ಕರ್ನಾಟಕ; ಶುಕ್ರವಾರದಿಂದ ಅಂತರ ಜಿಲ್ಲಾ ರೈಲು, ವೇಳಾಪಟ್ಟಿ
ಬೆಂಗಳೂರು, ಮೇ 21 : ಅಂತರ ಜಿಲ್ಲಾ ರೈಲು ಸಂಚಾರ ಕರ್ನಾಟಕದಲ್ಲಿ ಶುಕ್ರವಾರದಿಂದ ಆರಂಭವಾಗುತ್ತಿದೆ. ಲಾಕ್ ಡೌನ್ ಪರಿಣಾಮ ಪ್ರಯಾಣಿಕರ ರೈಲು ಸಂಚಾರ ರದ್ದುಗೊಂಡ ಬಳಿಕ ಮೊದಲ ಬಾರಿಗೆ ರೈಲು ಸಂಚಾರ ನಡೆಸುತ್ತಿದೆ.
Recommended Video
ಕರ್ನಾಟಕದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮೇ 18ರಂದು ಮಾಡಿದ್ದ ಮನವಿಗೆ ಕೇಂದ್ರ ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದ್ದು 4 ಅಂತರರಾಜ್ಯ ರೈಲುಗಳ ಸಂಚಾರಕ್ಕೆ ಒಪ್ಪಿಗೆ ಕೊಟ್ಟಿದೆ. ಬೆಂಗಳೂರು-ಬೆಳಗಾವಿ ಮತ್ತು ಬೆಂಗಳೂರು-ಮೈಸೂರು ನಡುವೆ ರೈಲು ಸಂಚಾರ ನಡೆಸುತ್ತಿದೆ.
ಬೆಂ-ಬೆಳಗಾವಿ, ಬೆಂಗಳೂರು-ಮೈಸೂರು ನಡುವೆ ರೈಲು ಸಂಚಾರಕ್ಕೆ ಒಪ್ಪಿಗೆ
ಈ ವಿಶೇಷ ರೈಲುಗಳಿಗೆ ಆನ್ಲೈನ್ ಮೂಲಕ ಮಾತ್ರ ಟಿಕೆಟ್ ಬುಕ್ ಮಾಡಬೇಕು. ರೈಲ್ವೆ ನಿಲ್ದಾಣದಲ್ಲಿ ಯಾವುದೇ ಟಿಕೆಟ್ ನೀಡುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ. ಬೆಂಗಳೂರು-ಮೈಸೂರು ನಡುವಿನ ರೈಲು ಭಾನುವಾರ ಹೊರತುಪಡಿಸಿ ಉಳಿದ ಎಲ್ಲಾ ದಿನ ಸಂಚಾರ ನಡೆಸಲಿದೆ.
ಶ್ರಮಿಕ್ ರೈಲು ಸಂಚಾರ; ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿ
ಬೆಂಗಳೂರು-ಬೆಳಗಾವಿ ವಿಶೇಷ ರೈಲು ವಾರದಲ್ಲಿ ಮೂರುದಿನ ಸಂಚಾರ ನಡೆಸಲಿದೆ. ನೈಋತ್ಯ ರೈಲ್ವೆ ಈಗಾಗಲೇ ರೈಲಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಆನ್ಲೈನ್ ಟಿಕೆಟ್ ಬುಕ್ಕಿಂಗ್ ಸಹ ಆರಂಭವಾಗಿದೆ.
ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದ ಭಾರತೀಯ ರೈಲ್ವೆ
ಬೆಳಗಾವಿ-ಬೆಂಗಳೂರು ರೈಲು
ಕೆಎಸ್ಆರ್ ಬೆಂಗಳೂರು-ಬೆಳಗಾವಿ ನಡುವೆ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ರೈಲು ಸಂಚಾರ ನಡೆಸಲಿದೆ. ಬೆಳಗ್ಗೆ 8ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು ಮಧ್ಯಾಹ್ನ 3.30ಕ್ಕೆ ಹುಬ್ಬಳ್ಳಿ ತಲುಪಲಿದೆ. ಬಳಿಕ 6.30ಕ್ಕೆ ಬೆಳಗಾವಿಗೆ ತಲುಪಲಿದೆ.
ಬೆಳಗಾವಿ-ಕೆಎಸ್ಆರ್ ಬೆಂಗಳೂರು ನಡುವೆ ಪ್ರತಿ ಮಂಗಳವಾರ, ಗುರುವಾರ ಮತ್ತು ಶನಿವಾರ ರೈಲು ಸಂಚಾರ ನಡೆಸಲಿದೆ. ಬೆಳಗ್ಗೆ 8ಗಂಟೆಗೆ ಬೆಳಗಾವಿಯಿಂದ ಹೊರಡುವ ರೈಲು ಸಂಜೆ 6.30ಕ್ಕೆ ಬೆಂಗಳೂರು ನಿಲ್ದಾಣವನ್ನು ತಲುಪಲಿದೆ. ಭಾನುವಾರ ರೈಲು ಸಂಚಾರ ಇರುವುದಿಲ್ಲ.
ರೈಲು ನಿಲ್ದಾಣಗಳು
ಬೆಂಗಳೂರು-ಬೆಳಗಾವಿ ರೈಲು ಯಶವಂತಪುರ, ತುಮಕೂರು, ಅರಸೀಕೆರೆ, ಬೀರೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ನಿಲುಗಡೆಗೊಳ್ಳಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಈ ರೈಲು 14 ಚೇರ್ ಕಾರ್, 2 ಲಗೇಜ್ ಕಂ ಬ್ರೇಕ್ ವ್ಯಾನ್ ಹೊಂದಿದೆ. ಪ್ರತಿ ಬೋಗಿಯಲ್ಲಿ 106 ಪ್ರಯಾಣಿಕರು ಸಂಚಾರ ನಡೆಸಬಹುದಾಗಿದೆ.
ಬೆಂಗಳೂರು-ಮೈಸೂರು ರೈಲು
ಕೆಎಸ್ಆರ್ ಬೆಂಗಳೂರು-ಮೈಸೂರು ನಡುವೆ ವಾರದಲ್ಲಿ 6 ದಿನ (ಭಾನುವಾರ ಇಲ್ಲ) ವಿಶೇಷ ರೈಲು ಸಂಚಾರ ನಡೆಸಲಿದೆ. ರೈಲು ನಂಬರ್06503 ಕೆಎಸ್ಆರ್ ಬೆಂಗಳೂರು ನಿಲ್ದಾಣವನ್ನು ಬೆಳಗ್ಗೆ 9.20ಕ್ಕೆ ಬಿಡಲಿದ್ದು 12.45ಕ್ಕೆ ಮೈಸೂರು ತಲುಪಲಿದೆ.
ಮೈಸೂರು-ಬೆಂಗಳೂರು ನಡುವೆ ರೈಲು ನಂಬರ್ 06504 ಸಂಚಾರ ನಡೆಸಲಿವೆ. ಮೈಸೂರಿನಿಂದ ಮಧ್ಯಾಹ್ನ 1.45ಕ್ಕೆ ರೈಲು ಹೊರಡಲಿದ್ದು 5 ಗಂಟೆಗೆ ಬೆಂಗಳೂರಿಗೆ ತಲುಪಲಿದೆ.
ರೈಲು ನಿಲ್ದಾಣಗಳು
ಬೆಂಗಳೂರು-ಮೈಸೂರು ರೈಲು ಕೆಂಗೇರಿ, ರಾಮನಗರ, ಮದ್ದೂರು, ಮಂಡ್ಯ, ಪಾಂಡವಪುರ, ನಾಗನಹಳ್ಳಿ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.
ಈ ರೈಲಿನಲ್ಲಿ 14 ಬೋಗಿ, 2 ಲಗೇಜ್ ಕ ಬ್ರೇಕ್ ವ್ಯಾನ್ ಇರಲಿದೆ. ಪ್ರತಿ ಬೋಗಿಯಲ್ಲಿ 106 ಜನರು ಪ್ರಯಾಣ ಮಾಡಬಹುದಾಗಿದೆ.
ರೈಲು ನಿಲ್ದಾಣದಲ್ಲಿ ಪ್ರಯಾಣಿಕರು ಸಾಮಾಜಿಕ ಅಂತ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ.