ಶ್ರೀರಂಗಪಟ್ಟಣ ದಸರಾದಲ್ಲಿ ಜಿವಿಗೆ ಅವಮಾನ
ಸೋಮವಾರ ಅಂಬಾರಿಯಲ್ಲಿ ಆಸೀನಳಾಗಿದ್ದ ಶ್ರೀ ಚಾಮುಂಡೇಶ್ವರಿಗೆ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಜಿವಿ ಮಧ್ಯಾಹ್ನ 2 ಗಂಟೆಗೆ ದಸರಾಗೆ ಚಾಲನೆ ನೀಡಬೇಕಾಗಿತ್ತು. ನಿಗದಿತ ಸಮಯಕ್ಕಿಂತ ಮೊದಲೇ ಆಗಮಿಸಿದ್ದ ಅವರು ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಮತ್ತು ಸಂಸದೆ ರಮ್ಯಾ ಅವರ ಆಗಮನಕ್ಕಾಗಿ ಕಾಯುತ್ತಿದ್ದರು.
ಈ ಸಮಯದಲ್ಲಿ ಆಗಮಿಸಿದ ಮೇಲುಕೋಟೆ ಶಾಸಕ ಪುಟ್ಟಣ್ಣಯ್ಯ, ಚಾಮುಂಡೇಶ್ವರಿ ವಿಗ್ರಹದ ಬಳಿ ಬಂದು ಅಲ್ಲಿದ್ದ ಹೂವನ್ನು ಚಾಮುಂಡೇಶ್ವರಿ ದೇವಿ ವಿಗ್ರಹಕ್ಕೆ ಎರಚಿದರು. ಇದನ್ನು ನೋಡಿದ ಅಂಬರೀಶ್ ಮತ್ತು ರಮ್ಯಾ ತಾವು ಆಗಮಿಸಿ ದೇವಿಗೆ ಪುಷ್ಪವನ್ನು ಅರ್ಪಿಸಿ, ದಸರಾಕ್ಕೆ ಚಾಲನೆ ನೀಡಿದರು.
ಮೂವರು ಜನಪ್ರತಿನಿಧಿಗಳಿಗೆ ದಸರಾ ಉದ್ಘಾಟನೆಗಾಗಿ ವೆಂಕಟಸುಬ್ಬಯ್ಯ ಅವರನ್ನು ಕರೆಸಿದ್ದೇವೆ. ಅವರಿಂದ ದಸರಾ ಉದ್ಘಾಟನೆ ಮಾಡಿಸಬೇಕು ಎಂಬ ಸಾಮಾನ್ಯ ಜ್ಞಾನವೂ ಮರೆತು ಹೋಗಿತ್ತು. ಸ್ಥಳದಲ್ಲಿದ್ದ ಅಧಿಕಾರಿಯೊಬ್ಬರು ಜಿವಿ ಅವರ ಕೈಗೆ ಮತ್ತಷ್ಟು ಹೂಗಳನ್ನು ನೀಡಿ, ದೇವಿಗೆ ಸಮರ್ಪಿಸುವಂತೆ ಮನವಿ ಮಾಡಿದರು.
ಜನಪ್ರತಿನಿಧಿಗಳ ಈ ವರ್ತನೆ ಅಲ್ಲಿ ನೆರೆದಿದ್ದ ಜನರ ಅಸಮಾಧಾನಕ್ಕೆ ಕಾರಣವಾಯಿತು. ಹಿರಿಯ ಸಾಹಿತಿಯನ್ನು ಕರೆಸಿ ಅವರಿಂದ ಮೊದಲು ಚಾಲನೆ ನೀಡಿಸದೇ ಅವಮಾನ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಆದರೆ, ಇವುಗಳ ಪರಿವೇ ಇಲ್ಲದೆ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಪ್ರೊ.ವೆಂಕಟಸುಬ್ಬಯ್ಯ ತಮ್ಮ ಔದಾರ್ಯ ಮೆರೆದರು. ನಮ್ಮ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಏನು ಹೇಳೋಣ?