ಕರ್ನಾಟಕದ ಪ್ರಮುಖ ಡ್ಯಾಂಗಳ ಒಳ, ಹೊರ ಹರಿವು ಅಧಿಕ
ಬೆಂಗಳೂರು ಆಗಸ್ಟ್ 08: ಕರ್ನಾಟಕದಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರಾಜ್ಯದ ಪ್ರಮುಖ ಜಲಾಶಯಗಳ ತುಂಬಿ ಹರಿಯುತ್ತಿವೆ. ಜಲಾಶಯಗಳಲ್ಲಿ ನೀರಿನ ಒಳಹರಿವು ಮತ್ತು ಹೊರ ಹರಿವಿನ ಪ್ರಮಾಣ ಹೆಚ್ಚಾಗಿದೆ.
ಕರಾವಳಿ, ಮಲೆನಾಡು, ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಕಳೆದ ಎರಡು ವಾರದಿಂದ ಮಳೆ ಅಬ್ಬರಿಸುತ್ತಿದೆ. ಮಳೆ ಆರಂಭವಾದ ನಂತರ ಎರಡು ತಿಂಗಳಲ್ಲ ಸುಮಾರು ಮೂರು ಬಾರಿ ಈ ರೀತಿ ನೆರೆ, ಪ್ರವಾಹ ರೀತಿಯಲ್ಲಿ ಮಳೆ ನಿರಂತರವಾಗಿ ಸುರಿದಿದೆ. ಹೀಗಾಗಿ ರಾಜ್ಯದಲ್ಲಿ ಪ್ರಮುಖ ನದಿಗಳು ಸೇರಿ ಸಣ್ಣ, ಸಣ್ಣ ನದಿಗಳು ಅಳತೆ ಮೀರಿ ಹರಿಯುತ್ತಿವೆ. ಆ ಪೈಕಿ ಪ್ರಮುಖ ನದಿಗಳ ವಿವರಗಳನ್ನು ಇಲ್ಲಿ ಪರಿಶೀಲಿಸಬಹುದಾಗಿದೆ.
ಮಲೆನಾಡು-ಕರಾವಳಿ ಕರ್ನಾಟಕದಲ್ಲಿ ಭಾರಿ ಮಳೆ ನಿರೀಕ್ಷೆ
ರಾಜ್ಯದ ಪ್ರಮುಖ ನದಿಗಳ ಒಳ ಹಾಗೂ ಹೊರ ಹರಿವಿನ ಪ್ರಮಾಣ ಹೆಚ್ಚಾಗಿದೆ. ಕೆಲವು ಕಡೆಗಳಲ್ಲಿ ಒಳಹರಿವಿಗಿಂತ ಹೊರ ಬಿಡುತ್ತಿರುವ ನೀರಿನ ಪ್ರಮಾಣ ನಿತ್ಯ ಹೆಚ್ಚಾಗಿದೆ. ಇದು ಆಯಾ ನದಿ ಪಾತ್ರದ ಗ್ರಾಮಗಳ ಜನರು, ಬೆಳೆ ನಿರೀಕ್ಷೆಯಲ್ಲಿರುವ ರೈತರನ್ನು ಚಿಂತೆಗೀಡು ಮಾಡಿದೆ ಎಂದು ತಿಳಿದು ಬಂದಿದೆ.
ಲಿಂಗನಮಕ್ಕಿ ಜಲಾಶಯದಲ್ಲಿ ಹೊರ ಹರಿವಿಗಿಂತ ಒಳ ಹರಿವು ದುಪ್ಪಟ್ಟು ಇದೆ. ಸೋಮವಾರ ಮಾಹಿತಿ ಪ್ರಕಾರ, ಒಳಹರಿವು 38,301 ಕ್ಯೂಸೆಕ್, ಇದ್ದರೆ ಹೊರ ಹರಿವು 675ಕ್ಯೂಸೆಕ್ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ)ಮಾಹಿತಿ ನೀಡಿದೆ.
ಕಾವೇರಿ ಉಪನದಿಗಳ ಒಳ, ಹೊರ ಹರಿವು ಹೆಚ್ಚಳ; ಕಾವೇರಿ ನದಿ ವ್ಯಾಪ್ತಿಯ ಜಲಾಶಯಗಳಲ್ಲೂ ಮಳೆಯಿಂದಾಗಿ ನೀರಿನ ಮಟ್ಟ ಹೆಚ್ಚಾಗಿದೆ. ಕಾವೇರಿ ನದಿಯ ಉಪನದಿಯಾದ ಹೇವಾವತಿಯ ಒಳಹರಿವು 28,741ಕ್ಯೂಸೆಕ್ ಇದ್ದರೆ, ಹೊರ ಹರಿವು 29,800 ಕ್ಯೂಸೆಕ್ ಇದೆ. ಹಾರಂಗಿ ಜಲಾಶಯದ ಒಳ ಹರಿವು 16,120ಕ್ಯೂ ಸೆಕ್ ಇದ್ದು, ಡ್ಯಾಂ ನಿಂದ ನಿತ್ಯ 16,912ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ.
ಇನ್ನು ಕೃಷ್ಣ ರಾಜ ಸಾಗರ (ಕೆಆರ್ಎಸ್) ಜಲಾಶಯದಲ್ಲಿ ಒಳಹರಿವು 88,834 ಇದ್ದರೆ, ಹೊರಗೆ ಬಿಡುತ್ತಿರುವ ನೀರಿನ ಪ್ರಮಾಣ 98,119 ಕ್ಯೂಸೆಕ್ ನಷ್ಟಿದೆ. ಕಬಿನಿಯ ಒಳಹರಿವು ಒಟ್ಟು 24932ಕ್ಯೂಸೆಕ್ ಆಗಿದ್ದು ನಿತ್ಯ ಈ ಜಲಾಶಯದಿಂದ 26,000 ಕ್ಯೂಸೆಕ್ ನೀಡು ಹರಿ ಬಿಡಲಾಗುತ್ತಿದೆ.
ಭದ್ರಾ ಜಲಾಶಯದಿಂದ 41,721ಕ್ಯೂಸೆಕ್ ನೀರು ಹೊರಕ್ಕೆ; ಅದೇ ರೀತಿ ಭದ್ರಾ ಜಲಾಶಯದಲ್ಲಿ ಒಳಹರಿವಿಗಿಂತ ಹೊರ ಹರಿವು ಹೆಚ್ಚಿದೆ. ಈ ಜಲಾಶಯದಲ್ಲಿ ಒಳ ಹರಿವು 40,194 ಕ್ಯೂಸೆಕ್ ಹಾಗೂ ಹೊರ ಹರಿವು 41,721ಕ್ಯೂಸೆಕ್ ಇದೆ. ಇನ್ನು ಪ್ರತಿ ದಿನ 10,8648 ಕ್ಯೂಸೆಕ್ ಒಳ ಹರಿವು ಹೊಂದಿರುವ ತುಂಗಭದ್ರಾ ಜಲಾಶಯದಿಂದ 10,6338 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.
ಮತ್ತೊಂದು ಪ್ರಮುಖ ನದಿಯಾಗಿರುವ ಆಲಮಟ್ಟಿಯಲ್ಲಿ 37041 ತುಂಗಭದ್ರಾ ಒಳಹರಿವು ಕಂಡು ಬಂದಿದ್ದು, 6,451ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿ ತಿಳಿಸಿದೆ.