ಕೈಗಾರಿಕೆಗಳ ಪ್ರಾರಂಭಕ್ಕೆ ಸಚಿವ ಜಗದೀಶ್ ಶೆಟ್ಟರ್ ಗ್ರೀನ್ ಸಿಗ್ನಲ್.!
ಬೆಂಗಳೂರು, ಮೇ 16 : ಕೋವಿಡ್-19 ನಿಂದಾಗಿ ನ್ಯೂ ನಾರ್ಮಲ್ ಅರ್ಥಾತ್ ನೂತನ ಸಾಮಾನ್ಯ ಸ್ಥಿತಿಗೆ ಹೊಂದಿಕೊಂಡು, ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು ಕೈಗಾರಿಕೆಗಳನ್ನ ಪ್ರಾರಂಭಿಸಿ ಎಂದು ಕೈಗಾರಿಕೋದ್ಯಮಿಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
Recommended Video
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ಇಂದು ಎಫ್.ಐ.ಸಿ.ಸಿ.ಐ ಪದಾಧಿಕಾರಿಗಳು ಹಾಗೂ ಸದಸ್ಯರುಗಳ ಜೊತೆ ವಿಡಿಯೋ ಸಂವಾದ ನಡೆಸಿದರು. ಸಂವಾದದಲ್ಲಿ ಕೈಗಾರಿಕಾ ಹಾಗೂ ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾ ಆಯುಕ್ತೆ ಗುಂಜನ್ ಕೃಷ್ಣ, ಎಫ್.ಐ.ಸಿ.ಸಿ.ಐ ಕರ್ನಾಟಕದ ಅಧ್ಯಕ್ಷ ಉಲ್ಲಾಸ್ ಕಾಮತ್ ಭಾಗವಹಿಸಿದ್ದರು.
20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್: ದುಡಿಯುವ ಕೈಗಳಿಗೆ ಸಿಕ್ಕಿತೇ ಲಾಭ.?
ವಿಡಿಯೋ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಜಗದೀಶ್ ಶೆಟ್ಟರ್, ''ಕೇಂದ್ರ ಹಾಗೂ ರಾಜ್ಯ ಸರಕಾರಗಳು ಎಮ್.ಎಸ್.ಎಂ.ಇ ಹಾಗೂ ಕೈಗಾರಿಕೆಗಳ ಪುನಶ್ಚೇತನಕ್ಕೆ ಅಗತ್ಯವಿರುವ ಪ್ಯಾಕೇಜ್ಗಳನ್ನು ಘೋಷಣೆ ಮಾಡಿದೆ. ಕರ್ನಾಟಕ ಸರಕಾರ ಲಾಕ್ ಡೌನ್ ಪ್ರಾರಂಭವಾದ ಸಮಯದಿಂದಲೂ ಕೈಗಾರಿಕಾ ಸಂಘ ಸಂಸ್ಥೆಗಳ ಜೊತೆ ಸಂವಾದ ನಡೆಸುತ್ತಿದೆ. ಅವರ ಕಷ್ಟಗಳನ್ನು ಅರಿತುಕೊಂಡು ಹಲವು ಕ್ರಮಗಳನ್ನು ಕೈಗೊಂಡಿದೆ'' ಎಂದರು.
ಕೈಗಾರಿಕೆಗಳ ಪುನಶ್ಚೇತನಕ್ಕೆ ಪ್ಯಾಕೇಜ್
''ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ಕೈಗಾರಿಕೆಗಳು ಕಾರ್ಯನಿರ್ವಹಿಸಲು ಹಾಗೂ ಲಾಕ್ ಡೌನ್ ಸಡಿಲಿಕೆಯ ನಂತರ ಬಹುತೇಕ ಕೈಗಾರಿಕೆಗಳು ಪ್ರಾರಂಭಿಸಲು ನಾವು ಅಗತ್ಯ ಸಹಕಾರ ನೀಡುತ್ತಾ ಬಂದಿದ್ದೇವೆ. ಕೇಂದ್ರ ಸರಕಾರ ಈಗಾಗಲೇ ಐತಿಹಾಸಿಕ ಪ್ಯಾಕೇಜನ್ನು ಘೋಷಣೆ ಮಾಡಿದೆ. ಅಲ್ಲದೆ, ರಾಜ್ಯ ಸರಕಾರ ಕೂಡ ಎಮ್.ಎಸ್.ಎಂ.ಇ ಗಳ ಪುನಶ್ಚೇತನಕ್ಕೆ ಪ್ಯಾಕೇಜ್ ಘೋಷಿಸಿದೆ'' ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಧನ್ಯವಾದ ತಿಳಿಸಿದ ಜಗದೀಶ್ ಶೆಟ್ಟರ್
''ರಾಜ್ಯ ಸರಕಾರ ಕೋವಿಡ್-19 ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ನಿಭಾಯಿಸಿದೆ. ಜನಸಾಮಾನ್ಯರ ಆರೋಗ್ಯವನ್ನ ಗಮನದಲ್ಲಿಟ್ಟುಕೊಂಡು ನಾವು ಆರ್ಥಿಕ ಚಟುವಟಿಕೆಗಳಿಗೂ ಚಾಲನೆ ನೀಡಬೇಕಾಗಿದೆ. ಇಂತಹ ಸವಾಲಿನ ಸಂದರ್ಭದಲ್ಲಿ ರಾಜ್ಯ ಸರಕಾರದ ಕೈಜೋಡಿಸಿದ ಕೈಗಾರಿಕೋದ್ಯಮಿಗಳೂ ಹಾಗೂ ಸಂಘ ಸಂಸ್ಥೆಗಳಿಗೆ ಧನ್ಯವಾದಗಳು'' - ಜಗದೀಶ್ ಶೆಟ್ಟರ್
ಮೇ 4ರಿಂದ ಆರಂಭಗೊಳ್ಳಲಿವೆ ಕೈಗಾರಿಕೆಗಳು; ಏನೇನೆಲ್ಲಾ ಚರ್ಚೆ ನಡೆಯಿತು?
ಸಾಧನೆಯ ಮೆಟ್ಟಿಲಾಗಿ ಪರಿವರ್ತಿಸಿಕೊಳ್ಳಬೇಕು
''ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲಿ ಕೇಂದ್ರ ಸರಕಾರ ನಮ್ಮ ಮುಂದಿನ ಗುರಿಗಳನ್ನು ಸ್ಪಷ್ಟಪಡಿಸಿದ್ದಾರೆ. ಸ್ಥಳೀಯವಾಗಿ ಉತ್ಪಾದನೆ ಮಾಡುವ ಹಾಗೂ ಹೊಸತನಕ್ಕೆ ತೆರೆದುಕೊಳ್ಳುವ ಮೂಲಕ ಹೊಸದನ್ನು ಸಾಧಿಸಬೇಕಾಗಿದೆ. ಇದೇ ವೇಳೆ ಕೋವಿಡ್-19 ರ ಲಾಕ್ ಡೌನ್ ನಿಂದ ಆಗಿರುವ ನೂತನ ಸಾಮಾನ್ಯ ಪರಿಸ್ಥಿತಿಗೆ ನಾವು ಹೊಂದಿಕೊಳ್ಳಬೇಕಾಗಿದೆ. ಈ ಸಂಕಷ್ಟದ ಸಮಯವನ್ನು ಸಾಧನೆಯ ಮೆಟ್ಟಿಲಾಗಿ ಪರಿವರ್ತಿಸಿಕೊಳ್ಳಬೇಕಾಗಿದೆ. ಕೈಗಾರಿಕೋದ್ಯಮಿಗಳು ತಮ್ಮನ್ನ ತಾವು ಈ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿಸಿಕೊಳ್ಳಬೇಕು. ಕೈಗಾರಿಕೆಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಹಾಗೂ ತಮ್ಮ ಕೈಗಾರಿಕೆಗಳನ್ನು ಪ್ರಾರಂಭಿಸಿ ದೇಶದ ಆರ್ಥಿಕತೆ ಪುನಶ್ಚೇತನಗೊಳ್ಳಲು ತಮ್ಮ ಸಹಕಾರ ನೀಡಬೇಕು. ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಲು ಸರಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಮುಖ್ಯಮಂತ್ರಿಗಳು ಘೋಷಣೆಯನ್ನು ಮಾಡಲಿದ್ದಾರೆ'' - ಜಗದೀಶ್ ಶೆಟ್ಟರ್
ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳಿ
ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ಮಾತನಾಡಿ, ''ರಾಜ್ಯ ಸರಕಾರ ಕೈಗಾರಿಕಾ ಕ್ಷೇತ್ರ ಅನುಭವಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದವಿದೆ. ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡು 100 ರಷ್ಟು ಮಾನವ ಸಂಪನ್ಮೂಲ ಬಳಸಿಕೊಂಡು ಕೈಗಾರಿಕೆಗಳನ್ನು ನಡೆಸಲು ಯಾವುದೇ ಅಡೆತಡೆಯಿಲ್ಲ. ಕಾರ್ಮಿಕರನ್ನು ಕರೆತರಲು ಬೇಕಾಗುವ ಎಲ್ಲಾ ರೀತಿಯ ಅನುಮತಿ ಪಡೆಯಲು ಇಲಾಖೆಯಿಂದ ಸಹಕಾರವಿದೆ'' ಎಂದು ಹೇಳಿದರು.
ಕೈಗಾರಿಕಾ ಸ್ನೇಹಿ ವಾತಾವರಣ
ಎಫ್.ಐ.ಸಿ.ಸಿ.ಐ ನ ಉಲ್ಲಾಸ್ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ''ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯ ಸರಕಾರ ಹಾಗೂ ಕೈಗಾರಿಕಾ ಇಲಾಖೆಯ ಜೊತೆಗೆ ಪ್ರತಿದಿನ ನಾವು ಸಂಪರ್ಕದಲ್ಲಿದ್ದೆವು. ನಮಗೆ ಬೇಕಾದ ಎಲ್ಲಾ ರೀತಿಯ ಅನುಮತಿಗಳನ್ನು ಪಡೆದುಕೊಳ್ಳಲು ಇಲಾಖೆಯ ಅಧಿಕಾರಿಗಳ ಅಗತ್ಯ ಸಹಕಾರ ನೀಡಿದ್ದಾರೆ. ಅಲ್ಲದೆ ಇತ್ತೀಚಿನ ಭೂಸುಧಾರಣಾ ಕಾಯ್ದೆಯ ತಿದ್ದುಪಡಿ ಹಾಗೂ ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣ ಆಗಿರುವುದು ನಮಗೆ ಸಂತಸ ತಂದಿದೆ. ಅಲ್ಲದೆ, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಹೂಡಿಕೆಗೂ ಉತ್ತಮ ವಾತಾವರಣ ನಿರ್ಮಾಣವಾಗಿರುವುದು ಸಂತಸ ತಂದಿದೆ'' ಎಂದು ಹೇಳಿದರು.