಿಯವರಿಗೆ ಇದು ಮೊದಲ ಅಧಿವೇಶನ, ಬೆಲೆ ಏರಿಕೆಯ ಬಗ್ಗೆ ನಾನು ರಾಜಕೀಯ ಭಾಷಣ ಮಾಡಲಿಲ್ಲ. ನನ್ನ ಮತ್ತು ಸಿಎಂ ಬೊಮ್ಮಾಯಿಯವರ ಭಾಷಣವನ್ನು ರಾಜ್ಯದ ಜನತೆ ಕೇಳಿದ್ದಾರೆ, ಸಿಎಂಗೆ ಯಡಿಯೂರಪ್ಪನವರು ಶಹಬ್ಬಾಸ್ ಗಿರಿ ಕೊಟ್ಟಿದ್ದಾರೆ. ಸ್ವಾಭಾವಿಕವಾಗಿ ಅವರು ಕೊಡಲೇ ಬೇಕು, ಯಾಕೆಂದರೆ ಅವರ ಪ್ರಯತ್ನದಿಂದಲೇ ಬೊಮ್ಮಾಯಿ ಸಿಎಂ ಆಗಿದ್ದು. ಎಷ್ಟಾದರೂ ಹೆತ್ತವರಿಗೆ ಹೆಗ್ಗಣ ಮುದ್ದಲ್ಲವೇ"ಎಂದು ಸಿದ್ದರಾಮಯ್ಯ ಹೇಳಿದರು.
ನಿಮ್ಮನ್ನು ವಿರೋಧ ಪಕ್ಷದ ಸ್ಥಾನದಲ್ಲೇ ಕೂರಿಸುತ್ತೇವೆ ಎಂದ ಯಡಿಯೂರಪ್ಪ
"ಯಾವುದೇ ಕಾರಣ ನೀಡದೇ ಯಡಿಯೂರಪ್ಪನವರನ್ನು ಪದತ್ಯಾಗ ಮಾಡಿಸಿದ್ದೀರಿ, ಪಾಪ ಯಡಿಯೂರಪ್ಪನವರು ಕಣ್ಣೀರು ಹಾಕಿದರು"ಎಂದು ಸಿದ್ದರಾಮಯ್ಯ ಹೇಳಿದರು. ಆಗ ಎದ್ದು ನಿಂತ ಯಡಿಯೂರಪ್ಪನವರು, "ಸಿದ್ದರಾಮಯ್ಯನವರೇ ನಾನು ಅತ್ಯಂತ ಸ್ಪಷ್ಟವಾಗಿ ಹೇಳಿದ್ದೇನೆ, ಇನ್ನೊಬ್ಬರಿಗೆ ಅವಕಾಶ ಸಿಗಲಿ ಎನ್ನುವ ಕಾರಣಕ್ಕಾಗಿ ರಾಜೀನಾಮೆ ನೀಡುತ್ತಿದ್ದೇನೆಂದು ಹೇಳಿದ್ದೇನೆ. ಮತ್ತೊಮ್ಮೆ ಚುನಾವಣೆಯಲ್ಲಿ ಗೆದ್ದು ಬಂದು ಮತ್ತೆ ನಿಮ್ಮನ್ನು ವಿರೋಧ ಪಕ್ಷದ ಸ್ಥಾನದಲ್ಲೇ ಕೂರಿಸುತ್ತೇವೆ"ಎಂದು ಯಡಿಯೂರಪ್ಪ ತಿರುಗೇಟು ನೀಡಿದರು.
Recommended Video