ಎಸಿಬಿ ದಾಳಿ: 9 ಭ್ರಷ್ಟ ಅಧಿಕಾರಿಗಳ ಅಕ್ರಮ ಸಂಪತ್ತು ಬಯಲು
ಬೆಂಗಳೂರು, ಜು. 15: ಸೈಲೆಂಟ್ ಆಗಿದ್ದ ಎಸಿಬಿ ಅಧಿಕಾರಿಗಳು ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಭ್ರಷ್ಟ ಸಂಪತ್ತು ಗಳಿಸಿ ಸುಖ ನಿದ್ದೆಯಲ್ಲಿದ್ದ ವಿವಿಧ ಇಲಾಖೆಗಳ 9 ಮಂದಿ ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿ ಅಕ್ರಮ ಸಂಪತ್ತನ್ನು ಬಯಲಿಗೆ ಎಳೆದಿದ್ದಾರೆ. ಬರೋಬ್ಬರಿ 310 ಎಸಿಬಿ ಅಧಿಕಾರಿಗಳು ಏಕ ಕಾಲಕ್ಕೆ ರಾಜ್ಯದ 43 ಕಡೆ ದಾಳಿ ನಡೆಸಿ ಶೋಧ ನಡೆಸಿದ್ದಾರೆ.
ವರ್ಷಗಳಿಂದ ಅಕ್ರಮ ಸಂಪತ್ತು ಗಳಿಸಿ ನಿವೇಶನ, ಚಿನ್ನಾಭರಣ, ಕೃಷಿ ಜಮೀನು ರೂಪಕ್ಕೆ ಪರಿವರ್ತಿಸಿದ್ದ ನವ ಭ್ರಷ್ಟರ ಆಕ್ರಮ ಆಸ್ತಿಯ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ಶಾಕ್ ನೀಡಿದ್ದಾರೆ. ಅಂದಹಾಗೆ ಎಸಿಬಿ ಅಧಿಕಾರಿಗಳು ನಿಷ್ಕ್ರಿಯಗೊಂಡಿದ್ದಾರೆ ಎಂಬ ಕೂಗು ಕೇಳಿ ಬರುತ್ತಿದ್ದಂತೆ ರಾಜ್ಯದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಭ್ರಷ್ಟರ ಆಸ್ತಿಯನ್ನು ಬಯಲಿಗೆ ಎಳೆದಿದ್ದಾರೆ. ಎಸಿಬಿ ದಾಳಿಗೆ ಒಳಗಾದವರ ಪೂರ್ಣ ವಿವರ ಇಲ್ಲಿದೆ.
ಬ್ರೇಕಿಂಗ್ ನ್ಯೂಸ್: ಬೆಳ್ಳಂಬೆಳಗ್ಗೆ 9 ಭ್ರಷ್ಟರ ಮನೆಗಳ ಮೇಲೆ ಎಸಿಬಿ ದಾಳಿ
ದಾಳಿ ನಂಬರ್ 1
ಜಿ. ಶ್ರೀಧರ್, ಕಾರ್ಯಪಾಲಕ ಅಭಿಯಂತರ, ಜಿಲ್ಲಾ ನಗರಾಭಿವೃದ್ಧಿ ಕೋಶ, ಮಂಗಳೂರು:
ಶ್ರೀಧರ್ ಅವರ ಮೈಸೂರು ನಿವಾಸದ ಮೇಲೆ ದಾಳಿ ನಡೆಸಿದ ಎಸಿಬಿ ಪೊಲೀಸರು, ಮಂಡ್ಯದ ಕೆ.ಆರ್. ಪೇಟೆ ಒಂದು ಮನೆ, ನಾಲ್ಕು ನಿವೇಶನ, ಬ್ಯಾಂಕ್ ಉಳಿತಾಯ, ವಿಮೆ ಬಾಂಡ್, ಎರಡು ದ್ವಿಚಕ್ರ ವಾಹನ, ನಗದು ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಎಷ್ಟು ಚಿನ್ನ ಹಾಗೂ ನಗದು ಸಿಕ್ಕಿದೆ ಎಂಬ ವಿವರ ಎಸಿಬಿ ಅಧಿಕಾರಿಗಳು ನೀಡಿಲ್ಲ.
ದಾಳಿ
ನಂಬರ್
02
ಸುರೇಶ್, ಕಿರಿಯ ಇಂಜಿನಿಯರ್, ಗ್ರಾಮೀಣ ನೀರು ಸರಬರಾಜು, ಬಸವ ಕಲ್ಯಾಣ ಬೀದರ್,
ಸುರೇಶ್ ಅವರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ ಈಶಾನ್ಯ ವಲಯದ ಎಸಿಬಿ ಅಧಿಕಾರಿಗಳು, ಬಸವ ಕಲ್ಯಾಣದಲ್ಲಿ ವಾಸದ ಮನೆ, ಬಾಲ್ಕಿಯಲ್ಲಿ ಪೆಟ್ರೋಲ್ ಬಂಕ್, ವಿವಿಧ ಬ್ಯಾಂಕ್ ಗಳಲ್ಲಿ ಲಕ್ಷಾಂತರ ರೂ. ಎಫ್ಡಿ, ನಾಲ್ಕು ನಿವೇಶನ, ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ. ಒಂದು ದ್ವಿಚಕ್ರ ವಾಹನ ಹಾಗೂ ಗೃಹೋಪಯೋಗಿ ವಸ್ತುಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿರುವುದು ದಾಳಿ ವೇಳೆ ಪತ್ತೆಯಾಗಿದೆ.
ದಾಳಿ ನಂಬರ್ 03
ಆರ್. ಪಿ. ಕುಲಕರ್ಣಿ, ಪ್ರಧಾನ ಇಂಜಿನಿಯರ್, ರಾಜ್ಯ ಹೆದ್ದಾರಿ ಯೋಜನೆ, ಬೆಂಗಳೂರು:
ಕುಲಕರ್ಣಿ ಅವರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ ಬೆಂಗಳೂರು ಎಸಿಬಿ ಅಧಿಕಾರಿಗಳು, ಬೆಂಗಳೂರಿನಲ್ಲಿ ವಾಸದ ಮನೆ, ನಾಲ್ಕು ಫ್ಲಾಟ್, ಮೂರು ನಿವೇಶನ, ಎರಡು ಕಾರು, ಚಿನ್ನ ಮತ್ತು ಬೆಳ್ಳಿ ಆಭರಣ ಹಾಗೂ ನಗದು ಹಣ ಜಪ್ತಿ ಮಾಡಿದ್ದಾರೆ. ಬ್ಯಾಂಕ್ ಖಾತೆಗಳಲ್ಲಿ ಲಕ್ಷಾಂತರ ಹಣ ಇಟ್ಟಿದ್ದು, ಅದನ್ನು ಎಸಿಬಿ ಅಧಿಕಾರಿಗಳು ಫ್ರೀಜ್ ಮಾಡಿದ್ದಾರೆ.
ದಾಳಿ ನಂಬರ್ 04
ಎ. ಕೃಷ್ಣಮೂರ್ತಿ, ಹಿರಿಯ ಮೋಟಾರು ವಾಹನ ನಿರೀಕ್ಷಕ, ಕೋರಮಂಗಲ ಆರ್ಟಿಓ ಕಚೇರಿ:
ಎಸಿಬಿ ಎಸ್ಪಿ ಕಲಾ ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಎಸಿಬಿ ಕೇಂದ್ರ ವಲಯದ ಅಧಿಕಾರಿಗಳು ಕೃಷ್ಣಮೂರ್ತಿ ಅವರ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಬೆಂಗಳೂರಿನ ಹಂಪಿ ನಗರದಲ್ಲಿ ಒಂದು ಮನೆ, ದೊಮ್ಮಲೂರಿನಲ್ಲಿ ವಾಸದ ಮನೆ, ಬೆಂಗಳೂರು ನಗರದಲ್ಲಿ ಶಾಲಾ ಕಟ್ಟಡ, ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಫಾರ್ಮ್ ಹೌಸ್, ಬೆಂಗಳೂರು ನಗರದಲ್ಲಿ ಒಟ್ಟು 30 ನಿವೇಶನ, ಚಿನ್ನ ಹಾಗೂ ಬೆಳ್ಳಿ ಆಭರಣ ವಶಪಡಿಸಿಕೊಂಡಿದ್ದಾರೆ. ಇದರ ಜತೆಗೆ 82 ಎಕರೆ ಕೃಷಿ ಜಮೀನು, ನಾಲ್ಕು ದ್ವಿಚಕ್ರ ವಾಹನ, ಮೂರು ಕಾರು ಒಂದು ಟೆಂಪೋ ಮ್ಯಾಕ್ಸ್ ದಾಳಿ ವೇಳೆ ಪತ್ತೆಯಾಗಿದ್ದು, ಬ್ಯಾಂಕ್ ವಿವರಗಳನ್ನು ಪಡೆದು ಅಕ್ರಮ ಆಸ್ತಿಯನ್ನು ಮೌಲ್ಯಮಾಪನ ಮಾಡುತ್ತಿದ್ದಾರೆ. ಈತನ ಅಕ್ರಮ ಆಸ್ತಿಗೆ ಸಂಬಂಧಸಿದಂತೆ ನಾಳೆಯೂ ಶೋಧ ಕಾರ್ಯ ಕಾರ್ಯ ಮುಂದುವರೆಯಲಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ನಂಬರ್ 05
ಕೃಷ್ಣ ಎಸ್ ಹೆಬ್ಸೂರು, ಕಾರ್ಯ ನಿರ್ವಾಹಕ ಅಭಿಯಂತರ, ಕೆ.ಆರ್.ಐ.ಡಿ.ಎಲ್ ಉಡುಪಿ ಜಿಲ್ಲೆ: ಕೃಷ್ಣ ಅವರ ನಿವಾಸದ ಮೇಲೆ ದಾಳಿ ನಡೆಸಿರುವ ಮಂಗಳೂರು ಎಸಿಬಿ ಅಧಿಕಾರಿಗಳು, ಉಡುಪಿಯಲ್ಲಿ ವಾಸದ ಮನೆ, ಬೆಂಗಳೂರಿನ ಜಿಗಣಿಯಲ್ಲಿ ನಿವೇಶನ, ಹುಬ್ಬಳ್ಳಿಯಲ್ಲಿ ನಿವೇಶನ, ಉಡುಪಿಯ ಶಿವಳ್ಳಿ ಗ್ರಾಮದಲ್ಲಿ 15 ಸೆಂಟ್ ನಿವೇಶನ, ಎರಡು ದ್ವಿಚಕ್ರ ವಾಹನ, ಒಂದು ಕಾರು ಹಾಗೂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಕೃಷ್ಣ ಅವರ ಬ್ಯಾಂಕ್ ಖಾತೆ ವಿವರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿ ನಂಬರ್ 06
ಟಿ. ವೆಂಕಟೇಶ್, ಉಪ-ಅರಣ್ಯ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ, ಮಂಡ್ಯ: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಮಂಡ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ. ವೆಂಕಟೇಶ್ ಅವರ ಮೈಸೂರು ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಎರಡು ವಾರಸದ ಮನೆ, ಬೆಂಗಳೂರು ಹಾಗೂ ಮೈಸೂರಿನಲ್ಲಿ 9 ನಿವೇಶನ, ಹನ್ನೆರಡು ಎಕರೆ ಕೃಷಿ ಭೂಮಿ, ಎರಡು ದ್ವಿಚಕ್ರ ವಾಹನ ಹಾಗೂ ಕಾರು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ದೊರೆತಿದೆ. ಈತನ ಬ್ಯಾಂಕ್ ಖಾತೆಗಳ ವಿವರ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ.
Recommended Video
ದಾಳಿ ನಂಬರ್ 07
ಹೆಚ್. ಆರ್ ಕೃಷ್ಣಮೂರ್ತಿ, ಸಹಾಯಕ ನಿರ್ದೇಶಕ, ಮಾಲೂರು ಟೌನ್ ಪ್ಲಾನಿಂಗ್:
ಎಸ್ಪಿ ಜಯ ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆಸಿದ ಪೂರ್ವ ವಲಯದ ಎಸಿಬಿ ಅಧಿಕಾರಿಗಳು ಬೆಂಗಳೂರು, ಶಿವಮೊಗ್ಗ ಹಾಗೂ ದಾವಣಗೆರೆಯಲ್ಲಿ ಮೂರು ವಾಸದ ಮನೆ ಪತ್ತೆ ಮಾಡಿದ್ದಾರೆ. ವಿವಿಧ ನಗರಗಳಲ್ಲಿ ನಾಲ್ಕು ನಿವೇಶನ, ಚನ್ನಗಿರಿ ತಾಲೂಕಿನಲ್ಲಿ ಹದಿನೈದು ಎಕರೆ ಕೃಷಿ ಜಮೀನು ಖರೀದಿ ಮಾಡಿದ್ದಾರೆ. ಇದರ ಜತೆಗೆ ಎರಡು ದ್ವಿಚಕ್ರ ವಾಹನ, ಒಂದು ಕಾರು, ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಪತ್ತೆ ಮಾಡಿದ್ದಾರೆ.
ದಾಳಿ ನಂಬರ್ 08
ಸಿದ್ಧರಾಮ ಮಲ್ಲಿಕಾರ್ಜುನ ಬಿರಾದರ, ಸಹಾಯಕ ಕಾರ್ಯಪಾಲಕ ಅಭಿಯಂತರ, ಕೆಪಿಟಿಸಿಎಲ್ ವಿಜಯಪುರ:
ಸಹಾಯಕ ಕಾರ್ಯಪಾಲಕ ಅಭಿಯಂತರ ಸಿದ್ಧರಾಮ ಮಲ್ಲಿಕಾರ್ಜುನ ಅವರ ನಿವಾಸದ ಮೇಲೆ ದಾಳಿ ಮಾಡಿ ಮೂರು ವಾಸದ ಮನೆಗೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ವಿವಿಧ ಕಡೆ ಖರೀದಿ ಮಾಡಿರುವ ನಾಲ್ಕು ನಿವೇಶನ, ವಿವಿಧ ಕಡೆ ಖರೀದಿ ಮಾಡಿರುವ 35 ಎಕರೆ ಕೃಷಿ ಜಮೀನು, ಎರಡು ಕಾರು, ಲಕ್ಷಾಂತರ ಬೆಲೆ ಬಾಳವ ಚಿನ್ನಾಭರಣ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
ದಾಳಿ ನಂಬರ್ 09
ಎ. ಎನ್. ವಿಜಯ್ ಕುಮಾರ್, ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ಜೆಸ್ಕಾಂ, ಬಳ್ಳಾರಿ:
ಬಳ್ಳಾರಿ ಜೆಸ್ಕಾಂ ಎಲೆಕ್ಟ್ರಿಕಲ್ ಇನ್ಸ್ಪೆಕ್ಟರ್ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಬೆಂಗಳೂರು ಹಾಗೂ ಬಳ್ಳಾರಿಯಲ್ಲಿ ಎರಡು ಮನೆ, ವಿವಿಧ ನಗರಗಳಲ್ಲಿ ಎಂಟು ನಿವೇಶನ, ಎರಡು ಕಾರು ಹಾಗೂ ಚಿನ್ನಾಭರಣ ಪತ್ತೆಯಾಗಿದೆ. ದಾಳಿಗೆ ಒಳಗಾಗಿರುವ ಅಧಿಕಾರಿಗಳು ಸೇವಾವಧಿಯಲ್ಲಿ ವಿವಿಧ ಮೂಲಗಳಿಂದ ಪಡೆದಿರುವ ಆದಾಯ ಹಾಗೂ ಅಕ್ರಮ ಆಸ್ತಿಯ ಪ್ರಮಾಣವನ್ನು ಪತ್ತೆ ಮಾಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.