ಇಂದಿರಾ ಕ್ಯಾಂಟೀನ್ ಮುಚ್ಚುವ ಪ್ರಸ್ತಾಪ : ಯಾರು, ಏನು ಹೇಳಿದರು?
ಬೆಂಗಳೂರು, ಆಗಸ್ಟ್ 28 : 'ಇಂದಿರಾ ಕ್ಯಾಂಟೀನ್' ಕರ್ನಾಟಕ ಸರ್ಕಾರದ ಜನಪ್ರಿಯ ಯೋಜನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಈ ಯೋಜನೆ ಬಗ್ಗೆ ಚರ್ಚೆ ಆರಂಭವಾಗಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ತಂದ ಯೋಜನೆಯನ್ನು ಸ್ಥಗಿತಗೊಳಿಸಲಾಗುತ್ತದೆಯೇ? ಎಂಬುದು ಸದ್ಯದ ಪ್ರಶ್ನೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಮಂಗಳವಾರ ನೀಡಿದ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. "ಪ್ರಸ್ತುತ ಇಂದಿರಾ ಕ್ಯಾಂಟೀನ್ ಮುಚ್ಚುವ ಪರಿಸ್ಥಿತಿ ಎದುರಾಗಿದೆ" ಎಂದು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಹೇಳಿಕೆ ನೀಡಿದ್ದರು.
ಇಂದಿರಾ ಕ್ಯಾಂಟೀನ್ ಮುಚ್ಚುವ ಸ್ಥಿತಿ ಬಂದಿದೆ : ಬಿಬಿಎಂಪಿ ಆಯುಕ್ತರು
ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಇಂದಿರಾ ಕ್ಯಾಂಟೀನ್ ಮುಚ್ಚಬಾರದು, ಸರ್ಕಾರ ಇಂತಹ ತೀರ್ಮಾನ ತೆಗೆದುಕೊಂಡರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರು ನಗರದಲ್ಲಿಯೇ 173 ಕ್ಯಾಂಟೀನ್, 18 ಮೊಬೈಲ್ ಕ್ಯಾಂಟೀನ್ಗಳಿವೆ.
ಇಂದಿರಾ ಕ್ಯಾಂಟೀನ್ ಮುಚ್ಚುವ ವಿಚಾರ, ಯಡಿಯೂರಪ್ಪ ಏನು ಹೇಳಿದ್ರು?
ಇಂದಿರಾ ಕ್ಯಾಂಟೀನ್ ಹೆಸರನ್ನು ಸಹ ಬದಲಾವಣೆ ಮಾಡಲಾಗುತ್ತದೆ ಎಂಬ ಸುದ್ದಿಗಳು ಹಬ್ಬಿವೆ. ಸರ್ಕಾರದ ಮತ್ತು ಪ್ರತಿಪಕ್ಷಗಳ ಹಲವು ನಾಯಕರು ಇಂದಿರಾ ಕ್ಯಾಂಟೀನ್ ವಿಚಾರದಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ. ಯಾರು, ಏನು ಹೇಳಿದರು? ನೋಡೋಣ ಬನ್ನಿ.....
ಬಿಬಿಎಂಪಿಗೆ ಹೊರೆಯಾದ ಇಂದಿರಾ ಕ್ಯಾಂಟೀನ್ ನಿರ್ವಹಣೆ
ಕ್ಯಾಂಟೀನ್ ಮುಚ್ಚಲ್ಲ : ಯಡಿಯೂರಪ್ಪ
"ಇಂದಿರಾ ಕ್ಯಾಂಟೀನ್ ಮುಚ್ಚುವುದಿಲ್ಲ, ಹೆಸರು ಸಹ ಬದಲಾವಣೆ ಮಾಡುವುದಿಲ್ಲ. ಕ್ಯಾಂಟೀನ್ನಲ್ಲಿ ಅಕ್ರಮ ನಡೆದಿರುವ ಆರೋಪಗಳಿವೆ. ಅವುಗಳ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ. ಕ್ಯಾಂಟೀನ್ಗಳಿಗೆ ನೀಡುವ ಅನುದಾನವನ್ನು ತಡೆಹಿಡಿದಿಲ್ಲ" ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬೆಂಗಳೂರಿನಲ್ಲಿ ಸ್ಪಷ್ಟಪಡಿಸಿದರು.
ಸಿದ್ದರಾಮಯ್ಯ ಹೇಳುವುದೇನು?
ಬೆಳಗಾವಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, "ಇಂದಿರಾ ಕ್ಯಾಂಟೀನ್ ಬಡಜನರ ಹಸಿವು ನೀಗಿಸುವ ಕಾರ್ಯಕ್ರಮ. ಇದಕ್ಕೆ ರಾಜ್ಯಾದ್ಯಂತ ಸುಮಾರು ರೂ. 300 ರಿಂದ 400 ಕೋಟಿ ಹಣ ಖರ್ಚಾಗಬಹುದಷ್ಟೆ. ರಾಜ್ಯದ ಬಜೆಟ್ ರೂ.2.34 ಲಕ್ಷ ಕೋಟಿಯಾಗಿದ್ದು, ಇಷ್ಟು ಬೃಹತ್ ಅನುದಾನದಲ್ಲಿ ರೂ. 400 ಕೋಟಿ ಕೊಡುವುದು ಸರ್ಕಾರಕ್ಕೆ ಕಷ್ಟವೆಂದರೆ ಬಡವರ ಬಗ್ಗೆ ಇವರಿಗಿರುವ ಕಾಳಜಿ ಎಂತಹುದು?" ಎಂದು ಪ್ರಶ್ನೆ ಮಾಡಿದರು.
ಉಪ ಮುಖ್ಯಮಂತ್ರಿಗಳು ಹೇಳಿದ್ದೇನು?
ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, "ಇಂದಿರಾ ಕ್ಯಾಂಟೀನ್ ಮುಚ್ಚುವ ಯಾವುದೇ ಪ್ರಯತ್ನ ನಡೆದಿಲ್ಲ. ಕ್ಯಾಂಟೀನ್ ಅವ್ಯಹಾರಗಳ ಬಗ್ಗೆ ವರದಿಯಾಗಿದ್ದು, ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಕ್ಯಾಂಟೀನ್ನಲ್ಲಿ ನಡೆಯುತ್ತಿರುವ ಅಕ್ರಮ, ಆಹಾರದ ಗುಣಮಟ್ಟದ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ" ಎಂದು ಹೇಳಿದರು.
ಹೋರಾಟಕ್ಕೆ ನಾವು ಸಿದ್ಧವಿದ್ದೇವೆ
"ಇಂದಿರಾ ಕ್ಯಾಂಟೀನ್ ಬಡಜನರ ಹಸಿವು ನೀಗಿಸುವ ಕಾರ್ಯಕ್ರಮ. ಇದರಿಂದಾಗಿ ಎಷ್ಟೋ ಬಡ ಜನರಿಗೆ ಅನುಕೂಲವಾಗಿದೆ ಇಂತಹ ಜನಪರ ಯೋಜನೆಯನ್ನು ಹಣಕಾಸಿನ ನೆಪ ಒಡ್ಡಿ ರದ್ದು ಮಾಡಲು ಯೋಚಿಸುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರದ ನಿರ್ಧಾರಕ್ಕೆ ನನ್ನ ತೀವ್ರ ವಿರೋಧವಿದೆ ಇದೇನಾ ಬಡವರ ಬಗ್ಗೆ ಇವರಿಗಿರುವ ಕಾಳಜಿ?, ಇಂದಿರಾ ಕ್ಯಾಂಟೀನ್ ರದ್ದು ಮಾಡಿದ್ದೆ ಆದಲ್ಲಿ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ" ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಪ್ರತಿಕ್ರಿಯೆ ನೀಡಿದ್ದಾರೆ.